ಜೈಲಿನಲ್ಲಿರುವ ಭಾರತದ ಹೆಸರಾಂತ ಚಿಂತಕ, IIM ಅಹಮದಾಬಾದ್ನ ಮೊದಲ ಹಳೆಯ ವಿದ್ಯಾರ್ಥಿ, ಮೊದಲ IIT ಪ್ರೊಫೆಸರ್ ಹಾಗೂ ಮೊದಲ ಕಾರ್ಪೊರೇಟ್ CEO, ಅಂಬೇಡ್ಕರ್ರವರ ಸಬಂಧಿ ಮತ್ತು ಬೌದ್ಧಿಕ ವಾರಸುದಾರ ಡಾ. ಆನಂದ್ ತೇಲ್ತುಂಬ್ಡೆಯವರನ್ನು 2020ರ ವರ್ಷದ ವ್ಯಕ್ತಿಯಾಗಿ ಆಯ್ಕೆ ಮಾಡಲಾಗಿದೆ.
ಪರ್ಯಾಯ ರಾಜಕೀಯವನ್ನು ಪ್ರಸಾರ ಮಾಡುವ ವ್ಯಾಂಕೋವರ್ ಮೂಲದ ಆನ್ಲೈನ್ ನಿಯತಕಾಲಿಕ ರ್ಯಾಡಿಕಲ್ ದೇಸಿ ಎಂಬ ಪತ್ರಿಕೆಯು 2020ರ ವರ್ಷದ ವ್ಯಕ್ತಿಯಾಗಿ ಡಾ.ಆನಂದ್ ತೇಲ್ತುಂಬ್ಡೆಯವರನ್ನು ಹೆಸರಿಸಿದೆ.
ಮಹಾರಾಷ್ಟ್ರದ ವಿದರ್ಭ ಪ್ರಾಂತ್ಯದ ಬಡ ಭೂಹೀನ ಕೂಲಿಕಾರ್ಮಿಕರ ಕುಟುಂಬದಲ್ಲಿ ಜನಿಸಿದ ಪ್ರೊ. ಆನಂದ್ ತೇಲ್ತುಂಬ್ಡೆ ಅವರು ದೇಶದ ಅತ್ಯುತ್ತಮ ವಿದ್ಯಾವಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಅವರು ಅದ್ಭುತ ಶೈಕ್ಷಣಿಕ ಮತ್ತು ವೃತ್ತಿಜೀವನವನ್ನು ಹೊಂದಿದ್ದಾರೆ. ದೇಶದ ಅತ್ಯುನ್ನತ ಗಣ್ಯ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಹಲವು ಕಂಪನಿಗಳಿಗೆ ನಾಯಕತ್ವ ಕೊಟ್ಟಿದ್ದಾರೆ ಮತ್ತು ಅನೇಕ ಪ್ರಶಸ್ತಿ, ಪುರಸ್ಕಾರಗಳು ಅವರನ್ನು ಹುಡುಕಿಕೊಂಡುಬಂದಿವೆ.
ಭಾರತದಲ್ಲಿನ ಜಾತಿ ಪದ್ದತಿ, ಅಸಮಾನತೆ ಬಗ್ಗೆ, ಅಂಬೇಡ್ಕರ್ರವರ ಕುರಿತು 29 ಪುಸ್ತಕಗಳನ್ನು ರಚಿಸಿರುವ ತೇಲ್ತುಂಬ್ಡೆ ಸಾವಿರಾರು ಲೇಖನಗಳನ್ನು ಬರೆದಿದ್ದಾರೆ. ಇಂತಹ ಮಹಾನ್ ಚಿಂತಕನನ್ನು ಸರ್ಕಾರ ಕರಾಳ ಯುಎಪಿಎ ಕಾಯ್ದೆಯಡಿ ಭೀಮಾ ಕೋರೇಂಗಾವ್ ಗಲಭೆಯಲ್ಲಿ ಪಾತ್ರವಹಿಸಿದರು ಎಂದು ಆರೋಪಿಸಿ ಬಂಧಿಸಿ ಜೈಲಿನಲ್ಲಿಟ್ಟಿದೆ. ಬಾಬಾಸಾಹೇಬ್ ಅಂಬೇಡ್ಕರರ ಜನ್ಮದಿನ ಏಪ್ರಿಲ್ 14, 2020ರಂದೇ ಅವರನ್ನು ಬಂಧಿಸಿರುವುದು ದುರಂತ.
ಬ್ರಾಹ್ಮಣ್ಯದ ಸಿದ್ಧಾಂತ, ಜಾತಿ ವ್ಯವಸ್ಥೆ, ನಿಯೋ ಲಿಬರಲಿಜಂ, ಭೂಮಾಲೀಕತ್ವ, ಎಲ್ಲದಕ್ಕೂ ಮಿಗಿಲು ದೇಶದಲ್ಲಿ ಬಲಗೊಳ್ಳುತ್ತಿರುವ ಪ್ಯಾಸಿಸ್ಟ್ ಶಕ್ತಿಗಳ ಮೇಲೆ ಅವರು ಆಳವಾದ ಬರವಣಿಗೆಗಳನ್ನು ಬರೆದದ್ದೆ ಅಲ್ಲದೇ, ದೇಶದಲ್ಲಿರುವ ಬಡ ಸಮುದಾಯಗಳಿಗೆ ಡಾ.ಅಂಬೇಡ್ಕರ್ ಸೂಚಿಸಿದ ಹಾಗೆ ಸುಶಿಕ್ಷಿತರನ್ನಾಗಿ ಮಾಡುವ ಜವಾಬ್ದಾರಿ ತಲೆಯ ಮೇಲೆ ಹಾಕಿಕೊಂಡರು. ಬಡ ಸಮುದಾಯಗಳ ಮೇಲೆ ಪ್ರತ್ಯೇಕವಾಗಿ ದಲಿತರ ಮೇಲೆ ದಾಳಿಗಳು ನಡೆದರೆ ಆನಂದ್ ಖುದ್ದಾಗಿ ಅಲ್ಲಿಗೆ ಹೋಗಿ ಅವರ ಪರ ನಿಂತರು.
ಸದಾ ಬಡಜನರ ಪರವಾಗಿ ಮತ್ತು ಪ್ರಭುತ್ವದ ಹಿಂಸಾಚಾರದ ವಿರುದ್ಧ ದನಿಯೆತ್ತುತ್ತಿದ್ದ ಆನಂದ್ ತೇಲ್ತುಂಬ್ಡೆಯವರನ್ನು ಬಲಪಂಥೀಯ ಸರ್ಕಾರ ಬೇಕಂತಲೇ ಬಂಧಿಸಿ ಜೈಲಿನಲ್ಲಿಟ್ಟಿದೆ. ಇದೇ ರೀತಿಯ ಹತ್ತಾರು ಚಿಂತಕರನ್ನು ಸರ್ಕಾರ ಬಂಧಿಸಿದೆ. ಆದರೆ ದೇಶಾದ್ಯಂತ ಅವರ ಪರವಾಗಿ ಕೂಗು ಕೇಳಿಬರುತ್ತಿದೆ. ಈ ರೀತಿಯ ಪತ್ರಿಕೆಗಳು ಅವರನ್ನು ವರ್ಷದ ವ್ಯಕ್ತಿಯಾಗಿ ಆಯ್ಕೆಮಾಡಿ ಗೌರವ ಸಲ್ಲಿಸುತ್ತಿವೆ.
ಇದನ್ನೂ ಓದಿ: ಆನಂದ್ ತೇಲ್ತುಂಬ್ಡೆ: ಬಂಧನದಲ್ಲಿ ಅಂಬೇಡ್ಕರ್ ಆತ್ಮಬಂಧು
ಇದನ್ನೂ ಓದಿ: ತಮ್ಮ ಬಂಧನಕ್ಕೂ ಮುಂಚೆ ಭಾರತೀಯರನ್ನು ಉದ್ದೇಶಿಸಿ ಪ್ರೊ. ಆನಂದ್ ತೇಲ್ತುಂಬ್ಡೆ ಬರೆದ ಬಹಿರಂಗ ಪತ್ರ