Homeಅಂಕಣಗಳುಬಹುಜನ ಭಾರತ; ಅವಸಾನಗೊಂಡ ಆತ್ಮಸಾಕ್ಷಿಗಳು ಮತ್ತು ’ಜೈಭೀಮ್' ಸಿನೆಮಾ

ಬಹುಜನ ಭಾರತ; ಅವಸಾನಗೊಂಡ ಆತ್ಮಸಾಕ್ಷಿಗಳು ಮತ್ತು ’ಜೈಭೀಮ್’ ಸಿನೆಮಾ

- Advertisement -
- Advertisement -

ತನ್ನನ್ನು ನಾಗರಿಕ ಎಂದು ಕರೆದುಕೊಳ್ಳುವ ಸಮಾಜ ಪೂರ್ವಗ್ರಹಗಳಿದ್ದಲ್ಲಿ ಅವುಗಳನ್ನು ಮೂರು ತಾಸು ಬದಿಗೆ ಸರಿಸಿ ಮನತೆರೆದು ’ಜೈ ಭೀಮ್’ ಚಲನಚಿತ್ರವನ್ನು ಅದರ ಎಲ್ಲ ಮಿತಿಗಳೊಂದಿಗೆ ಒಮ್ಮೆ ನೋಡುವುದು ಒಳಿತು. ಬತ್ತಿ ಹೋಗಿರಬಹುದಾದ ಅಂತಃಕರಣದ ಸೆಲೆಗಳು ಮತ್ತೆ ಜಿನುಗಿಯಾವು!

ಕ್ರೂರ ಜಾತಿವ್ಯವಸ್ಥೆಯ ಧೂರ್ತ ಹುನ್ನಾರಗಳಿಗೆ ಕೊನೆಮೊದಲಿಲ್ಲ. ಮೇಲುಕೀಳಿನ ಹಾಲಾಹಲವನ್ನು ತುಂಬಿತುಳುಕಿಸುವ ಜಾತಿಪದ್ಧತಿ ಹಿಂದೂ ಸಮಾಜದ ವೈಶಿಷ್ಟ್ಯ. ಮನುಷ್ಯನೇ ಮನುಷ್ಯನನ್ನು ಹಿಂಸಿಸಿ ಅವಮಾನಿಸಿ ಮೃಗದಂತೆ ಬೇಟೆಯಾಡಿ ಕೊಲ್ಲುವ ಕ್ರೌರ್ಯದ ಅಮಾನುಷ ನಿರ್ಮಿತಿ.

’ಜೈ ಭೀಮ್’ ಚಲನಚಿತ್ರದ ಮೊದಲ ದೃಶ್ಯವೇ ’ನಾಗರಿಕ’ ಸಮಾಜದ ಕರಾಳ ಮುಖದ ಕುರೂಪವನ್ನು ತೆರೆದು ತೋರುತ್ತದೆ. ಬಿಡುಗಡೆಯಾದ ಕೈದಿಗಳನ್ನು ಜೈಲಿನ ಆವರಣದಲ್ಲಿ ಪೊಲೀಸರು ಅವರವರ ಜಾತಿಯ ಆಧಾರದ ಮೇಲೆ ಪ್ರತ್ಯೇಕಗೊಳಿಸಿ ನಿಲ್ಲಿಸುತ್ತಾರೆ. ಬಲಿಷ್ಠ ಜಾತಿಯವರನ್ನು ಬಿಡುಗಡೆ ಮಾಡಲಾಗುತ್ತದೆ. ಆದರೆ ದಲಿತರು-ಆದಿವಾಸಿಗಳನ್ನು ಉಳಿಸಿಕೊಂಡು ಅವರು ಮಾಡಿಯೇ ಇಲ್ಲದ ಹೊಸ ಆಪಾದನೆಗಳನ್ನು ಹೇರಲಾಗುತ್ತದೆ. ನಿಜವಾದ ಅಪರಾಧಿಗಳು ಪತ್ತೆಯಾಗದೆ ಬಾಕಿ ಉಳಿದಿರುವ ಕೇಸುಗಳಲ್ಲಿ ಇವರನ್ನು ಸಿಲುಕಿಸಿ ಪುನಃ ಜೈಲಿಗೆ ಅಟ್ಟಲಾಗುತ್ತದೆ. ಬಗೆಹರಿಸಲಾಗದೆ ಬಾಕಿ ಉಳಿಸಿರುವ ಕೇಸುಗಳಲ್ಲಿ ಈ ಅತಿ ದೀನರನ್ನು ಇರುಕಿಸಲಾಗುತ್ತದೆ. ಹೀಗೆ ಬಲಿಪಶುಗಳನ್ನು ಪೂರೈಕೆ ಮಾಡುವ ಜೈಲರನ ಜೇಬುಗಳನ್ನು ಪೊಲೀಸರೇ ಭರ್ತಿ ಮಾಡುತ್ತಾರೆ.

ತಮಿಳುನಾಡಿನಲ್ಲಿ ಇರುಳರೆಂದೂ, ಕರ್ನಾಟಕದಲ್ಲಿ ಇರುಳಿಗರೆಂದೂ ಕರೆಯಲಾಗುವ ಈ ಸಮುದಾಯ ಅತ್ಯಂತ ಹಿಂದುಳಿದ ಬುಡಕಟ್ಟಿಗೆ ಸೇರಿದವರು. ಹಾವು ಹಿಡಿದು ಕಾಡಿಗೆ ಬಿಡುವ ಮತ್ತು ಹಾವಿನ ವಿಷಕ್ಕೆ ಔಷಧಿ ಕೊಡುವ ಈ ಜನರು ಹೊಲಗದ್ದೆಗಳಲ್ಲಿ ಫಸಲು ಮುಕ್ಕುವ ಇಲಿಗಳ ಹಿಡಿಯುವವರು. ಬ್ರಿಟಿಷ್ ಸರ್ಕಾರದಿಂದ ಕ್ರಿಮಿನಲ್ ಟ್ರೈಬ್ ಎಂಬ ಹಣೆಪಟ್ಟಿ ಹಚ್ಚಿಸಿಕೊಂಡಿದ್ದ ಹಲವಾರು ಜಾತಿಗಳು ಮತ್ತು ಬುಡಕಟ್ಟುಗಳ ಪೈಕಿ ಇರುಳರೂ ಸೇರಿದ್ದಾರೆ. ಎರಡು ಹೊತ್ತಿನ ಅನ್ನಕ್ಕೆ ಮತ್ತು ಗೇಣು ಬಟ್ಟೆಗೆ ಗಳಿಸುವಲ್ಲೇ ಮುಗಿದುಹೋಗುವ ದೀನ ಬದುಕುಗಳು ಇವರವು. ಇರುಳಿಗರನ್ನು ಮತ್ತು ಇವರಂತಹ ಅಸಂಖ್ಯ ತಬ್ಬಲಿ ಜಾತಿಗಳನ್ನು ಸವರ್ಣೀಯ ಸಮಾಜ ಮತ್ತು ನಮ್ಮ ಅಪರಾಧ ನ್ಯಾಯಾಂಗ ವ್ಯವಸ್ಥೆ (Criminal Justice System) ನಡೆಸಿಕೊಳ್ಳುವ ಪರಿ ಅಮಾನುಷ. ದಿಕ್ಕಿಲ್ಲದ ನಾಯಿ ನರಿಗಳು ಹುಳು ಹುಪ್ಪಟೆಗಳಿಗಿಂತಲೂ ಕೀಳಾಗಿ ಹುಟ್ಟಿ ಸಾಯುವ ಇವರನ್ನು ಮನುಷ್ಯರೆಂದು ಬಗೆದೇ ಇಲ್ಲ. ಹಾಗೆಂದೇ ಮಾನವಹಕ್ಕುಗಳು ಎಂಬ ಪರಿಕಲ್ಪನೆ ಇವರನ್ನು ದೂರದಿಂದಲೂ ಮುಟ್ಟುವುದಿಲ್ಲ. ಇವರ ಭಾರತವೇ ಬೇರೆ. ಅದು ಕತ್ತಲ ಭಾರತ. ಅದೃಶ್ಯ ಭಾರತ. ನಾಗರಿಕ ಎಂದು ಹೇಳಲಾಗುವ ಅನಾಗರಿಕ ಸಮಾಜದ ಕುರುಡುಗಣ್ಣಿಗೆ, ಕಿವುಡುಗಿವಿಗೆ, ಸತ್ತ ನಾಲಗೆಗೆ, ಅವಸಾನಗೊಂಡ ಆತ್ಮಸಾಕ್ಷಿಯನ್ನು ಆರ್ತತೆ, ಅಸಹಾಯಕತೆಯಿಂದ ನೋಡುವ ಆದಿವಾಸಿ-ದಲಿತ ಭಾರತ.

ಜೈ ಭೀಮ್ ಚಲನಚಿತ್ರದ ಕ್ರೌರ್ಯವನ್ನು ಛತ್ತೀಸಗಢ-ಝಾರ್ಖಂಡದಂತಹ ಆದಿವಾಸಿ ಬಹುಳ ಸೀಮೆಯಂತೂ ಅನವರತ ಎದುರಿಸುತ್ತ ಬಂದಿದೆ. ಉತ್ತರಪ್ರದೇಶ-ಬಿಹಾರದಲ್ಲಿ ನೆಲೆಸಿರುವ ಹೊಲಗದ್ದೆಗಳಲ್ಲಿ ಇಲಿ ಹಿಡಿದು ತಿನ್ನುವ ಮೂಸಾಹರ ಎಂಬ ಅತಿ ದಲಿತ ಜಾತಿಯೊಂದಿದೆ. ಅದರಲ್ಲಿ ಅಕ್ಷರಸ್ಥರ ಪ್ರಮಾಣ ಶೇ.ಮೂರು. ಇದೇ ಗತಿ ಮುಂದುವರೆದರೆ ಈ ಜಾತಿ ಸಂಪೂರ್ಣ ಸಾಕ್ಷರವಾಗಲು ನಾಲ್ಕು ಸಾವಿರ ವರ್ಷಗಳಿಗೂ ಹೆಚ್ಚು ಕಾಲ ಬೇಕಾದೀತಂತೆ! ಮೂಸಾಹರರೊಂದಿಗೆ ಇರುಳರೂ ಸೇರಿದಂತೆ ಇನ್ನೂ ನೂರಾರು ಜಾತಿಗಳು- ಬುಡಕಟ್ಟುಗಳು ಈ ಪಟ್ಟಿಗೆ ಸೇರುವುದು ನಿಶ್ಚಿತ.

ಬಾಬಾಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ಅವರು Annihilation of Casteನ ಎಂಟನೆಯ ಅಧ್ಯಾಯದಲ್ಲಿ ಆದಿವಾಸಿಗಳ ದುಸ್ಥಿತಿಯ ಕುರಿತು ಎತ್ತಿರುವ ಪ್ರಶ್ನೆಯೊಂದು ಹೀಗಿದೆ: “ಆದಿವಾಸಿಗಳನ್ನು ಇವ ನಮ್ಮವನೆಂದು ತಬ್ಬಿಕೊಂಡು ಪ್ರೀತಿಸಲು ಹಿಂದೂ ಸಮಾಜ ಮುಂದಾಗಲೇ ಇಲ್ಲ. ಬದುಕಿಡೀ ಜಾತಿವ್ಯವಸ್ಥೆಯನ್ನು ಕಾಪಾಡಿಕೊಳ್ಳುವುದೇ ಹಿಂದುವಿನ ಪರಮ ಉದ್ದೇಶವಾಗಿದ್ದಾಗ ಈ ಕೆಲಸ ಮಾಡಲು ಹಿಂದುವಿಗೆ ಹೇಗೆ ಸಾಧ್ಯವಾದೀತು”?

1871ರಲ್ಲಿ ಬ್ರಿಟಿಷರು ಜಾರಿಗೆ ತಂದಿದ್ದ ಕ್ರಿಮಿನಲ್ ಟ್ರೈಬ್ಸ್ ಕಾಯಿದೆಯನ್ನು 1951ರಲ್ಲಿ ರದ್ದು ಮಾಡಲಾಗುತ್ತದೆ. ಆದರೆ ಕಾಗದದ ಮೇಲೆ ಮಾತ್ರವೇ ರದ್ದಾಗಿರುವ ಈ ಕಾಯಿದೆಯನ್ನು ಪೊಲೀಸ್ ವ್ಯವಸ್ಥೆ ಜೀವಂತವಾಗಿ ಇರಿಸಿಕೊಂಡಿದೆ. ಕ್ರಿಮಿನಲ್ ಟ್ರೈಬ್ಸ್ ಹಣೆಪಟ್ಟಿ ಹಚ್ಚಲಾಗಿದ್ದ ನೂರಾರು ಬುಡಕಟ್ಟುಗಳ ಅಮಾಯಕ ಜನರನ್ನು ಅಮಾನುಷವಾಗಿ ನಡೆಸಿಕೊಳ್ಳುತ್ತಿದೆ. ಅವರು ಮಾಡದೆ ಇರುವ ಅಪರಾಧಗಳಲ್ಲಿ ಬಂಧಿಸಿ ಜೈಲುಗಳಲ್ಲಿ ಚಿತ್ರಹಿಂಸೆ ಮಾಡಿ ಅವರಿಂದ ಬಲವಂತದ ಹುಸಿ ತಪ್ಪೊಪ್ಪಿಗೆ ಪಡೆದು, ಅದನ್ನು ನ್ಯಾಯಾಲಯಗಳಲ್ಲಿ ಮಂಡಿಸಿ, ಶಿಕ್ಷೆ ಕೊಡಿಸಿ ಜೈಲುಗಳ ನರಕಕ್ಕೆ ನೂಕಲಾಗುತ್ತಿದೆ. ಚಿತ್ರವಧೆಯ ಹಂತದಲ್ಲೇ ಪ್ರಾಣ ಬಿಡುವ ದಿಕ್ಕಿಲ್ದವರ ಲೆಕ್ಕವಿಲ್ಲ.

ಅಮಾಯಕ ಅನಕ್ಷರಸ್ಥ ತಬ್ಬಲಿ ಜನಾಂಗಗಳ ಈ ಚಿತ್ರವಧೆಯ ರಕ್ತ ನಾಗರಿಕ ಸಮಾಜದ ಕೈಗಳನ್ನು ಮೆತ್ತಿ ತೊಟ್ಟಿಕ್ಕುತ್ತಿದೆ. ಕಣ್ಣುಮುಚ್ಚಿ ಲೋಲುಪತೆಯಲ್ಲಿ ಮೈಮರೆತಿರುವ ಈ ಜಾತಿವ್ಯಾಧಿಪೀಡಿತ ಸಮಾಜದ ಆತ್ಮಸಾಕ್ಷಿ ಸಾವಿರಾರು ವರ್ಷಗಳ ಅಂಧ ಅಮಾನುಷ ಪರಂಪರೆಯಡಿ ಹೂತು ಹೋಗಿದೆ.

ರಾಷ್ಟ್ರೀಯ ಚಿತ್ರಹಿಂಸೆ ವಿರೋಧೀ ಆಂದೋಲನದ (National Campaign Against Torture) ಅಧ್ಯಯನದ ಪ್ರಕಾರ ದಿನಂಪ್ರತಿ ಸರಾಸರಿ ಐವರು ಬಂಧಿತರು ಪೊಲೀಸ್ ವಶದಲ್ಲಿ ಚಿತ್ರಹಿಂಸೆಯಿಂದ ಸಾಯುತ್ತಿದ್ದಾರೆ. 2019ರಲ್ಲಿ ಹೀಗೆ ಕಾನೂನುಪಾಲಕರಿಂದ ’ಕೊಲೆ’ ಯಾದವರ ಸಂಖ್ಯೆ 1,723.

2020ರಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ದಾಖಲಿಸಿರುವ ನ್ಯಾಯಾಂಗ ವಶದ ಸಾವುಗಳ ಸಂಖ್ಯೆ 1,569. ಕಾಗದದ ಮೇಲೆ ಕಡತಗಳಲ್ಲಿ ಅಂಕಿಅಂಶಗಳಾಗಿ ಮಾತ್ರವೇ ದಾಖಲಾಗುವ ಈ ಸಾವುಗಳ ಹಿಂದೆ ಎಂತೆಂತಹ ಕ್ರೌರ್ಯ- ಕಣ್ಣೀರಿನ ಕತೆಗಳಿದ್ದಾವು!

ಠಾಣೆಗಳಲ್ಲಿ ಜರುಗುವ ಈ ’ಕೊಲೆ’ಗಳ ಬಲಿಪಶುಗಳು ಬಹುತೇಕ ತಳವರ್ಗಗಳಿಗೆ ಸೇರಿದವರು. ದಲಿತರು, ಬುಡಕಟ್ಟು ಜನಾಂಗಗಳವರು ಹಾಗೂ ಮುಸಲ್ಮಾನರು. ಭಾರತ ಸರ್ಕಾರ ಅಪರಾಧಗಳ ಕುರಿತು (ನ್ಯಾಶನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ) ವರ್ಷವರ್ಷವೂ ಅಂಕಿಅಂಶಗಳನ್ನು ಪ್ರಕಟಿಸುತ್ತದೆ. ನಮ್ಮ ಕ್ರಿಮಿನಲ್ ನ್ಯಾಯವ್ಯವಸ್ಥೆಯು ಬಡವರು ಮತ್ತು ದಮನಿತರ ವಿರುದ್ಧ ಕತ್ತಿ ಮಸೆಯುತ್ತಲೇ ಬಂದಿರುವ ದುಷ್ಟತನದ ಒಂದು ಸಣ್ಣ ಉದಾಹರಣೆ ಈ ಅಂಕಿಅಂಶಗಳು. ಹಣ ತೆತ್ತು ಉತ್ತಮ ವಕೀಲರನ್ನು ನೇಮಕ ಮಾಡಿಕೊಳ್ಳುವ ಹಣವಂತರು-ಬಲಿಷ್ಠರು-ಪ್ರಭಾವಿಗಳನ್ನು ಬಂಧಿಸಿಡುವ ಶಕ್ತಿ ಯಾವ ಜೈಲಿನ ಸಲಾಕೆಗಳಿಗೂ ಇಲ್ಲ.

ಸರ್ಕಾರಿ ಸಂಸ್ಥೆಯೇ ಆಗಿರುವ ನ್ಯಾಶನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ ಪ್ರಕಾರ ಶಿಕ್ಷೆಯಾಗಿ ಸೆರೆವಾಸ ಅನುಭವಿಸಿರುವ ವಿಚಾರಣಾಧೀನ ಕೈದಿಗಳ ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡಗಳು ಹಾಗೂ ಮುಸಲ್ಮಾನರ ಪ್ರಮಾಣ ಶೇ.50.8. ದೇಶದ ಜನಸಂಖ್ಯೆಯಲ್ಲಿ ಇವರ ಒಟ್ಟು ಪ್ರಮಾಣ ಶೇ.39.4. ಈ ಮೂರೂ ಸಮುದಾಯಗಳು ಆರ್ಥಿಕ-ಸಾಮಾಜಿಕ-ಶೈಕ್ಷಣಿಕವಾಗಿ ಹಿಂದುಳಿದವುಗಳು. ದಾರಿದ್ರ್ಯದ ತಿರುಗಣಿಗೆ ಸಿಕ್ಕ ಈ ಸಮುದಾಯಗಳು ನಿರುದ್ಯೋಗದ ಉರಿಯನ್ನೂ ಎದುರಿಸುತ್ತ ಬಂದಿವೆ. ಭೂ ಒಡೆತನದ ಬಲವೂ ಇವುಗಳಿಗೆ ಇಲ್ಲ. ಬಲಿಷ್ಠ ಜಾತಿಗಳ ದಮನ ದೌರ್ಜನ್ಯ ಹಿಂಸೆಗಳಲ್ಲಿ ಬೇಯುತ್ತ ಬಂದಿವೆ. ಅಮೆರಿಕೆಯಲ್ಲಿ ಕೂಡ ದಮನಿತ ಜನಾಂಗವಾದ ಕಪ್ಪು ವರ್ಣೀಯರ ಜನಸಂಖ್ಯಾ ಪ್ರಮಾಣ ಶೇ.13. ಆದರೆ ಜೈಲುಗಳಲ್ಲಿ ಕೊಳೆಯುತ್ತಿರುವ ಕಪ್ಪು ಜನರ ಪ್ರಮಾಣ ಶೇ.40.

ತಾರತಮ್ಯ ತುಂಬಿ ತುಳುಕಿರುವ ವ್ಯಾಧಿಗ್ರಸ್ತ ಅಸಮಾನ ಸಮಾಜದ ಪ್ರತಿಬಿಂಬವಿದು. ಸ್ವಾತಂತ್ರ್ಯ, ಸಮಾನತೆ, ಸೋದರತೆ ಹೊಂದಿದ ಸಮಾಜ ಮಾತ್ರವೇ ಆರೋಗ್ಯಕರವೂ ಬಲಿಷ್ಠವೂ ಮತ್ತು ಸಮೃದ್ಧವೂ ಆಗಬಲ್ಲದು.


ಇದನ್ನೂ ಓದಿ:  ದಾಸ್ತಯೆವ್‌ಸ್ಕಿ 200; ಇಡೀ ಮನುಕುಲಕ್ಕೆ ಸಲ್ಲುವ ಕಥೆಗಳನ್ನು ರಚಿಸಿದ ಫ್ಯೊದೋರ್ ಮಿಖಾಯ್ಲೊವಿಚ್ ದಾಸ್ತಯೆವ್‌ಸ್ಕಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...