ಮುಖ್ಯ ಚುನಾವಣಾ ಆಯುಕ್ತರು ಮತ್ತು ಇಬ್ಬರು ಚುನಾವಣಾ ಆಯುಕ್ತರುಗಳನ್ನು (ಇಸಿ) ನೇಮಿಸುವ ಸರ್ಕಾರದ ಅಧಿಕಾರವನ್ನು ನಿರ್ಬಂಧಿಸಿ ಸುಪ್ರೀಂ ಕೋರ್ಟ್ ಗುರುವಾರ ಮಹತ್ವದ ತೀರ್ಪು ನೀಡಿದೆ.
ಪ್ರಧಾನ ಮಂತ್ರಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿಯವರನ್ನು ಒಳಗೊಂಡ ಸಮಿತಿಯು ಮುಖ್ಯ ಚುನಾವಣಾ ಆಯುಕ್ತ ಮತ್ತು ಚುನಾವಣಾ ಆಯುಕ್ತರ ನೇಮಕದ ಕುರಿತು ರಾಷ್ಟ್ರಪತಿಗಳಿಗೆ ಸಲಹೆ ನೀಡಲಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ ತೀರ್ಪು ನೀಡಿದೆ.
ಪ್ರಧಾನ ಮಂತ್ರಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿಗಳನ್ನು ಒಳಗೊಂಡ ಸಮಿತಿಯ ಸಲಹೆಯ ಮೇರೆಗೆ ನೇಮಕಗಳನ್ನು ಮಾಡಬೇಕಾಗುತ್ತದೆ ಎಂದು ಸೂಚಿಸಿದೆ.
ಆಯುಕ್ತರ ನೇಮಕಾತಿಗೆ ಸ್ವತಂತ್ರ ಕಾರ್ಯವಿಧಾನವನ್ನು ರೂಪಿಸಬೇಕೆಂದು ಕೋರಿದ ಅರ್ಜಿಗಳನ್ನು ಭಾಗಶಃ ಅನುಮತಿಸಿದ ನ್ಯಾಯಮೂರ್ತಿ ಕೆ ಎಂ ಜೋಸೆಫ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠವು ಈ ನಿರ್ಧಾರ ಪ್ರಕಟಿಸಿದೆ.
ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರು ಇಲ್ಲವಾದರೆ, ವಿರೋಧ ಪಕ್ಷಗಳಲ್ಲಿನ ಅತಿದೊಡ್ಡ ಪಕ್ಷದ ನಾಯಕರು ಸಮತಿಯಲ್ಲಿ ಇರಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
“ಚುನಾವಣಾ ಪ್ರಕ್ರಿಯೆಯ ಪರಿಶುದ್ಧತೆಯನ್ನು ಕಾಪಾಡಿಕೊಳ್ಳಬೇಕಾದರೆ ಎಲ್ಲಾ ಭಾಗಿದಾರರು ಅದರ ಮೇಲೆ ಕೆಲಸ ಮಾಡಿದರೆ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ” ಎಂದು ಪೀಠವು ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿರಿ: ದೆಹಲಿ ವಿಶ್ವ ಪುಸ್ತಕ ಮೇಳ: ಬೈಬಲ್ ವಿತರಿಸುವ ಮಳಿಗೆ ಧ್ವಂಸ, ‘ಜೈ ಶ್ರೀ ರಾಮ್’ ಘೋಷಣೆ
ಸಂವಿಧಾನದ ಪರಿಚ್ಛೇದ 324(2) ಪ್ರಕಾರ ಮುಖ್ಯ ಚುನಾವಣಾ ಆಯುಕ್ತರು ಮತ್ತು ಆಯುಕ್ತರುಗಳನ್ನು ಮಂತ್ರಿ ಮಂಡಳಿಯ ನೆರವು ಮತ್ತು ಸಲಹೆಯೊಂದಿಗೆ ರಾಷ್ಟ್ರಪತಿಯವರು ನೇಮಕ ಮಾಡುತ್ತಾರೆ.
ಮಹತ್ವದ ತೀರ್ಪನ್ನು ನೀಡಿರುವ ಪೀಠದಲ್ಲಿ ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ, ಅನಿರುದ್ಧ ಬೋಸ್, ಹೃಷಿಕೇಶ್ ರಾಯ್ ಮತ್ತು ಸಿಟಿ ರವಿಕುಮಾರ್ ಅವರಿದ್ದರು.
ನ್ಯಾಯಮೂರ್ತಿ ರಸ್ತೋಗಿ ಅವರು ನೀಡಿರುವ ಪ್ರತ್ಯೇಕ ಅಭಿಪ್ರಾಯದಲ್ಲಿ, “ಮುಖ್ಯ ಚುನಾವಣಾ ಆಯುಕ್ತರನ್ನು ತೆಗೆದುಹಾಕಲು ಲಭ್ಯವಿರುವ ರಕ್ಷಣೆ, ಇತರ ಚುನಾವಣಾ ಆಯುಕ್ತರುಗಳಿಗೂ ಅನ್ವಯಿಸಬೇಕು” ಎಂದು ತಿಳಿಸಿದ್ದಾರೆ.
Muttu Vandal