ರಾಯಚೂರು ಜಿಲ್ಲೆಯಲ್ಲಿ ತಮ್ಮದಲ್ಲದ ತಪ್ಪಿಗೆ ಮತ್ತೊಂದು ಮುಗ್ದ ಜೀವ ಕೊನೆಯುಸಿರೆಳೆದಿದೆ. ದೇವದುರ್ಗ ತಾಲೂಕಿನ ರೇಕಲಮರಡಿ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಐದು ವರ್ಷದ ಬಾಲಕ ಮೃತಪಟ್ಟಿದ್ದು, 30ಕ್ಕೂ ಹೆಚ್ಚು ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದಾರೆ. ಇದು ಜಿಲ್ಲೆಯಲ್ಲಿ ಕುಲುಷಿತ ನೀರು ಕುಡಿದ ಪರಿಣಾಮ ಸಾವನಪ್ಪುತ್ತಿರುವವ ಪಟ್ಟಿಗೆ ಮತ್ತೊಂದು ಸೇರ್ಪಡೆಯಾಗಿದ್ದು, ಈ ದುರಂತಗಳಿಗೆ ಕೊನೆ ಇಲ್ಲವೇ ಎಂಬ ಆಕ್ರೋಶಕ್ಕೆ ಕಾರಣವಾಗಿದೆ.
ರೇಕಲಮರಡಿ ಗ್ರಾಮದಲ್ಲಿರುವ ಓವರ್ಹೆಡ್ ಟ್ಯಾಂಕ್ ಅನ್ನು ಹಲವು ವರ್ಷಗಳಿಂದ ಸ್ವಚ್ಚಗೊಳಿಸಿಲ್ಲ. ಅದೇ ಟ್ಯಾಂಕ್ನಿಂದ ಗ್ರಾಮಕ್ಕೆ ಕುಡಿಯುವ ನೀರು ಪೂರೈಸಲಾಗುತ್ತಿದೆ. ಟ್ಯಾಂಕ್ ಸ್ವಚ್ಛಗೊಳಿಸದ ಕಾರಣ, ನೀರು ಕಲುಷಿತಗೊಂಡಿದ್ದು, ಆ ನೀರು ಕುಡಿದರು ಅಸ್ವಸ್ಥರಾಗಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಅಸ್ವಸ್ಥರಾದವರಲ್ಲಿ 11 ಮಂದಿಯನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಬಾಲಕ ಹನುಮಂತ ಈರಪ್ಪ ಮೃತಪಟ್ಟಿದ್ದಾನೆ. ಉಳಿದವರನ್ನು ಅರಕೇರಾ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ದೇವದುರ್ಗ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಳೆದ ಕೆಲವು ದಿನಗಳಿಂದ ಓವರ್ಹೆಡ್ ಟ್ಯಾಂಕ್ ಅರ್ಧದಷ್ಟು ಮಾತ್ರ ತುಂಬುತ್ತಿದೆ. ಗ್ರಾಮಕ್ಕೆ ಡೆಡ್ ಸ್ಟೋರೇಜ್ ನೀರು ಪೂರೈಕೆಯಾಗುತ್ತಿದೆ. ಹೀಗಾಗಿ, ಘಟನೆ ಸಂಭವಿಸಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಟ್ಯಾಂಕ್ ಅನ್ನು ಸ್ವಚ್ಚಗೊಳಿಸದ ಗ್ರಾಮ ಪಂಚಾಯತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷದ ಜೂನ್ ತಿಂಗಳಿನಲ್ಲಿ ರಾಯಚೂರಿನಲ್ಲಿ ಕಲುಷಿತ ನೀರು ಸೇವಿಸಿ ಮಲ್ಲಮ್ಮ, ಅಬ್ದುಲ್ ಗಫಾರ್ ಮತ್ತು ಮೊಹಮದ್ ನೂರ್ ಎಂಬ ಮೂವರು ಸಾವನ್ನಪ್ಪಿದ್ದರು. ಹಲವು ಮಂದಿ ಮೂತ್ರಪಿಂಡದ ಸಮಸ್ಯೆ ಸೇರಿದಂತೆ ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಗರಸಭೆಯ ನಿರ್ಲಕ್ಷಕ್ಕೆ ರಾಯಚೂರು ನಾಗರಿಕ ವೇದಿಕೆಯು ರಾಯಚೂರು ಬಂದ್ ನಡೆಸಿತ್ತು.
ರಾಯಚೂರು ನಗರಕ್ಕೆ ಕುಡಿಯುವ ನೀರಿನ ಸರಬರಾಜು ಮಾಡುವ ರಾಂಪುರದಲ್ಲಿರುವ ನೀರು ಶುದ್ಧಿಕರಣ ಘಟಕವನ್ನು ಕಳೆದ 16 ವರ್ಷಗಳಿಂದ ಸ್ವಚ್ಛಗೊಳಿಸಲಾಗಿಲ್ಲ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.
2022ರ ಜುಲೈ ತಿಂಗಳಿನಲ್ಲಿ ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಗೋರ್ಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಲ್ಕಂದಿನ್ನಿ ಮತ್ತು ಜುಕೂರ ಗ್ರಾಮಗಳಲ್ಲಿ ಕಲುಷಿತ ನೀರು ಸೇವಿಸಿ ಇದು 8 ಮಂದಿ ಸಾವಿಗೀಡಾಗಿ, ಹಲವರು ಅನಾರೋಗ್ಯಕ್ಕೊಳಗಾಗಿದ್ದರು.
ಆ ಸಂದರ್ಭದಲ್ಲಿ ಮಾತನಾಡಿದ್ದ ಅಂದಿನ ಸಿಎಂ ಬಸವರಾಜ ಬೊಮ್ಮಾಯಿಯವರು “ರಾಯಚೂರಿನ ಎಲ್ಲಾ ವಾರ್ಡ್ಗಳ ನೀರನ್ನು ಪರೀಕ್ಷೆ ಮಾಡಿಸಬೇಕು. ಕುಡಿಯುವ ನೀರಿನ ಸರ್ಟಿಫಿಕೇಷನ್ ಆಗಬೇಕು. ಇದರಲ್ಲಿ ಅಧಿಕಾರಿಗಳ ಲೋಪದೋಷ ಇದೆಯಾ ಎಂಬುದನ್ನು ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತದೆ. ತಪಿತಸ್ಥರು ಕಂಡುಬಂದರೆ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೆವೆ. ದುರಂತದಲ್ಲಿ ಮೃತಪಟ್ಟವರಿಗೆ ಮುಖ್ಯಮಂತ್ರಿ ನಿಧಿಯಿಂದ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲು ನಿರ್ಧಾರಿಸಲಾಗಿದೆ” ಎಂದಿದ್ದರು.
ಕಳೆದ ವರ್ಷದ ಜುಲೈನಲ್ಲಿ ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಗೋನಾಳ ಗ್ರಾಮದಲ್ಲಿ ನಲ್ಲಿ ನೀರಿನಲ್ಲಿ ಬಂದ ಕಲುಷಿತ ನೀರನ್ನು ಸೇವಿಸಿ 11 ವರ್ಷದ ಬಾಲಕಿ ಮೃತಪಟ್ಟು 20 ಕ್ಕೂ ಹೆಚ್ಚು ಜನರು ವಾಂತಿ, ಭೇದಿಯಿಂದ ಅಸ್ವಸ್ಥರಾಗಿದ್ದರು.
ಹೋರಾಟಗಾರರಾದ ರಜಾಕ್ ಉಸ್ತಾದ್ರವರು ಈ ಕುರಿತು ನಾನುಗೌರಿ.ಕಾಂನೊಂದಿಗೆ ಮಾತನಾಡಿ, “ಈ ರೀತಿಯಾಗಿ ಪದೇ ಪದೇ ಕಲುಷಿತ ನೀರಿನಿಂದಾಗಿ ಸಾವಿನ ಪ್ರಕರಣಗಳು ಹೆಚ್ಚುತ್ತಲೇ ಇದ್ದರೂ ಸ್ಥಳೀಯಾಡಳಿತ ಮತ್ತು ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ಜಿಲ್ಲಾ ಪಂಚಾಯತ್ ಸಿಇಓರವರು ನೀರು ಸರಬರಾಜು ಇಲಾಖೆ ಇಂಜಿನಿಯರ್ಗಳ ಮೇಲೆ ಕ್ರಮ ತೆಗೆದುಕೊಳ್ಳುವ ಬದಲು ಪಿಡಿಒ ಒಬ್ಬರನ್ನು ಅಮಾನತು ಮಾಡಿದರೆ ಸಮಸ್ಯೆ ಬಗೆಹರಿಯುವುದಿಲ್ಲ. ಇಡೀ ಅಧಿಕಾರಿಗಳಿಗೆ ಚುರುಕು ಮುಟ್ಟಿಸಬೇಕು. ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳು ಈ ಕುರಿತು ಎಚ್ಚೆತ್ತುಕೊಳ್ಳುವಂತೆ ಮಾಡಬೇಕು” ಎಂದರು.
ಎಲ್ಲಾ ಇಲಾಖೆಯ ಅಧಿಕಾರಿಗಳು ಜಡ್ಡುಗಟ್ಟಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಅವರೊಂದಿಗೆ ಸಭೆ ನಡೆಸಿದರೆ ಯಾವುದೇ ಪ್ರಯೋಜನವಾಗುವುದಿಲ್ಲ. ನೇರವಾಗಿ ಜಿಲ್ಲಾ ಮಟ್ಟದಲ್ಲಿ ಜನರ ನಡುವೆಯೇ ಸಭೆ ನಡೆಸಿ ಸಮಸ್ಯೆಗಳನ್ನು ಆಲಿಸಬೇಕು. ಸಮರ್ಪಕವಾಗಿ ಕೆಲಸ ಮಾಡುವಂತೆ ಎಚ್ಚರಿಕೆ ನೀಡಬೇಕು. ಅಲ್ಲದೇ ಸ್ಥಳೀಯ ಆಸ್ಪತ್ರೆಗಳನ್ನು ಸಮರ್ಪಕವಾಗಿಡಬೇಕು. ಈ ರೀತಿಯಾಗಿ ಇಂತಹ ಘಟನೆಗಳು ನಡೆಯದಂತೆ ಉಳಿದವರೆಲ್ಲರೂ ಎಚ್ಚೆತ್ತುಕೊಳ್ಳಬೇಕು ಎಂದರು.
ಕನಿಷ್ಟ ವಾಟರ್ ಟ್ಯಾಂಕ್ಗಳನ್ನು ಆಗಾಗ್ಗೆ ಶುದ್ದೀಕರಣ ಮಾಡಲು ಮುಂದಾಗದಿರುವುದು ದೊಡ್ಡ ದುರಂತಗಳಿಗೆ ಎಡೆ ಮಾಡಿಕೊಡುತ್ತಿವೆ. ತಮ್ಮ ತಪ್ಪಿಲ್ಲದ ಮುಗ್ದ ಜೀವಗಳು ಬಲಿಯಾಗುತ್ತಿವೆ. ಈ ಕೂಡಲೇ ಸರ್ಕಾರ ಎಚೆತ್ತುಕೊಂಡು ಸ್ಥಳೀಯಾಡಳಿತಗಳಿಗೆ ಸ್ಪಷ್ಟ ಸೂಚನೆ ನೀಡಬೇಕಾಗಿದೆ. ಆ ಮೂಲಕ ಇಂತಹ ಘಟನೆಗಳು ಮತ್ತೆ ಜರುಗದಂತೆ ತಡೆಯಬೇಕಿದೆ.
ಇದನ್ನೂ ಓದಿ: ರಾಯಚೂರು: ಕಲುಷಿತ ನೀರು ಸೇವಿಸಿ ಮೂವರ ಸಾವು ಪ್ರಕರಣ, ತನಿಖೆಗೆ ಆದೇಶ