’ಮೈಸೂರು ಹುಲಿ’ ಟಿಪ್ಪು ಸುಲ್ತಾನ್ ಈ ನೆಲದ ಮಗ, ವೀರ ಹೋರಾಟಗಾರ. ವಿದ್ಯಾರ್ಥಿಗಳು ಗಾಂಧೀಜಿಯಿಂದ ಟಿಪ್ಪು ತನಕ ಎಲ್ಲರ ಚರಿತ್ರೆಯನ್ನು ಓದಬೇಕು ಎಂದು ವಿಧಾನ ಪರಿಷತ್ತಿನ ಬಿಜೆಪಿ ಸದಸ್ಯ ಹೆಚ್. ವಿಶ್ವನಾಥ್ ಹೇಳಿದ್ದಾರೆ.
ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸ್ಥಾಪಿಸುವಂತೆ ಆಗ್ರಹಿಸಿ ನಡೆಯುತ್ತಿರುವ ಹೋರಾಟದ ಕುರಿತು ಪ್ರತಿಕ್ರಿಯಿಸಿದ ಅವರು, ಸಂಗೊಳ್ಳಿ ರಾಯಣ್ಣ ಬ್ರಿಟಿಷರ ವಿರುದ್ಧ ಹೋರಾಡಿದ ಕಮಾಂಡರ್ ಇನ್ ಚೀಫ್ ಎಂದರಲ್ಲದೆ, ದಕ್ಷಿಣ ಭಾಗದಲ್ಲಿ ಟಿಪ್ಪು ಸುಲ್ತಾನ್ ಸ್ವಾತಂತ್ರ್ಯದ ಕಹಳೆ ಊದಿದವರು ಎಂದಿದ್ದಾರೆ.
ಇದನ್ನೂ ಓದಿ: ಕನ್ನಡ ರಾಷ್ಟ್ರೀಯತೆಯ ಕನಸುಗಾರ ಟಿಪ್ಪು ಸುಲ್ತಾನ್
ಬಿಜೆಪಿ ಟಿಪ್ಪು ಸುಲ್ತಾನ್ನನ್ನು ವಿರೋಧಿಸುತ್ತಾರಲ್ಲ ಎಂದು ಪ್ರಶ್ನಿಸಿದ್ದಕ್ಕೆ, ಹಾಗೆಲ್ಲ ಹೇಳಬಾರದು ಎಂದ ಅವರು, ಟಿಪ್ಪು ಯಾವುದೇ ಒಂದು ಜಾತಿ, ಧರ್ಮಕ್ಕೆ ಸೇರಿದ ವ್ಯಕ್ತಿಯಲ್ಲ. ಆತ ಈ ನೆಲದ ಮಗ, ವೀರ ಹೋರಾಟಗಾರ ಎಂದು ಹೇಳಿದ್ದಾರೆ.
ಸಂಗೊಳ್ಳಿ ರಾಯಣ್ಣನ ಪ್ರತಿಮೆ ಬೆಳಗಾವಿ ಸುವರ್ಣ ಸೌಧದಲ್ಲಿ ಪ್ರತಿಷ್ಠಾಪನೆ ಆಗಲೇಬೇಕು. ಸ್ವಾತಂತ್ರ್ಯಕ್ಕೆ ಹೋರಾಡಿದ ಅಪ್ರತಿಮ ವೀರ ರಾಯಣ್ಣ. ಅವರ ತ್ಯಾಗ, ಬಲಿದಾನದಿಂದ ಸ್ವಾತಂತ್ರ್ಯ ಸಿಕ್ಕಿದೆ. ಅವರ ಪ್ರತಿಮೆ ಸ್ಥಾಪಿಸುವುದು ಸರಕಾರದ ಕರ್ತವ್ಯ ಎಂದು ವಿಶ್ವನಾಥ್ ಹೇಳಿದ್ದಾರೆ.
ಓದಿ: ಟಿಪ್ಪುಸುಲ್ತಾನರ ವಂಶಜರಾದ ನೂರ್ ಇನಾಯತ್ಖಾನಳ ಸಾಹಸಗಾಥೆ ನಿಮಗೆ ಗೊತ್ತೆ?