ರಾಜ್ಯ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಕೋಮುದ್ವೇಷಪೂರಿತ ಅವಹೇಳನಕಾರಿ ಪೋಸ್ಟ್ ಹಾಕಿದ ಶ್ರೀರಾಮಸೇನೆ ಮುಖಂಡನ ವಿರುದ್ಧ ಚಿಕ್ಕಮಗಳೂರು ನಗರ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶ್ರೀರಾಮಸೇನೆ ಮುಖಂಡ ಪ್ರೀತೇಶ್ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದರು. ನಂತರ ಪೋಸ್ಟ್ ಡಿಲೀಟ್ ಮಾಡಿದ್ದಾರೆ.
“ಸ್ಪೀಕರ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೋಮುದ್ವೇಷ ಹಾಗೂ ಒಂದು ಸಮುದಾಯದವರ ಭಾವನೆಗಳಿಗೆ ಧಕ್ಕೆಯಾಗುವಂತಹ ಪೋಸ್ಟ್ ಹಾಕಿದ್ದಾನೆ. ಆದ್ದರಿಂದ ಆರೋಪಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು” ಎಂದು ಚಿಕ್ಕಮಗಳೂರು ಕಾಂಗ್ರೆಸ್ ಐಟಿ ಸೆಲ್ ಜಿಲ್ಲಾ ಕಾರ್ಯದರ್ಶಿ ಎಂ.ಎಲ್.ಎ. ಮಂಜು ಅವರು ನಗರದಲ್ಲಿರುವ ಸೈಬರ್ ಕ್ರೈಮ್ ಠಾಣೆಗೆ ಶುಕ್ರವಾರ ರಾತ್ರಿ ದೂರು ನೀಡಿದ್ದಾರೆ.
“ಸಂವಿಧಾನಿಕ ಹುದ್ದೆಯಲ್ಲಿರುವ ಕರ್ನಾಟಕ ಸರ್ಕಾರದ ವಿಧಾನಸಭಾ ಸಭಾಧ್ಯಕ್ಷರ ಕುರಿತು ಪ್ರೀತೇಶ್ ಚಿಕ್ಕಮಗಳೂರು ಎಂಬುವವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಅವಹೇಳನಕಾರಿ ಹೇಳಿಕೆಯ ಪೋಸ್ಟ್ ಮಾಡಿದ್ದು, ಇದು ಒಂದು ಜನಾಂಗಕ್ಕೆ ನೋವನ್ನು ಉಂಟುಮಾಡುವ ಮತ್ತು ಕೋಮು ದ್ವೇಷ ಪ್ರಚೋದನೆಯ ಹೇಳಿಕೆ ರೀತಿ ಇದೆ. ದಯಮಾಡಿ ತಾವುಗಳು ಇದನ್ನು ಪರಿಶೀಲಿಸಿ ಕಾನೂನು ಕ್ರಮ ಜರುಗಿಸಬೇಕು” ಎಂದು ದೂರಿನಲ್ಲಿ ಮಂಜು ಕೋರಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.