ಈಚೆಗೆ ಕರ್ನಾಟಕದಲ್ಲಿ ಜಾತ್ರೆಗಳಲ್ಲಿ ಮುಸಲ್ಮಾನರು ಅಂಗಡಿಗಳನ್ನು ತೆರೆಯಕೂಡದೆಂದು ಸಂಘಪರಿವಾರವು ವ್ಯಾಪಾರ ಬಹಿಷ್ಕಾರ ಆರಂಭಿಸಿದೆ. ಭಾರತದಲ್ಲಿ ಬಹಿಷ್ಕಾರ ಪದ್ಧತಿ ಹೊಸತಲ್ಲ. ಬುಡಕಟ್ಟುಗಳಲ್ಲಿ ಸಮುದಾಯದ ಸದಸ್ಯರು ಸಂಪ್ರದಾಯವನ್ನು ಉಲ್ಲಂಘಿಸಿದಾಗ ಅಲ್ಲಿರುವ ಗುರಿಕಾರರು ಅವರನ್ನು ಬಹಿಷ್ಕರಿಸುವ ಪದ್ಧತಿಯಿದೆ. ಮೇಲ್ಜಾತಿಗಳಲ್ಲಿ ಸತಿಪದ್ಧತಿಗೆ ಅಥವಾ ವಿಧವಾಚರಣೆಗೆ ನಿರಾಕರಿಸಿದ, ವಿಧವಾ ವಿವಾಹವಾದ, ಬೇರೆಜಾತಿಗೆ ಮದುವೆಯಾದ, ವಿಧವೆಗೆ ಅಥವಾ ಸನ್ಯಾಸಿಗೆ ಹುಟ್ಟಿದ, ಸಮುದ್ರಯಾನ ಮಾಡಿದ ವ್ಯಕ್ತಿಗಳನ್ನು ಬಹಿಷ್ಕರಿಸುವ ಪದ್ಧತಿಯೂ ಇತ್ತು. ಈಗಲೂ ದಲಿತರನ್ನು ಮಹಿಳೆಯರನ್ನು ಶೂದ್ರರನ್ನು ಕುರಿತು ಆಹಾರ, ಮದುವೆ, ಗುಡಿಯ ಕಾರ್ಯಕ್ರಮಗಳಲ್ಲಿ ಹೊರಗಿಡುವ ಅಥವಾ ನಿರ್ದಿಷ್ಟ ಗೆರೆಯವರೆಗೆ ಮಾತ್ರ ಪ್ರವೇಶ ಕೊಡುವ ಪದ್ಧತಿಯಿದೆ. ಈ ಬಹಿಷ್ಕಾರಗಳು ಸಂಪ್ರದಾಯವಾದದಿಂದ ಪ್ರೇರಿತವಾದವು.
ಇದರ ಇನ್ನೊಂದು ಮುಖ ಕ್ರೈಸ್ತರನ್ನು ಮುಸ್ಲಿಮರನ್ನು ವಾಣಿಜ್ಯದಿಂದ ಬಹಿಷ್ಕರಿಸುವ ಪದ್ಧತಿ. ಇದು ಸಂಪ್ರದಾಯದ ರಕ್ಷಣೆಯಿಂದಲ್ಲ, ತಮ್ಮದಲ್ಲದ ಧರ್ಮದ ಜನರನ್ನು ಅಧೀನ ಸ್ಥಿತಿಯಲ್ಲಿಡಬೇಕೆಂಬ ಪೂರ್ವಯೋಜಿತ ಕಾರ್ಯಾಚರಣೆಯ ಭಾಗವಾಗಿದೆ; ಮತೀಯ ನೆಲೆಯ ರಾಷ್ಟ್ರವಾದದ ಪರಿಕಲ್ಪನೆಯಲ್ಲಿ ಮುಸ್ಲಿಮರನ್ನು ಕ್ರೈಸ್ತರನ್ನು ಒಳಗಿನ ಶತ್ರುಗಳು ಎಂದು ಸಂಘಪರಿವಾರದ ಸಿದ್ಧಾಂತಗಳು ಈಗಾಗಲೇ ಮಾಡಿರುವ ಘೋಷಣೆಯ ಭಾಗವಾಗಿದೆ. ಬ್ರಾಹ್ಮಣ ಶೂದ್ರ ದಲಿತ ನುಡಿಗಟ್ಟುಗಳು ಸಂಘಪರಿವಾರದ ಹಿಂದುತ್ವ ಪರಿಕಲ್ಪನೆಯಲ್ಲಿರುವ ಆಂತರಿಕ ಶ್ರೇಣೀಕರಣದ ಬಿರುಕುಗಳನ್ನು ಕಾಣಿಸುವ ಕೆಲಸ ಮಾಡುತ್ತವೆ. ಈ ಬಿರುಕುಗಳನ್ನು ಸಂಭಾಳಿಸಲು ಅದು ಹಿಂದು-ಮುಸ್ಲಿಂ, ಹಿಂದೂ-ಕ್ರೈಸ್ತ ಚೌಕಟ್ಟುಗಳನ್ನು ಬಳಸುತ್ತ ಬಂದಿದೆ. ಈ ಚೌಕಟ್ಟುಗಳು ದಲಿತ ಮತ್ತು ಶೂದ್ರ ಸಮುದಾಯಗಳನ್ನು ಬ್ರಾಹ್ಮಣವಾದದ ಯಜಮಾನಿಕೆಯ ಮುಷ್ಠಿಯೊಳಗೆ ಸಿಲುಕಿಸಲು ನೆರವಾಗುತ್ತ ಬಂದಿವೆ.
ಮುಸ್ಲಿಮರನ್ನು ಕುರಿತ ವಾಣಿಜ್ಯ ಬಹಿಷ್ಕಾರಕ್ಕೆ ಈ ಕೆಳಜಾತಿಗಳನ್ನು ತನ್ನ ಅಧೀನತೆಯಲ್ಲಿ ತಂದುಕೊಳ್ಳುವ ಹಿಂದುತ್ವದ ಸಾಮಾಜಿಕ ಇಂಜಿನಿಯರಿಂಗಿನ ಆಯಾಮವೂ ಇದೆ. ಈ ಪ್ರಯೋಗವು ಕೃಷಿಪ್ರಧಾನ ಚಟುವಟಿಕೆಯಲ್ಲಿ ತೊಡಗಿರುವ ಮುಸ್ಲಿಮರಿರುವ ಉತ್ತರ ಕರ್ನಾಟಕಕ್ಕಿಂತ, ವಾಣಿಜ್ಯಪ್ರಧಾನ ಚಟುವಟಿಕೆಯಲ್ಲಿ ತೊಡಗಿರುವ ಬ್ಯಾರಿಗಳು (ಬ್ಯಾರಿ=ವ್ಯಾಪಾರಿ) ಇರುವ ಕರಾವಳಿಯಲ್ಲಿ ಆರಂಭವಾಗಿದೆ. ಮುಸ್ಲಿಮರು ವಾಣಿಜ್ಯಕವಾಗಿ ಮಾತ್ರವಲ್ಲದೆ, ಅಧಿಕಾರಿಗಳಾಗಿಯೂ ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಬರುವ ಗುಡಿಗಳ ಕಾರ್ಯಕ್ರಮದಲ್ಲಿ ಭಾಗವಹಿಸಿದಂತೆ ತಡೆಯುವ ಪ್ರಯೋಗಗಳು ಕೂಡ ಕರಾವಳಿಯಲ್ಲೇ ಆರಂಭವಾದವು. ಕೆಲವು ವರ್ಷಗಳ ಹಿಂದೆ ಮುಜರಾಯಿ ಇಲಾಖೆಗೆ ಸೇರಿದ ಪುತ್ತೂರು ಮಹಾಲಿಂಗೇಶ್ವರ ಗುಡಿಯ ಜಾತ್ರೆಯಲ್ಲಿ, ಆಡಳಿತಾಧಿಕಾರದ ಭಾಗವಾಗಿ ಸೇರ್ಪಡೆಯಾಗಿದ್ದ ಮುಸ್ಲಿಂ ಸಮುದಾಯದಿಂದ ಬಂದ ಜಿಲ್ಲಾಧಿಕಾರಿಯ ಹೆಸರಿದ್ದ ಕರಪತ್ರವನ್ನು ಬಹಿಷ್ಕಾರ ಮಾಡಲಾಯಿತು. ಆದ್ದರಿಂದ, ವಾಣಿಜ್ಯ ಬಹಿಷ್ಕಾರವು, ತನ್ನದಲ್ಲದ ಧರ್ಮಗಳನ್ನು ಪರಕೀಯಗೊಳಿಸುವ ಮತ್ತು ದೈನಿಕ ಬದುಕಿನಲ್ಲಿ ಜನರ ಸಹಜ ಸಂಬಂಧಗಳನ್ನು ನಂಜುಗೊಳಿಸುವ ಧಾರ್ಮಿಕ- ಸಾಮಾಜಿಕ ಆಯಾಮಗಳ ತಾರ್ಕಿಕ ವಿಸ್ತರಣೆಯಾಗಿದೆ.
ಆದರೆ ಭಾರತದಲ್ಲಿ ಮುಸ್ಲಿಂ-ಹಿಂದು ಎಂದು ವಿಭಜಿಸಲಾಗಿರುವ ಎರಡು ಲೋಕಗಳ ನಡುವೆ ಸಂಘರ್ಷದ ಚರಿತ್ರೆ ಇರುವಂತೆಯೇ, ಜನ ತಮ್ಮ ದೈನಿಕ ವ್ಯವಹಾರಗಳನ್ನು, ಸೇವಿಸುವ ಆಹಾರ ಪಾನೀಯಗಳು, ಮಾಡುವ ಕೆಲಸಗಳನ್ನು, ಹಮ್ಮಿಕೊಳ್ಳುವ ಮದುವೆ-ಉರುಸು-ಜಾತ್ರೆ-ಹಬ್ಬಗಳನ್ನು ಕೂಡಿ ನಡೆಸುವ ಪರಂಪರೆಯೂ ಇದೆ. ಈ ಕೂಡುತನವು ಸೇನೆಯ ಮತ್ತು ಆಡಳಿತದ ವಿಷಯದಲ್ಲಿಯೂ ನಿಜ. ಶಿವಾಜಿಯ ಸೇನೆಯಲ್ಲಿ ಪ್ರಮುಖ ಸ್ಥಾನಗಳಲ್ಲಿ ಮುಸ್ಲಿಮ ಸರದಾರರೂ ಅಂಗರಕ್ಷಕರೂ ಇದ್ದರು. ವಿಜಯನಗರದ ಸೇನೆಯಲ್ಲಿ ಕುದುರೆ ಸವಾರರು ಮತ್ತು ಬಿಲ್ಲಾಳುಗಳು ಟರ್ಕಿ ಮೂಲದ ಮುಸ್ಲಿಮರಾಗಿದ್ದರು. ಎರಡನೇ ದೇವರಾಯನು ದೊರೆಗಳು ಅವರಿಗಾಗಿ ಮಸೀದಿಯನ್ನು ಕಟ್ಟಿಕೊಟ್ಟು ತುರ್ಕವಾಡಿ ಎಂಬ ಬಡಾವಣೆಯಲ್ಲಿ ಮನೆ ಕಟ್ಟಿಸಿಕೊಟ್ಟಿದ್ದನ. ಹೈದರ್-ಟಿಪ್ಪು ಆಳಿಕೆಯಲ್ಲಿ ಪೂರ್ಣಯ್ಯನನ್ನು ಒಳಗೊಂಡಂತೆ ಪ್ರಧಾನ ಅಧಿಕಾರದಲ್ಲಿ ಮುಸ್ಲಿಮೇತರರಿದ್ದರು. ನಾಲ್ವಡಿಯವರ ಸುದೀರ್ಘ ಆಳಿಕೆಯಲ್ಲಿ ದಿವಾನರಾಗಿದ್ದವರು ಮಿರ್ಜಾ ಇಸ್ಮಾಯಿಲ್. ಪ್ರಜಾಪ್ರಭುತ್ವದ ಆಳಿಕೆಯಲ್ಲಿಯೂ ಎಲ್ಲ ಧರ್ಮಗಳಿಗೆ ಸೇರಿದ ಶಾಸಕರು ಮಂತ್ರಿಗಳು ಅಧಿಕಾರಿಗಳು ಶಿಕ್ಷಕರು ಇದ್ದಾರೆ. ಇದು ಭಾರತದ ಧರ್ಮಾತೀತವಾದ ಕೂಡುಬದುಕಿನ ಸಹಜವಾದ ಲಯವಾಗಿದೆ.
ಉರುಸು-ಜಾತ್ರೆಗಳ ವಿಷಯದಲ್ಲಿಯೂ ಧರ್ಮಾತೀತವಾದ ಈ ಚಹರೆಯಿದೆ. ಇದಕ್ಕೆ ಕಾರಣ, ಧರ್ಮಗಳ ಜನಪ್ರಿಯ ಆಯಾಮವಾಗಿರುವ ಜಾತ್ರೆ ಉರುಸು ಹಬ್ಬಗಳು, ಎಲ್ಲ ಧರ್ಮದ ಜನರು ನಾನಾ ಕಾರಣಗಳಿಂದ ಕೂಡುವ ಸಾರ್ವಜನಿಕ ಸ್ಪೇಸುಗಳೂ ಆಗಿರುವುದು. ಹೀಗಾಗಿಯೇ ಇವು ಕೇವಲ ಧಾರ್ಮಿಕವಾಗಿರದೆ, ವಾಣಿಜ್ಯ ವಿನಿಮಯದ ಮತ್ತು ಕಲಾಪ್ರದರ್ಶನದ ವೇದಿಕೆಗಳೂ ಆಗಿವೆ. ಸೇರುವ ಜನರಾದರೂ ಈ ಉರುಸು-ಜಾತ್ರೆಗಳಲ್ಲಿ ಧಾರ್ಮಿಕ ಎನ್ನಬಹುದಾದ ಸೇವೆಗಳಿಗೆ ಕೊಡುವ ಸಮಯ ಅತ್ಯಲ್ಪ. ಹೆಚ್ಚಿನ ವೇಳೆಯನ್ನು ವಸ್ತುಗಳನ್ನು ಮಾರುವ-ಕೊಳ್ಳುವ, ಬಂಧುಗಳನ್ನು ಭೇಟಿಮಾಡುವ, ಮನರಂಜನೆಗಾಗಿ ನಡೆಯುವ ಕುಸ್ತಿ, ಟಗರು ಕಾಳಗ, ಖವಾಲಿ, ಸಂಗೀತ ಕಛೇರಿ, ನಾಟಕ-ಯಕ್ಷಗಾನ ನೋಡುವ ಉದ್ದೇಶಕ್ಕೆ ವಿನಿಯೋಗಿಸುತ್ತಾರೆ. ಇದಕ್ಕೆ ಪೂರಕವಾಗಿ ಗುಡಿ ಮತ್ತು ದರ್ಗಾಗಳನ್ನು ಕಟ್ಟಿಕೊಡುವಲ್ಲಿ ಬೇರೆಬೇರೆ ಧರ್ಮದ ಜನರ ಸೇವೆ ಇರುತ್ತದೆ. ಬಪ್ಪನಾಡು ದುರ್ಗಾ ಪರಮೇಶ್ವರಿಯ ಗುಡಿಯನ್ನು ಬಪ್ಪಬ್ಯಾರಿ ಕಟ್ಟಿಸಿಕೊಟ್ಟ ಪುರಾಣವಿದೆ. ಇದನ್ನು ಅದೇ ಗುಡಿಯು ನಡೆಸುತ್ತ ಬಂದಿರುವ ಯಕ್ಷಗಾನದಲ್ಲಿ ಪ್ರದರ್ಶಿಸಿಕೊಂಡೂ ಬರಲಾಗಿದೆ. ಬಪ್ಪನ ಪಾತ್ರವನ್ನು ಶ್ರೇಣಿಯವರು ಅದ್ಭುತವಾಗಿ ಮಾಡುತ್ತಿದ್ದರು. ಕರ್ನಾಟಕದ ಅನೇಕ ದರ್ಗಾಗಳು ಮಸೀದಿಗಳು ಸ್ಥಳೀಯ ರಚನೆಯನ್ನು ಹೊಂದಿವೆ. ಕೊಡಗಿನ ಎಮ್ಮೆಮಾಡು ದರ್ಗಾವು, ಕರಾವಳಿಯ ಭೂತಸ್ಥಾನದ ವಿನ್ಯಾಸದಲ್ಲಿದೆ. ಬಂದೇನವಾಜರ ಜತೆ ಸ್ನೇಹವಿದ್ದ ಸಾವಳಗಿ ಶಿವಲಿಂಗೇಶ್ವರರ ಸಮಾಧಿಯು ದರ್ಗಾಕಾರದಲ್ಲಿದೆ. ಬಹಳಷ್ಟು ಜಾತ್ರೆ-ಉರುಸು ಕಮಿಟಿಗಳಲ್ಲಿ ಎಲ್ಲ ಧರ್ಮದವರೂ ಇರುತ್ತಾರೆ. ಇಳಕಲ್ ಮುರ್ತುಜಾ ಖಾದಿ ದರ್ಗಾ ಕಮಿಟಿಯಲ್ಲಿ ಹಿಂದುಗಳೇ ಇದ್ದಾರೆ. ಗದುಗಿನ ತೋಂಟದಾರ್ಯರು ಇದ್ದಾಗ, ಡಂಬಳ ಮಠದ ಜಾತ್ರಾಸಮಿತಿಗೆ ಒಬ್ಬ ಮುಸ್ಲಿಮ ವ್ಯಕ್ತಿಯನ್ನು ನೇಮಿಸಿದ್ದರು. ಅದನ್ನು ಸಂಸದ ವಿಜಯ ಸಂಕೇಶ್ವರರು ವಿರೋಧಿಸಿದರು. ಆಗ ಸ್ವಾಮೀಜಿಯವರು ಹೀಗೆ ವಿರೋಧಿಸುವುದು ಭಾರತೀಯ ಪರಂಪರೆಯಲ್ಲ ಎಂದು ಬುದ್ಧಿ ಹೇಳಿದ್ದರು.
ಕರ್ನಾಟಕದ ನೂರಾರು ಗುಡಿ-ದರ್ಗಾ-ಮಸೀದಿಗಳು, ತಮ್ಮ ಜಾತ್ರೆ-ಉರುಸುಗಳಲ್ಲಿ ಹಲವು ಧಾರ್ಮಿಕ ಸಮುದಾಯಗಳನ್ನು ಒಳಗೊಳ್ಳುವ ಸ್ವರೂಪವನ್ನು ಹೊಂದಿವೆ. ಇವತ್ತಿಗೂ ಚಿಕ್ಕನಾಯಕನಹಳ್ಳಿಯ ತಾತಯ್ಯನ ದರ್ಗಾದಲ್ಲಿ ಪ್ರತಿ ಅಮಾವಾಸ್ಯೆಯಂದು ಗೋರಿಯ ಸುತ್ತಲೂ ಕೂತು ಎಲ್ಲ ಜಾತಿಯ ಜನರು ತತ್ವಪದ ಹಾಡುವ ಪದ್ಧತಿಯಿದೆ. ದರ್ಗಾಗಳಲ್ಲಿ ಸಕ್ಕರೆ ಓದಿಸುವ ಆಚರಣೆಯಲ್ಲಿ ಮುಸ್ಲಿಮರಿಗಿಂತ ಹೆಚ್ಚಾಗಿ ಹಿಂದುಗಳು ಇರುವುದನ್ನು ಕಲಬುರ್ಗಿಯ ಬಂದೇನವಾಜ್ ದರ್ಗಾದಲ್ಲಿ ಕಾಣಬಹುದು. ಈ ದರ್ಗಾಕ್ಕೆ ಹರಕೆ ಹೊರುತ್ತಿದ್ದ ರಾಯಚೂರಿನ ಒಬ್ಬ ಲಿಂಗವಂತ ಜಮೀನುದಾರಿಗೆ ಖಾಜನಗೌಡ ಎಂದೇ ಹೆಸರಿತ್ತು. ಅನೇಕ ದರ್ಗಾಗಳಿಗೆ ಆಯಾ ಊರಿನ ದೇವರ ಮೆರವಣಿಗೆಗಳು ಭೇಟಿಕೊಡುವ ಪದ್ಧತಿಯಿದೆ. ಬೆಂಗಳೂರಿನ ಚಿಕ್ಕಪೇಟೆಯ ತವಕ್ಕಲ ಮಸ್ತಾನ್ ದರ್ಗಾಕ್ಕೆ ಧರ್ಮರಾಯನ ಕರಗದ ಮೆರವಣಿಗೆಯು ಭೇಟಿಕೊಡುತ್ತದೆ. ಕರಾವಳಿಯಲ್ಲಿ ಮಂಜೇಶ್ವರ ಮುಂತಾದ ಅನೇಕ ಕಡೆ ಸ್ಥಳೀಯ ದೈವ(ಭೂತ)ಗಳು, ತಮ್ಮ ಊರ ಪಳ್ಳಿಗೆ ಹೋಗಿ ಪ್ರಸಾದ ಕೊಟ್ಟು ಮರ್ಯಾದೆ ಸ್ವೀಕರಿಸುತ್ತವೆ. ಅನೇಕ ಜಾತ್ರೆಗಳಲ್ಲಿ ಸೂಫಿಸಂತರ ಹೆಸರಿನ ದೀನನ್ನು ಘೋಷಿಸಲಾಗುತ್ತದೆ. ಸಾವಳಗಿ ಜಾತ್ರೆಯಲ್ಲಿ ‘ಬಂದೇನವಾಜ್ ಕಿ ದೋಸ್ತಾರ ದೀನ್’ ಹೇಳಲಾಗುತ್ತದೆ. ತಿಂತಿಣಿ ಮೋನಪ್ಪನ ಜಾತ್ರೆಯಲ್ಲಿ ‘ಏಕಲಾಕ ಐಸೀ ಹಜಾರ ಪಾಂಚೋ ಪೀರ ಪೈಗಂಬರ್, ಜಿತಾಪೀರ್ ಕಾಶೀಪತಿ ಹರಹರ ಮಹಾದೇವ’ ಘೋಷವನ್ನು ಹಾಕಲಾಗುತ್ತದೆ. ಉರುಸಿನ ಅಥವಾ ಜಾತ್ರೆಯ ಪ್ರಧಾನ ವೇದಿಕೆಯ ಕಾರ್ಯಕ್ರಮಗಳಲ್ಲೂ ಸರ್ವಧರ್ಮೀಯತೆ ಇರುತ್ತದೆ. ಮಳಖೇಡದ ಉರುಸಿನಲ್ಲಿ ವೇದಿಕೆಯ ಮೇಲೆ, ದರ್ಗಾದ ಸಜ್ಜಾದನಶೀನರು, ಬೇರೆಬೇರೆ ಧರ್ಮಗಳ ಗುರುಗಳ ಜತೆಗೇ ದರ್ಬಾರು ನಡೆಸುತ್ತಾರೆ.
ಈಚೆಗೆ ಮುಸ್ಲಿಂ ವ್ಯಾಪಾರಿಗಳನ್ನು ಬಹಿಷ್ಕರಿಸಿದ ಕಾಪುವಿನ ಗುಡಿಯನ್ನು ಒಳಗೊಂಡಂತೆ, ಬಹಳಷ್ಟು ಗುಡಿಗಳಲ್ಲಿ ವಾದ್ಯಸೇವೆ ಮುಸ್ಲಿಮರದು. ಇದರಂತೆ ದರ್ಗಾಗಳ ವಾದ್ಯಸೇವೆಗಳಲ್ಲಿ ಆಯಾ ಊರಿನ ಭಜಂತ್ರಿಗಳು ಶಹನಾಯಿ ನುಡಿಸುವರು. ಪ್ರಸಿದ್ಧ ಸಂಗೀತಗಾರರಾಗಿದ್ದ ಅಲ್ಲದಿಯಾಖಾನರು ಕೊಲ್ಹಾಪುರದ ಮಹಾಲಕ್ಷ್ಮೀಗುಡಿಯಲ್ಲೂ, ಬಿಸ್ಮಿಲ್ಲಾಖಾನರು ಕಾಶಿಯ ವಿಶ್ವನಾಥ ಮಂದಿರದಲ್ಲೂ ಸಂಗೀತ ಸೇವೆ ಮಾಡುತ್ತಿದ್ದರು. ಮಳಖೇಡದ ಉರುಸಿನಲ್ಲಿ ನಡೆಯುವ ಶಿವಹೆಚ್ಚೊ ಶಕ್ತಿಹೆಚ್ಚೊ ಎಂಬ ವಾಗ್ವಾದವುಳ್ಳ ಹರದೇಶಿ ನಾಗೇಶಿ ಹಾಡುಗಾರಿಕೆ ನೋಡಲು ನಾನು ಹೋಗಿದ್ದೆ. ಬಿಜಾಪುರದ ಅಮೀನುದ್ದೀನ್ ದರ್ಗಾದಲ್ಲಿ ಕೃಷ್ಣಪಾರಿಜಾತವು ಏರ್ಪಡುತ್ತದೆ. ಜನಪದ ರಂಗಭೂಮಿಯಲ್ಲಿ ಮುಸ್ಲಿಂ ಕಲಾವಿದರು ಅತಿಹೆಚ್ಚು ತೊಡಗಿಕೊಂಡಿದ್ದ ಪ್ರಕಾರವೆಂದರೆ ಪಾರಿಜಾತ. ಕರಾವಳಿಯ ಜಾತ್ರೆಗಳಲ್ಲಿ ಹುಲಿವೇಷ, ಗರ್ನಾಲು ಹಾರಿಸುವುದನ್ನು ಮುಸ್ಲಿಮರೇ ಮಾಡಿಕೊಂಡು ಬಂದಿರುವರು.
ಇದಕ್ಕೆ ಪೂರಕವಾಗಿ ಜಾತ್ರೆ-ಉರುಸುಗಳ ಆಹಾರ ಪದ್ಧತಿಯೂ ಕೂಡು ಸಂಸ್ಕೃತಿಯದು. ಕೊಡೇಕಲ್ ಬಸವಣ್ಣ ಮತ್ತು ತಿಂತಿಣಿ ಮೋನಪ್ಪನವರ ಜಾತ್ರೆಗಳಲ್ಲಿ ಮುಖ್ಯ ಆಹಾರವು ಮಾಲ್ದಿಯಾಗಿದ್ದು, ಇದು ದರ್ಗಾ ಸಂಸ್ಕೃತಿಯ ಪ್ರಭಾವದಿಂದ ಬಂದುದಾಗಿದೆ. ಇದಕ್ಕೆ ಪ್ರತಿಯಾಗಿ ಬಾಬಾಬುಡನಗಿರಿಯಲ್ಲಿ ತೆಂಗಿನಕಾಯಿ ಒಡೆಯುವ ಪದ್ಧತಿಯಿದೆ. ಜಾತ್ರೆ-ಉರುಸಿಗೆ ಬರುವ ಭಕ್ತರು ತಮ್ಮ ಮನೆದೇವರ ಆಚರಣೆಗಳನ್ನೇ ಇಲ್ಲಿಯೂ ಅನುಸರಿಸಲು ಯತ್ನಿಸುತ್ತಾರೆ.
ಹೀಗೆ ಗುಡಿ/ದರ್ಗಾದ ಕಟ್ಟಡ, ಉಸ್ತುವಾರಿ ಕಮಿಟಿ, ಉರುಸು-ಜಾತ್ರೆಗಳ ಆಚರಣೆಗಳು, ಸಾಂಸ್ಕೃತಿಕ ಕಾರ್ಯಕ್ರಮ, ಆಹಾರಪದ್ಧತಿ-ಹೀಗೆ ಸರ್ವ ಸ್ತರಗಳಲ್ಲೂ ಬಹುಧರ್ಮೀಯತೆಯ ಲಕ್ಷಣಗಳನ್ನು ಲಾಗಾಯ್ತಿನಿಂದ ಪಾಲಿಸಿಕೊಂಡು ಬರಲಾಗಿದೆ. ಇದರ ಭಾಗವಾಗಿಯೇ ಎಲ್ಲ ಧರ್ಮೀಯರು ನಡೆಸುವ ವಾಣಿಜ್ಯ ಚಟುವಟಿಕೆಗಳಿವೆ. ಪ್ರತಿ ಜಾತಿ ಮತ್ತು ಧರ್ಮದ ಸಮುದಾಯಗಳಲ್ಲಿ ಒಂದೊಂದು ಬಗೆಯ ಕುಶಲತೆ ಉತ್ಪಾದನ ಪ್ರತಿಭೆ ಇರುತ್ತದೆ. ನಮ್ಮ ಜಾತ್ರೆ ಉರುಸುಗಳು ಈ ಪ್ರತಿಭೆ ಕುಶಲತೆಗಳ ಪ್ರದರ್ಶಕ ವೇದಿಕೆಗಳು. ಆಯಾ ಸೀಮೆಯ ಸೀಜನಲ್ ಮಾರುಕಟ್ಟೆಗಳು. ಅಲ್ಲಿ ರೈತರು ಕೃಷಿಗೆ ಬೇಕಾದ ದನ, ಉಪಕರಣ ಕಂಬಳಿ ಕತ್ತೆ ಕೊಳ್ಳುವರು. ಮಹಿಳೆಯರು ಗೃಹಕೃತ್ಯಕ್ಕೆ ಬೇಕಾದ ಸಾಮಾನು ಖರೀದಿಸುವರು. ಸಿನಿಮಾ ನಾಟಕ ನೋಡುವರು. ನಾಲಗೆಗೆ ರುಚಿಕರವಾದನ್ನು ತಿನ್ನುವರು.
ಈ ಜಾತ್ರೆ ಉರುಸುಗಳು, ಸಮಾಜವನ್ನು ವಿಭಜಿಸುವ ನೂರಾರು ತತ್ವ ಮತ್ತು ಯತ್ನಗಳ ನಡುವೆ, ಸಮಾಜವನ್ನು ಸೀಳಿಹೋಗದಂತೆ ಹಿಡಿದಿಟ್ಟಿರುವ ಸಾಂಸ್ಕೃತಿಕ ಸೇತುವೆಗಳು. ಈ ಸೇತುವೆಗಳನ್ನು ಸಂಘಪರಿವಾರವು ವ್ಯಾಪಾರ ಬಹಿಷ್ಕಾರದೊಂದಿಗೆ ಭಗ್ನಗೊಳಿಸಲು ಶುರುಮಾಡಿದೆ. ಇದರಿಂದ ನಮ್ಮ ಕೂಡು ಪರಂಪರೆ ಮಾತ್ರವಲ್ಲ, ದೈನಿಕ ಬದುಕಿನಲ್ಲಿರುವ ಮಾನವೀಯ ಸಂಬಂಧ ಮತ್ತು ಉಪಯುಕ್ತ ಕೊಳುಕೊಡೆಗಳೂ ಭಗ್ನವಾಗುವವು. ಇದು ನಾಡನ್ನು ಎಲ್ಲರೂ ತಮ್ಮ ಪ್ರತಿಭೆ ಶ್ರಮ ಬುದ್ಧಿಮತ್ತೆ ಕುಶಲತೆಗಳಿಂದ ಕೂಡಿ ಕಟ್ಟುವ ಪರಿಕಲ್ಪನೆಗೆ ಬಗೆವ ದ್ರೋಹವಾಗಿದೆ.
ಪ್ರೊ. ರಹಮತ್ ತರೀಕೆರೆ
ರಹಮತ್ ತರೀಕೆರೆ ಕನ್ನಡನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿದ್ದಾರೆ. ಇವರ ವಿಮರ್ಶಾ ಸಂಕಲನ ’ಕತ್ತಿಯಂಚಿನ ದಾರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others
ಇದನ್ನೂ ಓದಿ: ಕೋಮುದ್ವೇಷಕ್ಕೆ ಪೊಳ್ಳು ’ಸಮರ್ಥನೆ’ಯೂ ಬೇಡವಾಗಿರುವ ವಿಷಮ ಹಂತದಲ್ಲಿ..
Hope this article of Tarikere saab reaches all the Andh Bhakts.