₹ 1,000 ಮತ್ತು ₹ 500 ಮುಖಬೆಲೆಯ ನೋಟುಗಳನ್ನು ನಿಷೇಧಿಸುವ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಪ್ರಾರಂಭಿಸಲು ಸಾಧ್ಯವಿಲ್ಲ. ಹಾಗಾಗಿ ನೋಟು ಅಮಾನ್ಯೀಕರಣದ ಕುರಿತ ಸರ್ಕಾರದ ಅಧಿಸೂಚನೆಯು ಕಾನೂನುಬಾಹಿರ ಎಂದು ನ್ಯಾಯಮೂರ್ತಿ ಜಸ್ಟಿಸ್ ಬಿ.ವಿ.ನಾಗರತ್ನರವರು ಸುಪ್ರೀಂ ಕೋರ್ಟ್ ಸಂವಿಧಾನ ಪೀಠದ ಭಿನ್ನಮತದ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.
ಸುಪ್ರೀಂ ಕೋರ್ಟ್ 4:1ರ ಬಹುಮತದ ಆಧಾರದಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ನೋಟು ಅಮಾನ್ಯೀಕರಣದ ನಿರ್ಧಾರವನ್ನು ಎತ್ತಿಹಿಡಿದಿದೆ. 4 ಜನ ನ್ಯಾಯಾಧೀಶರು ಕೇಂದ್ರ ನಿಲುವನ್ನು ಒಪ್ಪಿದರೆ ಒಬ್ಬರು ನ್ಯಾಯಾಧೀಶರು ಅರ್ಜಿದಾರರ ಪರ ತೀರ್ಪು ನೀಡಿದ್ದಾರೆ.
ಭಾರತೀಯ ರಿಸರ್ವ್ ಬ್ಯಾಂಕ್ ಕಾಯಿದೆಯ ಸೆಕ್ಷನ್ 26 ರ ಪ್ರಕಾರ ಆರ್ಬಿಐನ ಕೇಂದ್ರೀಯ ಮಂಡಳಿಯು ಸ್ವತಂತ್ರವಾಗಿ ನೋಟು ಅಮಾನ್ಯೀಕರಣವನ್ನು ಶಿಫಾರಸು ಮಾಡಿರಬೇಕು ಮತ್ತು ಅದು ಸರ್ಕಾರದ ಸಲಹೆಯ ಮೂಲಕ ಮಾಡಬಾರದಿತ್ತು. ಆರ್ಬಿಐ ಸ್ವತಂತ್ರ ಮನಸಿನಿಂದ ನೋಟು ನಿಷೇಧದ ಶಿಫಾರಸ್ಸು ಮಾಡಿಲ್ಲ ಎಂಬುದನ್ನು ಜಸ್ಟಿಸ್ ನಾಗರತ್ನರವರು ಒತ್ತಿ ಹೇಳಿದ್ದಾರೆ.
“ಆರ್ಬಿಐ ಸಲ್ಲಿಸಿದ ದಾಖಲೆಗಳನ್ನು ನೋಡಿದಾಗ, “ಕೇಂದ್ರ ಸರ್ಕಾರವು ಬಯಸಿದಂತೆ”, ಶಿಫಾರಸು ಪಡೆಯಲಾಗಿದೆ, “ಸರಕಾರವು 500 ಮತ್ತು 1000 ನೋಟುಗಳ ಕಾನೂನುಬದ್ಧ ಟೆಂಡರ್ ಅನ್ನು ಹಿಂಪಡೆಯಲು ಶಿಫಾರಸು ಮಾಡಿದೆ” ಎಂಬ ಪದಗಳು ಮತ್ತು ಪದಗುಚ್ಛಗಳ ಬಳಕೆಯನ್ನು ನಾನು ಗಮನಿಸಿದ್ದೇನೆ. ಇವೆಲ್ಲವೂ ಸ್ವಯಂ ವಿವರಣಾತ್ಮಕವಾಗಿವೆ. ಆರ್ಬಿಐ ಸ್ವಂತ ಮನಸ್ಸಿನಿಂದ ಯಾವುದೇ ಸ್ವತಂತ್ರ ಶಿಫಾರಸ್ಸು ಮಾಡಿಲ್ಲ ಎಂಬುದನ್ನು ಇದು ತೋರಿಸುತ್ತದೆ. ಇಂತಹ ಗಂಭೀರ ತೀರ್ಮಾನ ತೆಗೆದುಕೊಳ್ಳುವಾಗ ಅದರ ಕುರಿತು ಆಲೋಚಿಸಲು ಸಹ ಆರ್ಬಿಐಗೆ ಸಮಯವಿರಲಿಲ್ಲ. 500ರೂ ಮತ್ತು 1000ರೂ ನೋಟುಗಳ ಅಮಾನ್ಯೀಕರಣದ ಸಂಪೂರ್ಣ ಪ್ರಕ್ರಿಯೆಯನ್ನು ಕೇವಲ 24 ಗಂಟೆಗಳಲ್ಲಿ ಮುಗಿಸಲಾಗಿದೆ” ಎಂದು ಅವರು ತಮ್ಮ ತೀರ್ಪಿನಲ್ಲಿ ಬರೆದಿದ್ದಾರೆ.
“ನನ್ನ ಅಭಿಪ್ರಾಯದಲ್ಲಿ 2016 ನವೆಂಬರ್ 8 ರ ಅಧಿಸೂಚನೆಯ ಮೂಲಕ ನೋಟು ಅಮಾನ್ಯೀಕರಣದ ಕ್ರಮವು ಕಾನೂನುಬಾಹಿರವಾಗಿದೆ. ಆದರೆ 2016 ರಲ್ಲಿದ್ದ ಯಥಾಸ್ಥಿತಿಯನ್ನು ಈಗ ಪುನಃಸ್ಥಾಪಿಸಲು ಸಾಧ್ಯವಿಲ್ಲ. ನೋಟು ಅಮಾನ್ಯೀಕರಣವು ಕಾನೂನಿಗೆ ವಿರುದ್ಧವಾದ ಅಧಿಕಾರ ಚಲಾಯಿಸಿ ಜಾರಿಗೊಳಿಸಿರುವುದರಿಂದ ಅದು ಕಾನೂನುಬಾಹಿರ” ಎಂದು ಅವರು ಹೇಳಿದ್ದಾರೆ.
ನೋಟು ಅಮಾನ್ಯೀಕರಣವು ಸದುದ್ದೇಶದಿಂದ ಕೂಡಿತ್ತು ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಇದು ಉತ್ತಮ ಉದ್ದೇಶದ ಪ್ರಶ್ನೆಯಲ್ಲ. ಇದು ಕಪ್ಪು ಹಣ, ಭಯೋತ್ಪಾದಕ ನಿಧಿಯಂತಹ ದುಷ್ಟಶಕ್ತಿಗಳನ್ನು ಗುರಿಯಾಗಿಸಿದೆ. ಆರ್ಬಿಐ ಕಾಯಿದೆಯ ಪ್ರಕಾರ ನೋಟು ಅಮಾನ್ಯೀಕರಣದ ಶಿಫಾರಸು ಭಾರತೀಯ ರಿಸರ್ವ್ ಬ್ಯಾಂಕ್ನ ಮಂಡಳಿಯಿಂದ ಪ್ರಸ್ತಾಪವಾಗಬೇಕು. ಆದರೆ ಈ ಪ್ರಕರಣದಲ್ಲಿ ಕೇಂದ್ರವು ನವೆಂಬರ್ 7 ರಂದು ಆರ್ಬಿಐಗೆ ಪತ್ರ ಬರೆದು ಅಂತಹ ಶಿಫಾರಸಿಗೆ ಸಲಹೆ ನೀಡಿದೆ. ಹಾಗಾಗಿ ಈ ಕ್ರಮವು ಕಾನೂನುಬಾಹಿರವಾಗಿ ಜಾರಿಯಾಗಿದೆ ಎಂದಿದ್ದಾರೆ.
ನಮ್ಮ ದೇಶದ ಸಂಸತ್ತು ನಮ್ಮ ಇಡೀ ಭಾರತವನ್ನು ಪ್ರತಿನಿಧಿಸುತ್ತದೆ. ಪ್ರಜಾಪ್ರಭುತ್ವದ ಕೇಂದ್ರವಾಗಿರುವ ಸಂಸತ್ತು ಇಂತಹ ನಿರ್ಣಾಯಕ ಪ್ರಾಮುಖ್ಯತೆಯ ವಿಷಯದಲ್ಲಿ ದೂರವಿರಲು ಸಾಧ್ಯವಿಲ್ಲ ಎಂದು ಜಸ್ಟೀಸ್ ನಾಗರತ್ನರವರು ಅಭಿಪ್ರಾಯಪಟ್ಟಿದ್ದಾರೆ.
2016ರಲ್ಲಿ ನರೇಂದ್ರ ಮೋದಿ ಸರ್ಕಾರವು ಕೈಗೊಂಡ ನೋಟು ರದ್ಧತಿ ಕ್ರಮವು ಮಾನ್ಯವಾದುದು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಇಂದು ಪ್ರಕಟಗೊಂಡ ಭಿನ್ನಮತದ ತೀರ್ಪಿನಲ್ಲಿ ಕೇಂದ್ರ ಸರ್ಕಾರವು ಅದನ್ನು ಆರಂಭಿಸಿದ ಮಾತ್ರಕ್ಕೆ ನಿರ್ಧಾರವನ್ನು ತಪ್ಪೆನ್ನಲು ಸಾಧ್ಯವಿಲ್ಲ ಎಂದು ಸುಪ್ರೀಂ ಹೇಳಿದೆ.
ನೋಟು ಅಮಾನ್ಯೀಕರಣವನ್ನು ತಳ್ಳಿಹಾಕಲು ಸಾಧ್ಯವಿಲ್ಲ, ನೋಟುಗಳ ವಿನಿಮಯಕ್ಕೆ ನೀಡಿದ 52 ದಿನಗಳ ಅವಧಿಯು ಅಸಮಂಜಸವಲ್ಲ ಎನ್ನಲಾಗದು ಎಂದು ಸುಪ್ರೀಂ ಹೇಳಿದೆ.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ನೊಂದಿಗೆ ಸಮಾಲೋಚಿಸಿದ ನಂತರವೆ ಕೇಂದ್ರವು ಕ್ರಮ ಕೈಗೊಂಡಿದೆ ಮತ್ತು ಆರು ತಿಂಗಳ ಕಾಲ ಇಬ್ಬರ ನಡುವೆ ಸಮಾಲೋಚನೆ ನಡೆದಿದೆ ಎಂದು ಐವರು ಸದಸ್ಯರ ಪೀಠದ ನಾಲ್ವರು ನ್ಯಾಯಾಧೀಶರು ಹೇಳಿದ್ದಾರೆ.
ಇದನ್ನೂ ಓದಿ: 2016ರ ನೋಟು ರದ್ಧತಿ ಮಾನ್ಯವಾಗಿದೆ: ಸುಪ್ರೀಂ ಕೋರ್ಟ್ ಮಹತ್ವದ ಆದೇಶ
ಇದೇನಿದು. ಸರ್ಕಾರ ರಚನೆಯಾಗುತಿದ್ದಂತೆ e ರೀ ತೀ Togaluck syndrome ಅಂtujaadya.