ಕೊಳ್ಳೇಗಾಲ ವಿಧಾನಸಭೆ ಕ್ಷೇತ್ರದ ಬಿಜೆಪಿ ಶಾಸಕ ಎನ್.ಮಹೇಶ್ ಅವರ ಸೂಚನೆಯ ಮೇರೆಗೆ ಪೊಲೀಸರು ದಲಿತ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆಂಬ ಆರೋಪ ಕೇಳಿಬಂದಿದೆ. ದೌರ್ಜನ್ಯವನ್ನು ಖಂಡಿಸಿ ಕೊಳ್ಳೇಗಾಲ ಡಿವೈಎಸ್ಪಿ ಕಚೇರಿ ಎದುರು ಉತ್ತಂಬಳ್ಳಿ ಗ್ರಾಮಸ್ಥರು, ಪ್ರಗತಿಪರ ಸಂಘಟನೆಯ ಒಕ್ಕೂಟದವರು ಹಾಗೂ ಬಿಎಸ್ಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಉತ್ತಂಬಳ್ಳಿಯಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಸಿದ್ದಪ್ಪಾಜಿ ಕೊಂಡೋತ್ಸವಕ್ಕೆ ಶಾಸಕರು ಆಗಮಿಸಿದ್ದಾಗ ವಾದ್ಯ ನುಡಿಸುವ ಸಿದ್ದರಾಜು ಉತ್ತಂಬಳ್ಳಿ ಅವರು ಶಾಸಕರನ್ನು ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ಶಾಸಕರ ಸೈದ್ಧಾಂತಿಕ ಬದಲಾವಣೆಯನ್ನು ಖಂಡಿಸಿ ಸಿದ್ದರಾಜು ಚಪ್ಪಲಿಯನ್ನು ತೋರಿಸಿದರು ಎಂದು ಕೆಲವರು ಹೇಳುತ್ತಿದ್ದರೆ, ಮತ್ತೆ ಕೆಲವರು ‘ಶಾಸಕರಿಂದ ನಮಗ್ಯಾವುದೇ ಅಭಿವೃದ್ಧಿ ಆಗಿಲ್ಲ. ಚಿಕ್ಕದೊಂದು ಲೋನ್ ಕೂಡ ಕೊಡಿಸಲಿಲ್ಲ. ಉತ್ತಂಬಳ್ಳಿಗೆ ಗ್ರಾಮವನ್ನು ಅಭಿವೃದ್ಧಿಪಡಿಸಿಲ್ಲ’ ಸಿದ್ದರಾಜು ಪ್ರಶ್ನಿಸಿದ್ದರಿಂದ ಶಾಸಕರು ಸಿಟ್ಟಾದರು ಎನ್ನಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಬಿಎಸ್ಪಿ ರಾಜ್ಯ ಕಾರ್ಯದರ್ಶಿ, ಜಿಪಂ ಮಾಜಿ ಸದಸ್ಯ ಕಮಲ್ ನಾಗರಾಜ್, “ನಮ್ಮ ಜೀವನದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಸಾಯುವವರೆಗೂ ವಾದ್ಯ ನುಡಿಸಬೇಕು ಎಂದು ಸಿದ್ದರಾಜು ಶಾಸಕರನ್ನು ಪ್ರಶ್ನಿಸಿದ್ದಾರೆ. ಅಷ್ಟಕ್ಕೆ ಸಿಟ್ಟಾದ ಎನ್.ಮಹೇಶ್ ಅವರು, ಈತ ಜಾಸ್ತಿ ಮಾತನಾಡುತ್ತಿದ್ದಾನೆ, ಸ್ವಲ್ಪ ರಿಪೇರಿ ಮಾಡ್ರಿ ಎಂದು ಪೊಲೀಸರಿಗೆ ಸೂಚಿಸಿದ್ದಾರೆ. ಚಪ್ಪಲಿ ತೋರಿಸಿದರೆಂದು ಆರೋಪಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಬಳಿಕ ಮಾಂಬಳ್ಳಿ ಠಾಣೆಗೆ ಕರೆದೊಯ್ದು ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ” ಎಂದು ದೂರಿದರು.

“ಶುಕ್ರವಾರ ಬೆಳಿಗ್ಗೆಯೇ ಠಾಣೆಗೆ ಕರೆದೊಯ್ದು, ಸಂಜೆಯವರೆಗೂ ಹೊಡೆದಿದ್ದಾರೆ. ಇಷ್ಟು ಹೊತ್ತಾದರೂ ಏಕೆ ಬಿಡುಗಡೆ ಮಾಡಿಲ್ಲ ಎಂದು ಹೋಗಿ ನೋಡಿದರೆ ಸಿದ್ದರಾಜು ನಿಂತುಕೊಳ್ಳಲೂ ಆಗದಷ್ಟು ಗಾಯಗೊಂಡಿದ್ದರು. ಅಂಗಾಲಿಗೆ ಹೊಡೆದಿದ್ದರು. ಮಂಡಿ ಮೂಳೆಯನ್ನು ಲಾಠಿಯಲ್ಲಿ ಉಜ್ಜಿದ್ದರು. ಕೈಗಳೆಲ್ಲ ಊದುಕೊಂಡಿದ್ದವು. ಅವರನ್ನು ಕರೆದುಕೊಂಡು ಬಂದು ಆಸ್ಪತ್ರೆಗೆ ದಾಖಲು ಮಾಡಿದ್ದೇವೆ. ಆಸ್ಪತ್ರೆಗೂ ಕೆಲವು ಗೂಂಡಾಗಳು ಆಗಮಿಸಿ ಸಿದ್ದರಾಜು ಅವರಿಗೆ ತೊಂದರೆ ನೀಡಲು ಪ್ರಯತ್ನಿಸಿದರು” ಎಂದು ಆರೋಪಿಸಿದರು.
ಇದನ್ನೂ ಓದಿರಿ: ಸಂತೋಷ್ ಸಾವು ಪ್ರಕರಣ: ಆರೋಪಿ ನಂ.1 ಈಶ್ವರಪ್ಪನವರಿಂದ ಅಧಿಕೃತ ರಾಜೀನಾಮೆ
“ಘಟನೆಯನ್ನು ಖಂಡಿಸಿ ಉತ್ತಂಬಳ್ಳಿ ಗ್ರಾಮಸ್ಥರು, ಬಿಎಸ್ಪಿ ಕಾರ್ಯಕರ್ತರು ಕೊಳ್ಳೇಗಾಲ ಡಿವೈಎಸ್ಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದೇವೆ. ಮಾಂಬಳ್ಳಿ ಠಾಣೆಗೆ ಬಂದಿದ್ದ ಯಳಂದೂರು ಸರ್ಕಲ್ ಇನ್ಸ್ಪೆಕ್ಟರ್ ಶಿವಮಾದಯ್ಯನವರು ಹಲ್ಲೆ ಮಾಡಿದ್ದಾರೆ ಎಂದು ತಿಳಿಸಿದ್ದೇವೆ. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಎಎಸ್ಪಿ ಸುಂದರ್ ರಾಜ್ ಅವರು ಜನರಲ್ಲಿ ಕ್ಷಮೆಯಾಚಿಸಿದ್ದು, ಒಂದು ವಾರ ಸಮಯ ಕೋರಿದ್ದಾರೆ” ಎಂದು ಮಾಹಿತಿ ನೀಡಿದರು.
“ಸಿದ್ದರಾಜು ಅವರಿಗೆ ಹೈ ಬಿಪಿಯಾಗಿದೆ. ಹಲ್ಲೆ ನಡೆದಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಸಾಬೀತಾಗಿದೆ. ಸಿದ್ದರಾಜು ಅವರು ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ” ಎಂದು ಕಮಲ್ ತಿಳಿಸಿದರು.
ಚಪ್ಪಲಿ ಧರಿಸಿಯೇ ಇರಲಿಲ್ಲ: ಸಿದ್ದರಾಜು
ಆಸ್ಪತ್ರೆಯ ಮುಂದೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿದ್ದರಾಜು, ‘ನೋಡಪ್ಪ ಹೇಗೆ ಹೋಗ್ತಾ ಇದ್ದಾನೆ? ನಾವು ಸಾಯುವವರೆಗೆ ಹೀಗೆ ಇರುವಂತಾಯಿತಲ್ಲ ಎಂದು ಶಾಸಕರನ್ನು ನೋಡಿ ಹೇಳಿದ್ದೆ. ಆದರೆ, ನಾನು ಚಪ್ಪಲಿ ತೋರಿಸಿದ್ದೇನೆ ಎಂದು ಆರೋಪಿಸಲಾಗಿದೆ. ನಾನು ಚಪ್ಪಲಿಯೇ ಧರಿಸಿರಲಿಲ್ಲ’ ಎಂದು ತಿಳಿಸಿದ್ದಾರೆ.
‘ಶಾಸಕರಿಗೆ ಚಪ್ಪಲಿ ತೋರಿಸಿದ್ದೇನೆ ಎಂದು ನನ್ನನ್ನು ಪೊಲೀಸರು ಅಗರ ಮಾಂಬಳ್ಳಿ ಠಾಣೆಗೆ ಕರೆದೊಯ್ದು ಸಿಕ್ಕಾಪಟ್ಟೆ ಹೊಡೆದಿದ್ದಾರೆ. ಹಗ್ಗದಲ್ಲಿ ನೇತಾಡಿಸಿ ಬಡಿದಿದ್ದಾರೆ. ಬೇಡ ಬೇಡ ಎಂದರೂ ಕೇಳಲಿಲ್ಲ. ನನಗೆ ಹೊಡೆದವರಿಗೆ ಶಿಕ್ಷೆಯಾಗಬೇಕು. ಮುಂದೆ ಯಾರಿಗೂ ಈ ರೀತಿ ಆಗಬಾರದು’ ಎಂದಿದ್ದಾರೆ.
ಘಟನೆಯ ಕುರಿತು ಶಾಸಕ ಎನ್.ಮಹೇಶ್ ಅವರ ಪ್ರತಿಕ್ರಿಯೆಗಾಗಿ ‘ನಾನುಗೌರಿ.ಕಾಂ’ ಸಂಪರ್ಕಿಸಿದೆ. ಆದರೆ ಅವರು ಕರೆ ಸ್ವೀಕರಿಸಲಿಲ್ಲ. ಪ್ರತಿಕ್ರಿಯೆ ನಿರೀಕ್ಷಿಸಲಾಗಿದೆ.
Dalitharu mathe mathe BJP sertharalla…? Yee ghatanegalannu gamanisi innadaru horge bandu bere paksha nodkolli… BJP dalithara dhamanakaagiye irodu gothilva