Homeಮುಖಪುಟಅಸ್ಸಾಂ: ಪ್ಯಾಡ್‌ವುಮೆನ್ ಆಗಿ ಬದಲಾದ ಮಾಜಿ ಬಂಡುಕೋರರು

ಅಸ್ಸಾಂ: ಪ್ಯಾಡ್‌ವುಮೆನ್ ಆಗಿ ಬದಲಾದ ಮಾಜಿ ಬಂಡುಕೋರರು

- Advertisement -
- Advertisement -

ಅಸ್ಸಾಂನ ಉದಲ್‌ಗುರಿ ಜಿಲ್ಲೆಯಲ್ಲಿ ಒಂದು ಕಾಲದಲ್ಲಿ ಬಂದೂಕು ಹಿಡಿಯುತ್ತಿದ್ದ ಕೈಗಳು ಈಗ ಸ್ಯಾನಿಟರಿ ಪ್ಯಾಡ್‌ಗಳನ್ನು ತಯಾರಿಸಲು ಕಲಿಯುತ್ತಿವೆ.

ಹೌದು, ಮಾಜಿ ಮಹಿಳಾ ಬಂಡುಕೋರರಿಗೆ ಬೋಡೋಲ್ಯಾಂಡ್ ಪ್ರಾದೇಶಿಕ ಪ್ರಾಂತ್ಯ (ಬಿಟಿಆರ್) ಆಡಳಿತದಿಂದ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ತಯಾರಿಸಲು ತರಬೇತಿ ನೀಡಲಾಗುತ್ತಿದ್ದು, ಸ್ಯಾನಿಟರಿ ಪ್ಯಾಡ್ ವಾಣಿಜ್ಯ ಉತ್ಪಾದನಾ ಘಟಕ ಶೀಘ್ರದಲ್ಲೇ ಪ್ರಾರಂಭವಾಗುವ ನಿರೀಕ್ಷೆಯಿದೆ.

“ಮಾಜಿ ಬಂಡುಕೋರರಿಗೆ ಪುನರ್ವಸತಿ ಬಹಳ ಮುಖ್ಯವಾಗಿದೆ. ನಾವು ಅವರ ಆಸಕ್ತಿ ಮತ್ತು ಪರಿಣತಿಯ ಕ್ಷೇತ್ರಗಳನ್ನು ಕಂಡು ಹಿಡಿದು, ಅವರಿಗೆ ತರಬೇತಿ ನೀಡಿ ಅದಕ್ಕೆ ಅನುಗುಣವಾಗಿ ಉದ್ಯೋಗ ಕೊಡುತ್ತಿದ್ದೇವೆ” ಎಂದು ಬಿಟಿಆರ್‌ನ ಮುಖ್ಯ ಕಾರ್ಯನಿರ್ವಾಹಕ ಸದಸ್ಯ ಪ್ರಮೋದ್ ಬೊರೊ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಶರಣಾಗುವ ಹೋರಾಟಗಾರರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಆರ್ಥಿಕ ನೆರವು ನೀಡುವುದರ ಜೊತೆಗೆ ಬಿಟಿಆರ್ ಸಂಸ್ಥೆಯು ಉದ್ಯೋಗಾವಕಾಶ ಕಲ್ಪಿಸಲು ಸಹಕಾರಿಯಾಗಿದೆ ಎಂದು ಪ್ರಮೋದ್ ಬೊರೊ ಹೇಳಿದ್ದಾರೆ.

“ಮಾಜಿ ಬಂಡುಕೋರರ ಪುನರ್ವಸತಿಗೆ ಸಂಬಂಧಪಟ್ಟಂತೆ ನಾವು ಹಲವು ಕಾರ್ಯಕ್ರಮಗಳನ್ನು ಪ್ರಾರಂಭಿಸಿದ್ದೇವೆ. ಅವುಗಳಲ್ಲಿ ಮಾಜಿ ಬಂಡುಕೋರರ ಸಹಕಾರ ಸಂಘಗಳನ್ನು ರಚಿಸುವುದು ಮತ್ತು ಅವರಿಗೆ ಜೀವನೋಪಾಯವನ್ನು ಕಂಡುಕೊಳ್ಳಲು ಸಹಾಯ ಮಾಡುವುದು ಪ್ರಮುಖವಾದುದು” ಎಂದು ಬಿಟಿಆರ್ ಮುಖ್ಯಸ್ಥರು ತಿಳಿಸಿದ್ದಾರೆ.

ನಮ್ಮ ಕಾರ್ಯಕ್ರಮಕ್ಕೆ ‘ಮಿಷನ್ ಬ್ಲಾಸಮ್ ಎಗೈನ್’ ಎಂದು ಹೆಸರಿಡಲಾಗಿದೆ. ಅಕ್ಕಿ ಗಿರಣಿಗಳಿಂದ ಹಿಡಿದು ಸ್ಯಾನಿಟರಿ ಪ್ಯಾಡ್ ತಯಾರಿಕೆ ಘಟಕಗಳವರೆಗೆ, ವಿವಿಧ ಸಹಕಾರಿ ಸಂಸ್ಥೆಗಳು ಇದರ ಅಡಿಯಲ್ಲಿ ಬರುತ್ತವೆ ಎಂದು ಬೊರೊ ಮಾಹಿತಿ ನೀಡಿದ್ದಾರೆ.

‘ಮಿಷನ್ ಬ್ಲಾಸಮ್ ಎಗೈನ್’ ವಿವರಗಳನ್ನು ಹಂಚಿಕೊಂಡ ಬಿಟಿಆರ್‌ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಬೈನೌರಲ್ ವರಿ, 30 ಸಹಕಾರಿ ಸಂಘಗಳನ್ನು ಸ್ಥಾಪಿಸುವ ಗುರಿಯನ್ನು ನಿಗದಿಪಡಿಸಲಾಗಿದೆ. ಈ ಪೈಕಿ 21 ಸಹಕಾರಿ ಸಂಘಗಳು ಈಗಾಗಲೇ ರಚನೆಯಾಗಿದ್ದು, ಎಂಟು ಸಹಕಾರಿ ಸಂಘಗಳು ಮಂಜೂರಾಗಿವೆ. ಮಂಜೂರಾದ ಐದು ಯೋಜನೆಗಳು ಅಕ್ಕಿ ಗಿರಣಿಗಳನ್ನು ಸ್ಥಾಪಿಸಲು, ಒಂದು ಡೈರಿ ಸಂಸ್ಕರಣಾ ಘಟಕಕ್ಕೆ ಮತ್ತು ಇನ್ನೊಂದು ಸ್ಟೀವಿಯಾ ಸಂಸ್ಕರಣಾ ಘಟಕಕ್ಕೆ. ಸೇರಿವೆ. ಎಂಟನೇ ಸಹಕಾರಿ ಸಂಘವು ಸಂಪೂರ್ಣ ಮಹಿಳಾ ಸಂಘವಾಗಿದೆ. ಇದು ಸ್ಯಾನಿಟರಿ ಪ್ಯಾಡ್‌ಗಳನ್ನು ಉತ್ಪಾದಿಸಲಿದೆ. ಉದಲ್‌ಗಿರಿಯಲ್ಲಿ ಇದು ಸ್ಥಾಪನೆಯಾಗಲಿದೆ. ನೀತಿ ಆಯೋಗದಿಂದ ಒದಗಿಸಲಾದ ಯಂತ್ರವನ್ನು ಈಗಾಗಲೇ ಅಲ್ಲಿ ಸ್ಥಾಪಿಸಲಾಗಿದೆ. ಮಾಜಿ ಬಂಡುಕೋರರಿಗೆ ಕಸ್ಟಮೈಸ್ ಮಾಡಿದ ತರಬೇತಿಯನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ.

“ಒಂದೆರಡು ತಿಂಗಳೊಳಗೆ ಸ್ಯಾಟಿನರಿ ಪ್ಯಾಡ್ ಉತ್ಪಾದನೆಯನ್ನು ಪ್ರಾರಂಭಿಸುವ ಉದ್ದೇಶವಿದೆ” ಎಂದು ನ್ಯಾಶನಲ್ ಡೆಮಾಕ್ರಟಿಕ್ ಫ್ರಂಟ್ ಆಫ್ ಬೋಡೋಲ್ಯಾಂಡ್ (ಎನ್‌ಡಿಎಫ್‌ಬಿ) ನ, ಈಗ ವಿಸರ್ಜಿಸಲ್ಪಟ್ಟ ಬಣದ ಮಾಜಿ ಬಂಡುಕೋರ ವಾರಿ ಹೇಳಿದ್ದಾರೆ.

ಈ ಮಿಷನ್ ಅಡಿಯಲ್ಲಿ ಎಲ್ಲಾ ಉತ್ಪನ್ನಗಳನ್ನು ‘Rwdwm’ (ಬಡ್) ಬ್ರ್ಯಾಂಡ್ ಅಡಿಯಲ್ಲಿ ಮಾರಾಟ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

“ಕಳೆದ ಮೂರು ವರ್ಷಗಳಲ್ಲಿ ಬಿಟಿಆರ್‌ನಲ್ಲಿ ಯಾವುದೇ ಪ್ರಮುಖ ಹಿಂಸಾಚಾರ, ಬಂದ್‌ಗಳು ಅಥವಾ ಕೋಮು ಸಂಘರ್ಷಗಳು ನಡೆದಿಲ್ಲ ಎಂದು ಹೇಳಲು ನಮಗೆ ಸಂತೋಷವಾಗ್ತಿದೆ. ಶಾಂತಿ ಪುನಃಸ್ಥಾಪಿಸಲಾಗಿದೆ. ಜನರು ಇನ್ನು ಮುಂದೆ ಭಯದಿಂದ ಬದುಕುವ ಅಗತ್ಯವಿಲ್ಲ. ಬೋಡೋಗಳು ಮತ್ತು ಬೋಡೋಗಳಲ್ಲದವರಲ್ಲಿ ನಡುವಿನ ‘ತಪ್ಪು ತಿಳುವಳಿಕೆ’ ಯನ್ನು ಪರಿಹರಿಸಲಾಗುತ್ತಿದೆ. ಅದಕ್ಕಾಗಿ ಸ್ಥಳೀಯ ಜನರನ್ನು ತೊಡಗಿಸಿಕೊಳ್ಳಲಾಗುತ್ತಿದೆ. ‘ಹ್ಯಾಪಿನೆಸ್ ಮಿಷನ್’ ಆರಂಭಿಸಲಾಗಿದ್ದು, ಇದರ ಮೂಲಕ ವಿವಿಧ ಸಮುದಾಯಗಳ ನಡುವೆ ಯಾವುದೇ ಸಮಸ್ಯೆ ಎದುರಾದರೆ ಮಧ್ಯಪ್ರವೇಶಿಸಲು ಯುವಕರು ಹಾಗೂ ಸಮುದಾಯದ ಮುಖಂಡರಿಗೆ ತರಬೇತಿ ನೀಡಲಾಗುತ್ತಿದೆ. ನಾನು ಬಿಟಿಆರ್‌ನಲ್ಲಿ ವಾಸಿಸುವ ವಿವಿಧ ಸಮುದಾಯಗಳ ಪ್ರತಿನಿಧಿಗಳನ್ನು ಸಹ ಭೇಟಿ ಮಾಡುತ್ತಿದ್ದೇನೆ. ಎಲ್ಲಾ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ಕೆಲಸ ಮಾಡುತ್ತಿದ್ದೇನೆ ಎಂದು ಪ್ರಮೋದ್ ಬೊರೊ ಹೇಳಿದ್ದಾರೆ.

ಬೋಡೋಗಳು ಯಾರು, ಇವರು ಬಂದೂಕು ಹಿಡಿದದ್ದು ಯಾಕೆ?

ಹಲವಾರು ಸಮುದಾಯಗಳನ್ನು ಒಳಗೊಂಡ ಅಸ್ಸಾಂನ ಮೂಲ ನಿವಾಸಿಗಳನ್ನು ಒಟ್ಟಾಗಿ ಬೋಡೋಗಳು ಎಂದು ಕರೆಯಲಾಗುತ್ತದೆ. 1970ಕ್ಕೂ ಮುನ್ನ ಇವರೇ ಅಸ್ಸಾಂನಲ್ಲಿ ಬಹು ಸಂಖ್ಯಾತರಾಗಿದ್ದರು. 2011ರ ಜನಗಣತಿಯ ಪ್ರಕಾರ ಇವರ ಜನಸಂಖ್ಯೆ 14 ಲಕ್ಷಗಳಷ್ಟಿತ್ತು. ಇವರು ತಮ್ಮದೇ ಆದ ಸಂಸ್ಕೃತಿ, ಆಚರಣೆ, ನಂಬಿಕೆಗಳನ್ನು ಹೊಂದಿದ್ದಾರೆ. ಇದರ ಜೊತೆಗೆ ಬೋಡೋ ಪ್ರಾಂತ್ಯದಲ್ಲಿ ಸಾಕಷ್ಟು ಬುಡಕಟ್ಟು ನಿವಾಸಿಗಳೂ ಇದ್ದಾರೆ.

1971ರಲ್ಲಿ ನಡೆದ ಭಾರತ- ಪಾಕಿಸ್ತಾನ ಯುದ್ಧ ಹಾಗೂ ಬಾಂಗ್ಲಾದೇಶದ ಸೃಷ್ಟಿಯಿಂದ ಈ ಪ್ರಾಂತ್ಯದಲ್ಲಿಇದ್ದಕ್ಕಿದ್ದಂತೆ ಒತ್ತಡ ಸೃಷ್ಟಿಯಾಯಿತು. ಬಾಂಗ್ಲಾದಲ್ಲಿ ನಡೆದ ಧಾರ್ಮಿ ದೌರ್ಜನ್ಯದ ಪರಿಣಾಮ, ಅಲ್ಲಿಂದ ದೊಡ್ಡ ಸಂಖ್ಯೆಯಲ್ಲಿ ಹಿಂದೂಗಳ ಜೊತೆಗೆ ಮುಸ್ಲಿಮರೂ ಅಸ್ಸಾಂಗೆ ವಲಸೆ ಬಂದರು. ಮ್ಯಾನ್ಮಾರ್‌ನಿಂದ ರೋಹಿಂಗ್ಯಾ ಮುಸ್ಲಿಮರು ಬಂದರು. ಇವರ ಸಂಖ್ಯೆ ಅಧಿಕವಾಗುತ್ತ ಹೋದಂತೆ, ಸ್ಥಳೀಯ ಸಂಸ್ಕೃತಿಯಲ್ಲಿಆತಂಕ ಹೆಚ್ಚತೊಡಗಿತು. ಪ್ರಾದೇಶಿಕ ಅಸ್ಮಿತೆ, ಅಸ್ತಿತ್ವದ ಉಳಿವಿಗಾಗಿ ಬೋಡೋಗಳು, ಬುಡಕಟ್ಟು ನಿವಾಸಿಗಳು ಹೋರಾಟ ಆರಂಭಿಸಿದರು.

ಕೆಲವು ಸಂಘಟನೆಗಳು ಇನ್ನೂ ಮುಂದಕ್ಕೆ ಹೋಗಿ, ಪ್ರತ್ಯೇಕ ಬೋಡೋ ದೇಶವೇ ತಮಗೆ ಬೇಕೆಂದು ಹೋರಾಟ ಆರಂಭಿದ್ದರು. ಇದಕ್ಕಾಗಿ ಅವರು ಬಂದೂಕು ಹಿಡಿದಿದ್ದರು.

ಬೋಡೋ ಧಂಗೆ ತಣ್ಣಗಾಗಿದ್ದು ಹೇಗೆ?

ಗುವಾಹಟಿಯಲ್ಲಿ 1993 ರಲ್ಲಿ ಮೊದಲ ಬಾರಿಗೆ ಬೋಡೋ ಹೋರಾಟಗಾರರು ಮತ್ತು ಕೇಂದ್ರ ಸರ್ಕಾರದ ನಡುವೆ ಒಪ್ಪಂದ ನಡೆಯಿತು. ಈ ಒಪ್ಪಂದ ಪ್ರಕಾರ, ಬೋಡೋಲ್ಯಾಂಡ್‌ ಸ್ವಾಯತ್ತ ಮಂಡಳಿ ರಚನೆಯಾಯಿತು. ಆದರೆ, ಈ ಒಪ್ಪಂದಿಂದ ತಮ್ಮ ಬೇಡಿಕೆಗಳು ಈಡೇರಿಲ್ಲಎಂದು ವಾದಿಸಿದ ಬೋಡೋಗಳು ಮತ್ತೆ ಪ್ರತ್ಯೇಕ ಬೋಡೋ ಲ್ಯಾಂಡ್‌ಗಾಗಿ ಸಶಸ್ತ್ರ ಆಂದೋಲನ ಪ್ರಾರಂಭಿಸಿದ್ದರು. ಫೆಬ್ರವರಿ 10,2003ರಂದು, ಅಸ್ಸಾಂ ಸರ್ಕಾರ, ಕೇಂದ್ರ ಸರ್ಕಾರ ಮತ್ತು ಬೋಡೋ ಲಿಬರೇಶನ್‌ ಟೈಗರ್ಸ್‌ ಬೋಡೋಲ್ಯಾಂಡ್‌ ಪ್ರಾದೇಶಿಕ ಮಂಡಳಿಯನ್ನು ರೂಪಿಸುವ ಒಪ್ಪಂದಕ್ಕೆ ಸಹಿ ಹಾಕಿದರು.

ಇದಾದ ಬಳಿಕ 2020 ಮೂರನೇ ಒಪ್ಪಂದಕ್ಕೆ ಒತ್ತಡ ಹೆಚ್ಚಿತು. ಈ ಬಾರಿ ಶಾಂತಿ ಒಪ್ಪಂದದಲ್ಲಿ ಭಾಗವಹಿಸಲು, ಮ್ಯಾನ್ಮಾರ್‌ನಲ್ಲಿ ತಲೆ ಮರೆಸಿಕೊಂಡಿದ್ದ ಬೋಡೋ ಉಗ್ರ ನಾಯಕರು ಭಾರತಕ್ಕೆ ಬಂದಿದ್ದರು. 2020ರ ಜನವರಿ 28 ರಂದು ಸರ್ಕಾರ ಮತ್ತು ಡೆಮಾಕ್ರಟಿಕ್ ಫ್ರಂಟ್ ಆಫ್ ಬೋಡೋ ಲ್ಯಾಂಡ್(ಎನ್‌ಡಿಎಫ್‌ಬಿ) ನಡುವೆ ಮೂರನೇ ಒಪ್ಪಂದ ನಡೆಯಿತು. ಈ ಒಪ್ಪಂದದಲ್ಲಿ ಸರ್ಕಾರ ಮೇಲುಗೈ ಸಾಧಿಸಿತ್ತು. ಎನ್‌ಡಿಎಫ್‌ಬಿ ಹೋರಾಟಗಾರರು ಶಸ್ತ್ರ ಕೆಳಗಿಟ್ಟು ಶರಣಾಗತಿಗೆ ಒಪ್ಪಿದರು. ಆ ಬಳಿಕ ಬೋಡೋ ಲ್ಯಾಂಡ್ ಪ್ರದೇಶದಲ್ಲಿ ಶಾಂತಿ ಸ್ಥಾಪನೆಯಾಗಿದೆ ಎಂದು ಹೇಳಲಾಗ್ತಿದೆ.

ಇದನ್ನೂ ಓದಿ: ಜಾರ್ಖಂಡ್‌: ಬುಡಕಟ್ಟು ಸಮುದಾಯದ ಗಾಯಕನನ್ನು ಥಳಿಸಿ ಹತ್ಯೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಮಾಸ್ ನಾಯಕ ಸಿನ್ವಾರ್, ಇಸ್ರೇಲ್ ಪ್ರಧಾನಿ ನೆತನ್ಯಾಹು ವಿರುದ್ದ ಬಂಧನ ವಾರೆಂಟ್‌ಗೆ ಆಗ್ರಹ

0
ಗಾಝಾದ ಹಮಾಸ್ ನಾಯಕ ಯಾಹ್ಯಾ ಸಿನ್ವಾರ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ (ಐಸಿಸಿ) ಕೋರ್ಟ್‌ನಿಂದ ಬಂಧನ ವಾರೆಂಟ್ ಕೋರುವುದಾಗಿ ನ್ಯಾಯಾಲಯದ ಪ್ರಾಸಿಕ್ಯೂಟರ್ ಕರೀಮ್ ಖಾನ್ ಸೋಮವಾರ ಸಿಎನ್‌ಎನ್‌ಗೆ...