Homeನ್ಯಾಯ ಪಥಪೌರತ್ವ ಕಾಯ್ದೆ ಹೋರಾಟ: ಜಾಮಿಯಾದಲ್ಲಿ ವಿಕೃತಿ ಮೆರೆದ ದೆಹಲಿ ಪೊಲೀಸರು..

ಪೌರತ್ವ ಕಾಯ್ದೆ ಹೋರಾಟ: ಜಾಮಿಯಾದಲ್ಲಿ ವಿಕೃತಿ ಮೆರೆದ ದೆಹಲಿ ಪೊಲೀಸರು..

ರಾಂಚಿಯ ಅನುಗ್ಯಾ ಎಂಬ ಮಗಳ ಮಾತುಗಳು ದೇಶವನ್ನು ಆಳುವವರು ಮತ್ತು ಅವರೊಂದಿಗೆ ಶರೀಕಾಗಿರುವವರ ಆತ್ಮಸಾಕ್ಷಿಗಳನ್ನು ಇರಿಯಬೇಕಿದೆ... ಆದರೆ ಆತ್ಮಸಾಕ್ಷಿಗಳು ಜೀವಂತವಾಗಿವೆಯೇ?

- Advertisement -
- Advertisement -

ಪೌರತ್ವದಲ್ಲಿ ಭೇದಭಾವ ಎಣಿಸುವ ದುರುದ್ದೇಶದ ಹೊಸ ಕಾಯಿದೆಯನ್ನು ಪ್ರತಿಭಟಿಸಿ ದೇಶದ ಉದ್ದಗಲಕ್ಕೂ ವಿದ್ಯಾರ್ಥಿ ಶಕ್ತಿ ಸಿಡಿದೆದ್ದಿದೆ. ದೆಹಲಿ ಪೊಲೀಸರು ಮೊನ್ನೆ ಭಾನುವಾರ ಕೇಂದ್ರೀಯ ವಿಶ್ವವಿದ್ಯಾಲಯ ಜಾಮಿಯಾ ಮಿಲಿಯಾ ಇಸ್ಲಾಮಿಯಾದ ಆವರಣಕ್ಕೆ ನುಗ್ಗಿ ನಡೆಸಿರುವ ಬರ್ಬರ ದೌರ್ಜನ್ಯ ಈ ಕಿಚ್ಚನ್ನು ಮತ್ತಷ್ಟು ಕೆರಳಿಸಿದೆ. ದಶಕಗಳಿಂದ ಮಲಗಿದ್ದ ದೇಶದ ವಿದ್ಯಾರ್ಥಿಶಕ್ತಿಯನ್ನು ಕೇಂದ್ರ ಸರ್ಕಾರ ಕೆಣಕಿರುವುದು ವಿವೇಕದ ನಡೆ ಅಲ್ಲ.

ಭಿನ್ನಮತ ಮತ್ತು ಪ್ರತಿಭಟನೆ ಜನತಂತ್ರದ ಜೀವಾಳ. ಇಂತಹ ದನಿಗಳೊಂದಿಗೆ ಸಜ್ಜನಿಕೆಯ ಸಂವಾದಕ್ಕೆ ಇಳಿಯುವ ಭಾಷೆಯನ್ನು ಕೇಂದ್ರ ಸರ್ಕಾರ ಕಲಿಯುವ ಸೂಚನೆಗಳಿಲ್ಲ. ತಾವು ಹಿಡಿದಿರುವ ಹಾದಿ ತಪ್ಪೆಂದು ತಿಳಿಯುವವರು ಮಾತ್ರವೇ ಅದನ್ನು ತಿದ್ದಿಕೊಳ್ಳಬಲ್ಲರು. ಸರಿಯೆಂದು ಸಮರ್ಥಿಸಿಕೊಳ್ಳುವವರಿಂದ ತಿದ್ದಿಕೊಳ್ಳುವ ನಿರೀಕ್ಷೆಯನ್ನು ಇಟ್ಟುಕೊಳ್ಳುವುದು ಸಾಧ್ಯವಿಲ್ಲ.

ಜಾಮಿಯಾದಲ್ಲಿ ಭಾನುವಾರ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಅಶ್ರುವಾಯು ಸಿಡಿಸಿ, ಮನಸೋ ಇಚ್ಛೆ ಥಳಿಸಲಾಗಿದೆ. ಲೈಬ್ರರಿಯಲ್ಲಿ ಓದಿಕೊಳ್ಳುತ್ತಿದ್ದ ಮತ್ತು ಮಸೀದಿಯಲ್ಲಿ ಪ್ರಾರ್ಥನೆ ನಡೆಸುತ್ತಿದ್ದವರನ್ನೂ ಬಿಟ್ಟಿಲ್ಲ. ಈ ಅತಿರೇಕ ನಡೆಯಬಾರದಿತ್ತು ಅಥವಾ ಪೊಲೀಸರು ಸಂಯಮದಿಂದ ವರ್ತಿಸಬೇಕಿತ್ತು ಎಂಬ ಒಂದು ಮಾತು ಕೂಡ ಸರ್ಕಾರದ ಕಡೆಯಿಂದ ಬಂದಿಲ್ಲ. ಬದಲಿಗೆ ಪ್ರಧಾನಿಯವರೇ ಮುಂದೆ ನಿಂತು ಅಲ್ಪಸಂಖ್ಯಾತರ ವಿರುದ್ಧ ಇಷಾರೆ ಮಾಡಿದ್ದಾರೆ. ಬೆಂಕಿ ಹಚ್ಚುತ್ತಿರುವವರು ಯಾರೆಂದು ಅವರ ಉಡುಪುಗಳಿಂದ ಗುರುತು ಹಿಡಿಯಬಹುದು ಎಂಬುದಾಗಿ ಝಾರ್ಖಂಡದ ಬಹಿರಂಗ ಭಾಷಣದಲ್ಲಿ ಪ್ರತಿಕ್ರಿಯಿಸಿದ್ದಾರೆ. ಭಿನ್ನಾಭಿಪ್ರಾಯ ಹೊಂದಿರುವವರು ಮತ್ತು ಪ್ರತಿಭಟಿಸುವವರನ್ನು ಮುಸಲ್ಮಾನರು ಇಲ್ಲವೇ ಪಾಕಿಸ್ತಾನಿ ಸಮರ್ಥಕರು ಎಂದು ಹೆಸರಿಟ್ಟು ದೇಶದ್ರೋಹಿಗಳೆಂದು ಕರೆಯುವ ಹುನ್ನಾರ ನಿರಂತರ ಮುಂದುವರೆದಿದೆ. ಈ ಧೋರಣೆ ಸರ್ವಾಧಿಕಾರಿ ದೇಶಗಳಿಗೆ ಹೊಂದಬಹುದು. ಆದರೆ ಭಾರತದಂತಹ ಜನತಾಂತ್ರಿಕ ವ್ಯವಸ್ಥೆಯಲ್ಲಿ ಶೋಭಿಸುವುದಿಲ್ಲ. ಅತ್ಯಂತ ದುರದೃಷ್ಟಕರ ವಿದ್ಯಮಾನವಿದು. ಒಂದು ಕೋಮನ್ನು ಧರ್ಮದ ಕಾರಣಕ್ಕಾಗಿಯೇ ಕಟಕಟೆಯಲ್ಲಿ ನಿಲ್ಲಿಸಿ ಕಲ್ಲು ಹೊಡೆಯುವಂತೆ ನೀಡುವ ಸತತ ಪ್ರಚೋದನೆ.

ಜಾಮಿಯಾದಲ್ಲಿ ಕೇವಲ ಮುಸಲ್ಮಾನ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿಲ್ಲ. 1920ರಲ್ಲಿ ಸ್ಥಾಪಿತವಾದ ಜಾಮಿಯಾ 1988ರಲ್ಲಿ ಅಲ್ಪಸಂಖ್ಯಾತ ಕೇಂದ್ರೀಯ ವಿಶ್ವವಿದ್ಯಾಲಯ ಎನಿಸಿಕೊಂಡಿತು. 2011ರಲ್ಲಿ ಜಾರಿಗೆ ತರಲಾದ ಮೀಸಲು ವ್ಯವಸ್ಥೆಯ ಪ್ರಕಾರ ಶೇ.50ರಷ್ಟು ಸೀಟುಗಳು ಮುಸ್ಲಿಮ್ ವಿದ್ಯಾರ್ಥಿಗಳಿಗೆ ಸಲ್ಲುತ್ತವೆ. ಈ ಪೈಕಿ ಶೇ.30ರಷ್ಟು ಸೀಟುಗಳನ್ನು ಸಾಮಾನ್ಯ ಮುಸ್ಲಿಮರಿಗೆ, ಶೇ.10ರಷ್ಟು ಸೀಟುಗಳನ್ನು ಮುಸ್ಲಿಂ ಮಹಿಳೆಯರಿಗೆ, ಶೇ.10ರಷ್ಟು ಸೀಟುಗಳನ್ನು ಮುಸ್ಲಿಮರಲ್ಲಿನ ಹಿಂದುಳಿದ ವರ್ಗಗಳು ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಿರಿಸಲಾಗಿದೆ. ಉಳಿದ ಶೇ.50ರಷ್ಟು ಸೀಟುಗಳು ಮುಸ್ಲಿಮೇತರರಿಗೆ ಸಲ್ಲುತ್ತವೆ. ಮುಸ್ಲಿಂ ಸೀಟುಗಳು ಖಾಲಿ ಉಳಿದರೆ ಅವುಗಳನ್ನು ಸಾಮಾನ್ಯ ವರ್ಗಗಳ ಕೋಟಾಕ್ಕೆ ವರ್ಗಾಯಿಸಲಾಗುತ್ತದೆ. ಮುಸಲ್ಮಾನ ಜನಸಂಖ್ಯೆಯೇ ದಟ್ಟವಾಗಿರುವ ಕಿರಿದಾದ ಓಣಿಗಳ ಇಕ್ಕಟ್ಟಿನ ಜನವಸತಿಯ ನಟ್ಟನಡುವೆ ಇದೆ ಜಾಮಿಯಾ. ಭಯೋತ್ಪಾದಕರಿದ್ದಾರೆಂಬ ಆರೋಪ ಹೊತ್ತ ‘ಬಟ್ಲಾ ಹೌಸ್’ ಎನ್ಕೌಂಟರ್ ನಡೆದದ್ದು ಇದೇ ಪ್ರದೇಶದಲ್ಲಿ. ಮುಸ್ಲಿಮರ ವಿರುದ್ಧ ಪೂರ್ವಗ್ರಹಕ್ಕೆ ಇಷ್ಟು ಸಾಲದೇ? ಇದಕ್ಕೆ ಕಲಶವಿಟ್ಟಂತೆ ಪ್ರಧಾನಿಯವರ ಹೇಳಿಕೆ ಹೊರಬೀಳುತ್ತದೆ. ಪೊಲೀಸರು ಇದೇ ಸಮಾಜದಿಂದ ಬಂದವರು. ಸಮಾಜದಲ್ಲಿ ಬಿತ್ತಿ ಬೆಳೆಯಲಾಗುವ ಕೋಮುವಾದೀ ಸೋಂಕು ಅವರನ್ನು ತಟ್ಟದೆ ಬಿಟ್ಟೀತೇ?

ಪ್ರಧಾನಿಯವರು ಮತ್ತು ಗೃಹಮಂತ್ರಿಗಳು ನಿಮಗೇನು ಅನ್ಯಾಯ ಮಾಡಿದ್ದಾರೆ… ಅವರನ್ನು ಯಾಕೆ ವಿರೋಧಿಸುತ್ತೀರಿ ಎಂದು ಹೆಸರು ಹೇಳಿ ವಿದ್ಯಾರ್ಥಿಗಳ ಬುರುಡೆ ಬಿಚ್ಚಿದ್ದಾರೆ. ದೆಹಲಿ ಪೊಲೀಸ್ ಬಲದಲ್ಲಿ ಮುಸ್ಲಿಮ್ ಪ್ರಾತಿನಿಧ್ಯ ದೇಶದಲ್ಲೇ ತೀರಾ ಕನಿಷ್ಠ. 75 ಸಾವಿರದಷ್ಟು ದೆಹಲಿ ಪೊಲೀಸ್ ಬಲದಲ್ಲಿ ಮುಸ್ಲಿಮ್ ಪ್ರಾತಿನಿಧ್ಯ ಕೇವಲ ಶೇ.2. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಎಂಟು ವರ್ಷಗಳ ಹಿಂದೆ ಹೊರಹಾಕಿದ್ದ ಅಂಕಿಅಂಶವಿದು.

ಜಾಮಿಯಾ ಆಡಳಿತದ ಅನುಮತಿಯಿಲ್ಲದೆ ವಿಶ್ವವಿದ್ಯಾಲಯದ ಕ್ಯಾಂಪಸ್ ಅನ್ನು ನುಗ್ಗಿರುವ ಪೊಲೀಸರು ಪುಂಡರಂತೆ ವರ್ತಿಸಿದ್ದಾರೆ. ವಿದ್ಯಾರ್ಥಿಗಳ ಮೂಳೆ ಮುರಿದಿದ್ದಾರೆ. ಅವರ ಮೋಟರ್ ಸೈಕಲ್ಲುಗಳನ್ನು ನುಗ್ಗಾಗಿಸಿದ್ದಾರೆ, ಲೈಟುಗಳು, ಕನ್ನಡಿಗಳು, ಸಿಸಿಟೀವಿ ಕ್ಯಾಮೆರಾಗಳನ್ನು ಒಡೆದು ಹಾಕಲಾಗಿದೆ. ವಿದ್ಯಾರ್ಥಿಗಳಿಗೆ ಕೆಟ್ಟ ಹೆಸರು ತರಲು ದೆಹಲಿ ಪೊಲೀಸರೇ ಬಸ್ಸುಗಳೊಳಗೆ ಪೆಟ್ರೋಲ್ ಸುರಿಯುತ್ತಿರುವ ವಿಡಿಯೋಗಳು ಮೇಲೆ ತೇಲಿವೆ. (ಬೆಂಕಿ ಆರಿಸುವ ವಿಡಿಯೋಗಳೂ ಇವೆ). ಹೈದರಾಬಾದಿನ ‘ಎನ್ಕೌಂಟರ್ ನ್ಯಾಯದಾನ’ದ ನಂತರ ಕಂಡುಬಂದಿರುವ ಅತ್ಯಂತ ಕಳವಳಕಾರಿ ಪ್ರವೃತ್ತಿಯಿದು.

ವಕೀಲರು ಮತ್ತು ಪೊಲೀಸರ ನಡುವೆ ಇತ್ತೀಚೆಗೆ ಮಹಾ ಘರ್ಷಣೆಗೆ ಸಾಕ್ಷಿಯಾಗಿತ್ತು ದೆಹಲಿ. ವಕೀಲರಿಂದ ಎಗ್ಗಾಮುಗ್ಗಾ ಬಡಿಸಿಕೊಂಡು ಅಸಹಾಯಕರಾಗಿ ಕಂಡುಬಂದಿದ್ದ ಪೊಲೀಸರು ಸಾರ್ವಜನಿಕ ಸಹಾನುಭೂತಿ ಗಳಿಸಿದ್ದರು. ಹಿರಿಯ ಐ.ಪಿ.ಎಸ್. ಅಧಿಕಾರಿಯೊಬ್ಬರನ್ನು ಘೇರಾವೋ ಮಾಡಿ ಎಳೆದಾಡಲಾಗಿತ್ತು. ಆದರೂ ಪೊಲೀಸರು ಸುಮ್ಮನಿದ್ದರು.  ಪೊಲೀಸರ ಹೆಂಡತಿ ಮಕ್ಕಳು, ತಂದೆ ತಾಯಿಯರು ದೆಹಲಿ ಪೊಲೀಸ್ ಮುಖ್ಯಾಲಯದ ಮುಂದೆ ರಕ್ಷಣೆ ಕೋರಿ ಪ್ರತಿಭಟನೆ ನಡೆಸಿದ್ದರು. ಇಂತಹ ಪೊಲೀಸರು ಅಸಹಾಯಕ ವಿದ್ಯಾರ್ಥಿಗಳ ಮೇಲೆ ಹರಿಯಬಿಟ್ಟ ಹಿಂಸಾಚಾರ, ತೋರಿದ ವಿಕೃತ ಕ್ರೌರ್ಯ ಖಂಡನೀಯ.

ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸಿಲ್ಲ ಎಂದು  ಪೊಲೀಸರು ಹೇಳಿದ್ದಾರೆ. ಆದರೆ ಗುಂಡೇಟುಗಳಿಂದ ಹಲವು ವಿದ್ಯಾರ್ಥಿಗಳು ಗಾಯಗೊಂಡಿರುವ ಪ್ರಕರಣಗಳು ವರದಿಯಾಗಿವೆ. ಪೊಲೀಸರ ಜೊತೆಗೆ ನೀಲಿ ಜೀನ್ಸ್ ಮತ್ತು ರಂಗುರಂಗಿನ ಟೀ ಶರ್ಟ್ ತೊಟ್ಟು, ಹೆಲ್ಮೆಟ್ ಧರಿಸಿ, ಎದೆ ಮತ್ತು ಬೆನ್ನಿಗೆ ಕವಚ ಧರಿಸಿ ವಿದ್ಯಾರ್ಥಿಗಳ ಮೇಲೆ ಲಾಠಿ ಬೀಸುತ್ತಿರುವ ವ್ಯಕ್ತಿಗಳು ವಿಡಿಯೋಗಳಲ್ಲಿ ಕಾಣಬಂದಿದ್ದಾರೆ. ಅವರು ಯಾರು, ಮಫ್ತಿಯಲ್ಲಿರುವ ಪೊಲೀಸರೇ, ಇಲ್ಲದೆ ಹೋದರೆ ಖಾಸಗಿಯವರೇ, ಖಾಸಗಿಯವರಾದರೆ ಅವರ ಕೈಗೆ ಪೊಲೀಸರ ಲಾಠಿಗಳು ಮತ್ತು ಹೆಲ್ಮೆಟ್‍ಗಳು, ಎದೆಕವಚಗಳು ಬಂದದ್ದು ಹೇಗೆ, ಪೊಲೀಸರು ಅವರನ್ನು ತಮ್ಮೊಂದಿಗೆ ಸೇರಿಸಿಕೊಂಡದ್ದು ಯಾಕೆ ಎಂಬ ಪ್ರಶ್ನೆಗಳು ಏಳುತ್ತವೆ. ಈ ಗಂಭೀರ ವಿದ್ಯಮಾನ ಕುರಿತು ದೆಹಲಿ ಪೊಲೀಸರು ಸಮಜಾಯಿಷಿ ನೀಡಬೇಕಿದೆ.

ಈ ಪ್ರತಿಭಟನೆಯ ವಿಡಿಯೋಗಳನ್ನು ತಿದ್ದಿ ತೀಡಿ ಹಿಂದುತ್ವದ ವಿರುದ್ಧ ಕೂಗಿರುವ ಘೋಷಣೆಗಳನ್ನು ಹಿಂದೂಗಳ ವಿರುದ್ಧ ಕೂಗಿದ ಘೋಷಣೆಗಳು ಎಂದು ಬಿಂಬಿಸುವ ಪ್ರಯತ್ನ ನಡೆದಿದೆ. ಜೆ.ಎನ್.ಯು. ವಿದ್ಯಾರ್ಥಿಗಳ ವಿರುದ್ಧ ಬಳಸಲಾಗಿದ್ದ ಹಳೆಯ ತಂತ್ರವಿದು. ವಿಡಿಯೋಗಳನ್ನು ಪರೀಕ್ಷಿಸಿರುವ ವಿಧಿವಿಜ್ಞಾನ ಪ್ರಯೋಗಶಾಲೆಯು ಕತ್ತರಿಸಿ ಅಂಟಿಸಿದ ವಿಡಿಯೋ ಎಂದು ವರದಿ ನೀಡಿದೆ. ಅಂದಹಾಗೆ ಜಾಮಿಯಾ ಪ್ರತಿಭಟನೆಯಲ್ಲಿ ಕೆಲ ವಿದ್ಯಾರ್ಥಿಗಳು ಜಾತ್ಯತೀತ ತತ್ವಗಳ ಚೌಕಟ್ಟನ್ನು ಧಿಕ್ಕರಿಸಿ ಕಟ್ಟರ್ ಧಾರ್ಮಿಕ ಘೋಷಣೆಗಳನ್ನು ಕೂಗಿರುವುದು ವರದಿಯಾಗಿದೆ. ಇದು ಸಲ್ಲದ ನಡೆ. ಹಿನ್ನಡೆಯೇ ವಿನಾ ಮುನ್ನಡೆ ಅಲ್ಲ.

ಪೊಲೀಸ್ ಅತಿರೇಕಗಳಲ್ಲಿ ನರಳಿರುವ ಜಾಮಿಯಾ ವಿದ್ಯಾರ್ಥಿಗಳು ಕಂಗೆಟ್ಟಿದ್ದಾರೆ. ರಕ್ತ ಹೆಪ್ಪುಗಟ್ಟಿಸುವ ಚಳಿಯಲ್ಲಿ ಬೀದಿ ಪಾಲಾಗಿದ್ದಾರೆ. ದೆಹಲಿಯ ಸಜ್ಜನ ಸಮಾಜ ಅವರ ನೆರವಿಗೆ ಮುಂದೆ ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ಅನೇಕರು ತಮ್ಮ ಮನೆಯ ಬಾಗಿಲುಗಳನ್ನು ಈ ವಿದ್ಯಾರ್ಥಿಗಳಿಗೆ ತೆರೆದಿರುವುದಾಗಿ ಸಾರಿದ್ದಾರೆ. ದೆಹಲಿಯ ಗುರುದ್ವಾರಗಳು ವಿದ್ಯಾರ್ಥಿಗಳನ್ನು ತೆರೆದ ತೋಳುಗಳಿಂದ ಬರಮಾಡಿಕೊಂಡು ಆಶ್ರಯ ನೀಡಿವೆ. ಪೊಲೀಸ್ ದೌರ್ಜನ್ಯ ಮತ್ತು ಪೌರತ್ವ ಕಾಯಿದೆ ತಿದ್ದುಪಡಿಯಲ್ಲಿ ಮುಸ್ಲಿಮರನ್ನು ಅನ್ಯರನ್ನಾಗಿ ಕಾಣುತ್ತಿರುವ ಕಾರಸ್ಥಾನ ಕುರಿತು ಜಾಮಿಯಾದಲ್ಲಿ ಓದುತ್ತಿರುವ ರಾಂಚಿಯ ಅನುಗ್ಯಾ ಎಂಬ ವಿದ್ಯಾರ್ಥಿನಿ ರೋದಿಸುತ್ತಾ ಎತ್ತಿರುವ ಪ್ರಶ್ನೆಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಆ ಮಗಳ ಮಾತುಗಳು ಈ ದೇಶವನ್ನು ಆಳುವವರು ಮತ್ತು ಅವರೊಂದಿಗೆ ಶರೀಕಾಗಿರುವವರ ಆತ್ಮಸಾಕ್ಷಿಗಳನ್ನು ಇರಿಯುತ್ತವೆ.
ಆದರೆ ಆತ್ಮಸಾಕ್ಷಿಗಳು ಜೀವಂತ ಉಳಿದಿವೆಯೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆತ್ಮಾವಲೋಕನಕ್ಕೆ ಸಿದ್ಧವಿಲ್ಲದ ಕಾಂಗ್ರೆಸ್ಸಿನಿಂದ ಅಲ್ಪಸಂಖ್ಯಾತರ ಭಾವನೆಗಳ ಮೇಲೆ ಹಲ್ಲೆ: ಎದ್ದೇಳು ಕರ್ನಾಟಕ

ಶಾಮನೂರು ಶಿವಶಂಕರಪ್ಪ ನಿಧನದ ಬಳಿಕ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆಯು ಕಾಂಗ್ರೆಸ್‌ ಪಕ್ಷದಲ್ಲಿ ಗೊಂದಲ ಮತ್ತು ವಿವಾದ ಉಂಟುಮಾಡಿದೆ. ಮತದಾನ ಮುಗಿದ ಬಳಿಕ, ಕಾಂಗ್ರೆಸ್‌ ಪಕ್ಷವು ಮುಸ್ಲಿಂ ನಾಯಕರಾದ...

ಮಹಿಳಾ ಮೀಸಲಾತಿ, ಕ್ಷೇತ್ರ ಮರುವಿಂಗಡಣೆ ಕುರಿತ ಚರ್ಚೆ: ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಸಭೆ ಸೇರಿದ ವಿಪಕ್ಷ ನಾಯಕರು

ಸಂಸತ್ತಿನ ಮೂರು ದಿನಗಳ ವಿಶೇಷ ಅಧಿವೇಶನಕ್ಕೂ ಮುನ್ನ, ಮಹಿಳಾ ಮೀಸಲಾತಿ ಕಾನೂನು ಮತ್ತು ಪ್ರಸ್ತಾವಿತ ಕ್ಷೇತ್ರ ಮರುವಿಂಗಡಣೆ ತಿದ್ದುಪಡಿ ಕುರಿತು ಕಾರ್ಯತಂತ್ರವನ್ನು ಚರ್ಚಿಸಲು ವಿರೋಧ ಪಕ್ಷಗಳ ಉನ್ನತ ನಾಯಕರು ಬುಧವಾರ ನವದೆಹಲಿಯಲ್ಲಿರುವ ಕಾಂಗ್ರೆಸ್...

ಯೋಗೀಶ್‌ ಗೌಡ ಕೊಲೆ ಪ್ರಕರಣ : ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ದೋಷಿ

ಧಾರವಾಡ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಯೋಗೀಶ್‌ಗೌಡ ಕೊಲೆ ಪ್ರಕರಣದ ಅಂತಿಮ ತೀರ್ಪು ಹೊರಬಿದ್ದಿದ್ದು, ಹಾಲಿ ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಸಚಿವ ವಿನಯ್‌ ಕುಲಕರ್ಣಿ ಸೇರಿ 19 ಮಂದಿ ಆರೋಪಿಗಳು ದೋಷಿಗಳು ಎಂದು ಜನಪ್ರತಿನಿಧಿಗಳ ವಿಶೇಷ...

ಉತ್ತರ ಪ್ರದೇಶ| ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ 17 ವರ್ಷದ ದಲಿತ ಬಾಲಕಿ ಆತ್ಮಹತ್ಯೆಗೆ ಶರಣು

ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ 17 ವರ್ಷದ ದಲಿತ ಬಾಲಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಚಿತ್ರಕೂಟ ಜಿಲ್ಲೆಯ ಹಳ್ಳಿಯಲ್ಲಿ ನಡೆದಿದೆ. ಹೋಳಿ ಹಬ್ಬದಂದು ನಡೆದಿತ್ತು ಎನ್ನಲಾದ ಅತ್ಯಾಚಾರ ಪ್ರಕರಣದಲ್ಲಿ ಸ್ಥಳೀಯ ಮೂವರು ಯುವಕರ...

“ತಲೆ ಮೇಲೆ ತೂಗುತ್ತಿದ್ದ ಕತ್ತಿ ಈಗ ಮೈಮೇಲೆ ಎರಗಿದೆ”: ಕ್ಷೇತ್ರ ಮರುವಿಂಗಡನೆ ವಿರುದ್ಧ ಸಮರ ಸಾರಿದ ಸ್ಟಾಲಿನ್; ರಾಜ್ಯಾದ್ಯಂತ ಕಪ್ಪು ಬಾವುಟ ಪ್ರತಿಭಟನೆಗೆ ಕರೆ

ಕೇಂದ್ರ ಸರ್ಕಾರದ ಪ್ರಸ್ತಾವಿತ ಕ್ಷೇತ್ರ ಮರುವಿಂಗಡನೆ ಪ್ರಕ್ರಿಯೆಯ ವಿರುದ್ಧ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ತಮ್ಮ ಟೀಕೆಯನ್ನು ತೀವ್ರಗೊಳಿಸಿದ್ದು, ಇದನ್ನು ದಕ್ಷಿಣ ರಾಜ್ಯಗಳ ವಿರುದ್ಧದ 'ಐತಿಹಾಸಿಕ ಅನ್ಯಾಯ' ಎಂದು ಕರೆದಿದ್ದಾರೆ ಮತ್ತು ಗುರುವಾರ...

ಶಿಕೋಪುರ ಭೂ ವ್ಯವಹಾರದ ಹಣ ವರ್ಗಾವಣೆ ಪ್ರಕರಣ; ರಾಬರ್ಟ್ ವಾದ್ರಾಗೆ ದೆಹಲಿ ನ್ಯಾಯಾಲಯದಿಂದ ಸಮನ್ಸ್

ಹರಿಯಾಣದ ಶಿಕೋಪುರದಲ್ಲಿ ನಡೆದ ವಿವಾದಾತ್ಮಕ ಭೂ ವ್ಯವಹಾರಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ಉದ್ಯಮಿ ರಾಬರ್ಟ್ ವಾದ್ರಾ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಸಲ್ಲಿಸಿದ್ದ ಆರೋಪಪಟ್ಟಿಯನ್ನು ಬುಧವಾರ ದೆಹಲಿ ನ್ಯಾಯಾಲಯವು ಪರಿಗಣಿಸಿದೆ....

ಕಾಂಗ್ರೆಸ್‌ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ‌ ಎಂಎಲ್‌ಸಿ ಅಬ್ದುಲ್ ಜಬ್ಬಾರ್ ಅಮಾನತು

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಬಳಿಕ ರಾಜ್ಯ ಕಾಂಗ್ರೆಸ್‌ನಲ್ಲಿ ಉಂಟಾಗಿರುವ ಆಂತರಿಕ ಭಿನ್ನತೆ ಸದ್ಯಕ್ಕೆ ಶಮನಗೊಳ್ಳುವ ಸಾಧ್ಯತೆ ಕಾಣುತ್ತಿಲ್ಲ. ಕಾಂಗ್ರೆಸ್‌ನ ರಾಜ್ಯ ಮತ್ತು ಹೈಕಮಾಂಡ್‌ ನಾಯಕರ ನಡೆ ಗಾಯಕ್ಕೆ ಮುಲಾಮು...

‘ಆಳವಾದ ಅಪನಂಬಿಕೆ ರಾತ್ರೋರಾತ್ರಿ ಬಗೆಹರಿಯುವುದಿಲ್ಲ..’; ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ ಭರವಸೆ ವ್ಯಕ್ತಪಡಿಸಿದ ಜೆಡಿ ವ್ಯಾನ್ಸ್

ಅಮೆರಿಕ ಮತ್ತು ಇರಾನ್ ನಡುವೆ ಸಾಕಷ್ಟು ಅಪನಂಬಿಕೆ ಇದೆ, ಅದನ್ನು ರಾತ್ರೋರಾತ್ರಿ ಪರಿಹರಿಸಲು ಸಾಧ್ಯವಿಲ್ಲ ಎಂದು ಟೆಹ್ರಾನ್ ಜೊತೆಗಿನ ಕದನ ವಿರಾಮ ಮಾತುಕತೆಗಳ ಕುರಿತು ನಿಯೋಗದ ನೇತೃತ್ವ ವಹಿಸಿದ್ದ ಉಪಾಧ್ಯಕ್ಷ ಜೆಡಿ ವ್ಯಾನ್ಸ್...

ನ್ಯಾ. ಶರ್ಮಾ ಪೀಠದ ಮುಂದೆ ಅರವಿಂದ್ ಕೇಜ್ರಿವಾಲ್ ವಾದಿಸಿದ ವಿಡಿಯೋಗಳನ್ನು ತೆಗೆದುಹಾಕುವಂತೆ ಪೊಲೀಸರಿಗೆ ಸೂಚಿಸಿದ ದೆಹಲಿ ಹೈಕೋರ್ಟ್-ವರದಿ

ಅಬಕಾರಿ ನೀತಿ ಪ್ರಕರಣದಲ್ಲಿ ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರ ಮುಂದೆ ಅರವಿಂದ್ ಕೇಜ್ರಿವಾಲ್ ವಾದಿಸಿದ್ದಕ್ಕೆ ಸಂಬಂಧಿಸಿದ ಅನಧಿಕೃತ ವಿಡಿಯೋಗಳನ್ನು ತೆಗೆದುಹಾಕುವಂತೆ ದೆಹಲಿ ಹೈಕೋರ್ಟ್ ಪೊಲೀಸರಿಗೆ ಸೂಚಿಸಿದೆ ಎಂದು ಕಾನೂನು ಸುದ್ದಿ...

ತಮಿಳುನಾಡು ವಿಧಾನಸಭಾ ಚುನಾವಣೆ 2026| ದಕ್ಷಿಣ ರಾಜ್ಯಗಳು ‘ದೆಹಲಿ ತಂಡ’ವನ್ನು ಓಡಿಸಬೇಕು: ಉದಯನಿಧಿ ಸ್ಟಾಲಿನ್

ತಮಿಳುನಾಡು: ಮುಂಬರುವ ವಿಧಾನಸಭಾ ಚುನಾವಣೆಗಳು ತಮಿಳುನಾಡು ತಂಡ ಮತ್ತು ದೆಹಲಿ ತಂಡದ ನಡುವಿನ ಹೋರಾಟವಾಗಿದ್ದು, ದಕ್ಷಿಣ ರಾಜ್ಯವು ದೆಹಲಿಯನ್ನು "ಓಡಿಸಬೇಕು" ಎಂದು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಬುಧವಾರ ಮತ್ತೊಮ್ಮೆ ಒತ್ತಾಯಿಸಿದ್ದಾರೆ. "ನಮ್ಮ ನಾಯಕ (ಎಂ.ಕೆ....