ಸುಪ್ರೀಂಕೋರ್ಟ್ ವಕೀಲ ಪ್ರಶಾಂತ್ ಭೂಷಣ್ ಅವರ ಮೇಲಿನ ನ್ಯಾಯಾಂಗ ನಿಂದನೆ ಪ್ರಕರಣವನ್ನು ಕೈಬಿಡುವ ಮೂಲಕ ಪ್ರಜಾತಾಂತ್ರಿಕ ಮೌಲ್ಯಗಳು ಮತ್ತು ನ್ಯಾಯಾಂಗದ ಘನತೆಯನ್ನು ಎತ್ತಿಹಿಡಿಯಬೇಕು ಎಂದು ಒತ್ತಾಯಿಸಿ ತುಮಕೂರಿನಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಜನಬೆಂಬಲ ಸಾರ್ವಜನಿಕ ಸಭೆಯನ್ನು ನಡೆಸಲಾಯಿತು.
ತುಮಕೂರು ಜಿಲ್ಲಾಧಿಕಾರಿ ಕಚೇರಿ ಎದುರು ಸಮಾವೇಶಗೊಂಡ ರೈತ, ದಲಿತ, ಕಾರ್ಮಿಕ, ವಿದ್ಯಾರ್ಥಿ ಹೀಗೆ ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು, ಪ್ರಗತಿಪರ ಚಿಂತರಕು ಮತ್ತು ಸಾಹಿತಿಗಳು, ಸುಪ್ರೀಂ ಕೋರ್ಟ್ ಹಠಕ್ಕೆ ಬಿದ್ದಂತೆ ಎರಡು ಟ್ವೀಟ್ ಗಳನ್ನೇ ನೆಪ ಮಾಡಿಕೊಂಡು ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿರುವುದು ಖಂಡನೀಯ ಎಂದಿದ್ದಾರೆ.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪರಿಸರವಾದಿ, ಹೋರಾಟಗಾರ ಸಿ.ಯತಿರಾಜು, ‘ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿಗಳು ಬಿಜೆಪಿ ಮುಖಂಡನ ದುಬಾರಿ ಬೆಲೆಯ ಡೆವಿಡ್ಸನ್ ಬೈಕ್ ಮೇಲೆ ಕುಳಿತು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಪ್ರಕಟಿಸಿರುವ ಬಗ್ಗೆ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಮುಕ್ತ ಅಭಿಪ್ರಾಯ ವ್ಯಕ್ತಪಡಿಸಿದರು. ನಂತರ ಮಹೇಕ್ ಮಹೇಶ್ವರಿ ಎಂಬ ವಕೀಲರು ಅರ್ಜಿ ಸಲ್ಲಿಸಿದ ಮೇಲೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದೆ’ ಇದನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ದೇಶದಲ್ಲಿ ಕೊರೊನಾ ನೆಪಮಾಡಿಕೊಂಡು ಕಾರ್ಮಿಕ ಕಾಯ್ದೆಗಳನ್ನು ಸಡಿಲಗೊಳಿಸಲಾಗಿದೆ. ಇದರಿಂದ ಕಾರ್ಮಿಕರು ತಮ್ಮ ಹಕ್ಕುಗಳನ್ನು ಕಳೆದುಕೊಂಡಿದ್ದಾರೆ. ಎಪಿಎಂಸಿ, ಭೂಸುಧಾರಣಾ ಕಾಯ್ದೆಗೂ ತಿದ್ದುಪಡಿ ತಂದು ರೈತರು ಮತ್ತು ಕೃಷಿ ಕ್ಷೇತ್ರವನ್ನು ಸಂಕಷ್ಟಕ್ಕೀಡು ಮಾಡಲಾಗುತ್ತಿದೆ. ಇದೊಂದು ರೀತಿಯ ಸಾಂಕ್ರಾಮಿಕ ರೋಗವಾಗಿದೆ. ಇದೇ ಸಾಂಕ್ರಾಮಿಕ ರೋಗ ನ್ಯಾಯಾಂಗಕ್ಕೂ ಹಬ್ಬುತ್ತಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ನ್ಯಾಯಮೂರ್ತಿಗಳು ಕೂಡ ವಿಮರ್ಶೆಗೆ ಅತೀತರಲ್ಲ. ಪ್ರಜಾಪ್ರಭುತ್ವದಲ್ಲಿ ಟೀಕೆಗಳನ್ನು ಸಹಿಸಿಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಭೂಷಣ್ ಪ್ರಕರಣ: ರಚನಾತ್ಮಕ ಟೀಕೆಯೊಂದನ್ನು ಸಹಿಸಲಾಗದಷ್ಟು ಸಂಕುಚಿತವೇ ಸುಪ್ರೀಮ್ ಭುಜಗಳು?
ಜನಸಂಗ್ರಾಮ ಪರಿಷತ್ ಮುಖಂಡ ಪಂಡಿತ್ ಜವಾಹರ್ ‘ಸುಪ್ರೀಂಕೋರ್ಟ್ ನಲ್ಲಿ ಸಮಸ್ಯೆಗಳು ಪರಿಹರಿಸಲು ಕ್ರಮ ವಹಿಸುವಂತೆ ಅರ್ಜಿಗಳನ್ನು ಸಲ್ಲಿಸಿದರೆ, ಸಮಸ್ಯೆ ಏನೆಂದೂ ಕೇಳುವ ಗೋಜಿಗೆ ಹೋಗುತ್ತಿಲ್ಲ. ಹಲವು ಪ್ರಕರಣಗಳಲ್ಲಿ ಪಿಐಎಲ್ ಗಳನ್ನು ತಿರಸ್ಕರಿಸಲಾಗಿದೆ. ಹಾಗಾದರೆ ನಾವು ನ್ಯಾಯಾಂಗದ ಮೇಲೆ ನಂಬಿಕೆ ಇಟ್ಟುಕೊಳ್ಳುವುದು ಹೇಗೆ ಎಂದು ಪ್ರಶ್ನಿಸಿದರು. ಈಗಿನ ಸರ್ಕಾರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ದಮನ ಮಾಡುತ್ತಿದೆ. ನ್ಯಾಯಾಂಗವೂ ಅದೇ ಹಾದಿಯಲ್ಲಿ ನಡೆಯುತ್ತಿರುವುದು ಕಳವಳಕಾರಿ ಸಂಗತಿ ಎಂದರು.
ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಮಾತನಾಡಿ ‘ಕೊಲೆಗಡುಕರು, ಬಂಡವಾಳಗಾರರು ನ್ಯಾಯಾಂಗ ನಿಂದನೆ ಮಾಡುತ್ತಲೇ ಇದ್ದಾರೆ. ಇಂತಹ ಪ್ರಕರಣಗಳಲ್ಲಿ ಗೌರವಾನ್ವಿತ ನ್ಯಾಯಾಲಯ ಕರ್ತವ್ಯವನ್ನು ಮರೆತಿದೆ. ಗುತ್ತಿಗೆ ಕಾರ್ಮಿಕರಿಗೆ ಸಮಾನ ವೇತನ ನೀಡಬೇಕೆಂದು ತೀರ್ಪು ನೀಡಿದೆ. ಪಾಲನೆಯಾಗುತ್ತಿಲ್ಲ. ಸುಪ್ರೀಂಕೋರ್ಟ್ ತೀರ್ಪುಗಳ ವಿರುದ್ಧವಾಗಿ ನಡೆದುಕೊಳ್ಳುವ ಬಂಡವಾಳಗಾರರು ಮತ್ತು ಆಡಳಿತಗಾರರ ಪರವಾಗಿ ನ್ಯಾಯಾಂಗ ಕೆಲಸ ಮಾಡುವುದು ಸರಿಯಲ್ಲ’ ಎಂದು ಹೇಳಿದರು.
ಸಮುದಾಯದ ಜಿಲ್ಲಾ ಕಾರ್ಯದರ್ಶಿ ಕೆ.ಈ.ಸಿದ್ದಯ್ಯ ಮಾತನಾಡಿ ಸರ್ಕಾರಿ ನೌಕರು, ನ್ಯಾಯಾಧೀಶರು, ಪೊಲೀಸರಿಗೆ ನೀತಿ ಸಂಹಿತೆ ಇರುತ್ತದೆ. ಅದರಂತೆ ನ್ಯಾಯಾಧೀಶರು ರಾಜಕೀಯ, ಸಾಮಾಜಿಕ ಮತ್ತು ಹಣಕಾಸು ಸಂಬಂಧಿತ ವಿಷಯಗಳ ಜೊತೆ ಹೆಚ್ಚು ಬೆರೆಯುವ ಹಾಗಿಲ್ಲ. ಅದರಂತೆ ಮುಖ್ಯನ್ಯಾಯಮೂರ್ತಿಗಳು ಬಿಜೆಪಿ ಮುಖಂಡನ ಮಾಲಿಕತ್ವದ ಬೈಕ್ ಮೇಲೆ ಕುಳಿತಿರುವುದು ನ್ಯಾಯದಾನ ಮಾಡುವ ಸಂದರ್ಭದಲ್ಲಿ ಪಕ್ಷಪಾತಕ್ಕೆ ಅವಕಾಶವಾಗುತ್ತದೆ. ನೀತಿ ಸಂಹಿತೆಯನ್ನು ಉಲ್ಲಂಘಿಸಿದಂತಾಗಿದೆ ಎಂದರು.
ಪ್ರಾಂತ ರೈತ ಸಂಘದ ಸಂಚಾಲಕ ಬಿ.ಉಮೇಶ್, ಎಐಟಿಯುಸಿ ಪ್ರಧಾನಕಾರ್ಯದರ್ಶಿ ಗಿರೀಶ್, ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷ ಎ.ನರಸಿಂಹಮೂರ್ತಿ, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು, ಪಿಕೆಎಸ್ ಜಿಲ್ಲಾ ಸಂಚಾಲಕ ಎಸ್.ಎನ್.ಸ್ವಾಮಿ, ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ, ಎಐಯುಟಿಯುಸಿ ಮಂಜುಳ, ನಾವು ಭಾರತೀಯರು ಸಂಘಟನೆಯ ತಾಜುದ್ದೀನ್ ಷರೀಫ್ ಮಾತನಾಡಿ ಪ್ರಶಾಂತ್ ಭೂಷಣ್ ಮೇಲಿನ ನ್ಯಾಯಾಂಗ ನಿಂದನೆ ಪ್ರಕರಣ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಸಭೆಯಲ್ಲಿ ಪ್ರಾಂತ ರೈತ ಸಂಘದ ಸಂಚಾಲಕ ಸಿಅಜ್ಜಪ್ಪ, ಎಐಎಂಎಸ್ಎಸ್ ಜಿಲ್ಲಾಧ್ಯಕ್ಷೆ ಕಲ್ಯಾಣಿ, ಎಐಡಿಎಸ್ಓ ಅಶ್ವಿನಿ, ಆವಿಷ್ಕಾರದ ಮುತ್ತುರಾಜು, ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯ ಅರುಣ್, ರೈತ ಮುಖಂಡ ರವೀಶ್, ಸಾಹಿತಿ ಮಿರ್ಜಾ ಬಷೀರ್, ಕಾರ್ಮಿಕ ಮುಖಂಡ ಸಂದೀಪ್ಮೊ, ನವೀನ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದನ್ನೂ ಓದಿ: ನ್ಯಾಯಾಂಗ ನಿಂದನೆ: ಸ್ವರ ಭಾಸ್ಕರ್ ವಿರುದ್ಧದ ವಿಚಾರಣೆ ಅರ್ಜಿ ತಿರಸ್ಕಾರ!