Homeಮುಖಪುಟಬಿಎಸ್‌ವೈ ಪಾಲಿಗೆ ಮಗ್ಗುಲ ಮುಳ್ಳಾಗುತ್ತಿರುವರೇ ಡಾ. ಅಶ್ವತ್ಥ್ ನಾರಾಯಣ್?

ಬಿಎಸ್‌ವೈ ಪಾಲಿಗೆ ಮಗ್ಗುಲ ಮುಳ್ಳಾಗುತ್ತಿರುವರೇ ಡಾ. ಅಶ್ವತ್ಥ್ ನಾರಾಯಣ್?

ಇಂದಿರಾ ಕ್ಯಾಂಟೀನ್‌ನಲ್ಲಿ ಉಚಿತವಾಗಿ ಊಟ ನೀಡುವ ನಿರ್ಧಾರವನ್ನು ಬಿಎಸ್‌ವೈ ಪ್ರಕಟಿಸಿದ ನಂತರ  ಕ್ಯಾಬಿನೆಟ್ ಚರ್ಚೆಯ ವೇಳೆ ಅಶ್ವತ್ಥ್‌ ನಾರಾಯಣ್ ತಗಾದೆ ಎತ್ತಿದ್ದರು.

- Advertisement -
- Advertisement -

ಕೊರೋನಾ ನಿಯಂತ್ರಣದ ಹೆಸರಿನಲ್ಲಿ ಕೇಂದ್ರ ಸರ್ಕಾರ ಮಾರ್ಚ್ 25ರಿಂದ ಲಾಕ್ಡೌನ್ ಘೋಷಣೆ ಮಾಡಿತ್ತು. ಆದರೆ, ಇದಕ್ಕೂ ಮುಂಚೆಯೇ ರಾಜ್ಯದ 9 ಜಿಲ್ಲೆಗಳನ್ನು ಸೀಲ್ಡೌನ್ ಮಾಡಲಾಗಿತ್ತು. ಈ ವೇಳೆ ನಿಜಕ್ಕೂ ಬಿ.ಎಸ್.ಯಡಿಯೂರಪ್ಪ ಬಡ ಜನರ ಪರವಾದ ಕೆಲವು ಘೋಷಣೆಗಳ ಮುನ್ಸೂಚನೆ ಕೊಟ್ಟಿದ್ದರು. ಮಾರ್ಚ್ 23ರಂದೇ ಪತ್ರಿಕಾಗೋಷ್ಠಿ ನಡೆಸಿದ್ದ ಬಿಎಸ್‌ವೈ “ಲಾಕ್‌ಡೌನ್‌ನಿಂದಾಗಿ ಬಡವರಿಗೆ, ಕೂಲಿ ಕಾರ್ಮಿಕರಿಗೆ ಊಟಕ್ಕೆ ತೊಂದರೆಯಾಗದಂತೆ ಇಂದಿರಾ ಕ್ಯಾಂಟೀನ್‌ಲ್ಲಿ ಉಚಿತ ಊಟ ನೀಡುವ” ನಿರ್ಧಾರವನ್ನು ಘೋಷಿಸಿದ್ದರು.

ಇಂದಿರಾ ಕ್ಯಾಂಟೀನ್‌ ಅನ್ನು ಪ್ರತಿನಿತ್ಯ 1.7 ಲಕ್ಷ ಜನ ಬಡವರು ಊಟಕ್ಕೆಂದು ಆಶ್ರಯಿಸಿದ್ದಾರೆ. ಆದರೆ, ಈ ಘೋಷಣೆಯಾದ ಮರುದಿನವೇ ಅಂದರೆ ಮಾರ್ಚ್ 24ರಂದೇ ಇಂದಿರಾ ಕ್ಯಾಂಟೀನ್‌ನಲ್ಲಿ ನೂಕುನುಗ್ಗಲು ಉಂಟಾಗುತ್ತದೆ ಎಂಬ ಕಾರಣ ನೀಡಿ ನಿಲ್ಲಿಸಿದ್ದರಾದರೂ, ದೇಶವ್ಯಾಪಿ ಲಾಕ್‌ಡೌನ್‌ನ ಪರಿಣಾಮಗಳು ಗೊತ್ತಾಗುತ್ತಿದ್ದಂತೆ ಉಚಿತ ಊಟವನ್ನು ಮುಂದುವರೆಸಿದ್ದರು.

ವಲಸೆ ಕಾರ್ಮಿಕರನ್ನು ರೈಲಿನ ಮೂಲಕ ಅವರ ತವರು ಜಿಲ್ಲೆಗಳಿಗೆ ಕಳುಹಿಸುವಂತೆ ಕೇಂದ್ರ ಸೂಚನೆ ನೀಡಿದ ಬೆನ್ನಿಗೆ ಬಿ.ಎಸ್.ಯಡಿಯೂರಪ್ಪ ವಿಶೇಷ ಶ್ರಮಿಕ್ ರೈಲುಗಳನ್ನು ಸಿದ್ದಪಡಿಸುವಂತೆ ಅಧಿಕಾರಗಳಿಗೆ ಸೂಚನೆ ನೀಡಿದ್ದರು. ಆದರೆ, ಹೀಗೊಂದು ಸೂಚನೆ ಬಂದ ಕೆಲವೇ ಗಂಟೆಗಳಲ್ಲಿ ರೈಲು ಸಂಚಾರಕ್ಕೆ ತಡೆ ಒಡ್ಡಲಾಗಿತ್ತು.

ಉತ್ತರ ಕರ್ನಾಟಕದ ವಲಸೆ ಕಾರ್ಮಿಕರನ್ನು ಬಸ್ಸಿನ ಮೂಲಕ ಮನೆಗೆ ಕಳುಹಿಸಲಾಗಿತ್ತು. ಆದರೆ, ಈ ಕಾರ್ಮಿಕರ ಬಳಿ ಹಣ ವಸೂಲಿ ಮಾಡುವುದು ಬಿಎಸ್‌ವೈ ಅವರಿಗೆ ಸುತಾರಾಂ ಇಷ್ಟವಿರಲಿಲ್ಲವೆನ್ನಲಾಗಿದೆ. ಆದರೆ, ಈ ಎಲ್ಲಾ ಕಾರ್ಮಿಕರಿಂದ ಮೊದಲ ಎರಡು ದಿನ ಎರಡು-ಮೂರು ಪಟ್ಟು ಹಣ ವಸೂಲಿ ಮಾಡಲಾಗಿತ್ತು. ಅದಕ್ಕೆ ವಿರೋಧ ಬಂದ ನಂತರ ಮೊದಲಿಗೆ 3 ದಿನ, ನಂತರ ಇನ್ನೆರಡು ದಿನಗಳು ಉಚಿತ ಪ್ರಯಾಣವೆಂದು ಘೋಷಿಸಿದ್ದರು.

ಸಿಎಂ ಬಿಎಸ್‌ವೈ ಅವರಿಗೆ ಲಾಕ್ಡೌನ್ ಸಂದರ್ಭದಲ್ಲಿ ನಿಜಕ್ಕೂ ಬಡವರಿಗೆ ಸಹಕಾರಿಯಾಗುವ ಇರಾದೆ ಇದ್ದಂತೆ ಕಂಡರೂ ‘ಕಾಣದ ಕೈಗಳ ಒತ್ತಡ’ದ ಕಾರಣದಿಂದ ಅವರು ಘೋಷಿಸುವ ಯಾವ ಯೋಜನೆಗಳೂ ಜಾರಿಯಾಗುತ್ತಿಲ್ಲ ಅಥವಾ ಘೋಷಿಸಿದ ಕೆಲವೇ ಗಂಟೆಗಳಲ್ಲಿ ಹಿಂಪಡೆಯಲಾಗುತ್ತಿದೆ.

ಆಡಳಿತ ಯಂತ್ರ ಹೀಗೆ ಗೊಂದಲಮಯವಾಗಲು ಕಾರಣ ಏನಿರಬಹುದು? ಎಂಬ ಒಂದು ಎಳೆಯನ್ನು ಹಿಡಿದು ಮೂಲವನ್ನು ಕೆದಕುತ್ತಾ ಹೊರಟರೆ ಬಿಎಸ್‌ವೈ ಅವರು ಜನಪ್ರಿಯರಾಗದಂತೆ, ಬೇರೊಂದು ನೀತಿಯನ್ನು ಪಕ್ಷದ ಒಳಗೇ ಯಾರೋ ಪುಷ್ ಮಾಡುತ್ತಿದ್ದಾರೆ ಎಂಬ ಅಂಶಗಳು ಬಿಜೆಪಿ ಮೂಲದಿಂದ ಗೊತ್ತಾಗುತ್ತಿವೆ.

ಬಿಎಸ್‌ವೈಗೆ ಮೂಗುದಾರ ಹಾಕುತ್ತಿರುವ ಆ ನಾಯಕ ಯಾರು? ಬಿಜೆಪಿ ಕ್ಯಾಬಿನೆಟ್ ಮೀಟಿಂಗ್‌ನಲ್ಲಿ ಅಸಲಿಗೆ ನಡೆಯುತ್ತಿರುವ ಚರ್ಚೆಯಾದರೂ ಏನು? ಅಸಲಿಗೆ ಬಿಎಸ್‌ವೈ ಆಡಳಿತಕ್ಕೆ ಕೆಟ್ಟ ಹೆಸರು ತರಲು ಪಕ್ಷದ ಒಳಗೆ ಶ್ರಮಿಸುತ್ತಿರುವ ಆ ಗುಂಪಿನ ಹಿನ್ನೆಲೆ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ.

ಬೇಡದ ಕೂಸು ಮತ್ತು ಬಣ ರಾಜಕೀಯ

ಅಸಲಿಗೆ ಬಿ.ಎಸ್. ಯಡಿಯೂರಪ್ಪ ಬಿಜೆಪಿ ಪಾಲಿಗೆ ಬೇಡದ ಕೂಸು ಮತ್ತು ಹೈಕಮಾಂಡ್‌ಗೆ ಇಷ್ಟ ಇಲ್ಲದಿದ್ದರೂ ಬೇರೆ ಆಯ್ಕೆ ಇಲ್ಲದ ಕಾರಣಕ್ಕೆ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ಆಯ್ಕೆ ಮಾಡಲಾಗಿತ್ತು. ಅಲ್ಲದೆ, ಅವರಿಗೆ ಕಡಿವಾಣ ಹಾಕಬೇಕು ಎಂದೇ ಮೂರು ಜನ ಡಿಸಿಎಂ ಆಯ್ಕೆ ಮಾಡಿದ್ದರು ಎಂಬ ವಿಚಾರ ಇಂದು ಗುಟ್ಟಾಗೇನು ಉಳಿದಿಲ್ಲ.

ಗೋವಿಂದ ಕಾರಜೋಳ ಹಿರಿಯ ರಾಜಕಾರಣಿ ಮತ್ತು ಅನುಭವಿ. ಹೀಗಾಗಿ ಅವರಿಗೆ ಡಿಸಿಎಂ ಹುದ್ದೆ ನೀಡಿದ್ದರಲ್ಲಿ ಯಾವುದೇ ಅಚ್ಚರಿ ಇರಲಿಲ್ಲ. ಇನ್ನು ಬಿಎಸ್‌ವೈಗೆ ಪರ್ಯಾಯವಾಗಿ ಓರ್ವ ಲಿಂಗಾಯತ ನಾಯಕನನ್ನು ಬೆಳೆಸಬೇಕು ಎಂಬ ಉದ್ದೇಶದಿಂದಲೇ ಲಕ್ಷ್ಮಣ ಸವದಿಯನ್ನು ಡಿಸಿಎಂ ಹುದ್ದೆಗೆ ಆಯ್ಕೆ ಮಾಡಲಾಗಿತ್ತು. ಇದೂ ಸಹ ಅಚ್ಚರಿಯ ಆಯ್ಕೆಯಾಗಿದ್ದರೂ, ಏನೋ ಒಂದು ಲಾಜಿಕ್ ಇದೆ ಎನಿಸಬಹುದಾಗಿತ್ತು. ಆದರೆ, ಅಚ್ಚರಿ ಎನಿಸಿದ್ದು ಡಾ.ಅಶ್ವತ್ಥ್ ನಾರಾಯಣ್ ಆಯ್ಕೆ.

 

ಏಕೆಂದರೆ ಬೆಂಗಳೂರಿನ ಶಾಸಕರಿಗೆ ಆದ್ಯತೆ ನೀಡಬೇಕು ಅಥವಾ ಒಕ್ಕಲಿಗ ಸಮುದಾಯಕ್ಕೆ ಮಣೆ ಹಾಕಬೇಕು ಎಂದರೆ ಬಿಜೆಪಿ ಎದುರಿದ್ದ ಏಕೈಕ ಆಯ್ಕೆ ಆರ್.ಅಶೋಕ್. ಆದರೆ, ಆರ್.ಅಶೋಕ್ ಅವರನ್ನೇ ಬದಿಗೊತ್ತಿ ಈ ಹಿಂದೆ ಸಚಿವರಾಗಿಯೂ ಅನುಭವ ಇಲ್ಲದ ಚಿಕ್ಕ ವಯಸ್ಸಿನ ಅಶ್ವತ್ಥ್ ನಾರಾಯಣ್ ಅವರನ್ನು ನೇರವಾಗಿ ಡಿಸಿಎಂ ಹುದ್ದೆಗೆ ಆಯ್ಕೆ ಮಾಡಲಾಗಿತ್ತು. ಮತ್ತು ಈ ಆಯ್ಕೆ ಇಡೀ ರಾಜ್ಯ ರಾಜಕೀಯ ವಲಯದಲ್ಲಿ ಅಚ್ಚರಿಗೆ ಕಾರಣವಾದದ್ದು ಸುಳ್ಳಲ್ಲ.

ಹೀಗೆ ಅಚ್ಚರಿಯ ಬೆಳವಣಿಗೆಯಲ್ಲಿ ಡಿಸಿಎಂ ಹುದ್ದೆಗೆ ಆಯ್ಕೆಯಾದ ಅಶ್ವತ್ಥ್ ನಾರಾಯಣ್ ಸುಮ್ಮನೆ ಕೂರುವ ವ್ಯಕ್ತಿಯಲ್ಲ. ಡಿಸಿಎಂಗಳ ಪೈಕಿ ಹೆಚ್ಚು ಸದ್ದು ಮಾಡುತ್ತಿರುವವರೇ ಅಶ್ವತ್ಥ್ ನಾರಾಯಣ್. ಡಾ| ಅಶ್ವತ್ಥ್ ಬಿಎಸ್‌ವೈಗೆ ಪರ್ಯಾಯವಾಗಿ ಬಿಜೆಪಿಯಲ್ಲಿ ಮತ್ತೊಂದು ಬಣವನ್ನು ಪ್ರತಿನಿಧಿಸುತ್ತಿದ್ದಾರೆ. ಆ ಮೂಲಕ ಸರ್ಕಾರವನ್ನು ಹೆಜ್ಜೆ ಹೆಜ್ಜೆಗೂ ನಿಯಂತ್ರಿಸುತ್ತಿದ್ದಾರೆ ಎನ್ನುತ್ತಿದೆ ಸ್ವತಃ ಬಿಜೆಪಿ ಮೂಲಗಳು.

ಕ್ಯಾಬಿನೆಟ್ ಚರ್ಚೆಯಲ್ಲೂ ಅಲ್ಟಿಮೇಟ್ ಆದ ಅಶ್ವತ್ಥ್

ಸರ್ಕಾರ ಯಾವುದೇ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಮುನ್ನ ಆ ಕುರಿತು ಕ್ಯಾಬಿನೆಟ್‌ನಲ್ಲಿ ಚರ್ಚೆ ನಡೆಸುವುದು ಸಾಮಾನ್ಯ. ಈ ವೇಳೆ ಸರ್ಕಾರದ ಎಲ್ಲಾ ಮಹತ್ವದ ನಿರ್ಧಾರಕ್ಕೂ ಕೊಕ್ಕೆ ಹಾಕುತ್ತಿರುವುದೇ ಅಶ್ವತ್ಥ್‌ ನಾರಾಯಣ್ ಎನ್ನಲಾಗುತ್ತಿದೆ.

ಇಂದಿರಾ ಕ್ಯಾಂಟೀನ್‌ನಲ್ಲಿ ಉಚಿತವಾಗಿ ಊಟ ನೀಡುವ ನಿರ್ಧಾರವನ್ನು ಬಿಎಸ್‌ವೈ ಪ್ರಕಟಿಸಿದ ನಂತರ  ಕ್ಯಾಬಿನೆಟ್ ಚರ್ಚೆಯ ವೇಳೆ ಅಶ್ವತ್ಥ್‌ ನಾರಾಯಣ್ ತಗಾದೆ ಎತ್ತಿದ್ದರು. “ಜನ ಊಟಕ್ಕೆ ಗುಂಪಾಗಿ ನಿಂತು ನೂಕುನುಗ್ಗಲು ಹೆಚ್ಚಾದರೆ ಕೊರೋನಾ ಸಂಖ್ಯೆಯೂ ಹೆಚ್ಚಾಗುತ್ತದೆ. ಆಗ ನೀವೆ ಉತ್ತರ ನೀಡಬೇಕಾಗುತ್ತದೆ” ಎಂದು ಪ್ರಶ್ನೆ ಎತ್ತುವ ಮೂಲಕ ಬಡ ಜನರ ಹಸಿವು ನೀಗಿಸಬೇಕಾದ ಇಂದಿರಾ ಕ್ಯಾಂಟೀನ್ ಬಾಗಿಲು ಎಳೆಸಿದ್ದು ಇದೇ ಅಶ್ವತ್ಥ್ ನಾರಾಯಣ್.

ಉತ್ತರ ಭಾರತದ ಕಾರ್ಮಿಕರು ಗುಂಪು ಗುಂಪಾಗಿ ತಮ್ಮ ರಾಜ್ಯಗಳಿಗೆ ಹಿಂದಿರುಗಲು ಮುಂದಾದಾಗ ವಿಶೇಷ ಶ್ರಮಿಕ್ ರೈಲನ್ನು ರದ್ದುಗೊಳಿಸಿದ್ದು; ಕಾರ್ಮಿಕರು ಇಲ್ಲೇ ಇರುವಂತೆ ನೋಡಿಕೊಳ್ಳಲು ಕೈಗಾರಿಕೋದ್ಯಮಿಗಳ ಪರ ಲಾಬಿ ನಡೆಸಿದ್ದು; ಸುಮಾರು 3 ಸಾವಿರಕ್ಕೂ ಅಧಿಕ ವಲಸೆ ಕಾರ್ಮಿಕರನ್ನು ಮಾದಾವರದ ಬೆಂಗಳೂರು ಪ್ರದರ್ಶನ ಕೇಂದ್ರದಲ್ಲಿ ಕೂಡಿ ಹಾಕಲು ಮುಂದಾದ್ದು ಸೇರಿದಂತೆ ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಕಾರಣವಾದ ಅನೇಕ ನಿರ್ಧಾರಕ್ಕೆ ಇದೇ ಅಶ್ವತ್ಥ್‌ ನಾರಾಯಣ್ ಕಾರಣ ಎಂಬುದು ಕ್ಯಾಬಿನೆಟ್ ಸಭೆಯೊಳಗಿಂದ ಹೊರಬಿದ್ದಿರುವ ಸುದ್ದಿಯಾಗಿದೆ.

ಅಶ್ವತ್ಥ್‌ ನಾರಾಯಣ್ ಹಿಂದಿನ ಕಾಣದ ಕೈ ಯಾವುದು ಗೊತ್ತಾ?

ಬಿ.ಎಸ್.ಯಡಿಯೂರಪ್ಪ ಮತ್ತು ಆರೆಸ್ಸೆಸ್ ನಡುವಿನ ನಂಟು ಹಳಸಿ ತುಂಬಾ ದಿನವಾಗಿದೆ. ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮತ್ತು ಬಿಎಸ್‌ವೈ ನಡುವಿನ ಸಂಬಂಧದ ಸಮಸ್ಯೆ ಜಗಜ್ಜಾಹೀರು.. ಇದೇ ಕಾರಣಕ್ಕೆ ಬಿಎಸ್‌ವೈ ವಿರುದ್ಧ ಪಕ್ಷದಲ್ಲಿ ಮತ್ತೊಂದು ಬಣ ನಿರ್ಮಿಸಿ ಆ ಮೂಲಕ ಸರ್ಕಾರದ-ಆಡಳಿತದ ಮೇಲೆ ಹಿಡಿತ ಸಾಧಿಸಬೇಕು, ಬಿಎಸ್‌ವೈ ಅನ್ನು ಹದ್ದುಬಸ್ತಿನಲ್ಲಿ ಇಡಬೇಕು ಎಂದು ಹವಣಿಸುತ್ತಿದ್ದ ಬಿ.ಎಲ್.ಸಂತೋಷ್ ಕೈಗೆ ಸಿಕ್ಕ ಪ್ರಮುಖ ಆಯುಧವೇ ಡಾ. ಅಶ್ವತ್ಥ್ ನಾರಾಯಣ್.

ಇತ್ತೀಚೆಗಿನ ದಿನಗಳಲ್ಲಿ ಗೋವಿಂದ ಕಾರಜೋಳ ಅಥವಾ ಲಕ್ಷ್ಮಣ ಸವದಿ ಕುರಿತ ಸುದ್ದಿಗಳೇ ಇಲ್ಲದಂತಾಗಿದೆ. ಆದರೆ ಡಾ. ಅಶ್ವತ್ಥ್ ನಾರಾಯಣ್ ಮಾತ್ರ ದಿನನಿತ್ಯ ಸುದ್ದಿಯಾಗುತ್ತಿದ್ದಾರೆ, ಸಿಎಂ ರೇಂಜಿಗೆ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದ್ದಾರೆ ಎಂದರೆ ಬಿಜೆಪಿ ಪಕ್ಷದ ಒಳಗೆ ಆಂತರಿಕವಾಗಿ ಅಶ್ವತ್ಥ್ ನಾರಾಯಣ್ ಅಂಡ್ ಟೀಮ್ ಹೇಗೆ ಕೆಲಸ ಮಾಡುತ್ತಿದೆ ಎಂದು ಊಹಿಸಬಹುದು.

ಶ್ರೀಮಂತರ ಪರ ಲಾಬಿ ಮಾಡುತ್ತಿದ್ದಾರಾ ಅಶ್ವತ್ಥ್?

ಈ ನಡುವೆ ಡಿಸಿಎಂ ಅಶ್ವತ್ಥ್ ನಾರಾಯಣ್ ಉಳ್ಳವರು, ಶ್ರೀಮಂತರು ಮತ್ತು ಕೈಗಾರಿಕೋದ್ಯಮಿಗಳ ಪರ ಲಾಬಿ ಮಾಡುತ್ತಿದ್ದಾರ? ಎಂಬ ಸಂಶಯವೂ ಮೂಡುತ್ತಿದೆ.

ರಾಜ್ಯದ ಆರ್ಥಿಕತೆಗೆ ತನ್ನದೇಯಾದ ಇತಿಹಾಸ ಇದೆ. ಜನಸಾಮಾನ್ಯರ ಪರ ಉದಾರವಾದಿ ಧೋರಣೆ ಎಂಬುದು ರಾಜ್ಯದ 7 ದಶಕದ ಆರ್ಥಿಕತೆಯ ಹಾದಿ. ಆದರೆ, ಇತ್ತೀಚೆಗೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎಲ್ಲಾ ಕಾನೂನುಗಳು ಮತ್ತು ಕಾಯ್ದೆಗಳನ್ನು ಉಳ್ಳವರ ಮತ್ತು ಶ್ರೀಮಂತರ ಪರ ತಿದ್ದುಪಡಿ ಮಾಡಲಾಗುತ್ತಿದೆ.

ಕಾರ್ಮಿಕ ಕಾಯ್ದೆ ಮತ್ತು ಎಪಿಎಂಸಿ ಕಾಯ್ದೆಯನ್ನು ತಿದ್ದುಪಡಿ ಮಾಡುವ ಮೂಲಕ ಉದ್ಯಮಿಗಳಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ. ಇದು ಸಾಧ್ಯವಾದರೆ, ರೈತರು ಮತ್ತು ಕಾರ್ಮಿಕರ ಹೆಣದ ಮೇಲೆ ಬಹುತೇಕ ಸಮಾಧಿ ಮಾಡಿದಂತೆಯೇ ಸರಿ. ಆದರೆ, ತೆರೆಯ ಮರೆಯಲ್ಲಿ ಸಿರಿವಂತರ ಪರ ನಿಂತು ಈ ಕಾಯ್ದೆಗಳ ತಿದ್ದುಪಡಿಗಾಗಿ ಲಾಬಿ ಮಾಡುತ್ತಿರುವುದು ಅಶ್ವತ್ಥ್ನಾರಾಯಣ್ ಅವರೇ ಎಂಬ ಗಂಭೀರ ಆರೋಪಗಳೂ ಈ ನಡುವೆ ಕೇಳಿ ಬರುತ್ತಿದೆ. ಈ ಮೂಲಕ ರಾಜ್ಯದ ಆರ್ಥಿಕತೆಯನ್ನೇ ಉಳ್ಳವರ ಪರವಾದ ಆರ್ಥಿಕತೆಯನ್ನಾಗಿ ಬದಲಿಸುವ ಹುನ್ನಾರ ನಡೆಯುತ್ತಿದೆ. ಹಿರಿಯ ಐಎಎಸ್ ಅಧಿಕಾರಿ ಮಣಿವಣ್ಣನ್ ಅವರನ್ನು ಕಾರ್ಮಿಕ ಇಲಾಖೆಯಿಂದ ಎತ್ತಂಗಡಿ ಮಾಡಿದ ವಿಚಾರದಲ್ಲೂ ಡಿಸಿಎಂ ಅಶ್ವತ್ಥ್ ಪಾತ್ರ ಇದೆ ಎನ್ನಲಾಗುತ್ತಿದೆ.

ಕೊರೋನಾದಂತಹ ಸಂಕಷ್ಟದ ಕಾಲದಲ್ಲಿ ಜನಪರ ನಿಲ್ಲಬೇಕಾದ ಪ್ರತಿನಿಧಿಗಳು ಉದ್ಯಮಿಗಳ ಪರ ಲಾಬಿ ನಡೆಸುತ್ತಾ, ಲಾಕ್ಡೌನ್‌ನಿಂದಾಗಿ ಈಗಾಗಲೇ ಹಣ್ಣುಗಾಯಿ ನೀರುಗಾಯಿ ಆಗಿರುವ ಬಡವರನ್ನು ರಾಜಕೀಯದ ಹೆಸರಲ್ಲಿ ಮತ್ತೂ ಹಣಿಯುತ್ತಿರುವುದು. ತಮ್ಮದೇ ಸರ್ಕಾರಕ್ಕೆ ಮಗ್ಗುಲ ಮುಳ್ಳಾಗಿರುವುದು ವಿಪರ್ಯಾಸವೇ ಸರಿ.


ಇದನ್ನೂ ಓದಿ: ಮೊದಲ ಬಾರಿಗೆ ರಾಜಧರ್ಮ ಪಾಲಿಸಿದ ಯಡಿಯೂರಪ್ಪ, ಸ್ವಪಕ್ಷೀಯರಿಂದಲೇ ಮುಖೇಡಿ ಆಂದೋಲನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಡದಿ ಟೌನ್‌ಶಿಪ್ ಸರ್ವೆಗೆ ರೈತರ ತೀವ್ರ ವಿರೋಧ: ಅಧಿಕಾರಿಗಳಿಗೆ ಪೊರಕೆ ಏಟು, ಕಾರುಗಳು ಜಖಂ

ರಾಮನಗರ: ಬಿಡದಿ ಉಪನಗರ (ಟೌನ್‌ಶಿಪ್) ಯೋಜನೆಯನ್ನು ವಿರೋಧಿಸಿ ಸ್ಥಳೀಯ ರೈತರು ನಡೆಸುತ್ತಿರುವ ಹೋರಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಸೋಮವಾರ (ಜುಲೈ 13) ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ಮಂಡಲಹಳ್ಳಿ...

ಮನೆಕೆಲಸದಾಕೆ ಮೇಲಿನ ದೌರ್ಜನ್ಯ ಆರೋಪ ಪ್ರಕರಣ : ಜೆಡಿಎಸ್ ಶಾಸಕ ಹೆಚ್​​​.ಡಿ. ರೇವಣ್ಣಗೆ ಸುಪ್ರೀಂ ಕೋರ್ಟ್​ ನೋಟಿಸ್​

ಮಹಿಳೆಯ ಘನತೆಗೆ ಧಕ್ಕೆ ಹಾಗೂ ಲೈಂಗಿಕ ಕಿರುಕುಳ ಆರೋಪಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ ನೀಡಿದ್ದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿಗೆ ಸಂಬಂಧಿಸಿದಂತೆ, ಸುಪ್ರೀಂ ಕೋರ್ಟ್‌ ಸೋಮವಾರ (ಜು.13) ಜೆಡಿಎಸ್‌...

ದಲಿತ ಯುವಕರಿಗೆ ವಿದ್ಯುತ್ ಶಾಕ್‌ ಶಿಕ್ಷೆ: ಕಳ್ಳತನ ಆರೋಪದ ಮೇಲೆ ಇಬ್ಬರಿಗೆ ಚಿತ್ರಹಿಂಸೆ

ದಲಿತ ಯುವಕರ ಮೇಲೆ ಮಧ್ಯಪ್ರದೇಶದಲ್ಲಿ ನಡೆದಿರುವ ಅಮಾನವೀಯ ಕೃತ್ಯವೊಂದರ ವಿಡಿಯೋ ಇದೀಗ ನಾಗರಿಕ ಸಮಾಜವನ್ನೇ ಆಘಾತಕ್ಕೀಡು ಮಾಡಿದೆ. ನೀರಿನ ಪಂಪ್ ಮೋಟಾರ್ ಕದ್ದಿದ್ದಾರೆ ಎಂಬ ಶಂಕೆಯ ಮೇಲೆ ಇಬ್ಬರು ದಲಿತ ಯುವಕರನ್ನು ಕಂಬಕ್ಕೆ...

ರಾಮಮಂದಿರ ಹಗರಣ: ಕೇಂದ್ರ ಸರ್ಕಾರ, ಟ್ರಸ್ಟ್, ಉತ್ತರ ಪ್ರದೇಶ ಸರ್ಕಾರಕ್ಕೆ ‘ಸುಪ್ರೀಂ’ ನೋಟಿಸ್ 

ನವದೆಹಲಿ: ವಿಶ್ವಪ್ರಸಿದ್ಧ ಅಯೋಧ್ಯೆಯ ಶ್ರೀ ರಾಮಮಂದಿರಕ್ಕೆ ಸಾರ್ವಜನಿಕ ಭಕ್ತಾದಿಗಳಿಂದ ಹರಿದುಬಂದಿರುವ ಕೋಟ್ಯಂತರ ರೂಪಾಯಿ ದೇಣಿಗೆ ನಿಧಿಯ ಕಳ್ಳತನ, ದುರುಪಯೋಗ ಮತ್ತು ಆಡಳಿತಾತ್ಮಕ ಅಕ್ರಮಗಳ ಆರೋಪ ಇದೀಗ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದೆ. ಈ...

ಜಮ್ಮು-ಕಾಶ್ಮೀರ: ಪ್ರತ್ಯೇಕತಾವಾದಿಗಳು, ಉಗ್ರಗಾಮಿಗಳನ್ನು ವೈಭವೀಕರಿಸಿದ ಆರೋಪ: ಮೂವರು ಪ್ರಕಾಶಕರ ಬಂಧನ

ಜಮ್ಮು/ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಹಾಗೂ ಭಯೋತ್ಪಾದಕ ನಾಯಕರನ್ನು ವೈಭವೀಕರಿಸುವ ಪುಸ್ತಕಗಳನ್ನು ಪ್ರಕಟಿಸಿ, ವಿತರಿಸಿದ ಗಂಭೀರ ಆರೋಪದ ಮೇಲೆ ಪ್ರತಿ-ಗುಪ್ತಚರ ವಿಭಾಗದ (ಸಿಐಜೆಕೆ) ಪೊಲೀಸರು ಭಾನುವಾರ ಇಬ್ಬರು ಪ್ರಮುಖ ಪ್ರಕಾಶನ ಸಂಸ್ಥೆಗಳಿಗೆ...

ಕರ್ನಾಟಕ ಎಸ್‍ಐಆರ್: ಮತದಾರರ ಸೌಲಭ್ಯ ಕೇಂದ್ರಗಳ ಕೊರತೆ, ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ಅಡ್ಡಿ: ವರದಿ

ಬೆಂಗಳೂರು: ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಆರಂಭವಾಗಿ ಸುಮಾರು ಎರಡು ವಾರಗಳು ಕಳೆಯುತ್ತಾ ಬಂದಿದ್ದರೂ, ಚುನಾವಣಾ ಆಯೋಗವು ಸಾರ್ವಜನಿಕರ ಅನುಕೂಲಕ್ಕಾಗಿ ರಾಜ್ಯಾದ್ಯಂತ ಅಗತ್ಯವಿರುವಷ್ಟು ಮತದಾರರ ಸೌಲಭ್ಯ ಕೇಂದ್ರಗಳನ್ನು...

27 ಮಂದಿಯನ್ನು ‘ವಿದೇಶಿಯರು’ ಎಂದಿದ್ದ ಅಸ್ಸಾಂ ನ್ಯಾಯಮಂಡಳಿಗಳ ಆದೇಶ ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ಒಬ್ಬ ವ್ಯಕ್ತಿಯ ಪೌರತ್ವ ಮತ್ತು ವಿದೇಶಿಯರ ಸ್ಥಾನಮಾನವನ್ನು ನಿರ್ಧರಿಸುವಾಗ ಕೇವಲ ಯಾಂತ್ರಿಕವಾಗಿ ತೀರ್ಪು ನೀಡಲಾಗದು, ಬದಲಿಗೆ ಅತ್ಯಂತ ನ್ಯಾಯಯುತ, ಕಾನೂನುಬದ್ಧ ಹಾಗೂ ಸಮಂಜಸವಾದ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಪಾಲಿಸಲೇಬೇಕು ಎಂದು ಸುಪ್ರೀಂ ಕೋರ್ಟ್ ಸೋಮವಾರ...

ಶಿಕ್ಷಕ ‘ಖಾನ್ ಸರ್‌’ಗೆ ಪಟ್ನಾ ಕೋರ್ಟ್‌ನಲ್ಲಿ ಜಯ: ಕೋಚಿಂಗ್ ಸೆಂಟರ್ ದಾಳಿ ಪ್ರಕರಣದಲ್ಲಿ ಮುಂಗಡ ಜಾಮೀನು ಮಂಜೂರು

ಬಿಹಾರದ ಖ್ಯಾತ ಶಿಕ್ಷಕ ಫೈಸಲ್ ಖಾನ್ (ಜನಪ್ರಿಯವಾಗಿ ಖಾನ್ ಸರ್ ಎಂದು ಕರೆಯಲ್ಪಡುವ) ಅವರಿಗೆ ಪಟ್ನಾ ನ್ಯಾಯಾಲಯವು ಸೋಮವಾರ ಮುಂಗಡ ಜಾಮೀನು ಮಂಜೂರು ಮಾಡಿದೆ. ಈ ತಿಂಗಳ ಆರಂಭದಲ್ಲಿ ಅವರ ಕೋಚಿಂಗ್ ಇನ್ಸ್ಟಿಟ್ಯೂಟ್...

ಗುಜರಾತ್‌| ದನಗಳನ್ನು ಸಾಗಿಸುತ್ತಿದ್ದ ಟ್ರಕ್ ಚಾಲಕನನ್ನು ಬೆದರಿಸಿದ ನಕಲಿ ಗೋರಕ್ಷಕರು

ಗುಜರಾತ್‌ನ ವಲ್ಸಾದ್ ಜಿಲ್ಲೆಯಲ್ಲಿ ಸ್ವಘೋಷಿತ ಗೋರಕ್ಷಕರ ಗುಂಪೊಂದು ದನಗಳನ್ನು ಸಾಗಿಸುತ್ತಿದ್ದ ಟ್ರಕ್ ಅನ್ನು ಸುಮಾರು 100 ಕಿಲೋಮೀಟರ್‌ಗಳವರೆಗೆ ಬೆನ್ನಟ್ಟಿ, ವಾಹನವನ್ನು ತಡೆದು ಗುಂಪು ಮುಸ್ಲಿಂ ಚಾಲಕನನ್ನು ನಿಂದಿಸಿ ಬೆದರಿಸಿದ್ದಾರೆ. 'ಕ್ಲಾರಿಯನ್ ಇಂಡಿಯಾ' ವರದಿ ಪ್ರಕಾರ,...

ವಿಜಯ್ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ಜಯ: ತಮಿಳುನಾಡು ಗೋಹತ್ಯೆ ನಿಷೇಧದ ಹೈಕೋರ್ಟ್ ಆದೇಶಕ್ಕೆ ತಡೆ

ತಮಿಳುನಾಡಿನಲ್ಲಿ ಹಸು ಮತ್ತು ಕರುಗಳ ಹತ್ಯೆಯನ್ನು ರಾಜ್ಯಾದ್ಯಂತ ಸಂಪೂರ್ಣವಾಗಿ ನಿಷೇಧಿಸಿ ಮದ್ರಾಸ್ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ತಡೆ ನೀಡಿದೆ. ಮುಖ್ಯಮಂತ್ರಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK)...