ಉತ್ತರ ಪ್ರದೇಶದ ಹತ್ರಾಸ್ನಲ್ಲಿ 19 ವರ್ಷದ ದಲಿತ ಮಹಿಳೆಯ ಮೇಲೆ 2020ರಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಚಿತ್ರಹಿಂಸೆ ಪ್ರಕರಣದ ನಾಲ್ವರು ಆರೋಪಿಗಳಲ್ಲಿ ಮೂವರನ್ನು ಇಂದು (ಮಾರ್ಚ್ 2) ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ನ್ಯಾಯಾಲಯವು ಖುಲಾಸೆಗೊಳಿಸಿದೆ.
ಅತ್ಯಾಚಾರಕ್ಕೊಳಗಾದ ದಲಿತ ಬಾಲಕಿ ದೆಹಲಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮತ್ತು ಉತ್ತರ ಪ್ರದೇಶ ಪೊಲೀಸರು ಆಕೆಯ ಶವವನ್ನು ಅವಸರದಲ್ಲಿ ಮನಸೋಇಚ್ಛೆ ಶವಸಂಸ್ಕಾರ ಮಾಡುವ ಸಮಯದಲ್ಲಿ ಆಕೆಯ ಕುಟುಂಬದವರಿಗೆ ಅಲ್ಲಿ ಹಾಜರಾಗಲು ಅನುಮತಿ ನೀಡಲಿಲ್ಲ. ಇದು ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಯಿತು. ಈ ಪ್ರಕರಣದಲ್ಲಿ ಆರೋಪಿಗಳು ಸವರ್ಣೀಯರಾಗಿದ್ದು(ಠಾಕೂರ್), ಅನೇಕ ವರ್ಷಗಳಿಂದ ದಲಿತರ ಮೇಲೆ ದೌರ್ಜನ್ಯ ಎಸಗುತ್ತಲೇ ಇದ್ದಾರೆ. ಇದು ಅದೇ ರೀತಿಯ ಪ್ರಕರಣಗಳಲ್ಲಿ ಒಂದಾಗಿತ್ತು.
ಈ ಪ್ರಕರಣದಿಂದ ದೇಶಾದ್ಯಂತ ಸಾಕಷ್ಟು ಆಕ್ರೋಶ ವ್ಯಕ್ತವಾಗಿದ್ದರಿಂದ ಅಂತಿಮವಾಗಿ ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಹಸ್ತಾಂತರಿಸಲಾಯಿತು.
ಇದನ್ನೂ ಓದಿ: ಮಾತು ಮರೆತ ಭಾರತ-21; ಹತ್ರಾಸ್ ಫೈಲ್: ಬಿಜೆಪಿ ಆಡಳಿತದ ’ಬೇಟಿ ಬಚಾವೋ’ಗೊಂದು ಉದಾಹರಣೆ
ಸಧ್ಯ 20 ವರ್ಷದ ಸಂದೀಪ್ ಎನ್ನುವ ಒಬ್ಬ ಆರೋಪಿಯ ಮೇಲೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304ರ ಅಡಿಯಲ್ಲಿ, ಕೊಲೆಗೆ ಸಮಾನವಲ್ಲದ ನರಹತ್ಯೆ ಮಾಡಿದ ತಪ್ಪಿತಸ್ಥ ಎಂದು ಸಾಬೀತಾಗಿದೆ. ಆತನ ವಿರುದ್ಧ ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆಯಡಿಯೂ ಆರೋಪ ಹೊರಿಸಲಾಗಿದೆ ಎಂದು ಲೈವ್ ಲಾ ವರದಿ ಮಾಡಿದೆ.
ಇತರ ಮೂವರು ಆರೋಪಿಗಳಾದ ರವಿ (35), ಲುವ್ ಕುಶ್ (23), ಮತ್ತು ರಾಮು (26) ಅವರು ನಿರಪರಾಧಿಗಳೆಂದು ನ್ಯಾಯಾಲಯ ಘೋಷಿಸಿದೆ.
ಈ ಬಗ್ಗೆ ಪತ್ರಕರ್ತೆ ನಿಧಿ ಸುರೇಶ್ ಟ್ವೀಟ್ ಮಾಡಿದ್ದು, ”ಹತ್ರಾಸ್ ತೀರ್ಪು: ಯಾವುದೇ ಆರೋಪಿಗಳ ಮೇಲೆ ಅತ್ಯಾಚಾರ ಆರೋಪಗಳಿಲ್ಲ. ಮೂವರು ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ. ಪ್ರಮುಖ ಆರೋಪಿ ಸಂದೀಪ್ಗೆ ಶಿಕ್ಷೆ ವಿಧಿಸಲಾಗಿದೆ. ಯಾವುದೇ ಆರೋಪಿಗಳ ಮೇಲೆ ಅತ್ಯಾಚಾರ ಆರೋಪಗಳಿಲ್ಲ. ನ್ಯಾಯಾಲಯ ಶಿಕ್ಷೆಯನ್ನು ಪ್ರಕಟಿಸಿದೆ” ಎಂದು ತಿಳಿಸಿದ್ದಾರೆ.
Hathras judgement: No rape charges on any of the accused.
Three accused acquitted. Prime accused Sandeep has been convicted. No rape charges on any of the accused. Sentence to he announced post lunch. #HathrasCase
— Nidhi Suresh (@NidhiSuresh_) March 2, 2023
ಸಿಬಿಐ ಸಲ್ಲಿಸಿದ ಚಾರ್ಜ್ಶೀಟ್ನಲ್ಲಿ, ಮಹಿಳೆಯ ಹೇಳಿಕೆಯನ್ನು ನಿರ್ಲಕ್ಷಿಸಿರುವ ಉತ್ತರ ಪ್ರದೇಶ ಪೊಲೀಸರನ್ನು ದೂಷಿಸಲಾಗಿದೆ.
”ಸೆಪ್ಟೆಂಬರ್ 22ರಂದು ತನ್ನ ಪರೀಕ್ಷೆಯ ಸಮಯದಲ್ಲಿ ಸಂತ್ರಸ್ತೆಯು, ನಾಲ್ವರು ತನ್ನ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಮಾಡಿದ್ದಾರೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಅವಳು ಸಾವಿಗೀಡಾಗುವ ಮುನ್ನ ತನ್ನ ಹೇಳಿಕೆಯಲ್ಲಿ ಆರೋಪಿಗಳ ಹೆಸರನ್ನು ಹೇಳಿದ್ದು, ಸೆಪ್ಟೆಂಬರ್ 14ರಂದು, ಒಬ್ಬಂಟಿಯಾಗಿರುವಾಗ ಬಾಜ್ರಾ ಮೈದಾನದಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಹೇಳಿರುವುದು ಸಂತ್ರಸ್ತೆಯ ಆರೋಪವನ್ನು ದೃಢೀಕರಿಸುತ್ತದೆ” ಎಂದು ಸಿಬಿಐ ಆರೋಪಪಟ್ಟಿಯಲ್ಲಿ ತಿಳಿಸಲಾಗಿತ್ತು.