Homeಮುಖಪುಟಆತ್ಮೀಯ ಧರ್ಮೇಂದ್ರ ಪ್ರಧಾನ್ ಅವರೆ, ಐಐಟಿ, ಐಐಎಂಗಳನ್ನು ಒಂದು ಕ್ಷಣ ಮರೆತುಬಿಡಿ, ನಿಜವಾದ ಬಿಕ್ಕಟ್ಟು ಶಾಲಾ...

ಆತ್ಮೀಯ ಧರ್ಮೇಂದ್ರ ಪ್ರಧಾನ್ ಅವರೆ, ಐಐಟಿ, ಐಐಎಂಗಳನ್ನು ಒಂದು ಕ್ಷಣ ಮರೆತುಬಿಡಿ, ನಿಜವಾದ ಬಿಕ್ಕಟ್ಟು ಶಾಲಾ ಶಿಕ್ಷಣದಲ್ಲಿದೆ……

- Advertisement -
- Advertisement -

ನಮಗೆ ಹೊಸ  ಕೇಂದ್ರ ಶಿಕ್ಷಣ ಮಂತ್ರಿ ಬಂದಿದ್ದಾರೆ. ಅದೃಷ್ಟವಶಾತ್,  ಅವರು ಈಗ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಲ್ಲ! ಇನ್ನೂ ಒಳ್ಳೆಯದೆಂದರೆ, ಇನ್ನು ರಮೇಶ್ ಪೋಖ್ರಿಯಾಲ್ ಶಿಕ್ಷಣ ಸಚಿವರಾಗಿ ಮುಂದುವರೆಯುವುದಿಲ್ಲ! ಶಿಕ್ಷಣಕ್ಕೆ ಸಂಬಂಧಿಸಿದಂತೆ ನೈಜ ಸಂಗತಿಗಳ ಬಗ್ಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ಇನ್ನು ನಾವು ನಿರೀಕ್ಷೆ ಮಾಡಬಹುದೇ?

ಆರೋಗ್ಯ ಮತ್ತು ಆರ್ಥಿಕತೆಯ ನಂತರ, ಸಾಂಕ್ರಾಮಿಕದಿಂದ ತೀವ್ರ ಸಂಕಷ್ಟಕ್ಕೆ ಈಡಾಗಿರುವುದು ಶಿಕ್ಷಣ. ದುಃಖಕರವೆಂದರೆ, ಶೈಕ್ಷಣಿಕ ಬಿಕ್ಕಟ್ಟಿನಲ್ಲಿ ಗೋಚರಿಸುವ ಆಯಾಮಗಳು ಮಾತ್ರ ರಾಜಕೀಯ ಗಮನ ಸೆಳೆಯುತ್ತವೆ. ಇವುಗಳಲ್ಲಿ ಕೆಲವು ಅಂಶಗಳತ್ತ ಹೊಸ ಶಿಕ್ಷಣ ಸಚಿವರು ಗಮನ ಹರಿಸುತ್ತಿದ್ದಾರೆ ಎಂದು ಮಾಧ್ಯಮ ವರದಿಗಳು ಸೂಚಿಸುತ್ತವೆ. ಮೊದಲ ದಿನವೇ ಅವರು ಕೆಲವು ಪ್ರಮುಖ ಉನ್ನತ ಶಿಕ್ಷಣ ಸಂಸ್ಥೆಗಳ ನಿರ್ದೇಶಕರು ಮತ್ತು ಉಪಕುಲಪತಿಗಳ ಪೂರ್ವ ನಿಯೋಜಿತ ಸಮ್ಮೇಳನದಲ್ಲಿ ಭಾಗವಹಿಸಿದರು. ಜೆಇಇ ಮತ್ತು ನೀಟ್ ಕ್ಯಾಲೆಂಡರ್ ಅವರ ಗಮನ ಸೆಳೆದಿದೆ. ಹೊಸ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸುವ ಬಗ್ಗೆ ಅವರು ಕಡ್ಡಾಯವಾಗಿ ಸದ್ದು ಮಾಡಿದ್ದಾರೆ.

ಆದರೆ ಶಿಕ್ಷಣ ಕ್ಷೇತ್ರದಲ್ಲಿ ನಿಜವಾದ ಬಿಕ್ಕಟ್ಟು ಇರುವುದು ಇಲ್ಲಲ್ಲ. ಇದು ಕಳೆದ ಒಂದು ವರ್ಷದಿಂದ ಶಾಲಾ ಮಕ್ಕಳು ಅನುಭವಿಸಿದ ಅಗಾಧವಾದ, ಆದರೆ ಅದೃಶ್ಯವಾದ ಶೈಕ್ಷಣಿಕ ನಷ್ಟದಲ್ಲಿದೆ. ಇಲ್ಲಿಯವರೆಗೆ ಸಚಿವರು ಅಥವಾ ಸಚಿವಾಲಯ ಕೂಡ ಅದರ ಬಗ್ಗೆ ಮಾತನಾಡಿಲ್ಲ. ಒಂದು ದೃಷ್ಟಿಯಲ್ಲಿ ಸಮಸ್ಯೆ ಹೊಸದಲ್ಲ. ಕಪಿಲ್ ಸಿಬಲ್ ಅವರ ಕಾಲದಿಂದಲೂ ಕೇಂದ್ರ ಶಿಕ್ಷಣ ಸಚಿವರು ‘ಉನ್ನತ ಶಿಕ್ಷಣ’ ಮಂತ್ರಿಗಳಂತೆ ವರ್ತಿಸುತ್ತಿದ್ದಾರೆ. ಐಐಟಿಗಳು, ಐಐಎಂಗಳು, ಕೇಂದ್ರೀಯ ವಿಶ್ವವಿದ್ಯಾಲಯಗಳು, ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಗಳು ಮತ್ತು ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ಮ್ಯಾನೇಜ್‍ಮೆಂಟ್‍ ಅಧ್ಯಯನ ಸಂಸ್ಥೆಗಳ ಪ್ರವೇಶ ಪರೀಕ್ಷೆಗಳ ಗೀಳು ಈಗ ಒಂದು ದಶಕಕ್ಕೂ ಹೆಚ್ಚು ಕಾಲ ಸಚಿವಾಲಯದ ಪ್ರಾಧಾನ್ಯವಾಗಿದೆ.ಇದರೊಂದಿಗೆ ಜಾತ್ಯತೀತತೆ ಅಥವಾ ಭಾರತೀಯಕರಣದ ಬಗ್ಗೆ ಸಾಂದರ್ಭಿಕ ಸೈದ್ಧಾಂತಿಕ ಜಟಾಪಟಿಗಳು ನಡೆಯುತ್ತ ಬಂದಿವೆ. ಈ ಬಾರಿ ಸಮಸ್ಯೆ ಇನ್ನಷ್ಟು ಜಟಿಲವಾಗಿದೆ. ನೀತಿ ನಿರೂಪಣೆಯ ಅಂಚಿನಲ್ಲಿರುವ ಶಾಲಾ ಶಿಕ್ಷಣವು ಸಾರ್ವಜನಿಕ ಚರ್ಚೆಯಿಂದ ಮತ್ತಷ್ಟು ದೂರಕ್ಕೆ ತಳ್ಳಲ್ಪಟ್ಟಿದೆ. ಸಾಂಕ್ರಾಮಿಕವು “ಶಿಕ್ಷಣಿಕ ಹತ್ಯೆಯ” ಪ್ರಕ್ರಿಯೆಯನ್ನು ಹೆಚ್ಚು ಕಾಣುವಂತೆ ಮಾಡಿದೆ, ಆದರೆ ಈ ಮೊದಲು ನಿಧಾನವಾಗಿದ್ದರೂ ಶೈಕ್ಷಣಿಕ ಅವಕಾಶಗಳ ಹತ್ಯೆ, ಸ್ವಲ್ಪ ಸಮಯದಿಂದ ನಡೆಯುತ್ತಿದೆ. ಇದು ಹೊಸ ಸಚಿವರ ಗಮನವನ್ನು ಸೆಳೆಯಬೇಕು.

ಹೊಸ ಸಚಿವರಿಗೆ ಓದುವುದಕ್ಕೆ ಶಿಫಾರಸು

ಹೊಸ ಸಚಿವ ಧರ್ಮೇಂದ್ರ ಪ್ರಧಾನ್ ಇತ್ತೀಚಿನ ಕೆಲವು ಮಾಧ್ಯಮ ವರದಿಗಳನ್ನು ಓದುವ ಮೂಲಕ ಪ್ರಾರಂಭಿಸಬಹುದು. ಹರಿಯಾಣದ ವಿದ್ಯಮಾನದ ಪ್ರಕಾರ, ಈ ವರ್ಷ ಖಾಸಗಿ ಶಾಲೆಗಳಿಗೆ ದಾಖಲಾದ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಆತಂಕಕಾರಿ ಕುಸಿತವನ್ನು ತೋರಿಸುತ್ತಿದೆ. ಈ ವರ್ಷ 12.5 ಲಕ್ಷ ವಿದ್ಯಾರ್ಥಿಗಳು ಖಾಸಗಿ ಶಾಲೆಗಳಿಗೆ ದಾಖಲಾಗಲಿಲ್ಲ, ಇದು ಕುಸಿತ ಶೇಕಡಾ 40ಕ್ಕಿಂತಲೂ ಹೆಚ್ಚಿದೆ. ಈ ಸಂಖ್ಯೆ ಕಳೆದ ವರ್ಷ 29.8 ಲಕ್ಷದಿಂದ ಈ ವರ್ಷ 17.3 ಲಕ್ಷಕ್ಕೆ ಇಳಿದಿದೆ. ಈ ಎಲ್ಲ ಅಥವಾ ಹೆಚ್ಚಿನ ವಿದ್ಯಾರ್ಥಿಗಳು ಶಾಲಾ ಶಿಕ್ಷಣದಿಂದ ಪೂರ್ತಿಯಾಗಿ ಹೊರಗುಳಿದಿದ್ದಾರೆ ಎಂದು ನಾವು ಭಾವಿಸಬಾರದು. ಎಲ್ಲಾ ಸಂಭವನೀಯತೆಗಳಲ್ಲಿ, ಖಾಸಗಿ ಶಾಲೆಗಳ ಹೆಚ್ಚಿನ ಶುಲ್ಕವನ್ನು ತಪ್ಪಿಸಲು ಈ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ಸರ್ಕಾರಿ ಶಾಲೆಗಳಿಗೆ ಸ್ಥಳಾಂತರಗೊಂಡಿದ್ದಾರೆ. ಆದರೆ ಈ ಸಂಖ್ಯೆಯ ಒಂದು ಸಣ್ಣ ಭಾಗ, ಹೆಚ್ಚಾಗಿ ಹುಡುಗಿಯರು ಯಾವುದೇ ಶಾಲೆಗೆ ಹಿಂತಿರುಗುವುದಿಲ್ಲ ಎಂದು ಭಾವಿಸುವುದು ಸಮಂಜಸವಾಗಿದೆ. ಕುಟುಂಬ ಆದಾಯದಲ್ಲಿ ಆಗಿರುವ ತೀವ್ರ ಕುಸಿತದಿಂದ, ಸರ್ಕಾರಿ ಶಾಲೆಗೆ ಸೇರಿದ ಅನೇಕ ಹುಡುಗರನ್ನು ಕಾರ್ಮಿಕ ವಲಯಕ್ಕೆ ಪ್ರವೇಶಿಸುವಂತೆ ಮತ್ತು ಅನೇಕ ಹುಡುಗಿಯರು ಮನೆಗೆಲಸಕ್ಕೆ ಕಳಿಸುವಂತೆ ಮಾಡುವುದು ನಿಜ. ಅನೇಕ ಇತರ ಮಾಧ್ಯಮ ವರದಿಗಳು ಈ ವಿದ್ಯಮಾನವನ್ನು ದೃಢಿಪಡಿಸುತ್ತವೆ.

ಅವರಿಗೆ ಹೆಚ್ಚಿನ ಸಮಯವಿದ್ದರೆ, ಸಚಿವರು 2020ರ ವಾರ್ಷಿಕ ಶಿಕ್ಷಣ ಸ್ಥಿತಿ ವರದಿಯನ್ನು ಓದಬಹುದು. ಗ್ರಾಮೀಣ ಭಾರತದಲ್ಲಿ ಶಾಲಾ ಶಿಕ್ಷಣದ ಗುಣಮಟ್ಟದ ಕುರಿತಾದ ಈ ವರದಿಯು 2020ರಲ್ಲಿ ಕೋವಿಡ್‌ ನಿಂದಾಗಿರುವ ಸಮಸ್ಯೆ ಮತ್ತು ಮೊದಲ ಕೋವಿಡ್ ಅಲೆಯ ಲಾಕ್ಡೌನ್ ನಿಂದ ಶೈಕ್ಷಣಿಕ ನಷ್ಟದ ವ್ಯಾಪ್ತಿಯನ್ನು ದಾಖಲಿಸಿದೆ. ಆ ವರ್ಷದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಪಠ್ಯಪುಸ್ತಕಗಳನ್ನು ಹೊಂದಿದ್ದರೂ, ಅವರ ಶಿಕ್ಷಣಕ್ಕೆ ಸಿಕ್ಕ ಬೆಂಬಲ ಅತೀವ ಕಡಿಮೆಯಿತ್ತು ಎಂದು ಅದು ದಾಖಲಿಸುತ್ತದೆ. ಗ್ರಾಮೀಣ ಭಾರತದಲ್ಲಿ ಸ್ಮಾರ್ಟ್‍ಫೋನ್‌ಗಳು ತಮ್ಮ ವ್ಯಾಪ್ತಿಯನ್ನು ಹರಡಿಕೊಂಡಿವೆಯಾದರೂ, ಗ್ರಾಮೀಣ ಭಾರತದಲ್ಲಿ ಶಾಲೆಗೆ ಹೋಗುವ ಮಕ್ಕಳ ಶೇಕಡಾ 42ರಷ್ಟು ಕುಟುಂಬಗಳು ಇನ್ನೂ ಸ್ಮಾರ್ಟ್‍ಫೋನ್‍ ಹೊಂದಿಲ್ಲ. ಈ ಪ್ರಮಾಣವು ಬಡ ಕುಟುಂಬಗಳಿಗೆ ಶೇಕಡಾ 55 ರಷ್ಟಿತ್ತು. ಅವರು ಎಲೆಕ್ಟ್ರಾನಿಕ್ ಸಾಧನವನ್ನು ಹೊಂದಿದ್ದಾರೆಂದು ಊಹಿಸಿದರೆ, ಓದುವ ಸಾಮಗ್ರಿಗಳ ಲಭ್ಯತೆಯ ಸಮಸ್ಯೆ ಕೂಡ ಇರುತ್ತದೆ. ಕೇವಲ 35 ಪ್ರತಿಶತದಷ್ಟು ವಿದ್ಯಾರ್ಥಿಗಳು ತಮ್ಮ ಶಾಲೆಗಳಿಂದ ಯಾವುದೇ ಓದುವ ಅಥವಾ ಬೆಂಬಲ ಸಾಮಗ್ರಿಗಳನ್ನು ಪಡೆದರು. ಖಾಸಗಿ ಶಾಲೆಗಳಿಗೆ ಈ ಪ್ರಮಾಣವು ಶೇಕಡಾ 40ರಷ್ಟಿತ್ತು. ಹೆಚ್ಚುವರಿ ವಸ್ತುಗಳನ್ನು ಬಹುತೇಕ ಸಂಪೂರ್ಣವಾಗಿ ವಾಟ್ಸಾಪ್ ಮೂಲಕ ತಲುಪಿಸಲಾಯಿತು. ಆದ್ದರಿಂದ, ‘ವಾಟ್ಸಾಪ್ ವಿಶ್ವವಿದ್ಯಾಲಯ’ದಿಂದ, ನಾವು ಈಗ ‘ವಾಟ್ಸಾಪ್ ಶಾಲೆಗಳಿಗೆ’ ತೆರಳಿದ್ದೇವೆ.

ಆದ್ಯತೆಯ ವಿಷಯಗಳು ಯಾವುವು?

ಅನೇಕ ಇತರ ವರದಿಗಳು ಶಾಲಾ ಶಿಕ್ಷಣದ ಮೇಲೆ ಸಾಂಕ್ರಾಮಿಕ ರೋಗದ ಇತರ ವ್ಯಾಪಕ ಪರಿಣಾಮಗಳನ್ನು ದೃಢಿಪಡಿಸಿವೆ: ಶಾಲೆಗಳಿಂದ ಡ್ರಾಪ್‍ಔಟ್‍ ಸಂಖ್ಯೆ ಹೆಚ್ಚಿರುವುದು, ಖಾಸಗಿಯಿಂದ ಸರ್ಕಾರಿ ಶಾಲೆಗಳಿಗೆ ಸೇರುತ್ತಿರುವುದು, ಹುಡುಗರು ಬಾಲಕಾರ್ಮಿಕರಾಗುವುದು ಮತ್ತು ಹುಡುಗಿಯರು ಮನೆಗೆಲಸಕ್ಕೆ ಅಂಟಿಕೊಳ್ಳುವುದು ಹೆಚ್ಚುತ್ತಿದೆ ಎಂದು ವರದಿಗಳು ಹೇಳುತ್ತಿವೆ. ಮಧ್ಯಾಹ್ನದ ಬಿಸಿಯೂಟ ಯೋಜನೆ ಸ್ಥಗಿತಗೊಂಡ ಕಾರಣಕ್ಕೆ ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚಿದೆ ಮತ್ತು ಆರೋಗ್ಯದಲ್ಲಿ ಅಡ್ಡಪರಿಣಾಮ ಬೀರಿದೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಕಳೆದ ಒಂದೂವರೆ ದಶಕ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯಲ್ಲಿ ಉಂಟಾದ ಶಾಲಾ ಶಿಕ್ಷಣದ ಪ್ರಗತಿ ಕಳೆದ ಒಂದೂವರೆ ವರ್ಷಗಳಲ್ಲಿ ನಾಶವಾಗಿವೆ. ಇದು ಕೇವಲ ಶಿಕ್ಷಣದ ಗುಣಮಟ್ಟದಲ್ಲಿನ ನಷ್ಟವಲ್ಲ, ಇದು ನಮ್ಮ ಕಾರ್ಮಿಕ ಬಲದ ಕೌಶಲ್ಯದ ನಷ್ಟವೂ ಆಗಿದೆ. ಶಿಕ್ಷಣ ಸಚಿವರು ಕೌಶಲ್ಯ ಅಭಿವೃದ್ಧಿಯ ಖಾತೆ ಕೂಡ  ಹೊಂದಿದ್ದರಿಂದ ಅವರು ಇದರ ಬಗ್ಗೆ ಕಾಳಜಿ ವಹಿಸಬೇಕು.

ಅವರಿಗೆ ಉನ್ನತ ಶಿಕ್ಷಣದಲ್ಲಿನ ಸವಾಲು ವಿಭಿನ್ನವಾಗಿ ಕಾಣಿಸಬಹುದು. ಆದರೆ ಇದು ಕೂಡ ಒಂದೇ ರೀತಿಯ ಗುಣಲಕ್ಷಣಗಳನ್ನು ಹೊಂದಿದೆ: ಕಾಲೇಜು ಅಥವಾ ವಿಶ್ವವಿದ್ಯಾಲಯದಿಂದ ಹೆಚ್ಚಿನ ಡ್ರಾಪ್ ಔಟ್‍, ಶೈಕ್ಷಣಿಕ ಸಾಮಗ್ರಿ ಅಥವಾ ಸಂಪನ್ಮೂಲುಗಳ ಲಭ್ಯತೆಯ ಕೊರತೆ (ವಿಶೇಷವಾಗಿ ಅನಾನುಕೂಲಕರ ಹಾಗೂ ತಳಮಟ್ಟದ

ಹಿನ್ನೆಲೆಯ ವಿದ್ಯಾರ್ಥಿಗಳಿಗೆ) ಮತ್ತು ಶಿಕ್ಷಕರ ಜೊತೆಗಿನ ಸಂಪರ್ಕವನ್ನು ಕಡಿಮೆ ಮಾಡಿರುವುದು.

 ಶಿಕ್ಷಣ ಸಚಿವರಿಗೆ ನನ್ನ ಮನವಿ: ಹೊಸ ಶಿಕ್ಷಣ ನೀತಿಯ ಬಗ್ಗೆ ನೀವು ಉತ್ಸುಕರಾಗಿದ್ದೀರಿ ಎಂದು ನನಗೆ ಅನಿಸಿದೆ. ಪಠ್ಯಕ್ರಮದಲ್ಲಿ ಕೇಸರಿ ಸಿದ್ಧಾಂತವನ್ನು ಹೆಚ್ಚಿಸಲು ಒತ್ತಡವಿರಬಹುದು ಎಂದು ನಾನು ಅರ್ಥ ಮಾಡಿಕೊಂಡಿದ್ದೇನೆ. ಮಧ್ಯಮ ವರ್ಗದ ಮಕ್ಕಳು ಹೆಚ್ಚು ಹೂಡಿಕೆ ಮಾಡಿರುವ ಪ್ರವೇಶ ಪರೀಕ್ಷೆಗಳನ್ನು ನಿರ್ವಹಿಸಲು ನಿಮ್ಮ ಮೇಲಿನ ಒತ್ತಡವನ್ನು ನಾನು ಊಹಿಸಬಲ್ಲೆ. ನೀವು ಮಾಡಲೇಬೇಕಿರುವ ಇವುಗಳಿಗೆ ಗಮನಹರಿಸಿ, ಆದರೆ ದಯವಿಟ್ಟು ನೀವು ಈ ಎಲ್ಲವನ್ನು ಹಿಂದಕ್ಕೆ ತಳ್ಳಿ  ಶಾಲಾ ಮಕ್ಕಳ ಶಿಕ್ಷಣದ ನೈಜ ಮತ್ತು ಮೂಕ ಬಿಕ್ಕಟ್ಟನ್ನು ನಿವಾರಿಸುವುದಕ್ಕೆ ಕೆಲಸ ಮಾಡಬಹುದೇ?

(ಯೋಗೇಂದ್ರ ಯಾದವ್ ಸ್ವರಾಜ್ ಭಾರತದ ರಾಷ್ಟ್ರೀಯ ಸಂಚಾಲಕರು)

ಕೃಪೆ: ದ ಪ್ರಿಂಟ್

ಕನ್ನಡಕ್ಕೆ: ಪಿ ಮಲ್ಲನಗೌಡರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಶಿಕ್ಷಣದಿಂದ ವಂಚಿತರನ್ನಾಗಿಸುದು ಇವರ ಮೂಲ ಉದ್ದೇಶವಾಗಿತ್ತು.

LEAVE A REPLY

Please enter your comment!
Please enter your name here

- Advertisment -

ಕೇಂದ್ರ ಸಚಿವ ಬಂಡಿ ಸಂಜಯ್ ಮಗನ ವಿರುದ್ಧ ಪೋಕ್ಸೋ ಕೇಸ್ : ಕ್ರಮ ಕೈಗೊಳ್ಳದೆ ಕಥೆ ಹೇಳುತ್ತಿರುವ ಪೊಲೀಸರು, ಅಂತರ ಕಾಯ್ದುಕೊಂಡ ಬಿಜೆಪಿ

ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ, ತೆಲಂಗಾಣದ ಪ್ರಮುಖ ಬಿಜೆಪಿ ನಾಯಕ ಬಂಡಿ ಸಂಜಯ್ ಕುಮಾರ್ ಅವರ ಮಗ ಬಂಡಿ ಸಾಯಿ ಭಗೀರತ್ ವಿರುದ್ಧ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಪೋಕ್ಸೋ...

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...