370ನೇ ವಿಧಿಯನ್ನು ರದ್ದುಪಡಿಸಿದ ಬಳಿಕ ಇದೇ ಮೊದಲ ಬಾರಿಗೆ ಜಮ್ಮು, ಕಾಶ್ಮೀರ, ಲಡಾಖ್ ಮೂರು ವಿಭಾಗಗಳ ೩೧೦ ಬ್ಲಾಕ್ ಗಳ ಅಧ್ಗಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ವಿಚಿತ್ರ ಫಲಿತಾಂಶ ಹೊರಬಿದ್ದಿದೆ. ಚುನಾವಣಾ ಇತಿಹಾಸದಲ್ಲೇ ಯಾವುದೇ ಒಂದು ರಾಜಕೀಯ ಪಕ್ಷಕ್ಕಿಂತ ಪಕ್ಷೇತರ ಅಭ್ಯರ್ಥಿಗಳೇ, ಹತ್ತಿರದ ಅತಿದೊಡ್ಡ ಪಕ್ಷ ಗಳಿಸಿದ ಸ್ಥಾನಗಳಿಗಿಂತ ಮೂರು ಪಟ್ಟು ಹೆಚ್ಚು ಸ್ಥಾನ ಗೆದ್ದಿರೋದು ಈ ಫಲಿತಾಂಶದ ವಿಶೇಷ. ಹೌದು, ಒಟ್ಟು 310 ಬ್ಲಾಕ್ ಗಳಿಗೆ ನಡೆದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಗಳೇ 217 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದ್ದಾರೆ. ಬಿಜೆಪಿ 81 ಬ್ಲಾಕ್ ಗಳಲ್ಲಷ್ಟೇ ಜಯಗಳಿಸಿದೆ. ಅಂದಹಾಗೆ, ಜಮ್ಮು ಕಾಶ್ಮೀರದ ಜನರನ್ನು ಗೃಹಬಂಧನದಲ್ಲಿರಿಸಿ, ದೂರವಾಣಿ ಸಂಪರ್ಕವೂ ಇಲ್ಲದಂತೆ ಮಾಡಿ ಜಮ್ಮು ಕಾಶ್ಮೀರಕ್ಕಿದ್ದ ಸಾಂವಿಧಾನಿಕ 370 ಕಾಯ್ದೆಯನ್ನೇ ರದ್ದುಗೊಳಿಸಿದ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸುವ ಸಲುವಾಗಿ ಜಮ್ಮು-ಕಾಶ್ಮೀರ ಕಣಿವೆಯ ಪ್ರಧಾನ ರಾಜಕೀಯ ಪಕ್ಷಗಳಾದ ನ್ಯಾಶನಲ್ ಕಾನ್ಫರೆನ್ಸ್ ಹಾಗೂ ಪಿಡಿಪಿ ಪಾರ್ಟಿಗಳು ಈ ಚುನಾವಣೆಯನ್ನು ಬಹಿಷ್ಕರಿಸಿದ್ದವು. ತಮ್ಮ ಅಧಿಕೃತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರಲಿಲ್ಲ.
ಅಷ್ಟಕ್ಕೂ ಇದು ಜಮ್ಮು-ಕಾಶ್ಮೀರ-ಲಡಾಖ್ ವಿಭಾಗಗಳ ಜನಸಾಮಾನ್ಯ ಮತದಾರರು ಓಟ್ ಮಾಡಿದ ಚುನಾವಣೆಯಲ್ಲ. ಜನರಿಂದ ಈ ಮೊದಲೇ ಚುನಾಯಿತರಾಗಿದ್ದ ಪಂಚಾಯಿತಿಗಳ `ಪಂಚ’ರು ಮತ್ತು `ಸರಪಂಚ’ರು ಮಾತ್ರವೇ ಮತದಾನ ಮಾಡಿದ ಚುನಾವಣೆ. ಹಾಗಾಗಿ ಶೇ.98ಕ್ಕು ಹೆಚ್ಚು ಮತದಾನ ಸಾಧ್ಯವಾಗಿತ್ತು.
ಪ್ರಮುಖ ಪಕ್ಷಗಳ ಬೈಕಾಟ್ ನ ಹೊರತಾಗಿಯೂ ಮೂರು ವಿಭಾಗಗಳ ೩೧೦ ಬ್ಲಾಕ್ ಗಳಲ್ಲಿ ಕೇವಲ 81 ಸ್ಥಾನಗಳನ್ನು ಮಾತ್ರ ಬಿಜೆಪಿ ಗಳಿಸಿಕೊಂಡಿದೆ. ಉಳಿದ 217 ಸ್ಥಾನಗಳು ಪಕ್ಷೇತರರ ಪಾಲಾಗಿವೆ. ಜಮ್ಮು ಮೂಲದ ಪ್ಯಾಂಥರ್ಸ್ ಪಾರ್ಟಿ 8 ಬ್ಲಾಕ್ ಗಳಲ್ಲಿ ಜಯ ಗಳಿಸಿದೆ. ಜಮ್ಮು ಕಾಶ್ಮೀರದ ಒಟ್ಟು 22 ಜಿಲ್ಲೆಗಳಲ್ಲಿ 19 ಜಿಲ್ಲೆಗಳಲ್ಲಿ ಪಕ್ಷೇತರರೇ ಪ್ರಾಬಲ್ಯ ಮೆರೆದಿದ್ದಾರೆ.
ಕಾಶ್ಮೀರದ 128 ಬ್ಲಾಕ್ ಗಳಲ್ಲಿ 109 ಸ್ಥಾನಗಳನ್ನು ಪಕ್ಷೇತರರು ಪಡೆದಿದ್ದಾರೆ. ಇಲ್ಲಿ ಬಿಜೆಪಿ 18 ಸ್ಥಾನಗಳನ್ನು ಪಡೆದುಕೊಂಡಿದೆ. ಕಾಶ್ಮೀರ ವಿಭಾಗದ ಕುಪ್ವಾರ, ಬಂಡೀಪುರ, ಗಂಡರ್ ಬಾಲ್, ಶ್ರೀನಗರ ಕುಲ್ಗಾಮ್ ನಲ್ಲಿ ಬಿಜೆಪಿ ಶೂನ್ಯ ಫಲಿತಾಂಶ ದಾಖಲಿಸಿದೆ. ಇಲ್ಲಿಯೂ ಕೂಡ ಪಕ್ಷೇತರ ಅಭ್ಯರ್ಥಿಗಳೇ ಜಯ ಸಾಧಿಸಿದ್ದಾರೆ.
ಬಾರಾಮುಲ್ಲಾ ಜಿಲ್ಲೆಯಲ್ಲಿ ಬಿಜೆಪಿ 1 ಸ್ಥಾನ ಗಳಿಸಿ ಮುಖಭಂಗ ಅನುಭವಿಸಿದೆ. ಪಕ್ಷೇತರರು 24 ಬ್ಲಾಕ್ ಗಳಲ್ಲಿ ಜಯ ದಾಖಲಿಸಿದ್ದಾರೆ. ಜಮ್ಮು-ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿದ ನಂತರ ಮೊದಲ ಬಾರಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿಗೆ ನಿರೀಕ್ಷಿತ ಫಲ ಲಭಿಸಿಲ್ಲ.
ನ್ಯಾಷನಲ್ ಕಾನ್ಫರೆನ್ಸ್, ಪೀಪಲ್ ಕಾನ್ಫರೆನ್ಸ್, ಪೀಪಲ್ ಡೆಮಾಕ್ರೆಟಿಕ್ ಪಾರ್ಟಿಯ ಯಾವುದೇ ನಾಯಕರು ಚುನಾವಣೆಯಲ್ಲಿ ಭಾಗಿಯಾಗಿರಲಿಲ್ಲ. ಅವರೆಲ್ಲರೂ ಗೃಹ ಬಂಧನದಲ್ಲಿದ್ದರು. ಹೀಗಾಗಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿರಲಿಲ್ಲ. ಕಾಂಗ್ರೆಸ್ ಕೂಡ ಕೊನೆಯ ಕ್ಷಣದಲ್ಲಿ ಚುನಾವಣೆಯಿಂದ ಹಿಂದೆ ಸರಿದಿತ್ತು. ಈ ಹಿನ್ನೆಲೆಯಲ್ಲಿ ಪ್ರಾದೇಶಿಕ ಪಕ್ಷಗಳು ಚುನಾವಣಾ ತಯಾರಿ ನಡೆಸಿರಲಿಲ್ಲ.
ಬಿಡಿಸಿ ಚುನಾವಣೆಯಲ್ಲಿ ಬಿಜೆಪಿ ಪಕ್ಷವೊಂದೇ ಸ್ಪರ್ಧೆಗೆ ಇಳಿದಿತ್ತು. ಸಾಕಷ್ಟು ಚುನಾವಣಾ ತಯಾರಿ ನಡೆಸಿತ್ತು. ಪ್ರಾದೇಶಿಕ ಪಕ್ಷಗಳ ಸ್ಪರ್ಧೆಗೆ ಇಳಿಯದೇ ಇದ್ದ ನಡುವೆಯೂ ಬಿಜೆಪಿ ಸಾಕಷ್ಟು ಸ್ಥಾನಗಳನ್ನು ಗಳಿಸಿಕೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿದೆ.