ಏಪ್ರಿಲ್ 1ರಿಂದ 30ರವರೆಗೆ ಹರಿದ್ವಾರದಲ್ಲಿ ನಡೆಯುವ ಕುಂಭಮೇಳದಲ್ಲಿ ಭಾಗವಹಿಸುವ ಭಕ್ತಾದಿಗಳಿಗೆ ಕೊರೊನಾ ನೆಗೆಟಿವ್ ವರದಿ ಕಡ್ಡಾಯವಲ್ಲ ಎಂದು ಉತ್ತರಾಖಂಡ ಸಿಎಂ ತೀರಥ್ ಸಿಂಗ್ ರಾವತ್ ಹೇಳಿದ್ದಾರೆ.
ಉತ್ತರಾಖಂಡದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ತೀರಥ್ ಸಿಂಗ್ ರಾವತ್, ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ, “ತ್ರಿವೇಂದ್ರ ಸಿಂಗ್ ರಾವತ್ ಸರ್ಕಾರ ಎಸ್ಓಪಿ ಬಿಡುಗಡೆ ಮಾಡಿ, ಎಲ್ಲ ಯಾತ್ರಿಗಳಿಗೆ ಆರ್ಟಿ-ಪಿಸಿಆರ್ ಪರೀಕ್ಷಾ ವರದಿ ಕಡ್ಡಾಯ ಎಂದು ಹೇಳಿತ್ತು. ಆದರೆ ಕೊರೊನಾ ನೆಗೆಟಿವ್ ವರದಿಯ ಅಗತ್ಯತೆಯನ್ನು ತೆಗೆದುಹಾಕುವ ನಿರ್ಧಾರ ಕೈಗೊಂಡಿದ್ದೇವೆ” ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ನನಗೆ ರಕ್ಷಣೆ ಕೊಡಿ ಎಂದ ಯುವತಿ – ವೀಡಿಯೋ…
“ಕುಂಭಮೇಳದಲ್ಲಿ ಭಾಗವಹಿಸಲು ಯೋಚಿಸುತ್ತಿರುವ ಭಕ್ತಾದಿಗಳ ಮನಸ್ಸಿನಲ್ಲಿ ಕೆಲವು ಸಂದೇಹಗಳಿದ್ದು, ಇವುಗಳನ್ನು ನಿವಾರಿಸುವ ನಿಟ್ಟಿನಲ್ಲಿ ಈ ಕ್ರಮ ಅನಿವಾರ್ಯ” ಎಂದು ಅವರು ಹೇಳಿದರು.
“ಕುಂಭಮೇಳ ನಡೆಯುವುದು 12 ವರ್ಷಗಳಿಗೊಮ್ಮೆ. ಈ ಹಬ್ಬದ ಅನುಭವ ಆಸ್ವಾದಿಸುವ ಅವಕಾಶವನ್ನು ಜನತೆಗೆ ತಪ್ಪಿಸಲಾಗದು. ಲಕ್ಷಾಂತರ ಮಂದಿ ಕುಂಭಮೇಳಕ್ಕೆ ಆಗಮಿಸುವುದರಿಂದ ಆರ್ಟಿ-ಪಿಸಿಆರ್ ಪರೀಕ್ಷೆ ನಡೆಸುವುದು ಅಥವಾ ನೆಗೆಟಿವ್ ವರದಿಗಳ ಪರಿಶೀಲನೆ ಮಾಡುವುದು ಅಸಾಧ್ಯವಾದ ಕೆಲಸ” ಎಂದು ಹೇಳಿದರು.
“ಸಂತರ, ಭಕ್ತರ, ವ್ಯಾಪಾರಿಗಳ ಹಾಗೂ ಸ್ಥಳೀಯ ಸಂತೋಷವನ್ನು ನಾವು ಬಯಸುತ್ತೇವೆ. ಕೊರೊನಾ ನಿಯಮಾವಳಿಗಳನ್ನು ಪಾಲಿಸಲಾಗುವುದು. ಕುಂಭಮೇಳದಲ್ಲಿ ಅಗತ್ಯ ಆರೋಗ್ಯ ಮೂಲಸೌಕರ್ಯ ಕಲ್ಪಿಸುತ್ತೇವೆ ಎಂದು ಭರವಸೆ ನೀಡುತ್ತೇವೆ” ಎಂದು ತಿಳಿಸಿದರು.
ಭಾರತದಲ್ಲಿ ಕೊರೊನಾ ಸಾಂಕ್ರಾಮಿಕ ರೋಗವು ಎರಡನೇ ಅಲೆಯನ್ನು ಎದುರಿಸಲು ಸಿದ್ಧವಾಗುತ್ತಿದೆ ಎಂಬ ಸೂಚನೆಗಳನ್ನು ತಜ್ಞರು ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿ ಉತ್ತರಾಖಂಡ ತೆಗೆದುಕೊಂಡಿರುವ ಈ ನಿರ್ಧಾರಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಇದನ್ನೂ ಓದಿ: ಬಿಜೆಪಿ ಆಡಳಿತದಲ್ಲಿ ಸದ್ದು ಮಾಡುವುದು ಎರಡೇ; ಒಂದು ಲಂಚ, ಮತ್ತೊಂದು ಮಂಚ – ಕಾಂಗ್ರೆಸ್…