ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ “ಬಿಜೆಪಿ ಸರ್ಕಾರ ಸೋಲಿಸಿ ಪ್ರಜಾಪ್ರಭುತ್ವ ಉಳಿಸಿ” ಹೆಸರಿನಲ್ಲಿ ಪ್ರಚಾರ ನಡೆಸಲು CPI(ML) ರೆಡ್ಸ್ಟಾರ್ ಪಕ್ಷ ನಿರ್ಧರಿಸಿದೆ.
ಇಡೀ ಕರ್ನಾಟಕದ ರಾಜಕೀಯ ಪರಿಸ್ಥಿತಿ ಅಪಾಯಕಾರಿ ಹಂತ ತಲುಪಿರುವಾಗ ಹಾಗೂ ಕರ್ನಾಟಕವನ್ನು RSSನ ಪ್ರಯೋಗಶಾಲೆಯಾಗಿ ಮಾರ್ಪಡಿಸಿರುವ ರಾಜ್ಯದ ಜನವಿರೋಧಿ ಬಿಜೆಪಿ ಸರ್ಕಾರದ ನೀತಿಯ ವಿರುದ್ಧ ಜನಾಭಿಪ್ರಾಯ ರೂಪಿಸಲು ಪ್ರಚಾರಾಂದೋಲನ ನಡೆಸಲಾಗುತ್ತಿದೆ ಎಂದು ಸಿಪಿಐಎಂಎಲ್ ರಾಜ್ಯ ಕಾರ್ಯದರ್ಶಿ ಬಿ ರುದ್ರಯ್ಯ ತಿಳಿಸಿದ್ದಾರೆ.
ಬಿಜೆಪಿ ಅಧಿಕಾರದ ಕರ್ನಾಟಕದಲ್ಲಿ ಉತ್ತರ ಪ್ರದೇಶ ಮತ್ತು ಗುಜರಾತನ್ನು ಮೀರಿಸುವಂತಹ ಹಲ್ಲೆ ಹತ್ಯಗಳು ದೌರ್ಜನ್ಯಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂತಹ ಘಟನೆಗಳಿಗೆ ಸಾಕ್ಷಿಯಾದ ಸರ್ಕಾರದ ಧೋರಣೆಯ ವಿರುದ್ಧ ಈ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸುವ ಭಾಗವಾಗಿ ಹಾಗೂ ಫ್ಯಾಸಿಸ್ಟ್ ಸರ್ಕಾರದ ನೀತಿಗಳ ವಿರುದ್ಧ ಜನ ಜಾಗೃತಿ ಮೂಲಕ ಅರಿವು ಮೂಡಿಸುತ್ತೇವೆ ಎಂದಿದ್ದಾರೆ.
ರಾಜಕೀಯ ಹೋರಾಟದ ಈ ಸಂದರ್ಭದಲ್ಲಿ ಬಿಜೆಪಿಯನ್ನು ಸೋಲಿಸುವ ಪಕ್ಷಗಳಿಗೆ ಬೆಂಬಲಿಸುವ ಬಗ್ಗೆಯೂ ತೀರ್ಮಾನಿಸಿದ್ದೇವೆ. ಈ ವಿಧಾನಸಭಾ ಚುನಾವಣೆಯಲ್ಲಿ ಫ್ಯಾಸಿಸ್ಟ್ ಕೋಮುವಾದಿ ಬ್ರಾಹ್ಮಣ ವಾದಿ ಬಂಡವಾಳವಾದಿ ಬಿಜೆಪಿ ಪಕ್ಷವನ್ನು ಸೋಲಿಸಲು ಈ ರಾಜ್ಯದ ಪ್ರಗತಿಪರ ಶಕ್ತಿಗಳಲ್ಲಿ ವಿನಂತಿ ಮಾಡುತ್ತೇವೆ ಎಂದು ಅವರು ತಿಳಿಸಿದ್ದಾರೆ. ಪಕ್ಷದ ಈ ನಿರ್ಧಾರಕ್ಕೆ ಕರ್ನಾಟಕ ರೈತ ಸಂಘ, ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ, ಅಖಿಲ ಭಾರತ ಕ್ರಾಂತಿಕಾರಿ ಯುವಜನ ರಂಗ, ಅಖಿಲ ಭಾರತ ಕ್ರಾಂತಿಕಾರಿ ವಿದ್ಯಾರ್ಥಿ ಸಂಘಟನೆ, ಅಖಿಲ ಭಾರತ ಕ್ರಾಂತಿಕಾರಿ ಮಹಿಳಾ ಸಂಘಟನೆ, ಕ್ರಾಂತಿಕಾರಿ ಸಾಂಸ್ಕೃತಿಕ ರಂಗ, ಜಾತಿ ನಿರ್ಮೂಲನಾ ಚಳುವಳಿ ಹಾಗೂ ಇನ್ನು ಅನೇಕ ಸಂಘಟನೆಗಳು ಕೂಡ ಬೆಂಬಲ ವ್ಯಕ್ತಪಡಿಸಿವೆ ಎಂದು ತಿಳಿಸಿದ್ದಾರೆ.
”ರಾಜ್ಯದ ವಿರಾಜಪೇಟೆ, ಎನ್ಆರ್ ಪುರ (ಚಿಕ್ಕ ಮಗಳೂರು), ಕೊಪ್ಪಳ, ಸಿಂಧನೂರು ಮತ್ತು ಮಸ್ಕಿ ಈ ಐದು ಕ್ಷೇತ್ರಗಳಲ್ಲಿ ಮಾತ್ರ ಸಿಪಿಐ(ಎಂಎಲ್) ರೆಡ್ಸ್ಟಾರ್ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆ ಮಾಡಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಅಭ್ಯರ್ಥಿ ಆಯ್ಕೆ: ಗೋತಾ ಹೊಡೆದ ಬಿಜೆಪಿಯ ಅವಸರದ ಪ್ರಯೋಗ