Homeಅಂಕಣಗಳುಬಹುಜನ ಭಾರತ; ಅವಸಾನಗೊಂಡ ಆತ್ಮಸಾಕ್ಷಿಗಳು ಮತ್ತು ’ಜೈಭೀಮ್' ಸಿನೆಮಾ

ಬಹುಜನ ಭಾರತ; ಅವಸಾನಗೊಂಡ ಆತ್ಮಸಾಕ್ಷಿಗಳು ಮತ್ತು ’ಜೈಭೀಮ್’ ಸಿನೆಮಾ

- Advertisement -
- Advertisement -

ತನ್ನನ್ನು ನಾಗರಿಕ ಎಂದು ಕರೆದುಕೊಳ್ಳುವ ಸಮಾಜ ಪೂರ್ವಗ್ರಹಗಳಿದ್ದಲ್ಲಿ ಅವುಗಳನ್ನು ಮೂರು ತಾಸು ಬದಿಗೆ ಸರಿಸಿ ಮನತೆರೆದು ’ಜೈ ಭೀಮ್’ ಚಲನಚಿತ್ರವನ್ನು ಅದರ ಎಲ್ಲ ಮಿತಿಗಳೊಂದಿಗೆ ಒಮ್ಮೆ ನೋಡುವುದು ಒಳಿತು. ಬತ್ತಿ ಹೋಗಿರಬಹುದಾದ ಅಂತಃಕರಣದ ಸೆಲೆಗಳು ಮತ್ತೆ ಜಿನುಗಿಯಾವು!

ಕ್ರೂರ ಜಾತಿವ್ಯವಸ್ಥೆಯ ಧೂರ್ತ ಹುನ್ನಾರಗಳಿಗೆ ಕೊನೆಮೊದಲಿಲ್ಲ. ಮೇಲುಕೀಳಿನ ಹಾಲಾಹಲವನ್ನು ತುಂಬಿತುಳುಕಿಸುವ ಜಾತಿಪದ್ಧತಿ ಹಿಂದೂ ಸಮಾಜದ ವೈಶಿಷ್ಟ್ಯ. ಮನುಷ್ಯನೇ ಮನುಷ್ಯನನ್ನು ಹಿಂಸಿಸಿ ಅವಮಾನಿಸಿ ಮೃಗದಂತೆ ಬೇಟೆಯಾಡಿ ಕೊಲ್ಲುವ ಕ್ರೌರ್ಯದ ಅಮಾನುಷ ನಿರ್ಮಿತಿ.

’ಜೈ ಭೀಮ್’ ಚಲನಚಿತ್ರದ ಮೊದಲ ದೃಶ್ಯವೇ ’ನಾಗರಿಕ’ ಸಮಾಜದ ಕರಾಳ ಮುಖದ ಕುರೂಪವನ್ನು ತೆರೆದು ತೋರುತ್ತದೆ. ಬಿಡುಗಡೆಯಾದ ಕೈದಿಗಳನ್ನು ಜೈಲಿನ ಆವರಣದಲ್ಲಿ ಪೊಲೀಸರು ಅವರವರ ಜಾತಿಯ ಆಧಾರದ ಮೇಲೆ ಪ್ರತ್ಯೇಕಗೊಳಿಸಿ ನಿಲ್ಲಿಸುತ್ತಾರೆ. ಬಲಿಷ್ಠ ಜಾತಿಯವರನ್ನು ಬಿಡುಗಡೆ ಮಾಡಲಾಗುತ್ತದೆ. ಆದರೆ ದಲಿತರು-ಆದಿವಾಸಿಗಳನ್ನು ಉಳಿಸಿಕೊಂಡು ಅವರು ಮಾಡಿಯೇ ಇಲ್ಲದ ಹೊಸ ಆಪಾದನೆಗಳನ್ನು ಹೇರಲಾಗುತ್ತದೆ. ನಿಜವಾದ ಅಪರಾಧಿಗಳು ಪತ್ತೆಯಾಗದೆ ಬಾಕಿ ಉಳಿದಿರುವ ಕೇಸುಗಳಲ್ಲಿ ಇವರನ್ನು ಸಿಲುಕಿಸಿ ಪುನಃ ಜೈಲಿಗೆ ಅಟ್ಟಲಾಗುತ್ತದೆ. ಬಗೆಹರಿಸಲಾಗದೆ ಬಾಕಿ ಉಳಿಸಿರುವ ಕೇಸುಗಳಲ್ಲಿ ಈ ಅತಿ ದೀನರನ್ನು ಇರುಕಿಸಲಾಗುತ್ತದೆ. ಹೀಗೆ ಬಲಿಪಶುಗಳನ್ನು ಪೂರೈಕೆ ಮಾಡುವ ಜೈಲರನ ಜೇಬುಗಳನ್ನು ಪೊಲೀಸರೇ ಭರ್ತಿ ಮಾಡುತ್ತಾರೆ.

ತಮಿಳುನಾಡಿನಲ್ಲಿ ಇರುಳರೆಂದೂ, ಕರ್ನಾಟಕದಲ್ಲಿ ಇರುಳಿಗರೆಂದೂ ಕರೆಯಲಾಗುವ ಈ ಸಮುದಾಯ ಅತ್ಯಂತ ಹಿಂದುಳಿದ ಬುಡಕಟ್ಟಿಗೆ ಸೇರಿದವರು. ಹಾವು ಹಿಡಿದು ಕಾಡಿಗೆ ಬಿಡುವ ಮತ್ತು ಹಾವಿನ ವಿಷಕ್ಕೆ ಔಷಧಿ ಕೊಡುವ ಈ ಜನರು ಹೊಲಗದ್ದೆಗಳಲ್ಲಿ ಫಸಲು ಮುಕ್ಕುವ ಇಲಿಗಳ ಹಿಡಿಯುವವರು. ಬ್ರಿಟಿಷ್ ಸರ್ಕಾರದಿಂದ ಕ್ರಿಮಿನಲ್ ಟ್ರೈಬ್ ಎಂಬ ಹಣೆಪಟ್ಟಿ ಹಚ್ಚಿಸಿಕೊಂಡಿದ್ದ ಹಲವಾರು ಜಾತಿಗಳು ಮತ್ತು ಬುಡಕಟ್ಟುಗಳ ಪೈಕಿ ಇರುಳರೂ ಸೇರಿದ್ದಾರೆ. ಎರಡು ಹೊತ್ತಿನ ಅನ್ನಕ್ಕೆ ಮತ್ತು ಗೇಣು ಬಟ್ಟೆಗೆ ಗಳಿಸುವಲ್ಲೇ ಮುಗಿದುಹೋಗುವ ದೀನ ಬದುಕುಗಳು ಇವರವು. ಇರುಳಿಗರನ್ನು ಮತ್ತು ಇವರಂತಹ ಅಸಂಖ್ಯ ತಬ್ಬಲಿ ಜಾತಿಗಳನ್ನು ಸವರ್ಣೀಯ ಸಮಾಜ ಮತ್ತು ನಮ್ಮ ಅಪರಾಧ ನ್ಯಾಯಾಂಗ ವ್ಯವಸ್ಥೆ (Criminal Justice System) ನಡೆಸಿಕೊಳ್ಳುವ ಪರಿ ಅಮಾನುಷ. ದಿಕ್ಕಿಲ್ಲದ ನಾಯಿ ನರಿಗಳು ಹುಳು ಹುಪ್ಪಟೆಗಳಿಗಿಂತಲೂ ಕೀಳಾಗಿ ಹುಟ್ಟಿ ಸಾಯುವ ಇವರನ್ನು ಮನುಷ್ಯರೆಂದು ಬಗೆದೇ ಇಲ್ಲ. ಹಾಗೆಂದೇ ಮಾನವಹಕ್ಕುಗಳು ಎಂಬ ಪರಿಕಲ್ಪನೆ ಇವರನ್ನು ದೂರದಿಂದಲೂ ಮುಟ್ಟುವುದಿಲ್ಲ. ಇವರ ಭಾರತವೇ ಬೇರೆ. ಅದು ಕತ್ತಲ ಭಾರತ. ಅದೃಶ್ಯ ಭಾರತ. ನಾಗರಿಕ ಎಂದು ಹೇಳಲಾಗುವ ಅನಾಗರಿಕ ಸಮಾಜದ ಕುರುಡುಗಣ್ಣಿಗೆ, ಕಿವುಡುಗಿವಿಗೆ, ಸತ್ತ ನಾಲಗೆಗೆ, ಅವಸಾನಗೊಂಡ ಆತ್ಮಸಾಕ್ಷಿಯನ್ನು ಆರ್ತತೆ, ಅಸಹಾಯಕತೆಯಿಂದ ನೋಡುವ ಆದಿವಾಸಿ-ದಲಿತ ಭಾರತ.

ಜೈ ಭೀಮ್ ಚಲನಚಿತ್ರದ ಕ್ರೌರ್ಯವನ್ನು ಛತ್ತೀಸಗಢ-ಝಾರ್ಖಂಡದಂತಹ ಆದಿವಾಸಿ ಬಹುಳ ಸೀಮೆಯಂತೂ ಅನವರತ ಎದುರಿಸುತ್ತ ಬಂದಿದೆ. ಉತ್ತರಪ್ರದೇಶ-ಬಿಹಾರದಲ್ಲಿ ನೆಲೆಸಿರುವ ಹೊಲಗದ್ದೆಗಳಲ್ಲಿ ಇಲಿ ಹಿಡಿದು ತಿನ್ನುವ ಮೂಸಾಹರ ಎಂಬ ಅತಿ ದಲಿತ ಜಾತಿಯೊಂದಿದೆ. ಅದರಲ್ಲಿ ಅಕ್ಷರಸ್ಥರ ಪ್ರಮಾಣ ಶೇ.ಮೂರು. ಇದೇ ಗತಿ ಮುಂದುವರೆದರೆ ಈ ಜಾತಿ ಸಂಪೂರ್ಣ ಸಾಕ್ಷರವಾಗಲು ನಾಲ್ಕು ಸಾವಿರ ವರ್ಷಗಳಿಗೂ ಹೆಚ್ಚು ಕಾಲ ಬೇಕಾದೀತಂತೆ! ಮೂಸಾಹರರೊಂದಿಗೆ ಇರುಳರೂ ಸೇರಿದಂತೆ ಇನ್ನೂ ನೂರಾರು ಜಾತಿಗಳು- ಬುಡಕಟ್ಟುಗಳು ಈ ಪಟ್ಟಿಗೆ ಸೇರುವುದು ನಿಶ್ಚಿತ.

ಬಾಬಾಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ಅವರು Annihilation of Casteನ ಎಂಟನೆಯ ಅಧ್ಯಾಯದಲ್ಲಿ ಆದಿವಾಸಿಗಳ ದುಸ್ಥಿತಿಯ ಕುರಿತು ಎತ್ತಿರುವ ಪ್ರಶ್ನೆಯೊಂದು ಹೀಗಿದೆ: “ಆದಿವಾಸಿಗಳನ್ನು ಇವ ನಮ್ಮವನೆಂದು ತಬ್ಬಿಕೊಂಡು ಪ್ರೀತಿಸಲು ಹಿಂದೂ ಸಮಾಜ ಮುಂದಾಗಲೇ ಇಲ್ಲ. ಬದುಕಿಡೀ ಜಾತಿವ್ಯವಸ್ಥೆಯನ್ನು ಕಾಪಾಡಿಕೊಳ್ಳುವುದೇ ಹಿಂದುವಿನ ಪರಮ ಉದ್ದೇಶವಾಗಿದ್ದಾಗ ಈ ಕೆಲಸ ಮಾಡಲು ಹಿಂದುವಿಗೆ ಹೇಗೆ ಸಾಧ್ಯವಾದೀತು”?

1871ರಲ್ಲಿ ಬ್ರಿಟಿಷರು ಜಾರಿಗೆ ತಂದಿದ್ದ ಕ್ರಿಮಿನಲ್ ಟ್ರೈಬ್ಸ್ ಕಾಯಿದೆಯನ್ನು 1951ರಲ್ಲಿ ರದ್ದು ಮಾಡಲಾಗುತ್ತದೆ. ಆದರೆ ಕಾಗದದ ಮೇಲೆ ಮಾತ್ರವೇ ರದ್ದಾಗಿರುವ ಈ ಕಾಯಿದೆಯನ್ನು ಪೊಲೀಸ್ ವ್ಯವಸ್ಥೆ ಜೀವಂತವಾಗಿ ಇರಿಸಿಕೊಂಡಿದೆ. ಕ್ರಿಮಿನಲ್ ಟ್ರೈಬ್ಸ್ ಹಣೆಪಟ್ಟಿ ಹಚ್ಚಲಾಗಿದ್ದ ನೂರಾರು ಬುಡಕಟ್ಟುಗಳ ಅಮಾಯಕ ಜನರನ್ನು ಅಮಾನುಷವಾಗಿ ನಡೆಸಿಕೊಳ್ಳುತ್ತಿದೆ. ಅವರು ಮಾಡದೆ ಇರುವ ಅಪರಾಧಗಳಲ್ಲಿ ಬಂಧಿಸಿ ಜೈಲುಗಳಲ್ಲಿ ಚಿತ್ರಹಿಂಸೆ ಮಾಡಿ ಅವರಿಂದ ಬಲವಂತದ ಹುಸಿ ತಪ್ಪೊಪ್ಪಿಗೆ ಪಡೆದು, ಅದನ್ನು ನ್ಯಾಯಾಲಯಗಳಲ್ಲಿ ಮಂಡಿಸಿ, ಶಿಕ್ಷೆ ಕೊಡಿಸಿ ಜೈಲುಗಳ ನರಕಕ್ಕೆ ನೂಕಲಾಗುತ್ತಿದೆ. ಚಿತ್ರವಧೆಯ ಹಂತದಲ್ಲೇ ಪ್ರಾಣ ಬಿಡುವ ದಿಕ್ಕಿಲ್ದವರ ಲೆಕ್ಕವಿಲ್ಲ.

ಅಮಾಯಕ ಅನಕ್ಷರಸ್ಥ ತಬ್ಬಲಿ ಜನಾಂಗಗಳ ಈ ಚಿತ್ರವಧೆಯ ರಕ್ತ ನಾಗರಿಕ ಸಮಾಜದ ಕೈಗಳನ್ನು ಮೆತ್ತಿ ತೊಟ್ಟಿಕ್ಕುತ್ತಿದೆ. ಕಣ್ಣುಮುಚ್ಚಿ ಲೋಲುಪತೆಯಲ್ಲಿ ಮೈಮರೆತಿರುವ ಈ ಜಾತಿವ್ಯಾಧಿಪೀಡಿತ ಸಮಾಜದ ಆತ್ಮಸಾಕ್ಷಿ ಸಾವಿರಾರು ವರ್ಷಗಳ ಅಂಧ ಅಮಾನುಷ ಪರಂಪರೆಯಡಿ ಹೂತು ಹೋಗಿದೆ.

ರಾಷ್ಟ್ರೀಯ ಚಿತ್ರಹಿಂಸೆ ವಿರೋಧೀ ಆಂದೋಲನದ (National Campaign Against Torture) ಅಧ್ಯಯನದ ಪ್ರಕಾರ ದಿನಂಪ್ರತಿ ಸರಾಸರಿ ಐವರು ಬಂಧಿತರು ಪೊಲೀಸ್ ವಶದಲ್ಲಿ ಚಿತ್ರಹಿಂಸೆಯಿಂದ ಸಾಯುತ್ತಿದ್ದಾರೆ. 2019ರಲ್ಲಿ ಹೀಗೆ ಕಾನೂನುಪಾಲಕರಿಂದ ’ಕೊಲೆ’ ಯಾದವರ ಸಂಖ್ಯೆ 1,723.

2020ರಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ದಾಖಲಿಸಿರುವ ನ್ಯಾಯಾಂಗ ವಶದ ಸಾವುಗಳ ಸಂಖ್ಯೆ 1,569. ಕಾಗದದ ಮೇಲೆ ಕಡತಗಳಲ್ಲಿ ಅಂಕಿಅಂಶಗಳಾಗಿ ಮಾತ್ರವೇ ದಾಖಲಾಗುವ ಈ ಸಾವುಗಳ ಹಿಂದೆ ಎಂತೆಂತಹ ಕ್ರೌರ್ಯ- ಕಣ್ಣೀರಿನ ಕತೆಗಳಿದ್ದಾವು!

ಠಾಣೆಗಳಲ್ಲಿ ಜರುಗುವ ಈ ’ಕೊಲೆ’ಗಳ ಬಲಿಪಶುಗಳು ಬಹುತೇಕ ತಳವರ್ಗಗಳಿಗೆ ಸೇರಿದವರು. ದಲಿತರು, ಬುಡಕಟ್ಟು ಜನಾಂಗಗಳವರು ಹಾಗೂ ಮುಸಲ್ಮಾನರು. ಭಾರತ ಸರ್ಕಾರ ಅಪರಾಧಗಳ ಕುರಿತು (ನ್ಯಾಶನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ) ವರ್ಷವರ್ಷವೂ ಅಂಕಿಅಂಶಗಳನ್ನು ಪ್ರಕಟಿಸುತ್ತದೆ. ನಮ್ಮ ಕ್ರಿಮಿನಲ್ ನ್ಯಾಯವ್ಯವಸ್ಥೆಯು ಬಡವರು ಮತ್ತು ದಮನಿತರ ವಿರುದ್ಧ ಕತ್ತಿ ಮಸೆಯುತ್ತಲೇ ಬಂದಿರುವ ದುಷ್ಟತನದ ಒಂದು ಸಣ್ಣ ಉದಾಹರಣೆ ಈ ಅಂಕಿಅಂಶಗಳು. ಹಣ ತೆತ್ತು ಉತ್ತಮ ವಕೀಲರನ್ನು ನೇಮಕ ಮಾಡಿಕೊಳ್ಳುವ ಹಣವಂತರು-ಬಲಿಷ್ಠರು-ಪ್ರಭಾವಿಗಳನ್ನು ಬಂಧಿಸಿಡುವ ಶಕ್ತಿ ಯಾವ ಜೈಲಿನ ಸಲಾಕೆಗಳಿಗೂ ಇಲ್ಲ.

ಸರ್ಕಾರಿ ಸಂಸ್ಥೆಯೇ ಆಗಿರುವ ನ್ಯಾಶನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ ಪ್ರಕಾರ ಶಿಕ್ಷೆಯಾಗಿ ಸೆರೆವಾಸ ಅನುಭವಿಸಿರುವ ವಿಚಾರಣಾಧೀನ ಕೈದಿಗಳ ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡಗಳು ಹಾಗೂ ಮುಸಲ್ಮಾನರ ಪ್ರಮಾಣ ಶೇ.50.8. ದೇಶದ ಜನಸಂಖ್ಯೆಯಲ್ಲಿ ಇವರ ಒಟ್ಟು ಪ್ರಮಾಣ ಶೇ.39.4. ಈ ಮೂರೂ ಸಮುದಾಯಗಳು ಆರ್ಥಿಕ-ಸಾಮಾಜಿಕ-ಶೈಕ್ಷಣಿಕವಾಗಿ ಹಿಂದುಳಿದವುಗಳು. ದಾರಿದ್ರ್ಯದ ತಿರುಗಣಿಗೆ ಸಿಕ್ಕ ಈ ಸಮುದಾಯಗಳು ನಿರುದ್ಯೋಗದ ಉರಿಯನ್ನೂ ಎದುರಿಸುತ್ತ ಬಂದಿವೆ. ಭೂ ಒಡೆತನದ ಬಲವೂ ಇವುಗಳಿಗೆ ಇಲ್ಲ. ಬಲಿಷ್ಠ ಜಾತಿಗಳ ದಮನ ದೌರ್ಜನ್ಯ ಹಿಂಸೆಗಳಲ್ಲಿ ಬೇಯುತ್ತ ಬಂದಿವೆ. ಅಮೆರಿಕೆಯಲ್ಲಿ ಕೂಡ ದಮನಿತ ಜನಾಂಗವಾದ ಕಪ್ಪು ವರ್ಣೀಯರ ಜನಸಂಖ್ಯಾ ಪ್ರಮಾಣ ಶೇ.13. ಆದರೆ ಜೈಲುಗಳಲ್ಲಿ ಕೊಳೆಯುತ್ತಿರುವ ಕಪ್ಪು ಜನರ ಪ್ರಮಾಣ ಶೇ.40.

ತಾರತಮ್ಯ ತುಂಬಿ ತುಳುಕಿರುವ ವ್ಯಾಧಿಗ್ರಸ್ತ ಅಸಮಾನ ಸಮಾಜದ ಪ್ರತಿಬಿಂಬವಿದು. ಸ್ವಾತಂತ್ರ್ಯ, ಸಮಾನತೆ, ಸೋದರತೆ ಹೊಂದಿದ ಸಮಾಜ ಮಾತ್ರವೇ ಆರೋಗ್ಯಕರವೂ ಬಲಿಷ್ಠವೂ ಮತ್ತು ಸಮೃದ್ಧವೂ ಆಗಬಲ್ಲದು.


ಇದನ್ನೂ ಓದಿ:  ದಾಸ್ತಯೆವ್‌ಸ್ಕಿ 200; ಇಡೀ ಮನುಕುಲಕ್ಕೆ ಸಲ್ಲುವ ಕಥೆಗಳನ್ನು ರಚಿಸಿದ ಫ್ಯೊದೋರ್ ಮಿಖಾಯ್ಲೊವಿಚ್ ದಾಸ್ತಯೆವ್‌ಸ್ಕಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...