ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ RTI ಕಾರ್ಯಕರ್ತನೊಬ್ಬ ಪೊಲೀಸ್ ವಶದಲ್ಲಿದ್ದಾಗ ಸೇತುವೆಯಿಂದ ಬಿದ್ದು ಸಾವನಪ್ಪಿರುವ ಘಟನೆ ಜರುಗಿದೆ. ಇದು ಪೊಲೀಸರೆ ಮಾಡಿರುವ ಕೊಲೆ ಎಂದು ಮೃತನ ಪತ್ನಿ ಆರೋಪಿಸಿದ್ದಾರೆ.
ಕಬ್ಬಳ ಗ್ರಾಮದ ಹರೀಶ್ ಹೆಚ್.ಆರ್ ಎಂಬುವವರು ಜಮೀನನ್ನು ತಮ್ಮ ಹೆಸರಿಗೆ ಮಾಡಿಕೊಳ್ಳಲು ನಕಲಿ ದಾಖಲೆ ಸೃಷ್ಟಿಸಿದ್ದ ಆರೋಪ ಎದುರಿಸುತ್ತಿದ್ದರು. ಈ ಕುರಿತು ವಿಚಾರಣೆ ನಡೆಸುತ್ತಿದ್ದ ಪೊಲೀಸರು ಅವರನ್ನು ಕಾಕನೂರಿನಲ್ಲಿ ವಶಕ್ಕೆ ಪಡೆದು ಗಾಂಧಿನಗರ ಪೊಲೀಸ್ ಠಾಣೆಗೆ ಕರೆತರುವ ವೇಳೆ ದಾವಣಗೆರೆ ಹೊರವಲಯದಲ್ಲಿ ಫ್ಲೈಓವರ್ ರಸ್ತೆಯಲ್ಲಿ ಕಾರಿನಿಂದ ಹೊರಬಂದ ಹರೀಶ್ ಸೇತುವೆಯಿಂದ ಕೆಳಕ್ಕೆ ಜಿಗಿದು ಸರ್ವೀಸ್ ರಸ್ತೆಯ ಮೇಲೆ ಬಿದ್ದಿದ್ದಾರೆ. ಗಾಯಗೊಂಡ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹರೀಶ್ ಸೇತುವೆಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಹೇಳಿಕೆಗಳ ಕುರಿತು ಪ್ರತಿಕ್ರಿಯಿಸಿರುವ ಅವರ ಪತ್ನಿ ಲತಾ, “ನನ್ನ ಪತಿ ಆತ್ಮಹತ್ಯೆ ಮಾಡಿಕೊಂಡಿಲ್ಲ. ಬದಲಿಗೆ ಪೊಲೀಸರೆ ಹತ್ಯೆ ಮಾಡಿದ್ದಾರೆ” ಎಂದು ಆರೋಪಿಸಿದ್ದಾರೆ.
ಗಾಂಧಿನಗರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಕೃಷ್ಣಪ್ಪ, ಕಾನ್ಸ್ಸ್ಟೇಬಲ್ ದೇವರಾಜು ಮತ್ತು ಕಾರು ಚಾಲಕ ಇರ್ಷಾದ್ರವರು ನನ್ನ ಪತಿಯನ್ನು ಬಲವಂತವಾಗಿ ಎಳೆದುಕೊಂಡು ಹೋಗಿ ದೌರ್ಜನ್ಯವೆಸಗಿ ಕೊಲೆಗೈದಿದ್ದಾರೆ. ಈ ಕೊಲೆಯಲ್ಲಿ ಕಣಿವೆ ಬಿಳಚಿಯ ಕೆ.ಬಾಬುರಾವ್ರವರ ಪಾತ್ರವೂ ಇದೆ ಎಂದು ಆರೋಪಿಸಿ ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯ ಆವರಗೆರೆ ಗ್ರಾಮದ ಸರ್ವೇ ನಂ 240/2ಬಿರಲ್ಲಿರುವ ಮೂರು ನಿವೇಶನಗಳ ನಕಲಿ ದಾಖಲೆಗಳನ್ನು ಸೃಷ್ಠಿಸಿದ್ದಲ್ಲದೆ, ಬೇರೊಬ್ಬ ಮಹಿಳೆಯೊಬ್ಬರಿಂದ ನಕಲಿ ಕ್ರಯದ ಕರಾರು ಪತ್ರ ನೋಂದಣಿ ಮಾಡಿಸಿದ್ದಾರೆ ಎಂಬ ಆರೋಪ ಹರೀಶ್ ವಿರುದ್ಧ ಕೇಳಿ ಬಂದಿತ್ತು. ಈ ಸಂಬಂಧ ಈಚೆಗೆ ಆಸ್ತಿ ಮೂಲ ಮಾಲೀಕ ಎಂದು ಕೆ ಬಾಬುರಾವ್ ಎಂಬುವರು ಸುದ್ದಿಗೋಷ್ಠಿ ಸಹ ನಡೆಸಿದ್ದರು.
ಇದನ್ನೂ ಓದಿ; ಪ್ರವೀಣ್ ಪತ್ನಿ ಉದ್ಯೋಗ ರದ್ದಾಗುವುದರಲ್ಲಿ ನಮ್ಮ ಸರ್ಕಾರದ ಹಸ್ತಕ್ಷೇಪವಿಲ್ಲ, ಮರು ನೇಮಕ ಮಾಡಲಾಗುವುದು: ಸಿದ್ದರಾಮಯ್ಯ