“ಭೂತಕೋಲವು ಹಿಂದೂ ಸಂಸ್ಕೃತಿಯಲ್ಲ” ಎಂದು ನಟ, ಚಿಂತಕ ಚೇತನ್ ಅಹಿಂಸಾ ಅವರು ಪೋಸ್ಟ್ ಮಾಡಿದ ಬಳಿಕ, “ಭೂತ ಅವೈದಿಕ ದೇವರು” ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ.
ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದ ನಟ ಚೇತನ್, “ನಮ್ಮ ಕನ್ನಡ ಚಿತ್ರ ‘ಕಾಂತಾರ’ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಖುಷಿ ತಂದಿದೆ. ಭೂತಕೋಲ ಹಿಂದೂ ಸಂಸ್ಕೃತಿ ಎಂದು ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದ್ದಾರೆ. ಇದು ನಿಜವಲ್ಲ” ಎಂದಿದ್ದಾರೆ.
“ನಮ್ಮ ಪಂಬದ/ನಲಿಕೆ/ಪರವ ಬಹುಜನ ಸಂಪ್ರದಾಯಗಳಾಗಿವೆ. ವೈದಿಕ-ಬ್ರಾಹ್ಮಣೀಯ ಹಿಂದೂ ಧರ್ಮಕ್ಕಿಂತ ಇವು ಹಿಂದಿನವುಗಳಾಗಿವೆ. ಮೂಲನಿವಾಸಿ ಸಂಸ್ಕೃತಿಗಳನ್ನು ಪರದೆಯ ಮೇಲಾಗಲೀ, ಅದರಾಚೆಯಾಗಲೀ ಸತ್ಯಸಂಗತಿಗಳೊಂದಿಗೆ ತೋರಿಸಬೇಕು” ಎಂದು ಆಗ್ರಹಿಸಿದ್ದರು.
— Chetan Kumar Ahimsa / ಚೇತನ್ ಅಹಿಂಸಾ (@ChetanAhimsa) October 18, 2022
ಚೇತನ್ ಅವರ ಅಭಿಪ್ರಾಯಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಅಶ್ಲೀಲ ಪದಗಳಿಂದ ಟ್ರೋಲ್ ಪಡೆ ನಿಂದಿಸಿತ್ತು. ಇಷ್ಟೆಲ್ಲ ಬೆಳವಣಿಗೆಗಳ ನಡುವೆ ಚೇತನ್ ಅವರ ಹೇಳಿಕೆಯನ್ನು ಸಮರ್ಥಿಸುವಂತೆ ‘ಒಂದು ಮುತ್ತಿನ ಕಥೆ’ ಸಿನಿಮಾದ ದೃಶ್ಯ ವೈರಲ್ ಆಗುತ್ತಿದೆ.
ವರನಟ ಡಾ.ರಾಜ್ಕುಮಾರ್ ಅವರು ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ, ಕರಾಟೆಕಿಂಗ್ ಶಂಕರ್ ನಾಗ್ ನಿರ್ದೇಶನದ ‘ಒಂದು ಮುತ್ತಿನ ಕಥೆ’ ಸಿನಿಮಾ ಕನ್ನಡ ಚಿತ್ರರಂಗದ ಹೆಗ್ಗುರುತುಗಳಲ್ಲಿ ಒಂದು.
ಈ ಸಿನಿಮಾದಲ್ಲಿ ಆದಿವಾಸಿಗಳಿಗೂ ವೈದಿಕ ಪರಂಪರೆಯ ಆರಾಧಕರಿಗೂ ನಡೆಯುವ ಸಂವಾದದ ದೃಶ್ಯವೊಂದನ್ನು ಹಂಚಿಕೊಳ್ಳುತ್ತಿರುವ ಕನ್ನಡಿಗರು, “ಭೂತವು ಅವೈದಿಕ ಪರಂಪರೆಯೆಂದು ಈ ಹಿಂದೆಯೇ ಶಂಕರ್ ನಾಗ್ ಅವರು ತೋರಿಸಿಕೊಟ್ಟಿದ್ದಾರೆ” ಎಂದು ಹೇಳುತ್ತಿದ್ದಾರೆ.
ಇದನ್ನೂ ಓದಿರಿ: ‘ಕಾಂತಾರ’ ವಿಮರ್ಶೆ: ಭೂತಾರಾಧನೆಯ ಆಚೆ-ಈಚೆ ಒಂದಿಷ್ಟು…
ಈ ದೃಶ್ಯದಲ್ಲಿ ಆದಿವಾಸಿಗಳನ್ನು ವೈದಿಕ ಪರಂಪರೆಯವರು ನಿಂದಿಸುವುದನ್ನು, ಭೂತಾರಾಧಕರನ್ನು ಹೀಯಾಳಿಸುವುದನ್ನು ನೋಡಬಹುದು.
“ಚೇತನ್ ಅಹಿಂಸಾರನ್ನು ಎಳೆದಾಡುತ್ತಿರುವವರು ದಯಮಾಡಿ ಗಮನಿಸಬೇಕು. ಚೇತನ್ ಈಗ ಹೇಳುತ್ತಿರುವುದನ್ನು ಶಂಕರ್ ನಾಗ್ ಅವರು ದಶಕಗಳ ಹಿಂದೆಯೇ ತಮ್ಮ ಸಿನಿಮಾದ ಮೂಲಕ ಹೇಳಿದ್ದರು” ಎಂದು ಬರಹಗಾರ ಕಾರ್ತಿಕಾದಿತ್ಯ ಬೆಳಗೋಡು ವಿಡಿಯೊವನ್ನು ಹಂಚಿಕೊಂಡಿದ್ದಾರೆ.
“ಭೂತಾರಾಧನೆ ವೈದಿಕರ ಹಿಂದೂ ಸಂಪ್ರದಾಯದ ಭಾಗವೆಂದು ಹೇಳುವವರು ಇದನ್ನು ನೋಡಿರಿ” ಎಂದು ಹೋರಾಟಗಾರ ದೀಪು ಗೌಡ ಅವರು ಸಿನಿಮಾ ದೃಶ್ಯವನ್ನು ಹಂಚಿಕೊಂಡಿದ್ದಾರೆ.
“ಭೂತರಾಧನೆ ವೈಧಿಕರ ಹಿಂದೂ ಸಂಪ್ರದಾಯದ ಭಾಗವೆಂದು ಹೇಳುವವರು ನೋಡಿರಿ. ಈಗ ಹೇಳಿ ಭೂತಾರಾಧನೆ ನೆಲಮೂಲದ ಸಂಸ್ಕೃತಿನಾ ಇಲ್ಲ ವೈಧಿಕ ಹಿಂದೂ ಸಂಸ್ಕೃತಿನಾ?” ಎಂದು ತಿಪ್ಪೇಸ್ವಾಮಿ ಎಂಬವರು ಪ್ರಶ್ನಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಈ ದೃಶ್ಯವು ವೈರಲ್ ಆಗುತ್ತಿದೆ.