ಪುಣೆಯ ಮಹಾರಾಷ್ಟ್ರ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ-ವರ್ಲ್ಡ್ ಪೀಸ್ ಯೂನಿವರ್ಸಿಟಿಯಲ್ಲಿ (MIT-WPU) ಪತ್ರಿಕೋದ್ಯಮ ವಿಭಾಗದ ಮಾಧ್ಯಮ ಪ್ರಶಸ್ತಿಗೆ ಆಯ್ಕೆಯಾಗಿದ್ದ ಕಾಶ್ಮೀರಿ ಪತ್ರಕರ್ತೆ ಸಫೀನಾ ನಬಿ ಅವರಿಗೆ ನೀಡಬೇಕಿದ್ದ ಪ್ರಶಸ್ತಿಯನ್ನು ಹಿಂದುತ್ವ ಗುಂಪುಗಳ ಒತ್ತಡಕ್ಕೆ ಮಣಿದು ಕೊನೇ ಗಳಿಗೆಯಲ್ಲಿ ವಿವಿ ರದ್ದುಪಡಿಸಿದೆ.
ಹಿಂದುತ್ವ ಗುಂಪುಗಳ ಒತ್ತಡಕ್ಕೆ ಮಣಿದು ವಿಶ್ವವಿದ್ಯಾಲಯದ ಆಡಳಿತಾಧಿಕಾರಿಗಳು ಪ್ರಶಸ್ತಿಯನ್ನು ಹಿಂತೆಗೆದುಕೊಂಡಿದ್ದಾರೆ ಮತ್ತು ಘಟನೆಯ ಬಗ್ಗೆ ಸಂಸ್ಥೆಯ ಅಧಿಕಾರಿಗಳು ಮೌನವಾಗಿದ್ದಾರೆ.
ಸ್ಕ್ರಾಲ್ನಲ್ಲಿ ಪ್ರಕಟವಾಗಿರುವ ‘ದಿ ಹಾಫ್ ವಿಡೋಸ್ ಆಫ್ ಕಾಶ್ಮೀರ್’ ಎಂಬ ಶೀರ್ಷಿಕೆಯ ನಬಿ ಅವರ ಲೇಖನವು ದಶಕಗಳಿಂದ ತಮ್ಮ ಆಸ್ತಿ ಹಕ್ಕುಗಳಿಂದ ವಂಚಿತರಾಗಿರುವ ಕಾಶ್ಮೀರದ ‘ಅರೆ ವಿಧವೆಯರು’ ಎದುರಿಸುತ್ತಿರುವ ನಿರಂತರ ಹೋರಾಟಗಳ ಮೇಲೆ ಬೆಳಕು ಚೆಲ್ಲಿತ್ತು.
ಅ.11 ರಂದು ಮಹಾರಾಷ್ಟ್ರ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ-ವರ್ಲ್ಡ್ ಪೀಸ್ ಯೂನಿವರ್ಸಿಟಿಯ ಮಾದ್ಯಮ ಮತ್ತು ಸಂವಹನ ವಿಭಾಗದ ನಿರ್ದೇಶಕರಾದ ಧೀರಜ್ ಸಿಂಗ್ ಅವರು ಫೋನ್ ಕರೆ ಮತ್ತು ಇಮೇಲ್ ಮೂಲಕ ನಬಿ ಅವರಿಗೆ ಪ್ರಶಸ್ತಿ ಸಿಕ್ಕಿರುವ ಬಗ್ಗೆ ಹೇಳಿದ್ದರು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಂಸ್ಥೆಯು ಪ್ರಯಾಣದ ವ್ಯವಸ್ಥೆಯನ್ನು ಕೂಡ ಮಾಡಿದೆ ಎಂದು ನಬಿ ದಿ ವೈರ್ ಸುದ್ದಿ ವೆಬ್ಸೈಟ್ಗೆ ತಿಳಿಸಿದ್ದಾರೆ.
ಅ.17 ರಂದು ಪುಣೆಗೆ ತೆರಳಲು ನಿರ್ಧರಿಸಲಾಗಿತ್ತು. ಆದರೆ ಅ.16 ರ ಮಧ್ಯಾಹ್ನ ಅಧ್ಯಾಪಕರೋರ್ವರು ಅವರನ್ನು ಸಂಪರ್ಕಿಸಿ ಪ್ರಶಸ್ತಿ ರದ್ದತಿ ಬಗ್ಗೆ ತಿಳಿಸಿದ್ದಾರೆ ಮತ್ತು ಪುಣೆಗೆ ತೆರಳಬೇಕಿದ್ದ ಪ್ರಯಾಣವನ್ನು ರದ್ದುಪಡಿಸುವಂತೆ ಸೂಚಿಸಿದ್ದಾರೆ.
ನಬಿ ನಂತರ ವಿವಿಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಸಹಾಯಕ ಪ್ರಾಧ್ಯಾಪಕ ರಾಜೀಶ್ ಕುಮಾರ್ ಅವರನ್ನು ಸಂಪರ್ಕಿಸಿ, ಈ ಬಗ್ಗೆ ಮಾಹಿತಿ ಕೇಳಿದ್ದಾರೆ. ಈ ವೇಳೆ ಪ್ರಶಸ್ತಿಯನ್ನು ರದ್ದುಗೊಳಿಸಿರುವ ಬಗ್ಗೆ ಅವರು ಖಚಿತಪಡಿಸಿದ್ದಾರೆ ಮತ್ತು ಕ್ಷಮೆ ಕೇಳಿದ್ದಾರೆ. ಪ್ರಶಸ್ತಿ ರದ್ಧತಿ ಬಗ್ಗೆ ನಬಿ ಅವರು ಕಾರಣವನ್ನು ಕೇಳಿದ್ದಾರೆ. ಇ-ಮೇಲ್ ಮೂಲಕ ಕಾರಣ ತಿಳಿಸುವಂತೆ ಆಗ್ರಹಿಸಿದ್ದಾರೆ. ಆದರೆ ಪ್ರಾಧ್ಯಾಪಕರ ಅದಕ್ಕೆ ನಿರಾಕರಿಸಿದ್ದಾರೆ. ಕೊನೆಗೆ ವಿಶ್ವವಿದ್ಯಾನಿಲಯದಲ್ಲಿ ನನಗೆ ಸನ್ಮಾನಿಸದಂತೆ ಸಾಕಷ್ಟು ರಾಜಕೀಯ ಒತ್ತಡವಿದೆ ಎಂಬ ಕಾರಣವನ್ನು ನೀಡಿದ್ದಾರೆ ಎಂದು ಸಫೀನಾ ನಬಿ ಮಾದ್ಯಮಗಳಿಗೆ ತಿಳಿಸಿದ್ದಾರೆ.
ಈ ಬೆಳವಣಿಗೆಯು ಪ್ರಶಸ್ತಿ ವಿಜೇತರನ್ನು ಆಯ್ಕೆಮಾಡಿದ್ದ ತೀರ್ಪುಗಾರರಿಗೂ ಅಚ್ಚರಿಯನ್ನು ಮೂಡಿಸಿದೆ.
ಇದನ್ನು ಓದಿ: ಮಣಿಪುರ ಹಿಂಸಾಚಾರ: ಕೇಂದ್ರ, ಮಣಿಪುರ ಸರ್ಕಾರಕ್ಕೆ ವಿವರಣೆ ಕೇಳಿ NHRC ನೊಟೀಸ್