ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಅರ್) ನ ಡೇಟಾ ಬ್ಯಾಂಕ್ನಿಂದ 81 ಕೋಟಿ ಭಾರತೀಯರ ವೈಯಕ್ತಿಕ ಮಾಹಿತಿಯನ್ನು ಡಾರ್ಕ್ ವೆಬ್ನಲ್ಲಿ ಮಾರಾಟಕ್ಕೆ ಇಡಲಾಗಿದೆ.
ಈ ಪ್ರಕರಣ ನಡೆದು ಎರಡು ತಿಂಗಳ ಬಳಿಕ ಮೂರು ರಾಜ್ಯಗಳಲ್ಲಿ ನಾಲ್ವರನ್ನು ಸೋಮವಾರ ದೆಹಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರ ಮಾಹಿತಿ ಲಭ್ಯವಾಗಬೇಕಿದೆ.
ಐಸಿಎಂಆರ್ ಮಾತ್ರವಲ್ಲದೆ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಎಫ್ಬಿಐ) ಮತ್ತು ಗಣಕೀಕೃತ ರಾಷ್ಟ್ರೀಯ ಗುರುತಿನ ಚೀಟಿ (ಸಿಎನ್ಐಸಿ) ಡೇಟಾವನ್ನು ಕೂಡ ಕದ್ದಿರುವುದಾಗಿ ಬಂಧಿತರು ವಿಚಾರಣೆ ವೇಳೆ ಹೇಳಿದ್ದಾಗಿ ತಿಳಿದು ಬಂದಿದೆ.
ಆಧಾರ್ ಕಾರ್ಡ್ ಮತ್ತು ಪಾಸ್ ಪೋರ್ಟ್ ಮಾಹಿತಿಗಳನ್ನು ಒಳಗೊಂಡ ಮಹತ್ವದ ಡೇಟಾವನ್ನು ಡಾರ್ಕ್ ವೆಬ್ ನಲ್ಲಿ ಮಾರಾಟಕ್ಕಿಟ್ಟಿರುವುದು ಕಳೆದ ಅಕ್ಟೋಬರ್ನಲ್ಲಿ ಪೊಲೀಸರ ಗಮನಕ್ಕೆ ಬಂದಿತ್ತು.
ಎಕ್ಸ್ ಹ್ಯಾಂಡಲ್ ಒಂದರಲ್ಲಿ ಡೇಟಾವನ್ನು ಬಹಿರಂಗವಾಗಿ ಮಾರಾಟಕ್ಕೆ ಇಡಲಾಗಿತ್ತು. ಕೋವಿಡ್ ಸಮಯದಲ್ಲಿ ಐಸಿಎಂಆರ್ ಮತ್ತು ಇತರ ಸಂಸ್ಥೆಗಳ ಡೇಟಾ ಬ್ಯಾಂಕ್ನಿಂದ ಆರೋಪಿಗಳು ಡೇಟಾ ಕದ್ದಿದ್ದಾರೆ ಎನ್ನಲಾಗಿದೆ. ಈ ಕುರಿತು ಸೈಬರ್ ತಜ್ಞರು ತೀವ್ರ ಕಳವಳ ವ್ಯಕ್ತಪಡಿಸಿದ್ದರು. ಶೀಘ್ರ ತನಿಖೆಗೆ ಆಗ್ರಹಿಸಿದ್ದರು.
ಪ್ರಕರಣದ ಕುರಿತು ಪ್ರತಿಕ್ರಿಯಿಸಿದ್ದ ಕೇಂದ್ರ ಮಾಹಿತಿ ತಂತ್ರಜ್ಞಾನ ಇಲಾಖೆಯ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್, “ಐಸಿಎಂಆರ್ ಡೇಟಾ ಲೀಕ್ ಆಗಿರೋದು ನಿಜ. ಆದರೆ, ಮಾರಾಟವಾಗಿಲ್ಲ” ಎಂದಿದ್ದರು.
ದೆಹಲಿ ಪೊಲೀಸರು ಈ ಕುರಿತು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು, ಇದೀಗ ಮೂವರನ್ನು ಬಂಧಿಸಿದ್ದಾರೆ. ಈ ಮೂಲಕ ಪ್ರಕರಣ ಮತ್ತೊಂದು ಮಜಲು ಪ್ರವೇಶಿಸಿದೆ.
ಐಸಿಎಂಆರ್ ಡೇಟಾ ಮಾರಾಟಕ್ಕಿಟ್ಟ ವಿಚಾರ ಬೆಳಕಿಗೆ ಬಂದಾಗ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಸಾಕೇತ್ ಗೋಖಲೆ ಈ ಕುರಿತು ಕೇಂದ್ರದಿಂದ ಮಾಹಿತಿ ಕೇಳಿದ್ದರು. ಆಗ ಕೇಂದ್ರ ಸರ್ಕಾರ ಆಧಾರ್ ಭದ್ರತೆ ವಿಚಾರದಲ್ಲಿ ಯಾವುದೇ ಉಲ್ಲಂಘನೆಯಾಗಿಲ್ಲ ಎಂದಿತ್ತು.
ಆದರೆ, ನಿನ್ನೆ ಆರೋಪಿಗಳ ಬಂಧನವಾಗುತ್ತಿದ್ದಂತೆ ಎಕ್ಸ್ನಲ್ಲಿ ಬರೆದುಕೊಂಡಿರುವ ಸಾಕೇತ್ ಗೋಖಲೆ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆಧಾರ್ ಮಾಹಿತಿಯ ಭದ್ರತೆಗೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ತಪ್ಪು ಮಾಹಿತಿ ನೀಡಿದೆ ಎಂದು ಆರೋಪಿಸಿದ್ದಾರೆ.
“ಮೋದಿ ಸರ್ಕಾರವು ಸಂಸತ್ತಿನಲ್ಲಿ ನನ್ನ ಪ್ರಶ್ನೆಗೆ ಉತ್ತರಿಸಿದ್ದು, ಆಧಾರ್ ಭದ್ರತೆ ವಿಚಾರದಲ್ಲಿ ಯಾವುದೇ ಉಲ್ಲಂಘನೆಯಾಗಿಲ್ಲ ಎಂದು ಹೇಳಿದೆ. ಆದರೆ, ಇದೀಗ ಐಸಿಎಂಆರ್ ಡೇಟಾಬೇಸ್ನಿಂದ ಡಾರ್ಕ್ ವೆಬ್ನಲ್ಲಿ ಭಾರತೀಯರ ಆಧಾರ್ ಮತ್ತು ಪಾಸ್ಪೋರ್ಟ್ ವಿವರಗಳನ್ನು ಸೋರಿಕೆ ಮಾಡಿದ್ದಕ್ಕಾಗಿ 4 ಜನರನ್ನು ಬಂಧಿಸಲಾಗಿದೆ. ನಿಮ್ಮ ಸಚಿವಾಲಯ ಸಂಸತ್ತಿನಲ್ಲಿ ಏಕೆ ಸುಳ್ಳು ಹೇಳುತ್ತಿದೆ? ರಾಜೀವ್ ಚಂದ್ರಶೇಖರ್ ಅವರೆ ನೀವು ಏನು ಮರೆಮಾಡುತ್ತಿದ್ದೀರಿ” ಎಂದು ಸಾಕೇತ್ ಗೋಖಲೆ ಪ್ರಶ್ನಿಸಿದ್ದಾರೆ.
In Parliament, Modi Govt replied to my question & denied any breach of Aadhaar.
And now 4 people have been arrested for leaking Aadhaar & passport details of Indians on the dark web from ICMR database.
Why is your Ministry lying in Parliament, @Rajeev_GoI? What are you hiding? pic.twitter.com/WDiMPRbpg7
— Saket Gokhale (@SaketGokhale) December 18, 2023
ಏನೇ ಆದರೂ, ಕೋಟ್ಯಾಂತರ ಭಾರತೀಯರ ವೈಯಕ್ತಿಕ ಮಾಹಿತಿಯನ್ನು ಖಾಸಗಿ ವ್ಯಕ್ತಿಗಳು ಡಾರ್ಕ್ ವೆಬ್ ನಲ್ಲಿ ಬಹಿರಂಗವಾಗಿ ಮಾರಾಟಕ್ಕಿಟ್ಟಿರುವುದು ಸರ್ಕಾರದ ವೈಫಲ್ಯವಲ್ಲದೆ ಇನ್ನೇನಲ್ಲ.
ಇದು ದೇಶದ ಉನ್ನತ ಸಂಸ್ಥೆಯೊಂದರ ಸೈಬರ್ ಸುರಕ್ಷತೆಯ ಕೊರತೆಯನ್ನು ಎತ್ತಿ ತೋರಿಸುತ್ತದೆ. ಅಲ್ಲದೆ ಖಾಸಗಿ ವ್ಯಕ್ತಿ ಮತ್ತು ಸಂಸ್ಥೆಗಳಿಗೆ ಸರ್ಕಾರಿ ಸಾರ್ವಜನಿಕ ಸಂಸ್ಥೆಗಳ ನಿರ್ವಹಣೆಯ ಹೊಣೆ ಕೊಟ್ಟರೆ ಆಗುವ ಅನಾಹುತಕ್ಕೆ ಉದಾಹರಣೆಯಾಗಿದೆ.
ಜನರು ಸರ್ಕಾರವನ್ನು ನಂಬಿ ನೀಡುವ ವೈಯಕ್ತಿಕ ಮಾಹಿತಿಯನ್ನು ಸಿಕ್ಕ ಸಿಕ್ಕವರಿಗೆ ಲಭ್ಯವಾಗುವಂತೆ ಮಾಡಿರುವ ಬೇಜವಬ್ದಾರಿಯ ನಡೆಯ ಪರಿಣಾಮವಾಗಿದೆ.
ದೇಶದ ಹೆಚ್ಚಿನ ಮುಗ್ದ ಜನರಿಗೆ ಇಂತಹ ಪ್ರಕರಣಗಳ ಬಗ್ಗೆ ಮಾಹಿತಿಯೇ ಇಲ್ಲ. ಇದ್ದರೂ ಅವರು ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲದಲ್ಲ. ಏಕೆಂದರೆ ಈ ಪ್ರಕರಣ ಸಾಮಾನ್ಯ ಜನರಿಗೆ ಅರ್ಥವಾಗುವಂತದ್ದಲ್ಲ.
ಇದನ್ನೂ ಓದಿ: ಆಧಾರ್ ಭದ್ರತೆ ಕುರಿತು ಕೇಂದ್ರ ಸರ್ಕಾರದಿಂದ ತಪ್ಪು ಮಾಹಿತಿ: ಟಿಎಂಸಿ ಸಂಸದ ಸಾಕೇತ್