ಮೀರತ್ನಲ್ಲಿ ಹೊಸದಾಗಿ ಚುನಾಯಿತರಾದ ಮೇಯರ್ ಮತ್ತು ಕೌನ್ಸಿಲರ್ಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ರಾಷ್ಟ್ರಗೀತೆ ಮತ್ತು ವಂದೇ ಮಾತರಂ ಹಾಡುವ ವಿಚಾರವಾಗಿ ಘರ್ಷಣೆಯಾಗಿದೆ.
ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖಂಡರೊಂದಿಗೆ ಘರ್ಷಣೆ ನಡೆಸಿದ ನಂತರ ಉತ್ತರ ಪ್ರದೇಶದ ಇಬ್ಬರು ಬಿಜೆಪಿ ಕೌನ್ಸಿಲರ್ಗಳನ್ನು ಪೊಲೀಸರನ್ನು ಬಂಧಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಆದರೆ, ಇಬ್ಬರೂ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.
ಶುಕ್ರವಾರ ರಾತ್ರಿ ಎಐಎಂಐಎಂ ಕೌನ್ಸಿಲರ್ನ ಪತಿ ದಿಲ್ಶಾದ್ ಸೈಫಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಬಿಜೆಪಿ ನಾಯಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಠಾಣಾಧಿಕಾರಿ ಯೋಗೇಂದ್ರ ಸಿಂಗ್ ತಿಳಿಸಿದ್ದಾರೆ.
ಸಮಾರಂಭದಲ್ಲಿ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂನ ಕೌನ್ಸಿಲರ್ಗಳು ನ್ಯಾಷನಲ್ ಸಾಂಗ್ (ವಂದೇ ಮಾತರಂ) ಹಾಡಲು ನಿರಾಕರಿಸಿದಾಗ ಸಮಸ್ಯೆ ಉದ್ಭವಿಸಿದೆ. ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳು ಮಧ್ಯ ಪ್ರವೇಶಿಸಿ ಎರಡು ಪಕ್ಷಗಳ ಸದಸ್ಯರನ್ನು ಪ್ರತ್ಯೇಕಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು.
ಬಿಜೆಪಿ ಕೌನ್ಸಿಲರ್ ರಾಜೀವ್ ಕಾಳೆ ಅವರು ಎಂಟು ಎಐಎಂಐಎಂ ಕೌನ್ಸಿಲರ್ಗಳ ವಿರುದ್ಧ ಹಲ್ಲೆ ಆರೋಪದ ಮೇಲೆ ದೂರು ದಾಖಲಿಸಿದ್ದಾರೆ. ರಾಷ್ಟ್ರಗೀತೆಗೆ ಅವಮಾನ ಮಾಡಿದ ಆರೋಪದ ಮೇಲೆ ರಾಜ್ಯಸಭಾ ಸಂಸದ ಲಕ್ಷ್ಮೀಕಾಂತ್ ಬಾಜ್ಪೇಯ್ ಕೂಡ ದೂರು ದಾಖಲಿಸಿದ್ದರು. ಆದರೆ, ಈ ದೂರುಗಳಿಗೆ ಸಂಬಂಧಿಸಿದಂತೆ ಇನ್ನೂ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಸೈಫಿ ಅವರ ದೂರಿಗೆ ಸಂಬಂಧಿಸಿದಂತೆ, ಮೂವರು ಬಿಜೆಪಿ ಕೌನ್ಸಿಲರ್ಗಳಾದ ರಾಜೀವ್ ಕಾಳೆ, ಉತ್ತಮ್ ಸೈನಿ ಮತ್ತು ಕವಿತಾ ರಾಹಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 147 (ಗಲಭೆ), 323 (ಸ್ವಯಂಪ್ರೇರಿತವಾಗಿ ಗಾಯಗೊಳಿಸುವುದು), 352 (ದಾಳಿ ಅಥವಾ ಕ್ರಿಮಿನಲ್ ಬಲಪ್ರಯೋಗ), 506 (ಅಪರಾಧ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಸಿವಿಲ್ ಲೈನ್ಸ್ನ ಸರ್ಕಲ್ ಆಫೀಸರ್ ಅರವಿಂದ್ ಚೌರಾಸಿಯಾ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿರಿ: ರಾಜಕೀಯ ಅಸ್ತ್ರವಾಗಿ ಅತ್ಯಾಚಾರವನ್ನು ಸಮರ್ಥಿಸಿದ್ದ ಸಾವರ್ಕರ್!
ನಂತರ ಪೊಲೀಸರು ಶುಕ್ರವಾರ ಸಂಜೆ ಕಾಳೆ ಮತ್ತು ಸೈನಿಯನ್ನು ಬಂಧಿಸಿದರು. ಬಳಿಕ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು ಎಂದು ಚೌರಾಸಿಯಾ ಹೇಳಿದ್ದಾರೆ.
ವಂದೇ ಮಾತರಂ ಹಾಡುವ ವೇಳೆ ಎಐಎಂಐಎಂ ಸದಸ್ಯರು ಎದ್ದು ನಿಲ್ಲದೆ ಅಶಿಸ್ತು ಎಸಗಿರುವುದು ಪ್ರಾಥಮಿಕ ಹಂತದ ತನಿಖೆಯಿಂದ ತಿಳಿದುಬಂದಿದೆ. ಈ ಬಗ್ಗೆ ಸದನ ಕ್ರಮ ಕೈಗೊಳ್ಳಲಿದ್ದು, ಪೊಲೀಸರ ಪಾತ್ರವಿಲ್ಲ ಎಂದಿದ್ದಾರೆ.
ಬಾಜ್ಪೈ ಅವರ ದೂರಿಗೆ ಸಂಬಂಧಿಸಿದಂತೆ ತೆಗೆದುಕೊಂಡ ಕ್ರಮದ ಕುರಿತು ಪ್ರತಿಕ್ರಿಯಿಸಿರುವ ಚೌರಾಸಿಯಾ, “ಎಐಎಂಐಎಂ ಕೌನ್ಸಿಲರ್ಗಳ ವಿರುದ್ಧ ದೇಶದ್ರೋಹದ ಆರೋಪವನ್ನು ದಾಖಲಿಸಬೇಕೆಂದು ದೂರು ನೀಡಲಾಗಿದೆ. ಆದರೆ ದೇಶದ್ರೋಹದ ಕಾನೂನಿಗೆ ತಡೆ ಇದೆ. ವಿಷಯ ವಂದೇ ಮಾತರಂಗೆ ಸಂಬಂಧಿಸಿದ್ದೇ ಹೊರತು ರಾಷ್ಟ್ರಗೀತೆಗೆ (ಜನಗಣಮನಕ್ಕೆ) ಅಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.