ಗ್ರೇಟಾ ಥನ್ಬರ್ಗ್ ರೈತ ಹೋರಾಟದ ಕುರಿತು ಹಂಚಿಕೊಂಡಿರುವ ಟೂಲ್ಕಿಟ್ ಪ್ರಕರಣದಲ್ಲಿ ಪರಿಸರ ಹೋರಾಟಗಾರ್ತಿ ದಿಶಾ ರವಿಯವರನ್ನು ದೆಹಲಿ ಪೊಲೀಸರು ಬಂಧಿಸಿದ್ದು, 5 ದಿನ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಇದನ್ನು ಖಂಡಿಸಿ ದೇಶದಾದ್ಯಂತ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಕೆಲವು ಬಿಜೆಪಿ ಬೆಂಬಲಿಗರೂ ಸಹ ದಿಶಾ ರವಿಯ ವಿರುದ್ಧ ತೀಕ್ಷ್ಣವಾದ ಟ್ವೀಟ್ಗಳನ್ನು ಮಾಡುತ್ತಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಆಲ್ಟ್ ನ್ಯೂಸ್ನ ಪ್ರಮುಖರಾದ ಮೊಹಮ್ಮದ್ ಜುಬೈರ್, “ದಿಶಾಳ ತಂದೆ-ತಾಯಿ ನರೇಂದ್ರ ಮೋದಿಯ ಬೆಂಬಲಿಗರು. ಯೋಚಿಸಿ, ಹಲವು ಬಿಜೆಪಿಯ ಸಚಿವರುಗಳು ಮತ್ತು ಬಿಜೆಪಿಯ ಬೆಂಬಲಿಗರು ದಿಶಾಳನ್ನು ಕೊಲ್ಲಬೇಕು ಎಂದು ಟ್ವೀಟ್ ಮಾಡುತ್ತಿರುವುದನ್ನು ನೋಡಿದಾಗ ದಿಶಾಳ ಪೋಷಕರ ಮನಸ್ಸಿನಲ್ಲಿ ಏನು ನಡೆಯುತ್ತಿರಬಹುದು?” ಎಂದು ಬಿಜೆಪಿಯ ಸಚಿವರೊಬ್ಬರು ಮಾಡಿರುವ ಟ್ವೀಟ್ಅನ್ನು ಹಂಚಿಕೊಂಡಿದ್ದಾರೆ.
Disha's Parents are supporters of Narendra Modi. Imagine what's going on in their mind when they see tweets by Ministers and several BJP officer bearers demanding #DishaRavi to be Killed. https://t.co/7YWekjimXU
— Mohammed Zubair (@zoo_bear) February 15, 2021
ಇದನ್ನೂ ಓದಿ: ರೈತರ ಮೊಮ್ಮಗಳನ್ನು ಬಂಧಿಸಿದರೆ ಹೋರಾಟ ದುರ್ಬಲಗೊಳ್ಳುವುದಿಲ್ಲ: ದಿಶಾ ರವಿಗೆ ಜಾಗತಿಕ ಬೆಂಬಲ
ಬಿಜೆಪಿ ಸಚಿವರು ತಮ್ಮ ಟ್ವೀಟ್ ನಲ್ಲಿ, “ದೇಶ ವಿರೋಧಿ ಬೀಜವನ್ನು ನಾಶಮಾಡಬೇಕು. ಅದು ದಿಶಾ ರವಿಯಾಗಲಿ ಅಥವಾ ಬೇರೆಯವರಾಗಲಿ” ಎಂದು ಬರೆದುಕೊಂಡಿದ್ದಾರೆ.
ಬೆಂಗಳೂರು ಸೆಂಟ್ರಲ್ನ ಸಂಸದರಾದ ಪಿ ಸಿ ಮೋಹನ್ ಟ್ವೀಟ್ ಮಾಡಿ, “ಬುರಾನ್ ವಾನಿಗೆ 21 ವರ್ಷ, ಅಜ್ಮಲ್ ಕಸಬ್ಗೆ 21 ವರ್ಷ. ವಯಸ್ಸು ಕೇವಲ ಸಂಖ್ಯೆಯಷ್ಟೆ. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಕಾನೂನು ತನ್ನ ಕ್ರಮ ತೆಗೆದುಕೊಳ್ಳುತ್ತದೆ. ಅಪರಾಧ ಅಪರಾಧವೆ” ಎಂದು ದಿಶಾಳನ್ನು ಅಜ್ಮಲ್ ಕಸಬ್ಗೆ ಹೋಲಿಸಿ ಟ್ವೀಟ್ ಮಾಡಿದ್ದಾರೆ.
Burhan Wani was a 21-year-old.
Ajmal Kasab was a 21-year-old.
Age is just a number!
No one is above the law.
Law will take its own course.
A Crime is a crime is a crime is a crime.#DishaRavi pic.twitter.com/m6eRwAnMuf
— P C Mohan (@PCMohanMP) February 14, 2021
ಹೀಗೆ ದಿಶಾ ರವಿಯನ್ನು ಗುರಿಯಾಗಿಸಿಕೊಂಡು ಬಿಜೆಪಿ ಬೆಂಬಲಿಗರು ಮತ್ತು ಕೆಲವು ಸಚಿವರು ಸೇರಿದಂತೆ ಕೆಲವರು ಟೀಕೆ ಮಾಡುತ್ತಿದ್ದಾರೆ. ಆದರೆ ಇದನ್ನು ವಿಭಿನ್ನ ದೃಷ್ಟಿಕೋನದಿಂದ ಆಲೋಚಿಸಿರುವ ಜುಬೈರ್ ಎತ್ತಿರುವ ಪ್ರಶ್ನೆ ಬಹುಮುಖ್ಯವಾದದ್ದು.
ಆದರೆ ಇನ್ನೂ ನೂರಾರು ಜನರು ದಿಶಾ ರವಿಯವರಿಗೆ ಬೆಂಬಲ ಸೂಚಿಸಿದ್ದಾರೆ. ರೈತ ಹೋರಾಟವನ್ನು ದುರ್ಬಲಗೊಳಿಸುವ ಸಲುವಾಗಿ ಕೇಂದ್ರದ ಬಿಜೆಪಿ ಸರ್ಕಾರ ಇಂತಹ ನೀಚ ಕೆಲಸಗಳನ್ನು ಮಾಡುತ್ತಿದೆ ಎಂದು ಹಲವರು ಆರೋಪಿಸಿದ್ದಾರೆ.
ದಿಶಾ ರವಿ ಅವರು ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಾರೆ. ಫ್ರೈಡೇಸ್ ಫಾರ್ ಫ್ಯೂಚರ್ ಇಂಡಿಯಾದ ಸಂಸ್ಥಾಪಕರಲ್ಲಿ ಒಬ್ಬರಾದ ದಿಶಾ ರವಿ ಅವರು ವಿವಾದಿತ ಟೂಲ್ಕಿಟ್ ಅನ್ನು ಸಂಪಾದಿಸಿ ಹಂಚಿಕೊಂಡಿದ್ದಾರೆ ಎಂದು ದೆಹಲಿ ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ಇದನ್ನೂ ಓದಿ: ನನ್ನನ್ನು ಹೆದರಿಸೋಕೆ ನೋಟಿಸ್ ನೀಡಿದ್ದಾರೆ, ಫೆ. 21ರೊಳಗೆ ಹಿಂಪಡೆಯುತ್ತಾರಂತೆ: ಯತ್ನಾಳ್
ಜನವರಿ 26 ರ ಗಣರಾಜ್ಯೋತ್ಸವದಂದು ರೈತರ ಟ್ರಾಕ್ಟರ್ ರ್ಯಾಲಿಯ ಸಂದರ್ಭದಲ್ಲಿ ನಡೆದ ಅಹಿತಕರ ಘಟನೆಯಲ್ಲಿ ಈ ಟೂಲ್ಕಿಟ್ನ ಪಾತ್ರವಿದೆ ಎಂದು ಪೊಲೀಸರು ಆಪಾದಿಸಿದ್ದಾರೆ. ವಿಶೇಷ ಸಿಪಿ (ಅಪರಾಧ ಶಾಖೆ) ಪ್ರವೀರ್ ರಂಜನ್, ಪ್ರಾಥಮಿಕ ವಿಚಾರಣೆಯಲ್ಲಿ ವಿವಾದಿತ ಟೂಲ್ಕಿಟ್ ಅನ್ನು “ಖಲಿಸ್ತಾನಿ ಪರ ಸಂಸ್ಥೆ” ಪೊಯೆಟಿಕ್ ಜಸ್ಟೀಸ್ ಫೌಂಡೇಶನ್ ರಚಿಸಿದೆ ಎಂದು ಸೂಚಿಸಿದೆ ಎಂದು ಹೇಳಿದ್ದಾರೆ.
ಫ್ರೈಡೆ ಫಾರ್ ಫ್ಯೂಚರ್ ಎಂಬುವುದು ಅಂತಾರಾಷ್ಟ್ರೀಯ ಚಳವಳಿಯಾಗಿದ್ದು, ಇದರಲ್ಲಿ ವಿದ್ಯಾರ್ಥಿಗಳು ಶುಕ್ರವಾರದಂದು ತರಗತಿಯನ್ನು ಬಹಿಷ್ಕರಿಸಿ ಹವಾಮಾನ ಬದಲಾವಣೆಗಳ ವಿರುದ್ಧ ರಾಜಕಾರಣಿಗಳು ಮಾತನಾಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಾರೆ. ಗ್ರೇಟಾ ಥನ್ಬರ್ಗ್ ಸ್ವೀಡಿಷ್ ಸಂಸತ್ತಿನ ಹೊರಗೆ ಪ್ರತಿಭಟಿಸಿದ ನಂತರ ಇದು ವ್ಯಾಪಕ ಜನಪ್ರಿಯತೆಯನ್ನು ಗಳಿಸಿತು.
ಫೆಬ್ರವರಿ 4 ರಂದು ವಿವಾದಿತ ಟೂಲ್ಕಿಟ್ ತಯಾರಿಸಿದವರ ವಿರುದ್ದ ದೆಹಲಿ ಸೈಬರ್-ಕ್ರೈಮ್ ಸೆಲ್ ಪೊಲೀಸರು, ದೇಶದ್ರೋಹ, ಕ್ರಿಮಿನಲ್ ಪಿತೂರಿ ಮತ್ತು ದ್ವೇಷವನ್ನು ಉತ್ತೇಜಿಸುವ ಆರೋಪದ ಮೇಲೆ ಎಫ್ಐಆರ್ ದಾಖಲಿಸಿದ್ದರು.
ಇದನ್ನೂ ಓದಿ: ದೇಶ ಭಕ್ತರು ಯಾರು? ದೇಶ ದ್ರೋಹಿಗಳು ಯಾರು? – ನಟ ಚೇತನ್ ಹೇಳುತ್ತಾರೆ ಕೇಳಿ