ಜನವರಿ 24ರಂದು ಹೊರಬಂದ ಅಮೆರಿಕದ ಹಿಂಡೆನ್ಬರ್ಗ್ ರಿಸರ್ಚ್ನ ವರದಿಯ ಹಿನ್ನೆಲೆ ಹೂಡಿಕೆದಾರರ ಸಂರಕ್ಷಣಾ ಕಾರ್ಯವಿಧಾನಗಳನ್ನು ಪರಿಶೀಲಿಸಲು ಗುರುವಾರ ಸುಪ್ರೀಂ ಕೋರ್ಟ್, ತಜ್ಞರ ಸಮಿತಿಯನ್ನು ರಚಿಸಿದೆ ಎಂದು ಲೈವ್ ಲಾ ವರದಿ ಮಾಡಿದೆ.
ಈ ಸಮಿತಿಯ ನೇತೃತ್ವವನ್ನು ಸುಪ್ರೀಂ ಕೋರ್ಟ್ನ ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ಎಎಂ ಸಪ್ರೆ ವಹಿಸಲಿದ್ದಾರೆ. ಇತರ ಸದಸ್ಯರಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಅಧ್ಯಕ್ಷ ಒಪಿ ಭಟ್, ನಿವೃತ್ತ ನ್ಯಾಯಮೂರ್ತಿ ಜೆಪಿ ದೇವದತ್, ಇನ್ಫೋಸಿಸ್ ಅಧ್ಯಕ್ಷ ನಂದನ್ ನಿಲೇಕಣಿ, ಮಾಜಿ ಐಸಿಐಸಿಐ ಬ್ಯಾಂಕ್ ಮುಖ್ಯಸ್ಥ ಕೆವಿ ಕಾಮತ್ ಮತ್ತು ವಕೀಲರು ಮತ್ತು ಸೆಕ್ಯುರಿಟೀಸ್ ಮತ್ತು ನಿಯಂತ್ರಣ ತಜ್ಞ ಸೋಮಶೇಖರನ್ ಸುಂದರೇಶನ್ ಇರಲಿದ್ದಾರೆ.
ಹಿಂಡೆನ್ಬರ್ಗ್ ರಿಸರ್ಚ್ನ ವರದಿಯು ”ಅದಾನಿ ಸಮೂಹವು ದಶಕಗಳ ಕಾಲ ಸ್ಟಾಕ್ ತಿರುಚುವಿಕೆ ಮತ್ತು ಲೆಕ್ಕಪತ್ರ ವಂಚನೆಯ ಯೋಜನೆಯಲ್ಲಿ ತೊಡಗಿದೆ” ಎಂದು ಹೇಳಿತ್ತು. ಈ ವರದಿ ಬೆನ್ನಲ್ಲೇ ಅದಾನಿ ಗ್ರೂಪ್ನ ಪಟ್ಟಿಮಾಡಿದ ಸಂಸ್ಥೆಗಳು ಒಟ್ಟಾಗಿ $145 ಶತಕೋಟಿ ಮಾರುಕಟ್ಟೆ ಮೌಲ್ಯವನ್ನು ಕಳೆದುಕೊಂಡಿತು.
ಇದನ್ನೂ ಓದಿ: ಅದಾನಿ ವಿರುದ್ಧ ಸುದ್ದಿ ಪ್ರಕಟಿಸದಂತೆ ಕೋರಿ ಸಲ್ಲಿಸಿದ ಅರ್ಜಿ ವಜಾಗೊಳಿಸಿದ ಸುಪ್ರೀಂ
ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಪಿಎಸ್ ನರಸಿಂಹ ಮತ್ತು ಜೆಬಿ ಪರ್ದಿವಾಲಾ ಅವರನ್ನೊಳಗೊಂಡ ಪೀಠವು ಫೆಬ್ರವರಿ 10ರಂದು ದೊಡ್ಡ ಹೂಡಿಕೆದಾರರ ನಷ್ಟಕ್ಕೆ ಸಂಬಂಧಿಸಿದ ಎರಡು ಅರ್ಜಿಗಳ ವಿಚಾರಣೆ ನಡೆಸಿತು. ಈ ರೀತಿಯ ವಂಚನೆ ಪ್ರಕರಣಗಳು ಮತ್ತು ಭವಿಷ್ಯದಲ್ಲಿ ಹೂಡಿಕೆದಾರರಿಗೆ ನಷ್ಟ ಉಂಟುಮಾಡುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ತಜ್ಞರ ಸಮಿತಿಯ ಅವಶ್ಯಕತೆ ಇದೆ ಎಂದು ಹೇಳಲಾಗಿತ್ತು.
ಗುರುವಾರದ ವಿಚಾರಣೆಯ ಸಂದರ್ಭದಲ್ಲಿ, ಅದಾನಿ ಗ್ರೂಪ್ ವಿರುದ್ಧ ಮಾಡಿರುವ ಆರೋಪಗಳ ಕುರಿತು ಎರಡು ತಿಂಗಳೊಳಗೆ ತನಿಖೆ ನಡೆಸಿ ಸ್ಥಿತಿಗತಿ ವರದಿಯನ್ನು ಸಲ್ಲಿಸುವಂತೆ ಮಾರುಕಟ್ಟೆ ನಿಯಂತ್ರಕ ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI)ಗೆ ಪೀಠವು ಸೂಚಿಸಿದೆ.
ಸರ್ಕಾರ ಫೆಬ್ರವರಿ 17ರಂದು, ಸಮಿತಿಯ ಹೆಸರುಗಳು ಮತ್ತು ಆದೇಶದ ಸಲಹೆಗಳನ್ನು ಮುಚ್ಚಿದ ಕವರ್ನಲ್ಲಿ ಕಳಹಿಸಿತ್ತು. ಆದರೆ ಅದನ್ನು ಸ್ವೀಕರಿಸಲು ನ್ಯಾಯಾಲಯ ನಿರಾಕರಿಸಿತ್ತು. ಈ ವೇಳೆ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ, ಸಮಿತಿಯ ಸ್ಥಾಪನೆಯಲ್ಲಿ ಸಂಪೂರ್ಣ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಬಯಸುವುದಾಗಿ ಪೀಠವು ತಿಳಿಸಿತ್ತು.