ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಕೇಂದ್ರ, ಮಣಿಪುರ ಸರ್ಕಾರ ಮತ್ತು ಮಣಿಪುರ ಪೊಲೀಸ್ ಮುಖ್ಯಸ್ಥರಿಗೆ ನೋಟಿಸ್ ಜಾರಿ ಮಾಡಿದ್ದು, ಪ್ರಕ್ಷುಬ್ಧ ರಾಜ್ಯದಲ್ಲಿ ಶಾಂತಿಯನ್ನು ಕಾಪಾಡಲು ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ಸ್ಪಷ್ಟವಾಗಿ ವಿವರಿಸುವಂತೆ ಆಗ್ರಹಿಸಿದೆ.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಮಣಿಪುರದ ಹಿಂಸಾಚಾರದ ಘಟನೆಗಳಿಗೆ ಸಂಬಂಧಿಸಿದ ವಿವಿಧ ಪ್ರಕರಣಗಳಲ್ಲಿ ಈ ಹಿಂದೆ ನೀಡಿದ್ದ ನೋಟಿಸ್ಗಳಿಗೆ ಪ್ರತಿಕ್ರಿಯೆಯಾಗಿ ಮಣಿಪುರ ಸರ್ಕಾರದಿಂದ ಕ್ರಮ ತೆಗೆದುಕೊಂಡ ವರದಿಗಳನ್ನು ಸ್ವೀಕರಿಸಿದೆ ಎಂದು ಕೂಡ ನೊಟೀಸ್ನಲ್ಲಿ ಉಲ್ಲೇಖಿಸಲಾಗಿದೆ.
ರಾಜ್ಯದಲ್ಲಿ ಹಿಂಸಾಚಾರದ ಘಟನೆಗಳಿಗೆ ಸಂಬಂಧಿಸಿದಂತೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ನಿಷೇಧಾಜ್ಞೆ ಮತ್ತು ಭದ್ರತೆ ಏರ್ಪಡಿಸಲಾಗಿದೆ. ಬಳಿಕ ನಿಷೇಧಾಜ್ಞೆ ಸಡಿಲಿಕೆ, ಪರಿಹಾರ ಶಿಬಿರಗಳು ಮತ್ತು ಶಾಂತಿ ಸಮಿತಿ ಸ್ಥಾಪನೆ, ಕರ್ಫ್ಯೂ ಸಡಿಲಿಕೆ, ಇಂಟರ್ನೆಟ್ ಮತ್ತು ಬ್ಯಾಂಕಿಂಗ್ ಸೇವೆಗಳನ್ನು ಮರುಸ್ಥಾಪಿಸುವುದು ಸೇರಿದಂತೆ ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದೆ. ಮೃತರ ಕುಟುಂಬಗಳಿಗೆ ಪರಿಹಾರ, ಗಾಯಾಳುಗಳಿಗೆ ಪರಿಹಾರ ಪ್ಯಾಕೇಜ್ಗಳು ಮತ್ತು ಹಾನಿಗೊಳಗಾದ ಮನೆಗಳ ಮರುನಿರ್ಮಾಣದ ಬಗ್ಗೆ ಮಾಹಿತಿ ನೀಡಿದೆ ಎನ್ಎಚ್ಆರ್ಸಿ ಮಂಗಳವಾರ ಹೇಳಿಕೆಯಲ್ಲಿ ತಿಳಿಸಿದೆ.
ಸಂಘರ್ಷದ ಕಾರಣಗಳನ್ನು ತಿಳಿಯಲು ಕೇಂದ್ರವು ತನಿಖಾ ಆಯೋಗವನ್ನು ರಚಿಸಿದೆ ಮತ್ತು 6 ಎಫ್ಐಆರ್ಗಳನ್ನು ಸ್ವತಂತ್ರವಾಗಿ ತನಿಖೆಗೆ ಸಿಬಿಐಗೆ ವರ್ಗಾಯಿಸಲಾಗಿದೆ ಎಂದು ತಿಳಿಸಲಾಗಿದೆ. ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ಪರಿಹಾರ ಶಿಬಿರಗಳು ಕಾರ್ಯನಿರ್ವಹಿಸುತ್ತಿವೆ ಎಂದು ಕೂಡ ತಿಳಿಸಲಾಗಿದೆ.
ವರದಿಯಲ್ಲಿರುವ ವಿವಿಧ ಅಂಶಗಳನ್ನು ಪರಿಗಣಿಸಿ ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿ, ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಹೇಳಿದೆ.