ನಟಿ ರಿಯಾ ಚಕ್ರವರ್ತಿ ವಿರುದ್ದ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ತಂದೆ ಸಲ್ಲಿಸಿದ ದೂರಿನನ್ವಯ ಬಿಹಾರ ಪೊಲೀಸರು ದಾಖಲಿಸಿರುವ ಎಫ್ಐಆರ್ ಅನ್ನು ಆಧಾರವಾಗಿಟ್ಟುಕೊಂಡ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿದೆ.
ತನ್ನ ಮಗನ ಬ್ಯಾಂಕ್ ಖಾತೆಯಿಂದ ಕಾರಣ ತಿಳಿಯದೆ ಹಣ ವರ್ಗಾವಣೆಗಳು ನಡೆದಿವೆ, ಇದರ ಹಿಂದೆ ಅವನ ಗೆಳತಿ ರಿಯಾ ಚಕ್ರವರ್ತಿ ಮತ್ತಿತರರು ಇದ್ದಾರೆಂದು ಸುಶಾಂತ್ ಸಿಂಗ್ ತಂದೆ ತಮ್ಮ ದೂರಿನಲ್ಲಿ ಆರೋಪಿಸಿದ್ದರು.
ವೃತ್ತಿಯಲ್ಲಿ ಮುಂದೆ ಬರುವ ಉದ್ದೇಶದಿಂದ 2019 ರಲ್ಲಿ ತನ್ನ ಪುತ್ರನ ಸ್ನೇಹವನ್ನು ರಿಯಾ ಚಕ್ರವರ್ತಿ ಸಂಪಾದಿಸಿದ್ದರು ಎಂದು ಅವರು ಆರೋಪಿಸಿದ್ದಾರೆ.
ಅಲ್ಲದೇ ಸುಮಾರು 15 ಕೋಟಿ ರೂಪಾಯಿಯಷ್ಟು ಹಣವನ್ನು ಸುಶಾಂತ್ ಸಿಂಗ್ ಅಕೌಂಟ್ನಿಂದ ತೆಗೆಯಲಾಗಿತ್ತು. ಜೊತೆಗೆ ಇದೇ ಹಣ ಹೂಡಿಕೆಯಾದ ಕಂಪನಿಯನ್ನ ರಿಯಾ ಚಕ್ರವರ್ತಿ ಸೋದರ ನೋಡಿಕೊಳ್ಳುತ್ತಿದ್ದರು ಅನ್ನೋ ಆರೋಪ ಸಹ ಕೇಳಿ ಬಂದಿತ್ತು. ಈ ಬಗ್ಗೆ ಅಕ್ರಮ ಆಸ್ತಿ ಗಳಿಸಲು ರಿಯಾ ಚಕ್ರವರ್ತಿ ಸುಶಾಂತ್ ಖಾತೆಯಿಂದ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ್ದಾರೆಯೇ ಎಂದು ಜಾರಿ ನಿರ್ದೇಶನಾಲಯ ತನಿಖೆ ನಡೆಸಲಿದೆ.
ಇನ್ನು ಪಾಟ್ನಾದಲ್ಲಿ ಸುಶಾಂತ್ ಸಿಂಗ್ ತಂದೆ ದಾಖಲಿಸಿದ್ದ ಕೇಸ್ನ್ನು ಮುಂಬೈಗೆ ವರ್ಗಾಯಿಸುವಂತೆ ರಿಯಾ ಚಕ್ರವರ್ತಿಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಈಗಾಗಲೇ ಮುಂಬೈ ಪೊಲೀಸರು ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಯಾ ಚಕ್ರವರ್ತಿ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ.
ಜಾರಿ ನಿರ್ದೇಶನಾಲಯ ವಿಚಾರಣೆಗೆ ಮುಂದಿನ ವಾರ ಹಾಜರಾಗಲು ಹೇಳುವ ಸಾಧ್ಯತೆಯಿದ್ದು, ಪ್ರಕರಣದಲ್ಲಿ ರಿಯಾ ಮಾತ್ರವಲ್ಲದೆ ಇತರರ ಹೆಸರನ್ನು ಕೂಡಾ ಹೆಸರಿಸಲಾಗಿದೆ.
ಓದಿ: ಸುಶಾಂತ್ ಸಿಂಗ್ ಸಾವು ಪ್ರಕರಣ: ಪಾಟ್ನಾದಲ್ಲಿ ದಾಖಲಾದ ದೂರನ್ನು ಮುಂಬೈಗೆ ವರ್ಗಾಯಿಸುವಂತೆ ನಟಿ ರಿಯಾ ಮನವಿ