ಜಾತಿ ತಾರತಮ್ಯ ಮತ್ತು ದಲಿತರ ಮೇಲಿನ ದೌರ್ಜನ್ಯ ಪ್ರಕರಣ ದೇಶದಲ್ಲಿ ಮತ್ತೆ ಮುಂದುವರಿದಿದೆ. ಬಿಜೆಪಿ ಅಡಳಿತದ ಗುಜರಾತ್ನ ಗಾಂಧಿನಗರ ಜಿಲ್ಲೆಯ ಚಡಸಾನಾ ಗ್ರಾಮದಲ್ಲಿ ದಲಿತ ವರನನ್ನು ಮದುವೆ ಮೆರವಣಿಗೆಯ ವೇಳೆ ಬಲವಂತವಾಗಿ ಕುದುರೆಯಿಂದ ಕೆಳಗಿಳಿಸಿ, ಜಾತಿ ನಿಂದನೆ ಮಾಡಿ ಬೆದರಿಕೆ ಹಾಕಿರುವ ಘಟನೆ ನಡೆದಿದೆ.
ಈ ಕುರಿತು ವರನ ಸೋದರ ಸಂಬಂಧಿ ಮತ್ತು ಸಹೋದರ ನೀಡಿದ ದೂರಿನ ಮೇರೆಗೆ ಪೊಲೀಸರು ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ನಾಲ್ವರನ್ನು ಬಂಧಿಸಿದ್ದಾರೆ. ಈ ಬಗ್ಗೆ ಗಾಂಧಿನಗರದ ಮಾನಸ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಧ್ಯಾಹ್ನ ಒಂದು ಗಂಟೆಯ ಸುಮಾರಿಗೆ ವರ ಸುಮಾರು 100 ಜನರೊಂದಿಗೆ ಮದುವೆ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡುತ್ತಿದ್ದಾಗ, ಬೈಕ್ನಲ್ಲಿ ಬಂದ ವ್ಯಕ್ತಿಯೋರ್ವ ಮೆರವಣಿಗೆ ನಡೆಸದಂತೆ ಬೆದರಿಕೆ ಹಾಕಿ ಜನಾಂಗೀಯ ನಿಂದನೆಯನ್ನು ಮಾಡಿದ್ದಾನೆ.
ವರನ ಸಹೋದರ ಪೊಲೀಸರಿಗೆ ನೀಡಿದ ದೂರಿನ ಪ್ರಕಾರ, ನನ್ನ ಸಹೋದರನನ್ನು ಬಲವಂತವಾಗಿ ಕುದುರೆಯಿಂದ ಕೆಳಗಿಳಿಸಿದ ನಂತರ, ನಮ್ಮ ಕುಟುಂಬ ಸದಸ್ಯರು ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಿದರು, ಈ ಸಂದರ್ಭದಲ್ಲಿ ಇತರ ಮೂವರು ಮಧ್ಯಪ್ರವೇಶಿಸಿದ್ದು, ನನ್ನ ಸಹೋದರನನ್ನು ಕುದುರೆಯಿಂದ ಕೆಳಗಿಳಿಸಿ ಜಾತಿ ನಿಂದನೆ ಮಾಡಿದ್ದಾರೆ ಮತ್ತು ಕುಟುಂಬದ ಸದಸ್ಯರೊಬ್ಬರಿಗೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ನೀವು ನಿಮ್ಮ ಮಿತಿಯಲ್ಲಿ ಇರಿ…ನೀವು ಕುದುರೆ ಸವಾರಿ ಮಾಡುವಂತಿಲ್ಲ, ನಿಮಗೆ ಹಳ್ಳಿಯ ಸಂಪ್ರದಾಯ ಗೊತ್ತಿಲ್ಲವೇ? ನೀವು ನಮ್ಮಿಂದ ಅನುಮತಿ ಪಡೆಯಬೇಕು ಮತ್ತು ಠಾಕೋರ್ಗಳು ಮಾತ್ರ ಕುದುರೆ ಸವಾರಿ ಮಾಡಬೇಕು ಎಂದು ದುಷ್ಕರ್ಮಿಗಳು ಇದೇ ವೇಳೆ ಬೆದರಿಸಿದ್ದಾರೆ.
ಈ ಬಗ್ಗೆ ಗಾಂಧಿನಗರ ಕಲೋಲ್ ವಿಭಾಗದ ಉಪ ಪೊಲೀಸ್ ವರಿಷ್ಠಾಧಿಕಾರಿ ಪ್ರವೀಣ್ ಮನ್ವಾರ್ ಮಂಗಳವಾರ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಮಾನಸಾದ ಚಡಸಾನ ಗ್ರಾಮದಲ್ಲಿ ಮದುವೆ ಮೆರವಣಿಗೆ ಡಿಜೆ ಸೌಂಡ್ ಸಿಸ್ಟಂನೊಂದಿಗೆ ತೆರಳಿದಾಗ ಗ್ರಾಮದ ಮೂವರು ವಿರೋಧಿಸಿದ್ದಾರೆ. ಈ ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಡಿಜೆ ವಿಷಯಕ್ಕೆ ಘರ್ಷಣೆ ಪ್ರಾರಂಭವಾಯಿತು ಮತ್ತು ನಂತರ ಕುದುರೆಯ ಮೇಲೆ ಕುಳಿತುಕೊಳ್ಳುವ ವಿಷಯದ ಬಗ್ಗೆ ವಿವಾದವಿತ್ತು. ಪೊಲೀಸರು ಈ ಬಗ್ಗೆ ಎಫ್ಐಆರ್ ದಾಖಲಿಸಿದ್ದಾರೆ ಮತ್ತು ಸೈಲೇಶ್ ಠಾಕೋರ್, ಜಯೇಶ್ ಠಾಕೋರ್, ಸಮೀರ್ ಠಾಕೋರ್ ಮತ್ತು ಅಶ್ವಿನ್ ಠಾಕೋರ್ ಅವರನ್ನು ಬಂಧಿಸಿದ್ದಾರೆ ಎಂದು ಹೇಳಿದ್ದಾರೆ.
ಇದನ್ನು ಓದಿ: ಮಧ್ಯಪ್ರದೇಶ: ಬುಡಕಟ್ಟು ವ್ಯಕ್ತಿಯನ್ನು ವಿವಸ್ತ್ರಗೊಳಿಸಿ, ತಲೆಕೆಳಗೆ ನೇತುಹಾಕಿ ಹಲ್ಲೆ