Homeಕರ್ನಾಟಕಡೀಕೆಗಾಗಿ ಒಕ್ಕಲಿಗರು ಒಟ್ಟಾದದ್ದು ಲಿಂಗಾಯತರ ಯಡ್ಯೂರಪ್ಪನವರಿಗೆ ರಿಲೀಫ್ ಕೊಡುವುದೇ?

ಡೀಕೆಗಾಗಿ ಒಕ್ಕಲಿಗರು ಒಟ್ಟಾದದ್ದು ಲಿಂಗಾಯತರ ಯಡ್ಯೂರಪ್ಪನವರಿಗೆ ರಿಲೀಫ್ ಕೊಡುವುದೇ?

- Advertisement -
- Advertisement -

ಬಂಧನದಲ್ಲಿರುವ ಡಿಕೆ ಶಿವಕುಮಾರ್ ಅವರಿಗಾಗಿ ಒಕ್ಕಲಿಗರು ಒಗ್ಗೂಡಿದ್ದಾರೆ! ಒಗ್ಗೂಡಿ ರೊಚ್ಚಿಗೆದ್ದಿದ್ದಾರೆ! ಸೆಪ್ಟೆಂಬರ್ 11ರಂದು ಬಸವನಗುಡಿಯ ನ್ಯಾಶನಲ್ ಕಾಲೇಜಿನಿಂದ ಫ್ರೀಡಂ ಪಾರ್ಕಿನವರೆಗೆ ಕಿಕ್ಕಿರಿದ ಒಕ್ಕಲಿಗ ಜನಸ್ತೋಮ ಕೊಡಬೇಕಾದ ಸಂದೇಶವನ್ನು, ತಲುಪಿಸಬೇಕಾದವರಿಗೆ ಪರಿಣಾಮಕಾರಿಯಾಗಿಯೇ ತಲುಪಿಸಿದ್ದಾರೆ. ರಾಜಕೀಯ ವೈಷಮ್ಯ ಮನಸ್ಸಲ್ಲಿಟ್ಟುಕೊಂಡು ನಮ್ಮ ಜಾತಿಯ ನಾಯಕರುಗಳ ತಂಟೆಗೆ ಬಂದರೆ ಹುಶಾರು ಅನ್ನೋ ಮೆಸೇಜನ್ನು ಸೀದಾ ದಿಲ್ಲಿಗೆ ತಲುಪಿಸುವುದು ಪ್ರತಿಭಟನೆಯ ಉದ್ದೇಶವಾಗಿತ್ತು. ಆ ಪ್ರತಿಭಟನೆಯ ನಿಜವಾದ ಫಲಾನುಭವಿ ಡಿ.ಕೆ.ಶಿವಕುಮಾರರಿಗಿಂತ ಹೆಚ್ಚಾಗಿ ದೇವೇಗೌಡರ ಫ್ಯಾಮಿಲಿ! ಸಿಎಂ ಆಗಿದ್ದಾಗ ಕುಮಾರಸ್ವಾಮಿಯವರು ಮಾಡಿಕೊಂಡ ಹಲಗೆವಡೇರಳ್ಳಿ ಡಿನೋಟಿಫಿಕೇಷನ್, ಫೋನ್ ಕದ್ದಾಲಿಕೆ, ಐಎಂಎ ಹಗರಣದ ಫೈಲುಗಳನ್ನು ಕೈಲಿಟ್ಟುಕೊಂಡಿರುವ ಕೇಂದ್ರ ಬಿಜೆಪಿ ಸರ್ಕಾರದ ಮುಂದಿನ ಟಾರ್ಗೆಟ್ ದೇವೇಗೌಡರ ಫ್ಯಾಮಿಲಿ ಅನ್ನೋದು ಬಹಳ ಖಚಿತ ಮಾಹಿತಿ. ಅದರಿಂದ ಬಚಾವಾಗುವ ಸಲುವಾಗಿಯೇ ದೇವೇಗೌಡರು ಡಿ.ಕೆ. ಪ್ರಕರಣದ ಮೂಲಕ ಜಾತಿ ಅಸ್ತ್ರವನ್ನು ಗುರಾಣಿಯಾಗಿ ಬಳಸುತ್ತಿದ್ದಾರೆ.

ನಿನ್ನೆ ನಡೆದ ಪ್ರತಿಭಟನೆಯಲ್ಲಿ ಗೌಡರ ಫ್ಯಾಮಿಲಿಯವರು ಅಧಿಕೃತವಾಗಿ ಕಾಣಿಸಿಕೊಳ್ಳದೆ ಹೋದರು ಜೆಡಿಎಸ್ ಕಾರ್ಯಕರ್ತರೇ ದಟ್ಟವಾಗಿ ಜಮಾಯಿಸಿದ್ದರು. ಒಕ್ಕಲಿಗರು ಸಾರಾಸಗಟಾಗಿ ಜೆಡಿಎಸ್ ಪಾಳೆಯದಲ್ಲಿರೋದರಿಂದ ಜಾತಿ ನೆಲೆಗಟ್ಟಿನಲ್ಲಿ ಅವರು ಒಂದುಕಡೆ ಕಲೆತಾಗ ಜೆಡಿಎಸ್ ಕಾರ್ಯಕರ್ತರಾಗಿಯೂ ಕಾಣಿಸಿಕೊಳ್ಳೋದು ಸಹಜ ಅಂತ ಇದನ್ನು ತಳ್ಳಿಹಾಕಲಿಕ್ಕಾಗದು. ಯಾಕೆಂದರೆ ಸ್ವತಃ ಕುಮಾರಸ್ವಾಮಿಯವರೇ “ನನಗೆ ಚನ್ನಪಟ್ಟಣದಲ್ಲಿ ಪೂರ್ವನಿಯೋಜಿತ ಕಾರ್ಯಕ್ರಮ ಇದ್ದುದರಿಂದ ಪ್ರತಿಭಟನೆಗೆ ಹೋಗಲಿಲ್ಲ. ಅಲ್ಲದೇ ನನ್ನನ್ನು ಕರೆದೂ ಇರಲಿಲ್ಲ. ಆದರೂ ನಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರು ಭಾಗಿಯಾಗಿದ್ದರು” ಎಂದು ಅಧಿಕೃತವಾಗಿ ಒಪ್ಪಿಕೊಂಡಿದ್ದಾರೆ.

ಡಿ.ಕೆ.ಶಿವಕುಮಾರ್ ಬಂಧನ ಕಾನೂನು ಪ್ರಕ್ರಿಯೆಗಿಂತ ಹೆಚ್ಚಾಗಿ ಬಿಜೆಪಿಯ ರಾಜಕೀಯ ವೈಷಮ್ಯ ಒಳಗೊಂಡಿರುವಂತೆ ಒಕ್ಕಲಿಗರ ಪ್ರತಿಭಟನೆಯ ಹಿಂದೆಯೂ ದೇವೇಗೌಡರ ರಾಜಕೀಯ ತಂತ್ರಗಾರಿಕೆಯ ಛಾಯೆಯನ್ನು ತಳ್ಳಿ ಹಾಕಲಿಕ್ಕಾಗುವುದಿಲ್ಲ.

ಅದೇನೆ ಇರಲಿ, ಬಿಜೆಪಿ ವರ್ಸಸ್ ಒಕ್ಕಲಿಗರು ಕದನದವು ಪರೋಕ್ಷವಾಗಿ ಯಡಿಯೂರಪ್ಪನವರ ಕೈ ಬಲಪಡಿಸುತ್ತಾ? ಎಂಬ ಲೆಕ್ಕಾಚಾರವೊಂದು ಓಡಾಡುತ್ತಿದೆ. ಈಗಲೂ ಯಡಿಯೂರಪ್ಪ ಲಿಂಗಾಯತರ ಮಾಸ್ ಲೀಡರ್ ಆಗಿ ಉಳಿದುಕೊಂಡಿದ್ದರೂ ಬಿಜೆಪಿಯೊಳಗೆ ಅವರಿಗೆ ಮೊದಲಿದ್ದ ಮಾನ್ಯತೆಗಳು ಸಿಗುತ್ತಿಲ್ಲ. ಈ ಮೊದಲು ದಿವಂಗತ ಅನಂತ್ ಕುಮಾರ್ ಪಕ್ಷದೊಳಗೆ ಯಡಿಯೂರಪ್ಪನವರಿಗೆ ಮಗ್ಗುಲ ಮುಳ್ಳಾಗಿದ್ದರೂ ಯಡಿಯೂರಪ್ಪ ಇಂಥಾ ದೈನೇಸಿ ಸ್ಥಿತಿ ತಲುಪಿರಲಿಲ್ಲ. ಆದರೆ ಯಾವಾಗ ಬಿ.ಎಲ್.ಸಂತೋಷ್ ಕೈ ಮೇಲಾಗುತ್ತಾ ಬಂತೊ ಆಗಿನಿಂದ ಯಡಿಯೂರಪ್ಪ ವಿಪರೀತ ಮುಖಭಂಗ ಅನುಭವಿಸುತ್ತಿದ್ದಾರೆ. ಯಡ್ಯೂರಪ್ಪ ಸಿಎಂ ಆಗುವುದಕ್ಕಿಂತ ಕೆಲ ದಿನಗಳ ಹಿಂದಷ್ಟೇ ಸಂತೋಷರನ್ನು ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಂತಹ ಪ್ರಭಾವಿ ಹುದ್ದೆಗೆ ಆಯ್ಕೆ ಮಾಡಿದ್ದೇ ಸಿಎಂ ಆಗಲಿರುವ ಯಡ್ಯೂರಪ್ಪರನ್ನು ನಿಯಂತ್ರಿಸುವ ಸಲುವಾಗಿ.

ಸಂತೋಷ್ ಎಷ್ಟೇ ಪರಿಣಿತ ತಂತ್ರಗಾರರಾದರು ಜನರನ್ನು ಸೆಳೆಯುವಂತ ಮಾಸ್ ಲೀಡರ್ ಸದ್ಯಕ್ಕಂತು ಅಲ್ಲ. ಯಡಿಯೂರಪ್ಪನವರ ಆ ಸಾಮರ್ಥ್ಯ ರಾಜ್ಯ ಬಿಜೆಪಿಯ ಮತ್ತ್ಯಾವ ನಾಯಕನಿಗೂ ಇಲ್ಲ ಅನ್ನೋದನ್ನು `ಕೆಜೆಪಿ’ ತುಂಬಾ ಹಿಂದೆಯೇ ಸಾಬೀತು ಮಾಡಿದೆ. ಹಾಗಿರುವಾಗ ಯಾವ ಧೈರ್ಯದಲ್ಲಿ ಬಿಜೆಪಿ ಯಡಿಯೂರಪ್ಪನವರನ್ನು ಇಷ್ಟೊಂದು ಹೀನಾಯವಾಗಿ ನಡೆಸಿಕೊಳ್ಳುತ್ತಿದೆ ಅಂತ ನೋಡಲು ಹೋದರೆ ಎರಡು ಕಾರಣಗಳು ಕಾಣುತ್ತವೆ.

ಮೊದಲನೆಯದ್ದು, 2014ರ ನಂತರದಲ್ಲಿ ಬಿಜೆಪಿ ನಾಯಕತ್ವ ಕೇಂದ್ರೀಕರಣಗೊಳ್ಳುತ್ತಿರುವುದು. ಮೋದಿ-ಶಾ ಜೋಡಿಯ ಮುಂದೆ ಯಾವ ಪ್ರಾದೇಶಿಕ ಮುಖಗಳೂ ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. ಇತ್ತೀಚೆಗೆ ನಡೆಯುತ್ತಿರುವ ಯಾವುದೇ ರಾಜ್ಯದ ಚುನಾವಣೆ ಸ್ಥಳೀಯ ಇಶ್ಯೂಗಳಿಗಿಂತ ಹೆಚ್ಚಾಗಿ ರಾಷ್ಟ್ರೀಯ ಚರ್ಚೆಗಳನ್ನೇ ತಮ್ಮ ಸುತ್ತ ಹೆಣೆದುಕೊಳ್ಳುತ್ತಿರೋದು ಮತ್ತು ಮೋದಿ-ಶಾ ಜೋಡಿಯೇ ವೇದಿಕೆಗಳನ್ನು ಆವರಿಸಿಕೊಳ್ಳುತ್ತಿರೋದು ಇದೇ ಕಾರಣಕ್ಕೆ. ಕರ್ನಾಟಕವೂ ಇದಕ್ಕೆ ಹೊರತಲ್ಲ. 2019ರ ಚುನಾವಣಾ ಫಲಿತಾಂಶ ಅದನ್ನು ಅನುಮಾನಕ್ಕೆ ಎಡೆಯಿಲ್ಲದಂತೆ ಸಾಬೀತು ಮಾಡಿದೆ. ಚುನಾವಣೆಗು ಮುನ್ನ ಯಡ್ಯೂರಪ್ಪ ಹೇಳಿದ್ದ 22 ಸೀಟುಗಳ ಲೆಕ್ಕಾಚಾರವನ್ನೂ ಮೀರಿ 25 ಬಿಜೆಪಿ ಸಂಸದರು ಗೆದ್ದದ್ದು ಸ್ವತಃ ಯಡಿಯೂರಪ್ಪನವರಿಗೇ ಒಳಗೊಳಗೇ ಕೀಳರಿಮೆ ಉಂಟುಮಾಡಿರೋದು ಸುಳ್ಳಲ್ಲ. ಹಾಗಾಗಿ ಕರ್ನಾಟಕದಲ್ಲಿ ಯಡಿಯೂರಪ್ಪ ಈಗ ನಮಗೆ ಅನಿವಾರ್ಯವಲ್ಲ ಎಂಬ ನಿರ್ಧಾರಕ್ಕೆ ಹೈಕಮಾಂಡ್ ಬಂದಿರಬಹುದು.

ಇನ್ನು ಎರಡನೇ ಕಾರಣ, ಲಿಂಗಾಯತರ ವೋಟ್ ಬ್ಯಾಂಕ್ ಮೇಲಿನ ಹಿಡಿತದ ಕೆಮಿಸ್ಟ್ರಿ. ಈ ಮೊದಲು ಯಡಿಯೂರಪ್ಪನವರ ಕಾರಣಕ್ಕೆ ಲಿಂಗಾಯತ ಸಮುದಾಯ ಬಿಜೆಪಿ ಬೆನ್ನಿಗೆ ನಿಲ್ಲುತ್ತಿತ್ತು. ಅದರಿಂದಾಗಿಯೇ ಪಕ್ಷದ ಮೇಲೆ ಯಡ್ಯೂರಪ್ಪನವರ ಹಿಡಿತವೂ ಜೋರಾಗಿತ್ತು. ಆದರೆ ಬದಲಾದ ಕಾಲಘಟ್ಟದಲ್ಲಿ ಮೋದಿಯವರ ನಾಯಕತ್ವದ ಕೇಂದ್ರೀಕರಣ ಹೆಚ್ಚಾದಂತೆಲ್ಲ, ಜಾತಿಯ ಕಾರಣಕ್ಕೆ ಹಾಗೂ ಆ ಜಾತಿಯ ಲೀಡರುಗಳ ಕಾರಣಕ್ಕೆ ಬಿಜೆಪಿಯ ಪಾರಂಪರಿಕ ಮತಗಳೆನಿಸಿದ್ದ ಸಮುದಾಯಗಳು ಮೋದಿತ್ವ ಮತ್ತು ಹಿಂದೂತ್ವದ ನಶೆಗೆ ಒಳಗಾಗಿವೆ. ಇದೇ ಸಮೀಕರಣದಡಿಯಲ್ಲಿ ಲಿಂಗಾಯತರು, ಅದರಲ್ಲೂ ಲಿಂಗಾಯತ ಯುವಸಮೂಹ, ಜಾತಿಯ ಪ್ರಭಾವಕ್ಕಿಂತಲೂ ಹೆಚ್ಚಾಗಿ ಮೋದಿತ್ವ-ಹಿಂದೂತ್ವಗಳಿಂದ ಬಿಜೆಪಿ ಜೊತೆ ಕನೆಕ್ಟ್ ಆಗಿದ್ದಾರೆ. ಅದನ್ನು ಬಿಜೆಪಿ ಹೈಕಮ್ಯಾಂಡಿಗೆ ಅರ್ಥ ಮಾಡಿಸಿದ್ದು ಸಿದ್ರಾಮಯ್ಯನವರ ಸರ್ಕಾರದ `ಲಿಂಗಾಯತ ಪ್ರತ್ಯೇಕ ಧರ್ಮ’ದ ಶಿಫಾರಸ್ಸು!

`ಇದು ಹಿಂದೂ ಧರ್ಮವನ್ನು ಹೊಡೆಯುವ ಹುನ್ನಾರ’ ಎಂದು ಅದರ ಸುತ್ತ ಬಿಜೆಪಿ ಬೆಂಬಲಿತ ಮಾಧ್ಯಮಗಳು ಮತ್ತು ಬಲಪಂಥೀಯ ಸೋಶಿಯಲ್ ಮೀಡಿಯಾಗಳು ನಡೆಸಿದ ಅಪಪ್ರಚಾರದ ಪರಿಗೆ  ಲಿಂಗಾಯತರು ಹಿಂದೂತ್ವದ ಸೆಳೆತಕ್ಕೆ ತಲೆದೂಗುತ್ತಾ ಬಂದರು. ಅದರ ಪರಿಣಾಮವೇ 2018ರ ವಿಧಾನಸಭಾ ಚುನಾವಣೆಯಲ್ಲಿ ಹಲವು ಜನಪರ ಕೆಲಸ ಮಾಡಿದ್ದ ಸಿದ್ರಾಮಯ್ಯನವರ ಕಾಂಗ್ರೆಸನ್ನು ಹಿಂದಿಕ್ಕಿ ಬಿಜೆಪಿ 104 ಸ್ಥಾನಗಳನ್ನು ಗೆದ್ದದ್ದು. ಸಾರಾಂಶ ಇಷ್ಟೇ, ಯಡಿಯೂರಪ್ಪನವರ ಕಾರಣಕ್ಕಾಗಿ ಬಿಜೆಪಿಯನ್ನು ಬೆಂಬಲಿಸುತ್ತಿದ್ದ ಲಿಂಗಾಯತರು ಈಗ ಮೋದಿತ್ವ-ಹಿಂದೂತ್ವದ ಸೆಳೆತಕ್ಕೆ ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ. ಬಿಜೆಪಿ ಹೈಕಮಾಂಡಿಗೆ ಇದು ಅರ್ಥವಾದ ದಿನದಿಂದಲೇ ಯಡಿಯೂರಪ್ಪ ಪಕ್ಷದೊಳಗೆ ಸೊರಗುತ್ತಾ ಬಂದರು, ಈಗಂತು ತನ್ನಿಷ್ಟದ ಒಂದು ಸಂಪುಟವನ್ನು ರಚಿಸಿಕೊಳ್ಳಲಿಕ್ಕೂ ಪರದಾಡಬೇಕಾದ ನಿತ್ರಾಣ ಸ್ಥಿತಿಗೆ ಬಂದಿದ್ದಾರೆ.

ಡಿ.ಕೆ.ಶಿವಕುಮಾರ್ ಬೆಂಬಲಿಸುವ ರೂಪದಲ್ಲಿ ದೇವೇಗೌಡರ ಕುಟುಂಬದ ಮೇಲೆ ಎರಗಬಹುದಾದ ದಾಳಿಗೆ ಮುನ್ನೆಚ್ಚರಿಕೆ ಕೊಡುವ ಸಲುವಾಗಿ ಈಗ ಒಕ್ಕಲಿಗರು ಒಗ್ಗೂಡಿ ದನಿ ಮೊಳಗಿಸಿರುವುದು ರಾಜ್ಯದಲ್ಲಿ ಮತ್ತೆ ಲಿಂಗಾಯತರೂ ಜಾತಿ ಧೃವೀಕೃತ ರಾಜಕಾರಣಕ್ಕೆ ನಾಂದಿ ಹಾಡುವ ಸಾಧ್ಯತೆಯನ್ನು ತೆರೆದಿಟ್ಟಿದೆ.

ಲಿಂಗಾಯತರು ಮತ್ತು ಒಕ್ಕಲಿಗರು, ಕರ್ನಾಟಕದ ರಾಜಕಾರಣವನ್ನು ನಿಯಂತ್ರಿಸುತ್ತಾ ಬಂದ ಎರಡು ಪ್ರಭಾವಿ ಸಮುದಾಯಗಳು. ಒಕ್ಕಲಿಗರು ಪಕ್ಷಾತೀತವಾಗಿ ಒಗ್ಗೂಡಿ ತಮ್ಮ ಜಾತಿಯ ಲೀಡರುಗಳ ಹಿತಕಾಯಲು ಮುಂದಾಗುತ್ತಾರೆಂದರೆ ಮತ್ತು ಅದರಲ್ಲಿ ಯಶಸ್ವಿಯೂ ಆಗಿಬಿಟ್ಟರೆ, ಅದು ಸಹಜವಾಗಿಯೇ ಲಿಂಗಾಯತರಲ್ಲೂ ಜಾತಿ ಧೃವೀಕರಣವನ್ನು ಕೆರಳಿಸುತ್ತೆ. ಅಥವಾ ಮೋದಿತ್ವದ ಕಾರಣಕ್ಕೆ ಲಿಂಗಾಯತರ ಮೇಲೆ ಜಾತಿ ರಾಜಕಾರಣದ ಹಿಡಿತ ಕಳೆದುಕೊಂಡಿರುವ ಯಡ್ಯೂರಪ್ಪನವರು ಸಣ್ಣದಾಗಿ  ಪ್ರಯತ್ನಪಟ್ಟರೂ `ಒಕ್ಕಲಿಗರಂತೆ ನಾವೂ ನಮ್ಮ ನಾಯಕರ ಬೆನ್ನಿಗೆ ನಿಲ್ಲಲು ಸಿದ್ದ’ ಎಂದು ಲಿಂಗಾಯತರು ಪ್ರತಿಕ್ರಿಯಿಸುವ ಸಾಧ್ಯತೆಯನ್ನು ಈ ಪ್ರತಿಭಟನೆ ದಟ್ಟವಾಗಿಸಿದೆ. ಹಾಗೇನಾದರು ಆದಲ್ಲಿ, ಸಂತೋಷ್ ಉಪಟಳದಿಂದ ನಿಶ್ಯಕ್ತಗೊಂಡಿರುವ ಯಡಿಯೂರಪ್ಪನವರಿಗೆ ಬಲ ಬರಲಿದೆ. ನಿರೀಕ್ಷೆಗು ಮೀರಿ 25 ಸಂಸದರನ್ನು ಗೆಲ್ಲಿಸಿಕೊಂಡಿದ್ದರಿಂದ ಕರ್ನಾಟಕದಲ್ಲಿ ಹಿಂದೂತ್ವ, ಮೋದಿತ್ವಗಳ ನಶೆಯಲ್ಲಿ ಜಾತಿ ರಾಜಕಾರಣದ ಪಾಳೆಗಾರಿಕೆ ಮುಗಿದಿದೆ ಎಂದು ಭ್ರಮಿಸಿದ್ದ ಬಿಜೆಪಿ ಹೈಕಮಾಂಡ್ ಡಿ.ಕೆ. ಬಂಧನದ ಪ್ರತಿರೋಧ ಕಂಡು ತಬ್ಬಿಬ್ಬಾಗಿರುವುದಂತೂ ನಿಜ. ಅದಕ್ಕೇ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಪೆದ್ದುಪೆದ್ದಾಗಿ ಡೀಕೆ ಬಂಧನವನ್ನು ಸಿದ್ರಾಮಯ್ಯನವರ ತಲೆಗೆ ಕಟ್ಟಲು ಹೋಗಿ ನಗೆಪಾಟಲಿಗೆ ಈಡಾದದ್ದು. ಬಿಜೆಪಿಯು ಕರ್ನಾಟಕದ ಜಾತಿ ರಾಜಕಾರಣದ ಸುಳಿಗಳನ್ನು ಕಂಡು ತಬ್ಬಿಬ್ಬಾದಷ್ಟು ಅಂತಹ ರಾಜಕಾರಣವನ್ನೇ ಉಸಿರಾಡಿಕೊಂಡು ಬಂದ ಯಡ್ಯೂರಪ್ಪನಂತವರಿಗೆ ಲಾಭವೇ ಅಲ್ಲವೇ!?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...