Homeಅಂಕಣಗಳುಚುನಾವಣೆ ನಂತವೂ ಪ್ರಜಾತಂತ್ರ ಉಳಿಯಲಿ

ಚುನಾವಣೆ ನಂತವೂ ಪ್ರಜಾತಂತ್ರ ಉಳಿಯಲಿ

- Advertisement -
- Advertisement -

ನಮ್ಮ ಪತ್ರಿಕೆ ನಿಮ್ಮ ಕೈ ಸೇರುವ ವೇಳೆಗೆ ಕರ್ನಾಟಕದ ಮೊದಲ ಸುತ್ತಿನ ಚುನಾವಣೆ ಮತ್ತು ದೇಶದ ಎರಡನೇ ಸುತ್ತಿನ ಚುನಾವಣೆ ಮುಗಿದಿರುತ್ತದೆ. ಹಾಗೆಯೇ ಮುಂದಿನ ಸುತ್ತಿನ ಚುನಾವಣೆಗೆ ದೇಶ ಎದುರು ನೋಡುತ್ತಿರುತ್ತದೆ. ಹೆಚ್ಚು ಜನ ಮತಗಟ್ಟೆಗೆ ಹೋಗಿ ಮತ ಚಲಾಯಿಸುವಂತೆ ಚುನಾವಣಾ ಆಯೋಗ ವಿವಿಧ ಜನ ಸಂಘಟನೆಗಳ ಸಹಯೋಗದಿಂದ ಜನರ ಮನಸ್ಸನ್ನು ಒಲಿಸುವ ಕೆಲಸವನ್ನು ಈ ಬಾರಿ ಹಿಂದೆಂದಿಗಿಂತಲೂ ಭರದಿಂದ ಕೈಗೆತ್ತಿಕೊಂಡಿದೆ. ಹೆಚ್ಚು ಜನ ಮತ ಚಲಾಯಿಸಿದಷ್ಟೂ ನಮ್ಮ ಪ್ರಜಾಪ್ರಭುತ್ವ ಹೆಚ್ಚು ಗಟ್ಟಿಯಾಗುತ್ತದೆ; ಅದು ಪ್ರಜಾತಂತ್ರಕ್ಕೆ ಸಂದ ವಿಜಯ ಎಂಬಂತೆ ಈ ಪ್ರಚಾರ ಸಾಗುತ್ತಿದೆ. ಯಾವುದೇ ಆಮಿಷ, ಬೆದರಿಕೆಗೆ ಒಳಗಾಗದೆ ಮತ ಚಲಾಯಿಸುವಂತೆ ಮಾಡಲು ಈ ಪ್ರಯತ್ನ ಸ್ವಾಗತಾರ್ಹವೇ. ಹಾಗೆಯೇ ‘ಒಳ್ಳೆಯ’ ಅಭ್ಯರ್ಥಿಯನ್ನು ಗೆಲ್ಲಿಸಿ ಎಂಬ ಘೋಷವಾಕ್ಯವೂ ಈ ಪ್ರÀಚಾರದಲ್ಲಿ ಸೇರಿದೆ. ಮತ ಚಲಾವಣೆ ಒಂದು ಹಕ್ಕು ಮಾತ್ರವಲ್ಲ ಅದು ಕರ್ತವ್ಯ ಕೂಡ. ಒಂದು ಆಶಯವಾಗಿ ಇವೆಲ್ಲವೂ ಸರಿಯೇ ಆದರೂ ಇದು ಕೆಲವು ಮುಖ್ಯ ಪ್ರಶ್ನೆಗಳನ್ನು ನಮ್ಮ ಮುಂದಿಡುತ್ತದೆ.
ಒಂದು, ಇಡೀ ಪ್ರಜಾಪ್ರಭುತ್ವವನ್ನೇ ಚುನಾವಣಾ ಪ್ರಕ್ರಿಯೆಗೆ ಸಮೀಕರಿಸುವುದಕ್ಕೆ ಸಂಬಂಧಪಟ್ಟಿದ್ದು. ಇಂದು ಭಾರತ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ಎಂದು ಹೇಳಿಕೊಳ್ಳಲು ಚುನಾವಣೆಗಳನ್ನು ಕಾಲಕ್ಕೆ ಸರಿಯಾಗಿ ನಡೆಸುವುದನ್ನೇ ಆಧಾರವಾಗಿಟ್ಟುಕೊಳ್ಳಲಾಗುತ್ತಿದೆ. ಹೀಗಾಗಿ ಇಲ್ಲಿ ಪ್ರಜಾಪ್ರಭುತ್ವದ ಉಳಿವು-ಬೆಳವಣಿಗೆಗೆ ಚುನಾವಣೆಗಳನ್ನೇ ಕಾರಣವಾಗಿಸುವ ಒಂದು ಪ್ರಯತ್ನವಿದೆ. ಚುನಾವಣೆಗಳು ಪ್ರಜಾತಂತ್ರದ ಮುಖ್ಯ ಅಂಗ ನಿಜ. ಆದರೆ ಅದೇ ಅದರ ಜೀವಾಳವಲ್ಲ. ಯಾಕೆಂದರೆ ಇದೇ ಚುನಾವಣೆಯ ಪ್ರಕ್ರಿಯೆಯ ಮೂಲಕವೇ, ಅದನ್ನು ಬಳಸಿಕೊಂಡೇ, ಆಳುವ ರಾಜಕೀಯ ಪಕ್ಷಗಳು ಅಪ್ರಜಾತಾಂತ್ರಿಕವಾದ ಕಾನೂನುಗಳನ್ನು ಮತ್ತು ಅಚರಣೆಗಳನ್ನು ಜಾರಿ ಮಾಡಿರುವುದನ್ನು ನಾವು ಕಂಡಿದ್ದೇವೆ. ಈಗ ಭಾರತದಲ್ಲಿರುವ ರಾಜಕೀಯ ಪರಿಸ್ಥಿತಿಯನ್ನು ನೋಡಿದರೆ ಮುಂದೆ ಇದು ಇನ್ನೂ ಹೆಚ್ಚಾಗುವ ಸಂಭವವೇ ಜಾಸ್ತಿ. ಹೀಗಾಗಿ ಹೆಚ್ಚು ಜನ ಮತ ಚಲಾಯಿಸುವುದನ್ನೇ ಪ್ರಜಾಪ್ರಭಯತ್ವದ ದಿಗ್ವಿಜಯ ಎಂದು ಹೇಳಲಾಗದು. ಚುನಾವಣೆಯನ್ನು ಅಧಿಕಾರಕ್ಕೆ ಬರುವ ಮಾರ್ಗ ಎಂದು ಮಾತ್ರ ಭಾವಿಸುವ ಆಳುವ ಪಕ್ಷಗಳೂ ಕೂಡ ಚುನಾವಣೆಯನ್ನೇ ಪ್ರಜಾಪ್ರಭುತ್ವದ ಒಂದು short hand ಆಗಿ ಭಾವಿಸುತ್ತವೆ. ‘ಯಾರು ಬಂದರೂ ರಾಗಿ ಬೀಸುವುದು ತಪ್ಪದು’ ಎಂಬ ನಿತ್ಯ ಸತ್ಯದ ಗೊಣಗಾಟದಲ್ಲಿ ಮತದಾರರು ತಮ್ಮ ಯಾವತ್ತೂ ಜೀವನಕ್ಕೆ ಮರಳಿದರೆ, ಗೆದ್ದ ಹುರಿಯಾಳುಗಳು ಇನೈದು ವರ್ಷ ಯಾರ ಮುಂದೆಯೂ ಕೈ ಚಾಚ ಬೇಕಿಲ್ಲ ಎಂಬ ಹಮ್ಮಿನೊಂದಿಗೆ ಅಧಿಕಾರ ಹಿಡಿಯುತ್ತಾರೆ. ಮತ್ತೆ ಇನ್ನೊಂದು ಚುನಾವಣೆ ಬರುವವರೆಗೂ ಪ್ರಜಾಪ್ರಭುತ್ವ ಕಣ್ಮರೆಯಾಗುತ್ತದೆ.
ಇನ್ನು ‘ಒಳ್ಳೆಯ ವ್ಯಕ್ತಿ’ಯನ್ನು ಗೆಲ್ಲಿಸುವ ವಿಚಾರ. ಚುನಾವಣಾ ಕಣದಲ್ಲಿ ‘ಒಳ್ಳೆಯ ವ್ಯಕ್ತಿ’ಗಳು ಕಾಣಿಸಿಕೊಳ್ಳುವುದೇ ಅಪರೂಪ. ಹೀಗಿರುವಾಗ ಕುರುಡರ ಪೈಕಿ ಮೇಲುಗಣ್ಣರನ್ನು ಆಯುವುದಷ್ಟೇ ಮತದಾರರ ಮುಂದಿರುವ ಆಯ್ಕೆ. ‘ಒಳ್ಳೆಯ ವ್ಯಕ್ತಿ’ ಯಾರು ಎಂದು ನಿರ್ಧರಿಸುವುದಕ್ಕೆ ಆಗದಹಾಗೆ ನಮ್ಮ ಚುನಾವಣಾ ಪ್ರಕ್ರಿಯೆ ಸಜ್ಜುಗೊಂಡಿದೆ. ಹಣವಿರದ ಆದರೆ ಜನಪರ ಕಾಳಜಿ ಇರುವ ಹಾಗೂ ಜನರೊಂದಿಗೆ ಹೋರಾಟದಲ್ಲಿ ತೊಡಗಿರುವ ವ್ಯಕ್ತಿಗಳು ಗೆದ್ದು ಬರಲು ಸಾಧ್ಯವೇ ಇಲ್ಲದ ಹಾಗೆ ಚುನಾವಣಾ ಸ್ವರೂಪವನ್ನು ರಚಿಸಲಾಗಿದೆ. ಇಷ್ಟಾದರೂ ಕಷ್ಟಪಟ್ಟು ಪಕ್ಷೇತರರಾಗಿ ಚುನಾವಣೆಗೆ ನಿಂತ ಹ¯ವಾರು ಖ್ಯಾತನಾಮರು ಠೇವಣಿ ಕಳೆದುಕೊಂಡಿರುವುದೇ ಹೆಚ್ಚು. ಹಣ ಇರುವವರು ಮಾತ್ರ ಚುನಾವಣೆಗೆ ನಿಲ್ಲುವಂಥ ಪರಿಸ್ಥಿತಿಯನ್ನು ಸೃಷ್ಟಿಸಿರುವುದೇ ನಮ್ಮ ಪ್ರಜಾತಂತ್ರದ ದೋಷಗಳಲ್ಲಿ ಒಂದು. ಇಷ್ಟಾದರೂ, ಹಣ-ಜಾತಿ ಆಮಿಷಗಳ ನಡುವೆಯೂ, ಜನ ತೀರಾ ಸಿನಿಕರಾಗದೆ ಮತ ಚಲಾಯಿಸಿಕೊಂಡು ಬಂದಿದ್ದಾರೆ. ಆಳುವ ಪಕ್ಷಗಳನ್ನು ಬದಲಾಯಿಸಿದ್ದಾರೆ. ಒಟ್ಟಾರೆಯಾಗಿ ಚುನಾವಣೆಗಳು ಒಂದು ಸ್ಥೂಲ ಅರ್ಥದಲ್ಲಿ ಜನಾಭಿಪ್ರಾಯದ ಸೂಚನೆಯಾಗಿದೆ. ಆದರೆ ಇವೇ ಚುನಾವಣೆಗಳ ಮೂಲಕವೇ ಮೋದಿಯಂಥವರು ಗೆದ್ದು ಬರಲು ಸಾಧ್ಯವಾಗಿದೆ. ಗೆದ್ದವರು ಐದು ವರ್ಷಗಳ ಕಾಲ ಎಲ್ಲಾ ರಂಗಗಳಲ್ಲೂ ತೀವ್ರ ವೈಫಲ್ಯ ಕಂಡಾಗಲೂ, ವಿರೋಧಿ ಅಲೆ ಎಷ್ಟಿರಬೇಕಿತ್ತೋ ಅಷ್ಟಿಲ್ಲದೇ ಹೋಗಲು ಕಾರಣಗಳಿರಬಹುದು, ಆದರೆ ವಾಸ್ತವ.
ಚುನಾವಣೆಯಲ್ಲಿ ಮತ ಚಲಾಯಿಸುವುದು ಜನರ ಹಕ್ಕು ಮತ್ತು ಕರ್ತವ್ಯ ಸರಿ. ಆದರೆ ಮತ ಚಲಾವಣೆಯಲ್ಲಿ ಭಾಗವಹಿಸದವರು ತಮ್ಮ ಹಕ್ಕುಗಳನ್ನು ಕಳೆದುಕೊಳ್ಳುತ್ತಾರೆಯೇ? ಅಥವಾ ತಾವು ಮತ ಹಾಕಿದ ಪಕ್ಷ/ವ್ಯಕ್ತಿ ಸೋತುಹೋದರೆ, ತಾವು ಮತಹಾಕದ ಸಂಸದ/ ಶಾಸಕರುಗಳಲ್ಲಿ ನಮ್ಮ ಬೇಡಿಕೆಗಳನ್ನು ಇಟ್ಟು ಹೋರಾಟ ಮಾಡಬಾರದೆ? ಪ್ರಜಾತಂತ್ರದಲ್ಲಿ ಎಷ್ಟೇ ಮತದ ಅಂತರದಿಂದ ಗೆದ್ದರೂ ಆ ಗೆದ್ದ ವ್ಯಕ್ತಿ/ಪಕ್ಷ ಎಲ್ಲರನ್ನೂ- ತಮ್ಮ ವಿರೋಧಿಗಳನ್ನೂ ಒಳಗೊಂಡಂತೆ – ಪ್ರತಿನಿಧಿಸುವುದು ಪ್ರಜಾತಂತ್ರದ ಅವಿಭಾಜ್ಯ ಅಂಗ. ನಮ್ಮ ಆಳುವ ಪಕ್ಷ/ವ್ಯಕ್ತಿಗಳಲ್ಲಿ ಈ ಭಾವನೆ ಮೂಡುವವರೆಗೂ ಪ್ರಜಾತಂತ್ರ ಗಟ್ಟಿಯಾಗುವುದಿಲ್ಲ.
ಹೀಗಾಗಿ ಚುನಾವಣೆಗಳು ಪ್ರತಿನಿಧಿಗಳನ್ನು ಆಯುವ ಪ್ರಕ್ರಿಯೆಯೇ ಹೊರತು ಪ್ರಾತಿನಿಧ್ಯವನ್ನೇ ಮೊಟಕುಗೊಳಿಸುವ ಸಾಧನ ಅಲ್ಲ; ಆಗಬಾರದು. ಈ ಪ್ರಾತಿನಿಧ್ಯದ ಹಕ್ಕನ್ನು ಎಲ್ಲ ಪ್ರಜೆಗಳು, ಮತ ಚಲಾಯಿಸದವರೂ ಸೇರಿದಂತೆ, ಹೊಂದಿರುತ್ತಾರೆ. ಆದರೆ ಈ ಪ್ರಾತಿನಿಧ್ಯ ಹಾಗೆಯೇ ಒದಗಿ ಬರುವುದಿಲ್ಲ. ಅದಕ್ಕೆ ಸದಾಕಾಲ ಎಚ್ಚರದಿಂದ ಇರುವ ಮತ್ತು ಇದು ನಮ್ಮದೇ ಪ್ರಭುತ್ವ ಎಂಬ ಜಾಗೃತಿ ಇರುವ ಪ್ರಜೆಗಳು ಒಟ್ಟಾಗಿ ಹೋರಾಡಬೇಕಾಗುತ್ತದೆ. ಇದು ಚುನಾವಣೆಯ ನಂತರವೂ ಪ್ರಜಾತಂತ್ರವನ್ನ ಉಳಿಸಿಕೊಳ್ಳಲು ಅಗತ್ಯವಾದ ಪ್ರಕ್ರಿಯೆ. ಈ ಬಾರಿಯ ಚುನಾವಣೆಗಳ ನಂತರ ಪ್ರಜಾತಾಂತ್ರಿಕ ಹೋರಾಟದ ಅವಶ್ಯಕತೆ ಇನ್ನೂ ಹೆಚ್ಚಾಗಲಿದೆ. ಪ್ರಜಾಪ್ರಭುತ್ವವನ್ನು ಕಡೆÀಗೂ ಕಾಪಾಡುವುದು ಜನರೇ ಹೊರತು ಇಂಥ ಚುನಾವಣೆಗಳಲ್ಲ. ಇದಕ್ಕೆ ಸಜ್ಜಾಗುವುದೊಂದೇ ನಮ್ಮ ಮುಂದಿರುವ ನಿಜವಾದ ಆಯ್ಕೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

Fact Check : ನಿರುದ್ಯೋಗ ಕುರಿತ ಬಿಜೆಪಿ ಸಂಸದನ ಹೇಳಿಕೆಯ ವಿಡಿಯೋ ‘ಡೀಪ್ ಫೇಕ್’...

0
ಯೂಟ್ಯೂಬರ್ ಒಬ್ಬರು ನಿರುದ್ಯೋಗದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಉತ್ತರ ಪ್ರದೇಶದ ಆಝಂಗಢ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಹಾಗೂ ಬಿಜೆಪಿ ಅಭ್ಯರ್ಥಿ ದಿನೇಶ್ ಲಾಲ್ ಯಾದವ್ ಅಥವಾ ನಿರಹುವಾ ಅವರು "ಪ್ರಧಾನಿ...