Homeಚಳವಳಿಪ್ರಜಾಪ್ರಭುತ್ವ v/s ಜಾತಿಪ್ರಭುತ್ವ Democracy v/s Castocracy : ಡಾ. ಮೂಡ್ನಾಕೂಡು ಚಿನ್ನಸ್ವಾಮಿ

ಪ್ರಜಾಪ್ರಭುತ್ವ v/s ಜಾತಿಪ್ರಭುತ್ವ Democracy v/s Castocracy : ಡಾ. ಮೂಡ್ನಾಕೂಡು ಚಿನ್ನಸ್ವಾಮಿ

- Advertisement -
- Advertisement -

ರಂಗಾಯಣಕ್ಕಾಗಿ ಬಹುರೂಪಿ ಎಂಬ ನಾಟಕವನ್ನು ಬರೆದು ನಿರ್ದೇಶಿಸಿದ ಚಾಮರಾಜನಗರ ಜಿಲ್ಲೆಯ ಮೂಡ್ನಾಕೂಡು ಚಿನ್ನಸ್ವಾಮಿಯವರು ನಿಜಕ್ಕೂ ಬಹುರೂಪಿಯೇ. ಕವಿ, ನಾಟಕಕಾರ, ನಟ, ರಂಗನಿರ್ದೇಶಕ, ಚಿಂತಕ ಹೀಗೆ ಬಹುಆಯಾಮವುಳ್ಳ ಲೇಖಕರಾದ ಅವರು ಕೆಎಸ್‍ಆರ್‌ಟಿಸಿಯಲ್ಲಿ ಆರ್ಥಿಕ ಸಲಹೆಗಾರರಾಗಿ ಗೊತ್ತಿದ್ದರೆ, ಸಾಹಿತ್ಯದ ಓದುಗರಲ್ಲದ ಲಕ್ಷಾಂತರ ಜನರಿಗೆ ‘ನಾನೊಂದು ಮರವಾಗಿದ್ದರೆ’ ಹಾಡಿನ ಕರ್ತೃವಾಗಿ ಗೊತ್ತು. ಭಾರತದ ಐದು ಭಾಷೆಗಳಲ್ಲದೇ ಹೀಬ್ರೂ, ಸ್ಪ್ಯಾನಿಷ್, ಇಂಗ್ಲಿಷ್ ಭಾಷೆಗಳಿಗೂ ಅವರ ಕೃತಿಗಳು ಅನುವಾದವಾಗಿದ್ದು, ವಿವಿಧ ಪ್ರಕಾರಗಳ 25ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಕನ್ನಡದ ಪ್ರಮುಖ ಬರಹಗಾರರಲ್ಲೊಬ್ಬರು.

ಭಾರತದ ಪ್ರಜಾಪ್ರಭುತ್ವವು ಜಾತಿಯ ಕಿಲುಬು ಹಿಡಿದ ಒಂದು ಪಾತ್ರೆ. ಅಲ್ಲಿಗೆ ಪಾಯಸ ಹಾಕಿದರೂ ಅಷ್ಟೆ, ನೀರು ಹಾಕಿದರೂ ಅಷ್ಟೆ; ವಿಷವಾಗಿ ಪರಿವರ್ತನೆಯಾಗುತ್ತದೆ. ಪ್ರಜಾಪ್ರಭುತ್ವದ ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳು ಕಿಲುಬು ಹಿಡಿದ ಪಾತ್ರೆಗಳೇ ಆಗಿವೆ. ನಾಲ್ಕನೆಯ ಅಂಗವೆಂದು ನಂಬಿಕೊಂಡು ಬಂದಿರುವ ಮಾಧ್ಯಮ ಕ್ಷೇತ್ರವು ಹೆಚ್ಚು ಕಲುಷಿತವಾಗಿರುವುದು ತಿಳಿದಿರುವ ಸಂಗತಿ. ಆತ್ಮಪ್ರತ್ಯಯವುಳ್ಳ ಹಿಂದೂ ಒಬ್ಬ ನಾನು ಜಾತ್ಯತೀತ ಎಂದು ಕರೆದುಕೊಳ್ಳಲು ಸಾಧ್ಯವಿಲ್ಲ. ಜಾತಿ ಭ್ರಷ್ಟಾಚಾರ, ಸ್ವಜನಪಕ್ಷಪಾತವಷ್ಟೇ ಅಲ್ಲ, ಎಲ್ಲ ಅನೈತಿಕತೆಯ ಗಂಗೋತ್ರಿ. ಜಾತಿ ಎಂಬುದು ವಿಷ, ಜಾತಿ ಎಂಬುದು ವಿನಾಶಕಾರಿ ಎಂದು ಹೇಳುತ್ತೇವೆ. ಆದರೆ ನಮ್ಮ ಶ್ರಮವೆಲ್ಲವೂ ಜಾತಿಯನ್ನು ಉಳಿಸಿಕೊಳ್ಳುವುದರಲ್ಲೇ ವ್ಯಯವಾಗುತ್ತಿದೆ. ಈ ದೇಶದ ಎಲ್ಲ ರೋಗಗಳ, ಅನಿಷ್ಟಗಳ ಮೂಲ ಜಾತಿ ಎಂಬುದು ಇನ್ನೂ ನಮ್ಮ ಅರಿವಿಗೆ ಬಂದಿಲ್ಲ. ನಮ್ಮ ದೇಶದ ಆರ್ಥಿಕತೆ ಪ್ರಪಂಚದ ಆರ್ಥಿಕತೆಯಲ್ಲಿ ಐದನೆಯದೋ, ಆರನೆಯದೋ ಎಂದು ಹೇಳಿಕೊಳ್ಳಲು ನನಗೆ ನಾಚಿಕೆಯೆನಿಸುತ್ತದೆ. ಯಾಕೆಂದರೆ ಅದರ ಎಂಬತ್ತು ಭಾಗ ಶೇ.ಒಂದರಷ್ಟು ಮೇಲ್ಜಾತಿ ಜನರ ಬಳಿ ಅಥವಾ 56 ಕುಟುಂಬಗಳ ಒಳಗೆ ಅಡಕವಾಗಿದ್ದರೆ ಅದಕ್ಕಿಂತ ನಾಚಿಕೆಗೇಡಿನ ಸಂಗತಿ ಬೇರೊಂದಿಲ್ಲ. ಆದ್ದರಿಂದ ಈ ದೇಶದಲ್ಲಿ ಒಬ್ಬ ಒಳ್ಳೆಯ ಆಡಳಿತಗಾರ ಅಡ್ರೆಸ್ ಮಾಡಬೇಕಾಗಿರುವುದು ಜಾತಿಯನ್ನು, ಅಸಮಾನತೆಯನ್ನು. ಜಾತಿಯ ಕಾರಣದಿಂದಾಗಿ ಈ ದೇಶದ ಪ್ರತಿಭೆಯ ವ್ಯಾಪ್ತಿಯು ಕುಗ್ಗಿಹೋಗಿದೆ, ಅವಕಾಶಗಳ ವ್ಯೋಮವು ಕಿರಿದಾಗಿದೆ ಎಂಬುದು ಎಲ್ಲಿಯವರೆಗೆ ನಮ್ಮ ತಿಳಿವಳಿಕೆಗೆ ಬರುವುದಿಲ್ಲವೋ ಅಲ್ಲಿಯವರೆಗೆ ದೇಶದ ಸರ್ವಾಂಗೀಣ ಏಳಿಗೆ ಎಂಬುದಿಲ್ಲ.

ಸಂವಿಧಾನವನ್ನು ಅಂಬೇಡ್ಕರ್ ರಚಿಸಿಟ್ಟು ಹೋದರು. ಆದರೆ ಜಾತಿವಾದಿಗಳ ಕೈಯಲ್ಲಿ ಸಿಕ್ಕಿ ಅದರ ಆಶಯಗಳು ನಗಣ್ಯವಾಗಿವೆ. ಜಾತಿವಾದವೇ ಹೂರಣವಾಗಿ ಸಂವಿಧಾನ ಅದರ ಕವಚವಾಗಿದೆ. ಇಂಡಿಯಾದ ಹಿಂದೂ ಜಾತಿಗಳನ್ನು ನಾಲ್ಕು ವರ್ಗಗಳಾಗಿ ವಿಂಗಡಿಸಬಹುದು.
1. ಅಲ್ಪಸಂಖ್ಯಾತ ಬ್ರಾಹ್ಮಣೀಯ ಜಾತಿಗಳು
2. ಬಲಾಢ್ಯ ಊಳಿಗಮಾನ್ಯ ಜಾತಿಗಳು
3. ಬಹುಜನ ಹಿಂದುಳಿದ ಜಾತಿಗಳು ಮತ್ತು
4. ಬಹುಜನ ದಲಿತ ಜಾತಿಗಳು.

ಜಾತಿ ಪ್ರಗತಿ ವಿರೋಧಿ, ವಿನಾಶಕಾರಕ ಎಂದು ಒಬ್ಬ ಬ್ರಾಹ್ಮಣೀಯ ಮೇಲ್ಜಾತೀ ರಾಜಕಾರಣಿಗೆ ತಿಳಿಯುವುದಿಲ್ಲವೆಂದಲ್ಲ. ಅವನು ಜಾತಿವಿನಾಶದತ್ತ ಕಾರ್ಯೋನ್ಮುಖನಾದರೆ ತನ್ನ ಬುಡಕ್ಕೇ ಕೊಡಲಿ ಬೀಳುತ್ತದೆ ಎಂದು ಅವನಿಗೆ ತಿಳಿದಿದೆ. ಜಾತಿ ಪೋಷಣೆಯೇ ತನ್ನ ಅಸ್ತಿತ್ವಕ್ಕೆ ಆಧಾರ ಎಂದು ತಿಳಿದಿರುವುದರಿಂದಲೇ ಜಾತಿ ವಿಷಯ ಬಂದಾಗ ಅವನು ಜಾಣಗುರುಡು ಪ್ರದರ್ಶಿಸುತ್ತಾನೆ. ಬಲಾಢ್ಯ ಊಳಿಗಮಾನ್ಯ ಜಾತಿಗಳ ಪ್ರತಿನಿಧಿಗಳು ಆರಿಸಿ ಬರಲು ತಮ್ಮ ಜಾತಿಗಳನ್ನೆ ನೆಚ್ಚಿಕೊಂಡಿರುವುದರಿಂದ ಜಾತಿವಿನಾಶ ಅವರಿಗೆ ಬೇಕಾಗಿರುವುದಿಲ್ಲ. ಮೆದುಳನ್ನೇ ಬಂಡವಾಳ ಮಾಡಿಕೊಂಡಿರುವ ಬ್ರಾಹ್ಮಣೀಯ ಜಾತಿಜನ ಅಸಮಾನತೆ, ಭ್ರಷ್ಟಾಚಾರ ಎಲ್ಲ ಸಮಾಜಗಳಲ್ಲಿಯೂ ಇರುವಂಥದ್ದೆ ಎಂದೂ, ಜಾತಿಯಿಂದ ನಷ್ಟವೇನೂ ಇಲ್ಲ ಎಂದೂ ಪ್ರಚಾರ ಮಾಡಿಕೊಂಡು ಬರುತ್ತಿದ್ದಾರೆ. ಬಲಾಢ್ಯ ಊಳಿಗಮಾನ್ಯ ಜಾತಿಗಳು ತಮ್ಮ ಭುಜಬಲ ಮತ್ತು ಧನಬಲದಿಂದ ಬಹುಜನರನ್ನು ಹತ್ತಿಕ್ಕುತ್ತ ಜಾತಿವಾದವನ್ನು ಪೋಷಿಸಿಕೊಂಡು ಬರುತ್ತಿದ್ದಾರೆ. ವಾಸ್ತವವಾಗಿ ಇವೆರಡು ವರ್ಗಗಳು ಜಾತಿವ್ಯವಸ್ಥೆಯ ಪರಮ ಫಲಾನುಭವಿಗಳಾಗಿರುವುದರಿಂದ ಜಾತಿವಿನಾಶಕ್ಕೆ ಅವರು ವಿಮುಖರಾಗಿರುವುದು ಸಹಜವೇ ಆಗಿದೆ. ನಮ್ಮ ಜಾತಿಯ ವಕೀಲ, ನಮ್ಮ ಜಾತಿಯ ನ್ಯಾಯಾಧೀಶ, ನಮ್ಮವನೇ ಆದ ಮಹಾಲೇಖಪಾಲ ಮತ್ತು ನಮ್ಮ ಕೈಬೆರಳ ತುದಿಯಲ್ಲಿ ಆಡಿಸಬಹುದಾದ ಪೊಲೀಸ್ ಮುಖ್ಯಸ್ಥ ಇರುವವರೆಗೆ ಅವರಿಗೆ ಜಾತಿ ನಕಾರಾತ್ಮಕ ಎನಿಸುವುದಿಲ್ಲ. ಇನ್ನು, ಬಹುಜನ ಹಿಂದುಳಿದ ಜಾತಿಗಳು ಮತ್ತು ಬಹುಜನ ದಲಿತ ಜಾತಿಗಳು ಮಾತ್ರ ಜಾತಿವಿರೋಧಿ ಚಳವಳಿಗಳ ಭಾಗವಾಗಿದ್ದಾರೆ. ಇದು ಕಾಳ್ಗಿಚ್ಚಿನ ಎದುರು ಆಗಾಗ ಬಂದುಹೋಗುವ ತುಂತುರು ಮಳೆಯಷ್ಟೆ ಅಪ್ರಯೋಜಕವಾಗಿದೆ.

ನಮ್ಮನ್ನು ಆಳುವ ರಾಜಕಾರಣಿಗಳಿಗೆ ಆಳ್ವಿಕೆಯ ಮೂಲಪಾಠಗಳೇ ತಿಳಿದಿರುವುದಿಲ್ಲ. ಅನ್ನ, ಬಟ್ಟೆ, ವಸತಿ ಅಥವಾ ಆರೋಗ್ಯ, ವಿದ್ಯೆ, ವಿಮೆ ಇಂಥವು ಇವರ ಮೊದಲ ಆಯ್ಕೆಯಾಗಿರುವುದಿಲ್ಲ. ಪಂಚಾಯಿತಿ ಸದಸ್ಯರಿಂದ ಹಿಡಿದು ಸಂಸತ್ ಸದಸ್ಯರವರೆಗೆ ಅವರು ರಾಜಕಾರಣಕ್ಕೆ ಬರುವುದು ವಾಮಮಾರ್ಗದಲ್ಲಿ ಹಣ ಗಳಿಸಲು ಮತ್ತು ಅದನ್ನು ಬಳಸಿ ಮುಂದಿನ ಚುನಾವಣೆಗೆ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಎಂಬುದು ಖಚಿತವಾಗಿದೆ. ನಮ್ಮ ಶಾಸಕರು, ಸಂಸದರು ತಮ್ಮ ಅನುದಾನವನ್ನು ಬಳಸುವ ಪರಿಯನ್ನು ನೋಡಿದರೆ ಇದು ತಿಳಿಯುತ್ತದೆ. ಅವರು ಶಾಲೆಗಳನ್ನು ಉತ್ತಮಪಡಿಸುವುದಕ್ಕಿಂತಲೂ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಹೆಚ್ಚು ಖರ್ಚು ಮಾಡಿರುತ್ತಾರೆ! ರೈತರ ಹೊಲ, ಮನೆ ನೋಡುವುದಿಲ್ಲ, ಮಳೆಬೆಳೆ ವಿಚಾರಿಸುವುದಿಲ್ಲ. ತಮ್ಮ ಕ್ಷೇತ್ರದ ಯಾವುದೇ ಕುಟುಂಬದ ಮದುವೆ, ಮುಂಜಿ ಶುಭಕಾರ್ಯದಲ್ಲಿ ಅಥವಾ ಸಾವು ಸಂಭವಿಸಿದಲ್ಲಿ ಹಾಜರಿರುತ್ತಾರೆ. ಓಟು ಕೀಳುವುದಕ್ಕೆ ಭಾವನಾತ್ಮಕ ನಂಟು ಬೆಳೆಸಿಕೊಳ್ಳುವುದು (ಓಟುಗಳನ್ನು ಹಣ ಕೊಟ್ಟು ಖರೀದಿಸಬೇಕೆಂದು ತಿಳಿದೂ) ಅವರಿಗೆ ಅನಿವಾರ್ಯವಾಗಿರುತ್ತದೆ.

ಇನ್ನು ಮೇಲುಸ್ತರದ ರಾಜಕಾರಣಿಗಳು ಬೇರೊಂದು ರೀತಿಯಲ್ಲಿ ತಮ್ಮ ವ್ಯಾಪಾರದಲ್ಲಿ ತೊಡಗಿರುತ್ತಾರೆ. ಇವರು ಹೆಚ್ಚಾಗಿ ಸರ್ಕಾರದ ನೀತಿ ನಿರೂಪಕರು. ಅಪಾರ ಹಣ ಇವರ ಬೆನ್ನಿಗಿರುತ್ತದೆ. ಪಕ್ಷ ಕಟ್ಟುವುದೇ ಇವರ ಕೆಲಸ. ಸರ್ಕಾರದ ಕೆಲಸಕ್ಕಿಂತಲೂ ಅದು ಮುಖ್ಯ ಎಂದು ತಿಳಿದವರು, ಅದಕ್ಕಾಗಿ ಭ್ರಷ್ಟಾಚಾರ ಅನಿವಾರ್ಯ ಎಂದು ನಂಬಿರುವವರು ಇವರು. ಅದರ ಜೊತೆಗೇ ತಮ್ಮ ಜಾತಿಯನ್ನು, ಮಠಗಳನ್ನೂ ಬೆಳೆಸುತ್ತಾರೆ. ತಮ್ಮ ಓಟುಗಳನ್ನು ಖಚಿತಪಡಿಸಿಕೊಳ್ಳುತ್ತಾರೆ. ಎಪ್ಪತ್ತು ವರ್ಷಗಳು ಇಂಥ ರಾಜಕಾರಣಿಗಳಿಂದ ನಾವು ಆಳಿಸಿಕೊಂಡಿದ್ದೇವೆ.

ಈ ದೇಶದಲ್ಲಿ ರಾಜ್ಯಾಧಿಕಾರ ಎನ್ನುವುದು ಕೆಟ್ಟರಕ್ತವಾಗಿದೆ. ಆ ರಕ್ತದ ರುಚಿ ಮಾನ, ಪ್ರಾಣದ ರುಚಿಗಿಂತಲು ಮಿಗಿಲು. ಒಬ್ಬ ಹಿರಿಯ ಮಂತ್ರಿ ಭ್ರಷ್ಟಾಚಾರದ ಹಗರಣದಲ್ಲಿ ಜೈಲಿಗೆ ಹೋದವನು ಹಿಂದಿರುಗಿ ಬರುವಾಗ ತನ್ನ ಕೈ ಮೇಲೆತ್ತಿ ಎರಡು ಬೆರಳುಗಳನ್ನು ಆಡಿಸುತ್ತಾ ವಿಜಯಶಾಲಿಯಾದಂತೆ ಹೊರಬರುತ್ತಾನೆ. ಭ್ರಷ್ಟಾಚಾರ ಕಣ್ಣಿಗೆ ರಾಚುವಂತೆ ಕಾಣುತ್ತಿದ್ದರೂ ಅವನ ಜಾತಿಯ ಮಠಾಧೀಶರು ಬೆಂಬಲ ಸೂಚಿಸಲು ಬೀದಿಗಿಳಿಯುತ್ತಾರೆ. ಮತ್ತೊಬ್ಬ ಭ್ರಷ್ಟ ಮಂತ್ರಿ ಜೈಲು ಪಾಲಾದರು ಎಂದು ಅವನ ಜಾತಿಜನ ಮಂತ್ರಿ ಶಾಸಕರ ಮುಂದಾಳತ್ವದಲ್ಲಿ ಬೀದಿಗಿಳಿದು ಹೋರಾಟ ಮಾಡುತ್ತಾರೆ. ಭ್ರಷ್ಟರನ್ನು ಯಾಕೆ ಬೆಂಬಲಿಸುತ್ತೀರಿ ಎಂದು ಕೇಳಿನೋಡಿ. ಅವರ ಉತ್ತರ- ಬೇರೆ ಜಾತಿಯಲ್ಲಿ ಭ್ರಷ್ಟರಿಲ್ಲವೆ? ಎಂಬುದಾಗಿರುತ್ತದೆ. ಅವರ ನಾಯಕರು ಸಜ್ಜನರಲ್ಲವೆಂದು ಬೆಂಬಲಿಸುವ ಮಠಾಧೀಶರಿಗೂ, ರೈತರಿಗೂ, ಶ್ರಮಿಕರಿಗೂ, ಕೂಲಿಕಾರರಿಗೂ ಗೊತ್ತಿರುತ್ತದೆ. ಈ ನಾಯಕನಿಗೂ ತನ್ನ ಕುಕೃತ್ಯಗಳಿಂದಲೇ ಅವರನ್ನು ಸಂಪ್ರೀತಗೊಳಿಸಬೇಕೆಂದು ತಿಳಿದಿರುತ್ತದೆ. ಕೆಲವು ಅಪವಾದಗಳನ್ನು ಹೊರತುಪಡಿಸಿ ಈ ಮಾತುಗಳನ್ನು ಹೇಳುತ್ತಿದ್ದೇನೆ.

ಇತ್ತೀಚೆಗೆ ಮಥುರಾದಲ್ಲಿ ಭಾಷಣ ಮಾಡುವಾಗ ಮಾನ್ಯ ಪ್ರಧಾನ ಮಂತ್ರಿಗಳು “ಕೆಲವರಿಗೆ ಓಂ ಮತ್ತು ಗೋವು ಶಬ್ದಗಳು ಹಿಡಿಸುವುದಿಲ್ಲ” ಎಂದು ಹೇಳಿದ್ದಾರೆ. ಇದು ಯೋಚಿಸಬೇಕಾದ ವಿಷಯವೆ? ಸದಾ ಬಾಯಲ್ಲಿ ಅಭಿವೃದ್ಧಿ ಮಂತ್ರ ಪಠಿಸುವ ಇವರ ಪ್ರಥಮ ಕಾಳಜಿ ಏನು ಎಂಬುದನ್ನು ಹೊರಹಾಕಿದ್ದಾರೆ. ಒಂದು ವರ್ಗದ ಆದ್ಯತೆಗಳನ್ನೆ ಒತ್ತಿ ಹೇಳುವ ಇವರು ಕಿಂಚಿತ್ ಅಳುಕು ಇಲ್ಲದೆ ನಾನು ಜಾತ್ಯತೀತನಲ್ಲ ಎಂಬುದನ್ನು ಸಾರಿ ಹೇಳಿದ್ದಾರೆ. ಹಾಗೆ ಹೇಳುವುದರ ಮೂಲಕ ಸಂವಿಧಾನವನ್ನು ಉಲ್ಲಂಘಿಸಿದ್ದಾರೆ. ಸಂವಿಧಾನವನ್ನು ರಕ್ಷಿಸಬೇಕಾದವರು ಭಕ್ಷಣೆಗೆ ಇಳಿದಿದ್ದಾರೆ ಎಂದು ನಿರ್ವಾಹವಿಲ್ಲದೆ ಹೇಳಬೇಕಾಗಿದೆ. ನಮ್ಮ ನಾಯಕ ಹೀಗೆ ಹೇಳುತ್ತಾರೆಂದು ಅರಿತ ಅವರ ಹಿಂಬಾಲಕರು ಅನ್ಯಧರ್ಮೀಯರನ್ನು ಹೊಡೆದು, ಬಡಿದು ‘ಜೈಶ್ರೀರಾಮ್’ ಎಂದು ಹೇಳಿಸುತ್ತಾರೆ. ಮನುಷ್ಯನನ್ನು ಕೊಂದು (ಲಿಂಚಿಸಿ) ಗೋವನ್ನು ರಕ್ಷಿಸುತ್ತಾರೆ. ಇಂತಹ ದೌರ್ಜನ್ಯಗಳ ವಿರುದ್ಧ ದನಿ ಎತ್ತಿದ ಎಂ.ಎಂ. ಕಲಬುರ್ಗಿ, ಗೌರಿ ಲಂಕೇಶ್ ಅಂಥವರನ್ನು ಬೇಟೆಯಾಡುತ್ತಾರೆ. ಆದ್ದರಿಂದ ಜಾತ್ಯತೀತವಾದಿ ಆಗಿರುವುದಕ್ಕಿಂತಲೂ ಸಂವಿಧಾನವಾದಿ ಆಗಿರುವುದು ಇಂದಿನ ತುರ್ತು ಎಂದು ಹೇಳಲೇಬೇಕಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...