ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಠಾಕ್ರೆಗಳ ವಿರೋಧ ಕಟ್ಟಿಕೊಳ್ಳುವ ಮುನ್ನ ಕೇಂದ್ರ ಏಜೆನ್ಸಿಯಿಂದ ಬಂಧಿಸುವ ಭಯದಿಂದ ಮಾತೋಶ್ರೀ ಬಳಿ ಅಳಲು ತೋಡಿಕೊಂಡಿದ್ದಾರೆ ಎಂದು ಶಿವಸೇನೆ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ ಗುರುವಾರ ಹೇಳಿದ್ದಾರೆ.
ವಿಶಾಖಪಟ್ಟಣಂನಲ್ಲಿರುವ ವಿಶ್ವವಿದ್ಯಾನಿಲಯದಲ್ಲಿ ನಡೆದ ಸಂವಾದದ ವೇಳೆ ಮಾತನಾಡಿದ ಆದಿತ್ಯ ಠಾಕ್ರೆ, ”ಏಕನಾಥ್ ಶಿಂಧೆ ಬಂಧನದ ಭೀತಿಯಿಂದ ಬಂಡಾಯದ ಮೊದಲು ಮಾತೋಶ್ರೀ ಬಳಿ ಬಂದು ಅಳುತ್ತಿದ್ದರು. 2022ರಲ್ಲಿ 40 ಶಾಸಕರು ತಮ್ಮ ಸ್ವಂತ ಸ್ಥಾನ ಮತ್ತು ”ಹಣ”ಕ್ಕಾಗಿ ಶಿವಸೇನಾ ನಾಯಕತ್ವದ ವಿರುದ್ಧ ಬಂಡಾಯವೆದ್ದರು” ಎಂದು ಅವರು ಹೇಳಿದರು.
”ಈಗಿನ ಮುಖ್ಯಮಂತ್ರಿ [ಏಕನಾಥ್ ಶಿಂಧೆ] ನಮ್ಮ ಮನೆಗೆ ಬಂದು ಅವರನ್ನು ಕೇಂದ್ರೀಯ ಸಂಸ್ಥೆಯಿಂದ ಬಂಧಿಸಲು ಹೊರಟಿದ್ದಾರೆ ಎಂದು ಅಳುತ್ತಿದ್ದರು ಮತ್ತು ಅವರು, ‘ನಾನು ಬಿಜೆಪಿಗೆ ಹೋಗಬೇಕಾಗುತ್ತದೆ ಇಲ್ಲದಿದ್ದರೆ ಅವರು ನನ್ನನ್ನು ಬಂಧಿಸುತ್ತಾರೆ’ ಎಂದಿದ್ದರು ಎಂದು ಠಾಕ್ರೆ ಹೇಳಿದರು.
ಇದನ್ನೂ ಓದಿ: ಇಂದಿರಾ ಗಾಂಧಿ ಕಾಂಗ್ರೆಸ್ ಚಿಹ್ನೆ ಕಳೆದುಕೊಂಡಿದ್ದನ್ನು ಠಾಕ್ರೆಗೆ ನೆನಪಿಸಿದ ಶರದ್ ಪವಾರ್
”ಆನಂತರ ಈ ವ್ಯಕ್ತಿ ಬಿಜೆಪಿ ಜೊತೆ ಕೈ ಜೋಡಿಸಿದನು. ಆಗ ಬಿಜೆಪಿಯವರು, ಶಿಂಧೆ ಬಣವೇ ನಿಜವಾದ ಶಿವಸೇನಾ ಎಂದು ತೋರಿಸಲು ಬಿಜೆಪಿ ಇವನನ್ನೇ ಸಿಎಂ ಮಾಡಿತು. ಇದು ಅವನ ಅದೃಷ್ಟ” ಎಂದು ಆದಿತ್ಯ ಠಾಕ್ರೆ ಹೇಳಿದರು.
ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ವಿರುದ್ಧದ ಆದಿತ್ಯ ಠಾಕ್ರೆ ಅವರ ಹೇಳಿಕೆಯನ್ನು ಶಿವಸೇನೆ ನಾಯಕರು ನಿರಾಕರಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಶಾಸಕ ಸಂತೋಷ್ ಬಂಗಾರ್ ಅವರು, ”ಆದಿತ್ಯ ಠಾಕ್ರೆ ಅವರ ಹೇಳಿಕೆ ಸುಳ್ಳು, ಬಿಜೆಪಿಯಿಂದ ಯಾವುದೇ ಬೆದರಿಕೆ ಇಲ್ಲ. ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್ಸಿಪಿ) ಮತ್ತು ಕಾಂಗ್ರೆಸ್ನೊಂದಿಗಿನ ಅವರ ಮೈತ್ರಿಯಿಂದಾಗಿ 2022ರಲ್ಲಿ ಠಾಕ್ರೆಗಳ ವಿರೋಧ ಕಟ್ಟಿಕೊಂಡಿದ್ದು” ಎಂದು ಹೇಳಿದರು.
ಕೇಂದ್ರ ಸಚಿವ ರಾಮದಾಸ್ ಅಠವಳೆ ಪ್ರತಿಕ್ರಿಸಿದ್ದು, ಶಿಂಧೆ ವಿರುದ್ಧದ ಆರೋಪಗಳು ಸುಳ್ಳು ಮತ್ತು ಅವರು ”ಧೈರ್ಯವಂತ” ವ್ಯಕ್ತಿ ಹಾಗಾಗಿ ಅವರು ಎಂದಿಗೂ ಅಳುವುದಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಮತ್ತು ಎನ್ಸಿಪಿಯೊಂದಿಗೆ ತಮ್ಮ ಪಕ್ಷದ ಮೈತ್ರಿ ಕುರಿತು ಮಾತನಾಡಿದ ಆದಿತ್ಯ ಠಾಕ್ರೆ, ”ನನ್ನ ತಾತ [ಬಾಳಾಸಾಹೇಬ್ ಠಾಕ್ರೆ] ಮೊದಲು ಕಾಂಗ್ರೆಸ್ನೊಂದಿಗೆ ಮೈತ್ರಿ ಮಾಡಿಕೊಂಡಿದ್ದರು. ಈ ಹಿಂದೆಯೂ ಅವರು ಗಾಂಧಿ ಕುಟುಂಬದೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು. ಬಿಜೆಪಿ ಬೇರೆ ಅಭ್ಯರ್ಥಿಯನ್ನು [ರಾಷ್ಟ್ರಪತಿ ಚುನಾವಣೆಯ ಸಮಯದಲ್ಲಿ] ಹಾಕಿದಾಗ ಅವರು ಬಹಿರಂಗವಾಗಿ ಪ್ರಣಬ್ ಮುಖರ್ಜಿ ಮತ್ತು ಪ್ರತಿಭಾ ಪಾಟೀಲ್ ಅವರನ್ನು ಬಹಿರಂಗವಾಗಿ ಬೆಂಬಲಿಸಿದ್ದರು” ಎಂದು ಹೇಳಿದರು.