Homeಮುಖಪುಟಅಜಾದ್‌ ಜಾಮೀನು ಅರ್ಜಿ ವಿಚಾರಣೆ: ದೆಹಲಿ ಪೊಲೀಸರ ಬೆವರಿಳಿಸಿದ ನ್ಯಾಯಾಧೀಶರು..

ಅಜಾದ್‌ ಜಾಮೀನು ಅರ್ಜಿ ವಿಚಾರಣೆ: ದೆಹಲಿ ಪೊಲೀಸರ ಬೆವರಿಳಿಸಿದ ನ್ಯಾಯಾಧೀಶರು..

ನೀವು ಜಮಾ ಮಸೀದಿ ಪಾಕಿಸ್ತಾನದಲ್ಲಿದೆ ಎಂಬಂತೆ ವರ್ತಿಸುತ್ತಿದ್ದೀರಿ. ಅದು ಪಾಕಿಸ್ತಾನವಾಗಿದ್ದರೂ ಸಹ ನೀವು ಅಲ್ಲಿಗೆ ಹೋಗಿ ಪ್ರತಿಭಟಿಸಬಹುದು. ಎಕೆಂದರೆ ಪಾಕಿಸ್ತಾನವು ಅವಿಭಜಿತ ಭಾರತದ ಒಂದು ಭಾಗವಾಗಿತ್ತು

- Advertisement -
- Advertisement -

ಭೀಮ್‌ ಆರ್ಮಿ ಮುಖ್ಯಸ್ಥ ಚಂದ್ರಶೇಖರ್‌ ಅಜಾದ್‌ರವರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ದೆಹಲಿಯ ಟಿಸ್‌ ಹಜಾರಿಯಾ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆ ಡಾ.ಕಾಮಿನಿ ಲಾವು ಪಬ್ಲಿಕ್‌ ಪ್ರಾಸಿಕ್ಯೂಟರ್‌ರವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಜಾಮೀನು ಅರ್ಜಿಯನ್ನು ಪಬ್ಲಿಕ್‌ ಪ್ರಾಸಿಕ್ಯೂಟರ್‌ ವಿರೋಧಿಸಿದ್ದು, ಆಜಾದ್ ತನ್ನ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಮೂಲಕ ಹಿಂಸಾಚಾರವನ್ನು ಪ್ರಚೋದಿಸಿದ್ದಾರೆ ಎಂದು ಆರೋಪಿಸಿದರು. ಆದರೆ ಪ್ರಾಸಿಕ್ಯೂಟರ್ ಆರಂಭದಲ್ಲಿ ಆಜಾದ್ ಅವರ ವಕೀಲರಾದ ಮಹಮೂದ್ ಪ್ರಚಾ ಅವರೊಂದಿಗೆ ಪೋಸ್ಟ್‌ಗಳನ್ನು ಹಂಚಿಕೊಳ್ಳಲು ನಿರಾಕರಿಸಿದರು. ಆದರೆ ಯಾವುದೇ ಆರೋಪ ಮಾಡವಾಗ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹಂಚಿಕೊಳ್ಳುವುದು ಅಗತ್ಯ ಎಂದು ನ್ಯಾಯಾಧೀಶರು ಕಟುವಾಗಿ ಪ್ರಾಸಿಕ್ಯೂಟರ್‌ಗೆ ಹೇಳಿದರು

ಈ ಕುರಿತು, ಪ್ರಾಸಿಕ್ಯೂಟರ್ ಕೆಲವು ಪೋಸ್ಟ್‌ಗಳನ್ನು ಓದಿದರು. ಆಗ ಸಿಎಎ ಎನ್‌ಆರ್‌ಸಿಯನ್ನು ವಿರೋಧಿಸಲು ಜಮಾ ಮಸೀದಿ ಬಳಿ ಆಜಾದ್ ಪ್ರತಿಭಟನೆ ಮತ್ತು ಧರಣಿಗಾಗಿ ಕರೆ ನೀಡಿದ್ದನ್ನು ಉಲ್ಲೇಖಿಸಿ, ನ್ಯಾಯಾಧೀಶರು “ಧರಣೆ ಮಾಡುವುದರಲ್ಲಿ ಏನು ತಪ್ಪಾಗಿದೆ? ಪ್ರತಿಭಟಿಸುವುದರಲ್ಲಿ ಏನು ತಪ್ಪಿದೆ? ಪ್ರತಿಭಟಿಸುವುದು ಪ್ರತಿಯೊಬ್ಬರ ಸಾಂವಿಧಾನಿಕ ಹಕ್ಕು” ಎಂದು ಹೇಳಿದ್ದಾರೆ.

ಆ ಪ್ರತಿಭಟನೆಯಲ್ಲಿ ಹಿಂಸೆ ಎಲ್ಲಿದೆ? ಈ ಯಾವುದೇ ಪೋಸ್ಟ್‌ಗಳಲ್ಲಿ ಏನು ತಪ್ಪಾಗಿದೆ? ನೀವು ಪ್ರತಿಭಟಿಸಲು ಸಾಧ್ಯವಿಲ್ಲ ಎಂದು ಹೇಗೆ ಹೇಳುತ್ತೀರಿ? ನೀವು ಸಂವಿಧಾನವನ್ನು ಓದಿದ್ದೀರಾ?  ಎಂದು ಪ್ರಾಸಿಕ್ಯೂಟರ್‌ಗೆ ಪ್ರಶ್ನಿಸಿದ್ದಾರೆ.

“ನೀವು ಜಮಾ ಮಸೀದಿ ಪಾಕಿಸ್ತಾನದಲ್ಲಿದೆ ಎಂಬಂತೆ ವರ್ತಿಸುತ್ತಿದ್ದೀರಿ. ಅದು ಪಾಕಿಸ್ತಾನವಾಗಿದ್ದರೂ ಸಹ ನೀವು ಅಲ್ಲಿಗೆ ಹೋಗಿ ಪ್ರತಿಭಟಿಸಬಹುದು. ಎಕೆಂದರೆ ಪಾಕಿಸ್ತಾನವು ಅವಿಭಜಿತ ಭಾರತದ ಒಂದು ಭಾಗವಾಗಿತ್ತು” ಎಂದು ನ್ಯಾಯಾಧೀಶರು ಪ್ರಾಸಿಕ್ಯೂಟರ್‌ಗೆ ತಿಳಿಸಿದರು. ಆಜಾದ್ ಅವರ ಯಾವುದೇ ಪೋಸ್ಟ್‌ಗಳು ಅಸಂವಿಧಾನಿಕವಲ್ಲ ಎಂದ ನ್ಯಾಯಾಧೀಶರು ಪ್ರತಿಭಟಿಸುವ ಹಕ್ಕು ಪ್ರತಿಯೊಬ್ಬರಿಗೆ ಇದೆ ಎಂದು ಪ್ರಾಸಿಕ್ಯೂಟರ್‌ಗೆ ನೆನಪಿಸಿದರು.

ಪ್ರತಿಭಟನೆಗೆ ಅನುಮತಿ ತೆಗೆದುಕೊಳ್ಳಬೇಕು ಎಂದು ಪ್ರಾಸಿಕ್ಯೂಟರ್ ಉತ್ತರಿಸಿದಾಗ, ನ್ಯಾಯಾಧೀಶರು “ಏನು ಅನುಮತಿ? 144 ಅನ್ನು ಪದೇ ಪದೇ ಬಳಸುವುದು ದುರುಪಯೋಗ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ (ಇತ್ತೀಚಿನ ಕಾಶ್ಮೀರ ಪ್ರಕರಣದ ನಿರ್ಧಾರವನ್ನು ಉಲ್ಲೇಖಿಸಿ) ಎಂಬುದು ನಿಮಗೆ ಗೊತ್ತೆ ಎಂದು ಪ್ರಶ್ನಿಸಿದ್ದಾರೆ. ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸಿದ ಅನೇಕ ಜನರನ್ನು ನಾನು ನೋಡಿದ್ದೇನೆ. ಮುಂದೆ ಅವರು ನಾಯಕರು ಮತ್ತು ಮಂತ್ರಿಗಳಾಗಿದ್ದಾರೆ ಎಂದು ನ್ಯಾಯಾಧೀಶರು ಹೇಳಿದರು. ಅಲ್ಲದೇ ನಂತರ ಆಜಾದ್ ಕೂಡ “ಉದಯೋನ್ಮುಖ ರಾಜಕಾರಣಿ”ಯಾಗಿದ್ದು ಅವರು ಸಹ ಪ್ರತಿಭಟಿಸುವ ಹಕ್ಕನ್ನು ಹೊಂದಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

“ಧಾರ್ಮಿಕ ಸ್ಥಳಗಳ ಹೊರಗೆ ಪ್ರತಿಭಟಿಸುವುದನ್ನು ಯಾವ ಕಾನೂನಿನಡಿಯಲ್ಲಿ ನಿಷೇಧಿಸಲಾಗಿದೆ ಎಂದು ನೀವು ನನಗೆ ತೋರಿಸಬೇಕೆಂದು, ಆಜಾದ್ ಅವರ ಹಿಂಸಾಚಾರಕ್ಕೆ ಯಾವುದೇ ಪುರಾವೆಗಳಿವೆಯೇ ಎಂದು ನ್ಯಾಯಾಧೀಶರು ಪ್ರಾಸಿಕ್ಯೂಟರ್ ಅವರನ್ನು ಕೇಳಿದರು.

ಅಂದರೆ ಪುರಾವೆಗಳನ್ನು ಸಂಗ್ರಹಿಸಲಾರದಷ್ಟು ನಮ್ಮ ದೆಹಲಿ ಪೊಲೀಸರು ಹಿಂದುಳಿದಿದ್ದಾರೆಯೇ? ಎಂತಹ ಸಣ್ಣ ಕೇಸುಗಳನ್ನು ಸಾಕ್ಷಿಗಳನ್ನು ಸಂಗ್ರಹಿಸುವ ಪೊಲೀಸರು ಈ ಕೇಸಿನಲ್ಲಿ ಯಾಕೆ ಸಂಗ್ರಹಿಸಿಸಿಲ್ಲ? ಎಂದು ಪ್ರಶ್ನಿಸಿದ್ದಾರೆ.

ಚಂದ್ರಶೇಖರ್‌ ಅಜಾದ್‌ರನ್ನು ಬಂಧಿಸುವಂತಹ ಯಾವುದೇ ಪ್ರಕರಣಗಳು ನಡೆದಿಲ್ಲ, ಭಿನ್ನಾಭಿಪ್ರಾಯವನ್ನು ಹತ್ತಿಕ್ಕಲು ಬಂಧಿಸಲಾಗಿದೆ ಎಂದು ಆಜಾದ್ ಪರ ವಕೀಲ ಪ್ರಾಚಾ ವಾದ ಮಂಡಿಸಿದರು.

ಈ ಸಮಯದಲ್ಲಿ ಪ್ರಾಸಿಕ್ಯೂಟರ್, ಆಜಾದ್ ಉಗ್ರ ಭಾಷಣಗಳನ್ನು ಮಾಡಿದ ಬಗ್ಗೆ “ಡ್ರೋನ್ ಫೂಟೇಜ್” ಪುರಾವೆಗಳಿವೆ ಎಂದು ಹೇಳಿದರು. ಇದನ್ನು ನಿರಾಕರಿಸಿದ ಪ್ರಾಚಾ, ಧರಣದ ಸಮಯದಲ್ಲಿ ಆಜಾದ್ ಕೇವಲ ಸಂವಿಧಾನವನ್ನು ಓದುತ್ತಿದ್ದಾನೆ ಮತ್ತು ಸಿಎಎ, ಎನ್‌ಆರ್‌ಸಿ ವಿರುದ್ಧ ಮಾತನಾಡುತ್ತಿದ್ದಾನೆ ಎಂದು ಹೇಳಿದರು.

“ವಸಾಹತುಶಾಹಿ ಯುಗದಲ್ಲಿ ಪ್ರತಿಭಟನೆಗಳು ರಸ್ತೆಗಿಳಿದವು. ಆದರೆ ನಿಮ್ಮ ಪ್ರತಿಭಟನೆಯು ನ್ಯಾಯಾಲಯಗಳ ಒಳಗೆ ಕಾನೂನುಬದ್ಧವಾಗಿರಬಹುದು. ಸಂಸತ್ತಿನ ಒಳಗೆ ಹೇಳಬೇಕಾದ ವಿಷಯಗಳನ್ನು ಹೇಳಲಾಗಿಲ್ಲ ಮತ್ತು ಅದಕ್ಕಾಗಿಯೇ ಜನರು ಬೀದಿಗಿಳಿದಿದ್ದಾರೆ. ನಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಸಂಪೂರ್ಣ ಹಕ್ಕು ನಮಗಿದೆ ಆದರೆ ನಮ್ಮ ದೇಶವನ್ನು ನಾಶಮಾಡಲು ಸಾಧ್ಯವಿಲ್ಲ” ಎಂದು ನ್ಯಾಯಾಧೀಶರು ಹೇಳಿದ್ದಾರೆ.

ಅಜಾದ್‌ಗೆ ಉದ್ದೇಶಪೂರ್ವಕವಾಗಿ ಹಾನಿಯಾಗುತ್ತಿದೆ ಎಂದು ಆಜಾದ್ ವಕೀಲ ಪ್ರಾಚಾ ಹೇಳಿದ್ದಾರೆ. ನ್ಯಾಯಾಲಯದ ನಿರ್ದೇಶನವಿದ್ದರೂ ಸಹ ಅಜಾದ್‌ಗೆ ಅಗತ್ಯವಾದ ವೈದ್ಯಕೀಯ ಚಿಕಿತ್ಸೆ ಸಹ ನೀಡಲಾಗಿಲ್ಲ ಎಂದು ಪ್ರಚಾ ಗಮನಸೆಳೆದರು.

ನಂತರ ನ್ಯಾಯಾಧೀಶರು ಪ್ರಾಸಿಕ್ಯೂಟರ್ ಕೋರಿಕೆಯ ಮೇರೆಗೆ ವಿಚಾರಣೆಯನ್ನು ನಾಳೆ ಮಧ್ಯಾಹ್ನ 2 ರವರೆಗೆ ಮುಂದೂಡಿದರು.. ಬಹುಶಃ ನಾಳೆ ಅಜಾದ್‌ಗೆ ಜಾಮೀನು ದೊರೆಯುವ ಸಾಧ್ಯತೆ ನಿಚ್ಚಳವಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

3 COMMENTS

  1. ದೇಶದಲ್ಲಿ ಸಂವಿಧಾನದಡಿಯಲ್ಲಿ ಹೋರಾಟ ಮಾಡುವವರು ಕಡಿಮೆ ಅದರಲ್ಲೂ ವಿಶೇಷ ಸಂದರ್ಶನ ಭೀಮ್ ಆರ್ಮಿ ಚೀಫ್ ಚಂದ್ರಶೇಖರ್ ರಾವಣ್ ಆಜಾದ್ ರವರು
    ನ್ಯಾಯಬದ್ಧ ಕಾನೂನಿನ ಚೌಕಟ್ಟು ಒಳಪಡುವ ಸಂವಿಧಾನದ ಹಕ್ಕುಗಳಿಗೆ ನ್ಯಾಯ ತವಾಗಿ ಹೋರಾಡುತ್ತಿದ್ದಾರೆ ಅವರ ಏಳಿಗೆಯ ಸೈರಿಸಲಾರದವರು
    ಉದ್ದೇಶಪೂರ್ವಕವಾಗಿ ಬಂದೀಖಾನೆಯಲ್ಲಿ ಇಡುವ ವ್ಯವಸ್ಥೆಯನ್ನು ಸಂವಿಧಾನದ ವಿರುದ್ಧ ರೂಪಿಸಿಕೊಂಡಿರುತ್ತದೆ ಹೊರತು ನ್ಯಾಯಯುತವಲ್ಲ

    ಬೇನಾಮಿ ಆಸ್ತಿ ಬ್ಲಾಕ್ಮನಿ ಅಕ್ರಮ ಹಣ ವರ್ಗಾವಣೆ ಸಂವಿಧಾನದ ಅಡಿಯಲ್ಲಿ ನ್ಯಾಯಕ್ಕೆ ವಿರುದ್ಧವಾಗಿರುವ ಎಲ್ಲರಿಗೂ ದೋಷಮುಕ್ತರಾಗಿ ಹೊರಗೆ ಬರುತ್ತಾರೆ

    ಸಾರ್ವಜನಿಕರಿಗಾಗಿ ಸಂವಿಧಾನದ ಕಾನೂನಿನ ಮಾರ್ಗದರ್ಶಕರಾಗಿ ಸಮಾಜ ನಾಗರಿಕರಿಗೆ ತಿಳಿಯಪಡಿಸುವ ವ್ಯಕ್ತಿಯನ್ನು ಅಕ್ರಮವಾಗಿ ಬಂದೀಖಾನೆಗೆ ರವಾನಿಸುತ್ತಾರೆ

    ಜೈ ಭೀಮ್ ಜೈ ಚಂದ್ರಶೇಖರ್ ರಾವಣ್ಆಜಾದ್ ಸರ್
    ಜೈ ಸಂವಿಧಾನ

LEAVE A REPLY

Please enter your comment!
Please enter your name here

- Advertisment -

Must Read

ಮಂಗಳೂರು: ‘ಶೂದ್ರ ವರ್ಗದವ ನಮ್ಮನ್ನು ಆಳಲು ಹೊರಟರೆ, ಬಂಟರು ಸಹಿಸುವುದಕ್ಕೆ ಸಾಧ್ಯವಿದೆಯೇ?’: ಬಿಜೆಪಿಗೆ ಮತ...

0
ಲೋಕಸಭೆ ಚುನಾವಣೆ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾನಕ್ಕೆ 24 ಗಂಟೆಗಳು ಮಾತ್ರ ಬಾಕಿ ಉಳಿದಿದೆ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬಂಟ ಸಮುದಾಯದ  ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಬಿಲ್ಲವ...