“ಅಮ್ಮಾ…ಕೇರಂ ಆಡ್ತೀನಮ್ಮಾ” ಎಂದ ಮಗಳಿಗೆ ಕರೆದು, “ಒಂದು ಕೊಡ ನೀರು ತಂದಿಟ್ಟು ಆಡುವಂತೆ ಬಾರೆ” ಎಂದು ಹೇಳಿ, ಕೊಡ ಕೊಟ್ಟು ಕಳಿಸಿದ್ದೇ ತಪ್ಪಾಯ್ತು. ನೀರುತರಲು ಹೋದ ಆ 9 ವರ್ಷದ ಕರುಳ ಕುಡಿ, ಹೆಣವಾಗಿಯೂ ಕಾಣದಂತೆ ಸುಟ್ಟು ಬೂದಿಯಾಗುತ್ತಾಳೆಂದು ಆ ತಾಯಿ ಅಂದುಕೊಂಡಿರಲಿಲ್ಲ. ಅಷ್ಟಕ್ಕೂ ನೀರು ತರಲು ಹೋದ ಆ ಹೆಣ್ಣುಮಗುವನ್ನು ಕಚ್ಚಿಕೊಂದದ್ದು ವಿಷದ ಹಾವಾಗಲಿ, ಕ್ರೂರ ಹುಲಿಯಾಗಲಿ ಅಲ್ಲ. ಬದಲಿಗೆ ಗಂಡು- ಗಂಡಸುತನವೆಂಬ ಕೋರೆ ಪಂಜುಗಳು! ಈ ಕೊರೆ ಪಂಜುಗಳಿಗೆ ಜಾತಿ ಎಂಬ ನಂಜುನಶೆಯೇ ರಾಕ್ಷಸ ಶಕ್ತಿಯಾಯಿತೇ…ಗೊತ್ತಿಲ್ಲ. ಆದರೆ ಹಾಗೆ ಆ ಎಳೆಹುಡುಗಿಯ ಮೇಲೆ ಅತ್ಯಾಚಾರಗೈದವನು ಒಬ್ಬ ಅರ್ಚಕ, ಆತನ ಹೆಸರು ರಾಧೇಶ್ಯಾಮ. ಆತನ ದಾಳಿಗೆ ಜೀವ ಬಿಟ್ಟ ಹುಡುಗಿ ಬಡವರ ಮಗಳು, ದಲಿತ ಸಮುದಾಯದ ಜೀವ ಎಂಬುದಂತೂ ಹೌದು.
ಅತ್ಯಾಚಾರಗೈದು ಮಗಳನ್ನು ಹುಡುಕಲು ಬಂದ ತಾಯಿಗೆ “ಆಗಿದ್ದು ಆಗಿ ಹೋಯ್ತು, ಸುಟ್ಟು ಹಾಕು” ಎಂದವನೇ, ತಾಯಿ ಕೈಗೆ ಹೆಣವನ್ನೂ ಒಪ್ಪಿಸದೇ ತಾನಿರುವ ಜಾಗದಲ್ಲಿಯೇ ಆ ಮಗುವಿನ ಹೆಣಕ್ಕೆ ಬೆಂಕಿ ಇಟ್ಟಿದ್ದಾನೆ. ತಾಯಿ ಜೀವ ಜೋರಾಗಿ ಕೂಗಿ ಕೊಂಡರೆ “ಕೂಗಿ ರಂಪಾಟ ಮಾಡಿ ಕೇಸ್ ಮಾಡಿದರೆ, ಗೆಲ್ಲೋ ತಾಕತ್ತು ನಿನ್ನಲ್ಲಿದೆಯಾ, ಬಾಯಿ ಮುಚ್ವಿಕೊಂಡಿರು” ಎಂದು ಅರ್ಚಕ ಗದರಿಸಿದ್ದಾನೆ.
ಹೆತ್ತ ತಾಯಿಯ ಸಂಕಟದ ಚೀರಾಟಕ್ಕೆ ಕಿಂಚಿತ್ತೂ ಅಳುಕದ, ಮನಕರಗದ ಆ ನೀಚ, ಮುಕ್ಕಾಲು ಪಾಲು ದೇಹವನ್ನು ಬೆಂಕಿಯಲ್ಲಿ ಕರಗಿಸಿದ್ದಾನೆ. ನಂತರ ಸೇರಿದ ಜನ, ಚಿತೆಗೆ ನೀರು ಚೆಲ್ಲಿ ಬೆಂಕಿ ನಂದಿಸಿದಾಗ ಸಿಕ್ಕಿದ್ದು ಆ ಮಗುವಿನ ಪಾದಗಳು ಮತ್ತು ಎಲುಬುಗಳಷ್ಟೆ. ಎಲ್ಲ ಮುಗಿದ ನಂತರ ಬಂದ ಪೊಲೀಸರು ಆ ಸುಟ್ಟ ಮಾಂಸದ ಚೂರುಗಳನ್ನು ವಶಪಡಿಸಿಕೊಂಡು ತನಿಖೆಯ ಮಾತು ‘ಆಡಿದ್ದಾರೆ’.
ಇದನ್ನೂ ಓದಿ: ದೆಹಲಿ: ದಲಿತ ಅಪ್ರಾಪ್ತೆ ಅತ್ಯಾಚಾರ, ಕೊಲೆ ಪ್ರಕರಣ, ಮ್ಯಾಜಿಸ್ಟೀರಿಯಲ್ ತನಿಖೆಗೆ ಕೇಜ್ರಿವಾಲ್ ಆದೇಶ
ದೇಶದ ರಾಜಧಾನಿಯಲ್ಲಿ, ಕೊಡ ನೀರಿಗೆಂದು ಕಳಿಸಿದ ಮಗಳು ಹೆಣವಾಗಿ ಬೆಂಕಿಯಲ್ಲಿ ಸುಡುತ್ತಿರುವುದನ್ನು ಕಂಡು ಸಂಕಟ ಪಟ್ಟ ಆ ತಾಯಿಯನ್ನು, ಮತ್ತು ತಂದೆಯನ್ನೂ ಕರೆದೊಯ್ದು ಆ ಇಡೀರಾತ್ರಿ ಬೇರೆಬೇರೆ ಕೋಣೆಗಳಲ್ಲಿ ಕೂಡಿ ಹಾಕಿ ವಿಚಾರಣೆ ಮಾಡಿದ ಘನಂದಾರಿ ಕಾರ್ಯ ಈ ಪೊಲೀಸರದ್ದು. ಸಿಟ್ಟಿಗೆದ್ದ ಜನರಿಂದ ಬಚಾವು ಮಾಡಲೆಂಬಂತೇನೋ ಅತ್ಯಾಚಾರಿಯೊಂದಿಗೆ ಇನ್ನು ಕೆಲವರನ್ನು ಬಂಧಿಸಿದ್ದಾರೆ ಎಂಬುದೇನೋ ನಿಜ. ಆದರೆ ಇವರ ಮೇಲೆ ಹಾಕಲಾದ ಕೇಸುಗಳು, ಬಂಧನ ಇವೆಲ್ಲಾ ಜನರ ಆಕ್ರೋಶ ತಡೆಯಲು ಮಾಡಿದ ಕ್ರಮಗಳು ಎಂಬ ಬಗ್ಗೆ ಅನುಮಾನ ಪಡಬೇಕಿಲ್ಲ.
ಅದೇ ದೆಹಲಿಯಲ್ಲಿ ನಿರ್ಭಯಾಳಿಗೆ ಹೀಗಾದಾಗ, ಹೈದ್ರಾಬಾದಿನಲ್ಲಿ ಹೀಗಾದಾಗ ಬಂದ ಈ ಮಧ್ಯಮವರ್ಗದ ರೋಷಾವೇಶ, ಸಂಸ್ಕೃತಿ ಸಭ್ಯತೆಗಳು ಈಗ ಯಾವ ಗುಹೆ ಸೇರಿವೆ..? ಈಗೇಕೇ ಮೇಣದ ಬತ್ತಿಗಳು ಹೊತ್ತಿಕೊಳ್ಳುತ್ತಿಲ್ಲ..? ಎಲ್ಲಕ್ಕೂ ಹೆಚ್ಚಾಗಿ ದೇಶದ ವಿದ್ಯಮಾನವನ್ನು “ನಿರ್ಧರಿಸುವ” ಈ ಬಗಲಕುನ್ನಿ ಮಾಧ್ಯಮಗಳ ಗಂಟಲಲ್ಲಿ ಯಾವ ಅಮೇಧ್ಯ ಸಿಕ್ಕಿಕೊಂಡಿದೆ..?
ಅತ್ಯಾಚಾರವನ್ನು ಖಂಡಿಸಲೂ ಜಾತಿ ನೋಡುವಷ್ಟು ಹೇಸಿಗೆಯಾಗಿಬಿಟ್ಟಿದೆಯಾ ಮನಸ್ಸು. ದಲಿತ ಹೆಣ್ಣು ಮಕ್ಕಳಮೇಲೆ ಅತ್ಯಾಚಾರವಾದರೆ ಅದು ಸುದ್ದಿಯೇ ಅಲ್ಲವೇ..? ಏನಾಗಿದೆ ನಮ್ಮ ವಿವೇಕಕ್ಕೆ..? ಈ ದೇಶಕ್ಕೆ..?
- ಬಿ. ಪೀರ್ ಬಾಷ
ಇದನ್ನೂ ಓದಿ: ದಲಿತ ಬಾಲಕಿ ಮೇಲೆ ಅತ್ಯಾಚಾರ, ಕೊಲೆ ಮತ್ತು ಬಲವಂತದ ಶವಸಂಸ್ಕಾರ: ಪೂಜಾರಿಯ ಬಂಧನ
Very sad and he should be punished mercilessly.
I too received wrong name and news instead of shyam POOJARI.who ever it is ..it should be an end
Yes, he must get punishment