ದೆಹಲಿಯಲ್ಲಿ ವಾಯುಮಾಲಿನ್ಯವು ಹದಗೆಡುತ್ತಿರುವ ಹಿನ್ನೆಲೆಯಲ್ಲಿ ನಗರದ ಪ್ರಾಥಮಿಕ ಶಾಲೆಗಳನ್ನು ನಾಳೆಯಿಂದ ಮುಚ್ಚಲಾಗುವುದು ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶುಕ್ರವಾರ ಘೋಷಿಸಿದ್ದಾರೆ. ವಾಯು ಗುಣಮಟ್ಟ ಮತ್ತು ಹವಾಮಾನ ಮುನ್ಸೂಚನೆ ಮತ್ತು ಸಂಶೋಧನೆಯ ವ್ಯವಸ್ಥೆ (SAFAR-ಸಫರ್) ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ ದೆಹಲಿಯ ವಾಯು ಗುಣಮಟ್ಟದ ಸೂಚ್ಯಂಕವು ಶುಕ್ರವಾರ ಸತತ ಎರಡನೇ ದಿನ ‘ಗಂಭೀರವಾಗಿದೆ’.
ಪಂಜಾಬ್ ಮುಖ್ಯಮಂತ್ರಿ ಭಗ್ವಂತ್ ಮಾನ್ ಅವರೊಂದಿಗೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅರವಿಂದ್ ಕೇಜ್ರಿವಾಲ್ ಅವರು ನಾಳೆಯಿಂದ ಪ್ರಾಥಮಿಕ ಶಾಲೆಗಳನ್ನು ಮುಚ್ಚಲಾಗುವುದು ಮತ್ತು ನಗರದಲ್ಲಿ ಗಾಳಿಯ ಗುಣಮಟ್ಟ ಸುಧಾರಿಸುವವರೆಗೆ 5 ರಿಂದ 7ನೇ ತರಗತಿಗಳಿಗೆ ಹೊರಾಂಗಣ ಚಟುವಟಿಕೆಗಳನ್ನು ನಿರ್ಬಂಧಿಸಲಾಗುವುದು ಎಂದು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ದೆಹಲಿಯಲ್ಲಿ ಶನಿವಾರದಿಂದ ಪ್ರಾಥಮಿಕ ತರಗತಿಗಳನ್ನು ಮುಚ್ಚಲಾಗುವುದು; ಮತ್ತು ಬೆಸ-ಸಮ ಯೋಜನೆ ಮಾದರಿಯ ಬಗ್ಗೆ ಆಲೋಚಿಸಲಾತ್ತಿದೆ. ಶಾಲೆಗಳಲ್ಲಿ 5 ರಿಂದ ಏಳನೇ ತರಗತಿಯ ಹೊರಾಂಗಣ ಕ್ರೀಡಾ ಚಟುವಟಿಕೆಗಳನ್ನು ನಿಲ್ಲಿಸುತ್ತಿದ್ದೇವೆ” ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಇದನ್ನೂ ಓದಿ: ನೋಟಿನ ಮೇಲೆ ಲಕ್ಷ್ಮಿ-ಗಣೇಶನ ಚಿತ್ರ ಮುದ್ರಿಸಿದರೆ ರೂಪಾಯಿ ಕುಸಿತ ಸುಧಾರಿಸುತ್ತದೆ: ಅರವಿಂದ್ ಕೇಜ್ರಿವಾಲ್
“ಇದು ದೂಷಣೆ ಮತ್ತು ರಾಜಕೀಯದಾಟ ಮಾಡುವ ಸಮಯವಲ್ಲ, ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುವ ಸಮಯ. ಕೇಜ್ರಿವಾಲ್ ಅಥವಾ ಪಂಜಾಬ್ ಸರ್ಕಾರವನ್ನು ದೂಷಿಸುವುದರಿಂದ ಯಾವುದೆ ಪ್ರಯೋಜನವಿಲ್ಲ” ಎಂದು ಕೇಜ್ರಿವಾಲ್ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ಉಲ್ಲೇಖಿಸಿದೆ.
ಪಂಜಾಬ್ನಲ್ಲಿ ಕೊಯ್ದಿರುವ ಪೈರಿನ ಹುಲ್ಲನ್ನು ಉರಿಸುತ್ತಿರುವುದು ದೆಹಲಿಯ ವಾಯು ಮಾಲಿನ್ಯಕ್ಕೆ ಶೇಕಡಾ 34 ರಷ್ಟು ಕೊಡುಗೆ ನೀಡಿದೆ ಎಂದು ಶುಕ್ರವಾರ ಅಧಿಕೃತ ಮಾಹಿತಿಯು ಬಹಿರಂಗಪಡಿಸಿದೆ.
“ಪಂಜಾಬ್ನಲ್ಲಿ ನಮ್ಮ ಸರ್ಕಾರ ಇರುವುದರಿಂದ ಹುಲ್ಲಿನ ಸುಡುವಿಕೆಗೆ ನಾವು ಜವಾಬ್ದಾರರಾಗಿರುತ್ತೇವೆ. ನಾವು ಅಲ್ಲಿ ಸರ್ಕಾರವನ್ನು ರಚಿಸಿ ಕೇವಲ ಆರು ತಿಂಗಳಾಗಿದ್ದು, ಈ ಸಮಸ್ಯೆಗಳನ್ನು ಪರಿಹರಿಸಲಾಗುತ್ತಿದೆ. ಇದಕ್ಕೆ ನಾವು ಪರಿಹಾರಗಳನ್ನು ಕಂಡುಕೊಳ್ಳುತ್ತಿದ್ದೇವೆ” ಎಂದು ಅವರು ಹೇಳಿದ್ದಾರೆ.
“ಸಮಸ್ಯೆಯನ್ನು ಪರಿಹರಿಸಲು ನಮಗೆ ಒಂದು ವರ್ಷದ ಸಮಯವನ್ನು ನೀಡಿ” ಎಂದು ಕೇಜ್ರಿವಾಲ್ ಅವರು ವಿನಂತಿಸಿದ್ದಾರೆ.
ಕೇಜ್ರಿವಾಲ್ ಅವರ ಹೇಳಿಕೆಗಳಿಗೆ ಸಮ್ಮತಿ ಸೂಚಿಸಿದ ಪಂಜಾಬ್ ಮುಖ್ಯಮಂತ್ರಿ ಭಗ್ವಂತ್ ಮನ್, ಈ ವರ್ಷದ ಹೆಚ್ಚಿನ ಬೆಳೆ ಬಂದಿದ್ದು, ಹೀಗಾಗಿ ಹುಲ್ಲನ್ನು ಸುಡುವಿಕೆ ಹೆಚ್ಚಾಗಿದೆ ಎಂದು ಹೇಳಿದ್ದಾರೆ. ಆದರೂ ಅದರ ಸುಡುವಿಕೆಯನ್ನು ಕಡಿಮೆ ಮಾಡಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
“ಪೈರಿನ ಹುಲ್ಲನ್ನು ಹೂಳಲು 1.20 ಲಕ್ಷ ಯಂತ್ರಗಳನ್ನು ಖರೀದಿ ಮಾಡುವಂತಹ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಹುಲ್ಲುಗಳ ಸುಡುವಿಕೆಯನ್ನು ತಡೆಯಲು ಪಂಚಾಯಿತಿಗಳಲ್ಲಿ ಕೂಡಾ ನಿರ್ಣಯಗಳನ್ನು ಅಂಗೀಕರಿಸಿದ್ದಾರೆ. ಮುಂದಿನ ವರ್ಷದ ನವೆಂಬರ್ ವೇಳೆಗೆ ಹುಲ್ಲಿನ ಸುಡುವಿಕೆ ಕಡಿಮೆಯಾಗುತ್ತದೆ ಎಂದು ನಾವು ಭರವಸೆ ನೀಡುತ್ತೇವೆ” ಎಂದು ಪಂಜಾಬ್ ಸಿಎಂ ಹೇಳಿದ್ದಾರೆ.
ಇದನ್ನೂ ಓದಿ: ‘ಆಫರೇಷನ್ ಕಮಲ ವಿಫಲ’: ದೆಹಲಿ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲಿರುವ ಸಿಎಂ ಕೇಜ್ರಿವಾಲ್
ದೆಹಲಿ ಪರಿಸರ ಸಚಿವ ಗೋಪಾಲ್ ರೈ ಅವರು ಇಂದು ಮಧ್ಯಾಹ್ನ 1 ಗಂಟೆಗೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.