ಕೇಂದ್ರ ಸರ್ಕಾರ ಮತ್ತು ದೆಹಲಿಯ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರದ ನಡುವೆ ಆಕ್ಸಿಜನ್ ಸಮರ ಅರಂಭವಾಗಿದೆ. ನಿನ್ನೆ ಸುಪ್ರೀಂ ಕೋರ್ಟ್ ನೇಮಿಸಿದ್ದ ಆಕ್ಸಿಜನ್ ಆಡಿಟ್ ಸಮಿತಿ ಸಲ್ಲಿಸಿದ್ದ ಮಧ್ಯಂತರ ವರದಿಯ ಆಧಾರದಲ್ಲಿ ಬಿಜೆಪಿ ನಾಯಕರು ಕೇಜ್ರಿವಾಲ್ ಸರ್ಕಾರದ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದರು. ಕೇಜ್ರಿವಾಲ್ ಸರ್ಕಾರ ಆಕ್ಸಿಜನ್ ಬಳಕೆಯಿಂದ ದೇಶದಲ್ಲಿ ಅನೇಕ ಜನರು ಆಮ್ಲಜನಕದ ಕೊರತೆಯಿಂದ ಮೃತಪಡುವಂತಾಯಿತು ಎಂದು ಪ್ರಚಾರಾಂದೋಲನ ನಡೆಸಿದ್ದರು. ಆದರೆ ದೆಹಲಿ ಸರ್ಕಾರ ಅಗತ್ಯಕ್ಕಿಂತ ಹೆಚ್ಚಿನ ಆಕ್ಸಿಜನ್ ಬೇಡಿಕೆ ಇಟ್ಟಿದೆ ಎಂದು ಹೇಳಲು ಸಾಧ್ಯವಿಲ್ಲ ಸುಪ್ರೀಂ ಕೋರ್ಟ್ ನೇಮಿಸಿದ್ದ ಆಡಿಟ್ ಕಮಿಟಿಯ ಮುಖ್ಯಸ್ಥರಾಗಿರುವ ದೆಹಲಿಯ ಏಮ್ಸ್ ಆಸ್ಪತ್ರೆಯ ನಿರ್ದೇಶಕರಾದ ಡಾ. ರಣದೀಪ್ ಗುಲೇರಿಯಾ ಹೇಳಿದ್ದಾರೆ.
“ದೆಹಲಿ ಸರ್ಕಾರ ಅಗತ್ಯಕ್ಕಿಂತ 4 ಪಟ್ಟು ಹೆಚ್ಚು ಪ್ರಮಾಣದ ಆಕ್ಸಿಜನ್ಗೆ ಬೇಡಿಕೆ ಇಟ್ಟಿತ್ತು ಎಂದು ಹೇಳಲು ಸಾಧ್ಯವಿಲ್ಲ. ಈಗ ಮಧ್ಯಂತರ ವರದಿಯನ್ನಷ್ಟೇ ನೀಡಲಾಗಿದೆ. ಪೈನಲ್ ಆಡಿಟ್ ನಂತರವಷ್ಟೇ ಈ ಕುರಿತು ಹೇಳಲು ಸಾಧ್ಯ. ಕೊರೋನಾ ಎರಡನೇ ಅಲೆಯನ್ನು ಸಾಧಾರಣ ದಿನಗಳಿಗೆ ಹೋಲಿಸಿ ಲೆಕ್ಕ ಹಾಕಿದರೆ ಈ ಅಂದಾಜು ಸಿಗುತ್ತದೆ. ಕೊರೋನಾ ಸಂದರ್ಭದಲ್ಲಿ ಹೆಚ್ಚಿನ ಸೋಂಕಿತರು ಆಕ್ಸಿಜನ್ ಕೊರತೆಯಿಂದ ಬಳಲುತ್ತಿದ್ದರು. ಸಮಗ್ರವಾದ ತನಿಖೆಯಿಂದ ಮಾತ್ರ ಕೊರೋನಾ ಎರಡನೇ ಅಲೆಯ ಸಂದರ್ಭದಲ್ಲಿನ ದೆಹಲಿಯ ಆಕ್ಸಿಜನ್ ಬೇಡಿಕೆಯ ಪ್ರಮಾಣ ತಿಳಿದುಬರಲಿದೆ. ವಿಚಾರ ಸುಪ್ರೀಂ ಕೋರ್ಟ್ನಲ್ಲಿ ಇರುವಾಗ ಈ ವಿಚಾರವನ್ನು ಚರ್ಚಿಸುವದು ಸರಿಯಲ್ಲ” ಎಂದು ಡಾ. ರಣದೀಪ್ ಗುಲೇರಿಯಾ ಅಭಿಪ್ರಾಯಪಟ್ಟಿದ್ದಾರೆ.
ಸುಪ್ರೀಂ ಕೋರ್ಟ್ ನೇಮಿಸಿದ 5 ಜನ ಸದಸ್ಯರ ತನಿಖಾ ಸಮಿತಿಯಲ್ಲಿ ಬಿರುಕು ಮೂಡಿದ್ದು ಸಮಿತಿ ಸದಸ್ಯಾರಾದ ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಬಿಎಸ್ ಭಲ್ಲಾ ಮತ್ತು ಮ್ಯಾಕ್ಸ್ ಹೆಲ್ತ್ ಕೇರ್ ನಿರ್ದೇಶಕ ಸಂದೀಪ್ ಬುಧಿರಾಜ ಅವರು ಮಧ್ಯಂತರ ವರದಿಯಲ್ಲಿ ತಮ್ಮ ಅಭಿಪ್ರಾಯಗಳನ್ನು ಪರಿಗಣಿಸಲಾಗಿಲ್ಲ ಎಂದು ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ. ಈ ಇಬ್ಬರು ಸದಸ್ಯರು ಭಿನ್ನಮತದ ಕಾರಣದಿಂದ ಸಮಿತಿಯ ಅನೇಕ ಸಭೆಗಳಿಗೆ ಗೈರು ಹಾಜರಾಗಿದ್ದಾರೆ.
ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಬಿಎಸ್ ಭಲ್ಲಾ ಅವರು ತಮ್ಮ ಆಕ್ಷೇಪದ ಟಿಪ್ಪಣಿಯಲ್ಲಿ ಕೇಂದ್ರ ಸರ್ಕಾರದ ಅಧೀನ ಅಧಿಕಾರಿಗಳಾಗಿರುವ ಇಬ್ಬರು ಸದಸ್ಯರು ಉಪಸಮಿತಿಯ ಇತರ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಸಮಿತಿಯ ಅಂತಿಮ ವರದಿಯನ್ನು ಸಲ್ಲಿಸುವ ಮೊದಲು ಇತರ ಸದಸ್ಯರ ಗಮನಕ್ಕೆ ತರಲಾಗಿಲ್ಲ. ವರದಿಯು ಅತ್ಯಂತ ಉತ್ಪೇಕ್ಷೆಯಿಂದ ಕೂಡಿದ್ದು ಪಾರದರ್ಶಕತೆಯ ಕೊರತೆ ಇದೆ ಎಂದು ತನಿಖಾ ಸಮಿತಿಯ ಕಾರ್ಯವೈಖರಿ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
“ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿಯು ಒಮ್ಮತದ ಅಭಿಪ್ರಾಯಕ್ಕೆ ಬರದೇ ಇರುವುದು ಅತ್ಯಂತ ಬೇಸರ ಮತ್ತು ಅಘಾತಕಾರಿಯಾದ ವಿಷಯವಾಗಿದೆ. ಸಮಿತಿಯು ನಿಜವಾದ ಆಡಿಟ್ಅನ್ನು ನಡೆಸದೇ ಬಿಡುಬೀಸಾದ ತೀರ್ಮಾನಕ್ಕೆ ಬಂದಿದೆ” ಎಂದು ದೆಹಲಿ ಸರ್ಕಾರ ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿಗೆ ತನ್ನ ಆಕ್ಷೇಪವನ್ನು ತಿಳಿಸಿದೆ.
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಆಕ್ಸಿಜನ್ ಪ್ರಕರಣಕ್ಕೆ ಪ್ರತಿಕ್ರಿಯಿಸಿದ್ದು, “ನೀವು ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ತೊಡಗಿದ್ದಾಗ ನಾನಿಲ್ಲಿ ಹಗಲೂ ರಾತ್ರಿ ಆಕ್ಸಿಜನ್ ಹೊಂದಿಸಲು ಕಷ್ಟಪಡುತ್ತಿದ್ದೆ. 2 ಕೋಟಿ ದೆಹಲಿ ನಿವಾಸಿಗಳ ಉಸಿರಿಗಾಗಿ ಹೋರಾಡಿದ್ದೇ ನನ್ನ ಅಪರಾಧ” ಎಂದು ಖಾರವಾಗಿ ಟ್ವೀಟ್ ಮಾಡಿದ್ದಾರೆ.
मेरा गुनाह-मैं अपने 2 करोड़ लोगों की साँसों के लिए लड़ा
जब आप चुनावी रैली कर रहे थे, मैं रात भर जग कर Oxygen का इंतज़ाम कर रहा था। लोगों को ऑक्सिजन दिलाने के लिए मैं लड़ा, गिड़गिड़ाया
लोगों ने ऑक्सिजन की कमी से अपनों को खोया है। उन्हें झूठा मत कहिए, उन्हें बहुत बुरा लग रहा है
— Arvind Kejriwal (@ArvindKejriwal) June 25, 2021
ಆಕ್ಸಿಜನ್ ಆಡಿಟ್ ರಿಪೋರ್ಟ್ ಎಂಬುದು ಇಲ್ಲ. ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿಯು ಈ ವರದಿಗೆ ಸಹಿ ಮಾಡಿಲ್ಲ. ಬಿಜೆಪಿ ತನ್ನ ಕೇಂದ್ರ ಕಚೇರಿಯಲ್ಲಿ ತಯಾರಾದ ನಕಲಿ ರಿಪೋರ್ಟ್ ಅನ್ನು ಹಂಚುತ್ತಿದೆ ಎಂದು ದೆಹಲಿ ಉಪಮುಖ್ಯಮಂತ್ರಿ ಮನಿಶ್ ಸಿಸೋಡಿಯಾ ಬಿಜೆಪಿ ಮೇಲೆ ಆರೋಪ ಮಾಡಿದ್ದಾರೆ.
Show me the signed report of the members. This report has been prepared at BJP office and submitted by central govt in SC. We will take it up in SC https://t.co/zq23WOg1Tu
— Manish Sisodia (@msisodia) June 25, 2021
ದೆಹಲಿ ಸರ್ಕಾರ ಮತ್ತು ಕೆಂದ್ರ ಸರ್ಕಾರದ ನಡುವಿನ ರಾಜಕೀಯ ಕಿತ್ತಾಟ ಮತ್ತೊಂದು ಹಂತವನ್ನು ತಲುಪಿದ್ದು ಆಕ್ಸಿಜನ್ ವಿಚಾರದಲ್ಲಿ ಆಮ್ ಆದ್ಮಿ ಮತ್ತು ಬಿಜೆಪಿ ನಾಯಕರು ಕಿತ್ತಾಡುತ್ತಿದ್ದಾರೆ. ನಿನ್ನೆ ದೇಶಾದ್ಯಂತ ಸುದ್ದಿಯಾದ ಆಕ್ಸಿಜನ್ ವರದಿ ಕೂಡ ದೆಹಲಿ ಬಿಜೆಪಿ ಮೂಲಗಳಿಂದಲೇ ಹೊರ ಬಿದ್ದಿದೆ ಎಂದು ಹೇಳಲಾಗುತ್ತಿದೆ. ಕೇಂದ್ರ ಮತ್ತು ದೆಹಲಿಯ ನಡುವಿನ ಆಕ್ಸಿಜನ್ ಗಲಾಟೆ ಸದ್ಯಕ್ಕೆ ಕೊನೆಯಾಗುವ ಲಕ್ಷಣ ಕಾಣುತ್ತಿಲ್ಲ. ಸುಪ್ರೀಂ ಕೋರ್ಟ್ ವಿಚಾರಣೆಯ ಬಳಿಕವಷ್ಟೆ ಸತ್ಯಾಸತ್ಯತೆಗಳು ಹೊರ ಬೀಳಲಿದೆ.
ಇದನ್ನೂ ಓದಿ : ಆಯಿಷಾ ಸುಲ್ತಾನಾ ಹೇಳಿಕೆ ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿಲ್ಲ: ಕೇರಳ ಹೈಕೋರ್ಟ್