ಪ್ರವಾದಿ ವಿರುದ್ಧದ ಹೇಳಿಕೆಗಾಗಿ ಕಳೆದ ವರ್ಷ ಆಗಸ್ಟ್ನಲ್ಲಿ ಬಿಜೆಪಿ ಪಕ್ಷದಿಂದ ಅಮಾನತುಗೊಂಡಿದ್ದ ತೆಲಂಗಾಣದ ಶಾಸಕ ಟಿ ರಾಜಾ ಸಿಂಗ್ ಅವರ ಅಮಾನತನ್ನು ಬಿಜೆಪಿ ಭಾನುವಾರ ಹಿಂಪಡೆದಿದೆ.
ತೆಲಂಗಾಣ ವಿಧಾನಸಭಾ ಚುನಾವಣೆಗೂ ಮುನ್ನ ಶಾಸಕ ಟಿ.ರಾಜಾ ಸಿಂಗ್ ಅವರ ಅಮಾನತನ್ನು ಹಿಂಪಡೆದಿರುವ ಬಿಜೆಪಿಯು, ಗೋಶಮಹಲ್ ವಿಧಾನಸಭಾ ಕ್ಷೇತ್ರದಿಂದ ಅವರಿಗೆ ಟಿಕೆಟ್ ಕೊಡುವ ಲೆಕ್ಕಾಚಾರವನ್ನು ಹಾಕಿಕೊಂಡಿದೆ ಎನ್ನಲಾಗಿದೆ.
ಬಿಜೆಪಿಯ ಕೇಂದ್ರ ಶಿಸ್ತು ಸಮಿತಿಯು ಗೋಶಾ ಮಹಲ್ ಶಾಸಕ ಟಿ ರಾಜಾ ಸಿಂಗ್ ಅವರ ಅಮಾನತು ಆದೇಶ ಹಿಂಪಡೆದಿದೆ. ಪಕ್ಷವು ನೀಡಿದ ಶೋಕಾಸ್ ನೋಟಿಸ್ಗೆ ಪ್ರತಿಕ್ರಿಯೆಯಾಗಿ ಅವರ ವಿವರಣೆಯನ್ನು ಪರಿಶೀಲಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ನಿಮ್ಮ ಉತ್ತರ ಮತ್ತು ವಿವರಣೆಯನ್ನು ಸಮಿತಿಯು ಪರಿಗಣಿಸಿದೆ. ನಿಮ್ಮ ಉತ್ತರವನ್ನು ಆಧರಿಸಿ, ನಿಮ್ಮ ಅಮಾನತು ರದ್ದುಗೊಳಿಸಲು ಸಮಿತಿಯು ನಿರ್ಧರಿಸಿದೆ ಎಂದು ಪಕ್ಷದ ಕೇಂದ್ರ ಶಿಸ್ತು ಸಮಿತಿಯ ಸದಸ್ಯ ಕಾರ್ಯದರ್ಶಿ ಓಂ ಪಾಠಕ್, ಶಾಸಕ ಟಿ ರಾಜಾ ಸಿಂಗ್ಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
2022ರಲ್ಲಿ ಕಾಮಿಡಿಯನ್ ಮುನವ್ವರ್ ಫಾರೂಕಿ ಅವರಿಗೆ ಹೈದರಾಬಾದ್ನಲ್ಲಿ ಪ್ರದರ್ಶನ ನೀಡಲು ಅವಕಾಶ ನೀಡಿದ್ದ ಭಾರತ್ ರಾಷ್ಟ್ರ ಸಮಿತಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುವ ಸಂದರ್ಭದಲ್ಲಿ ರಾಜಾ ಸಿಂಗ್ ಪ್ರವಾದಿ ಮುಹಮ್ಮದ್ ಅವರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು. ಆ ಬಳಿಕ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿತ್ತು.
ಬಿಜೆಪಿ ಪಕ್ಷವು ರಾಜಾ ಸಿಂಗ್ ಅವರನ್ನು ಅಮಾನತುಗೊಳಿಸಿದ ಬಳಿಕ ಬಂಧನಕ್ಕೊಳಗಾಗಿದ್ದ ಶಾಸಕ ಟಿ ರಾಜಾ ಸಿಂಗ್ 3 ತಿಂಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದರು.
ಇದನ್ನು ಓದಿ: ದೇವಾಲಯಗಳಲ್ಲಿ RSS ಚಟುವಟಿಕೆ ನಿಷೇಧ: ಹೊಸ ಸುತ್ತೋಲೆ ಹೊರಡಿಸಿದ ದೇವಸ್ವಂ ಮಂಡಳಿ