ಮಿತಿ ಮೀರಿದ ಬಿಸಿಲಿನ ತಾಪದ ಆರೋಗ್ಯ ಸಮಸ್ಯೆಗಳಿಂದಾಗಿ ಉತ್ತರ ಪ್ರದೇಶದ ಬಲ್ಲಿಯಾದಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಇಂದು ಕೂಡ 14 ಜನ ಮೃತಪಟ್ಟಿದ್ದಾರೆ. ಕಳೆದ ನಾಲ್ಕು ದಿನಗಳಲ್ಲಿ ಸಾವಿನ ಸಂಖ್ಯೆ 68ಕ್ಕೆ ತುಲಪಿದೆ.
ಹೆಚ್ಚಿನ ತಾಪಮಾನದ ಸಾವುಗಳಿಗೆ ಸಂಬಂಧಿಸಿರುವ ಸಮರ್ಪಕ ಪುರಾವೆಗಳು ಇನ್ನೂ ಸಿಕ್ಕಿಲ್ಲ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ರವೀಂದ್ರ ಕುಮಾರ್ ಭಾನುವಾರ ಹೇಳಿದ್ದಾರೆ. ಬಿಸಿಗಾಳಿಯಿಂದ ಸಂಭವಿಸುವ ಸಾವುಗಳ ಬಗ್ಗೆ ಸರಿಯಾದ ಮಾಹಿತಿಯಿಲ್ಲದೆ ಅಸಡ್ಡೆ ಹೇಳಿಕೆ ನೀಡಿದ್ದಕ್ಕಾಗಿ ಡಾ ದಿವಾಕರ್ ಸಿಂಗ್ ಅವರನ್ನು ರಾಜ್ಯ ಸರ್ಕಾರವು ಜಿಲ್ಲಾ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕರಿಂದ ಶನಿವಾರ ವಜಾಗೊಳಿಸಿದೆ.
ಇದುವರೆಗೂ ಮಿತಿ ಮೀರಿದ ತಾಪಮಾನದಿಂದಾಗಿ 578 ಜನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೆಚ್ಚಿನ ಸಾವುಗಳು ಹೃದಯಾಘಾತ, ಬ್ರೈನ್ ಸ್ಟ್ರೋಕ್ ಮತ್ತು ಅತಿಸಾರದಿಂದ ಸಂಭವಿಸಿವೆ ಎಂದು ಮುಖ್ಯ ವೈದ್ಯಾಧಿಕಾರಿ ಜಯಂತ್ ಕುಮಾರ್ ತಿಳಿಸಿದ್ದಾರೆ.
”ಎಲ್ಲಾ ವ್ಯಕ್ತಿಗಳು ಬೇರೆಬೇರೆ ಕಾಯಿಲೆಗಳಿಂದ ಬಳಲುತ್ತಿದ್ದರು. ತೀವ್ರತರವಾದ ಶಾಖದಿಂದಾಗಿ ಅವರ ಪರಿಸ್ಥಿತಿಗಳು ಹದಗೆಟ್ಟವು” ಎಂದು ಅವರು ಹೇಳಿದರು.
ಉತ್ತರ ಪ್ರದೇಶದ ಹಲವಾರು ಭಾಗಗಳು ಶಾಖದ ಅಲೆಯಲ್ಲಿ ತತ್ತರಿಸುತ್ತಿವೆ, ಕಳೆದ ಕೆಲವು ದಿನಗಳಿಂದ 42 ರಿಂದ 47 ಡಿಗ್ರಿ ಸೆಲ್ಸಿಯಸ್ ತಾಪಮಾನವಿದೆ ಎಂದು ದಿ ಹಿಂದೂ ವರದಿ ಮಾಡಿದೆ.
ಬಯಲು ಪ್ರದೇಶಗಳಿಗೆ, ಗರಿಷ್ಠ ತಾಪಮಾನವು 40 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಹೆಚ್ಚಾದಾಗ ಮತ್ತು ಸಾಮಾನ್ಯಕ್ಕಿಂತ ಕನಿಷ್ಠ 4.5 ಡಿಗ್ರಿಗಳಷ್ಟು ಹೆಚ್ಚಾದಾಗ ಶಾಖದ ಅಲೆಯನ್ನು ಘೋಷಿಸಲಾಗುತ್ತದೆ.
ಇದನ್ನೂ ಓದಿ: ಅಕ್ಕಿ ಕೊಡಲು ಛತ್ತೀಸಗಢ್ ಸರ್ಕಾರ ಒಪ್ಪಿಗೆ ಸೂಚಿಸಿದೆ: ಡಾ.ಜಿ ಪರಮೇಶ್ವರ್