ದೆಹಲಿಯ ಹಳೆಯ ನಂಗಲ್ ಸ್ಮಶಾನದಲ್ಲಿ ದಲಿತ ಅಪ್ರಾಪ್ತ ಬಾಲಕಿಯ ಅತ್ಯಾಚಾರ, ಕೊಲೆ ಮತ್ತು ಪೋಷಕರ ಒಪ್ಪಿಗೆಯಿಲ್ಲದೆ ಅಂತ್ಯಸಂಸ್ಕಾರ ಮಾಡಿದ ಪ್ರಕರಣ ಖಂಡಿಸಿ ಬೆಂಗಳೂರಿನಲ್ಲಿ ಶನಿವಾರ (ಆಗಸ್ಟ್ 7) ದಲಿತ ಸಂಘರ್ಷ ಸಮಿತಿ ಒಕ್ಕೂಟ ಪ್ರತಿಭಟನೆ ಹಮ್ಮಿಕೊಂಡಿದೆ.
’ದೆಹಲಿಯ ನಂಗಲ್ ಎಂಬ ಹಳ್ಳಿಯಲ್ಲಿ 9 ವರ್ಷದ ದಲಿತ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲ್ಲಲಾಗಿದೆ. ಅಂದು ಆ ಬಾಲಕಿ ನೀರಿಗಾಗಿ ಮನೆಯ ಮುಂದಿದ್ದ ಚಿತಾಗಾರಕ್ಕೆ ತೆರಳಿದ್ದಾಳೆ. ಹಾಗೆ ತೆರಳಿದ ಮಗಳು ಎರಡು ತಾಸಾದರೂ ಮನೆಗೆ ಮರಳಲಿಲ್ಲವಲ್ಲ ಎಂದು ತಾಯಿ ಚಿತಾಗಾರದ ಬಳಿ ಮಗಳನ್ನು ಹುಡುಕುತ್ತಿರುವಾಗ ಚಿತಾಗಾರದ ಪೂಜಾರಿ ರಾಧೇಶ್ಯಾಮ್ ತಾಯಿಗೆ ಮಗಳ ಶವವನ್ನು ತೋರಿಸಿದ್ದಾನೆ. ಈ ಪೂಜಾರಿಯೇ ಆ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದು, ಈಗಾಗಲೇ ಪೋಲೀಸರು ಅವನನ್ನು ಬಂಧಿಸಿದ್ದಾರೆ. ಆತನಿಗೆ ಉಗ್ರ ಶಿಕ್ಷೆ ನೀಡುವಂತೆ ಒತ್ತಾಯಿಸಬೇಕಿದೆ’ ಎಂದು ದಲಿತ ಸಂಘರ್ಷ ಸಮಿತಿ ಒಕ್ಕೂಟ ಹೇಳಿದೆ.
’ದೇಶದಲ್ಲಿ ದಲಿತರ ಮೇಲಿನ ದೌರ್ಜನ್ಯಗ ಹೆಚ್ಚುತ್ತಿದ್ದು, ದಲಿತ ಮಹಿಳೆಯರ ಮೇಲೆ ಅತ್ಯಾಚಾರ ಹೆಚ್ಚಾಗಿದೆ. ಇಂತಹ ಘಟನೆಗಳು ಇಡೀ ದೇಶ ಹಾಗೂ ಮಾನವ ಕುಲ ತಲೆ ತಗ್ಗಿಸುವಂಥದ್ದಾಗಿದ್ದು, ಇಂಥಾದ್ದನ್ನು ಖಂಡಿಸುವ ಮತ್ತು ಈಂತಹ ಘಟನೆಗಳು ನಡೆಯದಂತೆ ತಡೆಯುವ ಜವಾಬ್ದಾರಿ ಎಲ್ಲರದಾಗಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ದಲಿತರ ಮಗಳು ಕೂಡ ದೇಶದ ಮಗಳು: ದೆಹಲಿ ಅತ್ಯಾಚಾರ ಕೊಲೆಗೆ ರಾಹುಲ್ ಗಾಂಧಿ ಆಕ್ರೋಶ
ದೆಹಲಿಯ ಅತ್ಯಾಚಾರ, ಕೊಲೆ ಖಂಡಿಸಿ, ಸಂಘಟನೆಯ 50 ಜನ ಸದಸ್ಯರು ಸಾಂಕೇತಿಕವಾಗಿ ಬೆಂಗಳೂರಿನ ಮೌರ್ಯ ಸರ್ಕಲ್ ಬಳಿಯಿರುವ ಮಹಾತ್ಮ ಗಾಂಧಿಯವರ ಪ್ರತಿಮೆ ಬಳಿ ಶನಿವಾರ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಶಾಂತಿಯುತ ಪ್ರತಿಭಟನಾ ಸಭೆ ನಡೆಸಲಾಗುತ್ತದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಒಕ್ಕೂಟ ತಿಳಿಸಿದೆ.
ಪ್ರಕರಣದ ತ್ವರಿತ ತನಿಖೆಗಾಗಿ ಅಪರಾಧ ವಿಭಾಗಕ್ಕೆ ಕೇಸ್ ವರ್ಗಾಯಿಸಿ, ದೆಹಲಿಯ ಪೊಲೀಸ್ ಆಯುಕ್ತ ರಾಕೇಶ್ ಅಸ್ಥಾನಾ ಪ್ರಕರಣದ ವರ್ಗಾವಣೆಗೆ ಆದೇಶ ನೀಡಿದ್ದಾರೆ. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮೃತ ಅಪ್ರಾಪ್ತ ಬಾಲಕಿಯ ಕುಟುಂಬ ಸದಸ್ಯರನ್ನು ಭೇಟಿ ಮಾಡಿ, ಪ್ರಕರಣವನ್ನು ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶಿಸಿ, ಹತ್ತು ಲಕ್ಷ ರೂಪಾಯಿಗಳ ಪರಿಹಾರವನ್ನು ಘೋಷಿಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂತ್ರಸ್ತರಿಗೆ ನ್ಯಾಯ ದೊರೆಯುವವರೆಗೂ ಅವರೊಂದಿಗೆ ಇರುತ್ತೇನೆ ಎಂದು ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಿ, ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ದೆಹಲಿ ಅತ್ಯಾಚಾರ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಸಿಗುವವರೆಗೂ ಜೊತೆಯಲ್ಲಿರುತ್ತೇನೆ: ರಾಹುಲ್ ಗಾಂಧಿ
ನಾಚಿಕೆ ಗೇಡು ವ್ಯವಸ್ಥೆ ಇನ್ನೂ ಎಷ್ಟು ಮಕ್ಕಳು ಜೀವ ಕಳೆದುಕೊಳ್ಳ ಬೇಕೋ.