ಗುಜರಾತ್ನ ಖೇಡಾ ಜಿಲ್ಲೆಯಲ್ಲಿ ಐವರು ಮುಸ್ಲಿಂ ವ್ಯಕ್ತಿಗಳನ್ನು ಸಾರ್ವಜನಿಕವಾಗಿ ಥಳಿಸಿದ ಆರೋಪದಲ್ಲಿ ನಾಲ್ವರು ಪೊಲೀಸರನ್ನು ನ್ಯಾಯಾಲಯ ನಿಂದನೆ ಆರೋಪದಲ್ಲಿ ತಪ್ಪಿತಸ್ಥರೆಂದು ಗುಜರಾತ್ ಹೈಕೋರ್ಟ್ ಗುರುವಾರ ತೀರ್ಪು ನೀಡಿದೆ.
ಕಳೆದ ವರ್ಷ ಅಕ್ಟೋಬರ್ನಲ್ಲಿ ಸಾರ್ವಜನಿಕವಾಗಿ ಐವರು ಮುಸ್ಲಿಂ ವ್ಯಕ್ತಿಗಳ ಮೇಲೆ ದಾಳಿ ಪೊಲೀಸರು ದಾಳಿ ನಡೆಸಿದ್ದರು. ಅಪರಾಧಿ ಪೊಲೀಸರಿಗೆ ತಲಾ 2 ಸಾವಿರ ರೂ. ದಂಡವನ್ನು ವಿಧಿಸಿದ್ದು, ದಂಡ ತೆರಲು ತಪ್ಪಿದ್ದಲ್ಲಿ ಇನ್ನೂ ಮೂರು ದಿನಗಳ ಕಾಲ ಜೈಲು ಶಿಕ್ಷೆಯನ್ನು ಅನುಭವಿಸಬೇಕು ಎಂದು ಎಚ್ಚರಿಸಿದೆ.
ನ್ಯಾಯಮೂರ್ತಿಗಳಾದ ಎಎಸ್ ಸುಪೇಹಿಯಾ ಮತ್ತು ಗೀತಾ ಗೋಪಿ ಅವರ ವಿಭಾಗೀಯ ಪೀಠವು, ಇದು ಅಮಾನವೀಯ ಕೃತ್ಯವಾಗಿದೆ ಎಂದು ಹೇಳಿದೆ. ಇದು ಡಿಕೆ ಬಸು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ವಿಧಿಸಿದ ಮಾರ್ಗಸೂಚಿಗಳ ಉಲ್ಲಂಘನೆಯಾಗಿದೆ ಎಂದು ಹೇಳಿದೆ.
”ಅವರು ಸಂತ್ರಸ್ತರನ್ನು ಅವಮಾನಿಸುವ ಕೆಟ್ಟ ಉದ್ದೇಶದಿಂದ ಅಮಾನವೀಯ ಕೃತ್ಯ ಎಸಗಿದ್ದಾರೆ. ಅವರು ಡಿಕೆ ಬಸು ಮಾರ್ಗಸೂಚಿಗಳನ್ನು ಮಾತ್ರವಲ್ಲದೆ ಸಂತ್ರಸ್ತರ ವೈಯಕ್ತಿಕ ಸ್ವಾತಂತ್ರ್ಯವನ್ನೂ ಉಲ್ಲಂಘಿಸಿದ್ದಾರೆ” ಎಂದು ಕೋರ್ಟ್ ಗಮನಿಸಿದೆ. ಹೀಗಾಗಿ ನ್ಯಾಯಾಲಯ ಆರೋಪಿಗೆ 14 ದಿನಗಳ ಸಾದಾ ಜೈಲು ಶಿಕ್ಷೆ ಹಾಗೂ ₹2,000 ದಂಡ ವಿಧಿಸಿದೆ.
”ಇದು ಮಾನವೀಯತೆಯ ವಿರುದ್ಧದ ಕೃತ್ಯವಾಗಿದ್ದು, ಸಾರ್ವಜನಿಕರೆದು ಅವಮಾನಿಸಲಾಗಿದೆ ಮತ್ತು ಈ ಘಟನೆಯ ವಿಡಿಯೋ, ಫೋಟೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಇದು ಕೇವಲ ಉಂಡೇಲ ಗ್ರಾಮಕ್ಕೆ ಸೀಮಿತವಾಗಿಲ್ಲ. ಹೀಗಾಗಿ, ನಾಲ್ವರು ಪೊಲೀಸರಿಗೆ 14 ದಿನಗಳ ಸಾದಾ ಜೈಲು ಶಿಕ್ಷೆ ಮತ್ತು 2,000 ದಂಡ,’’ ಎಂದು ಪೀಠವು ಆದೇಶಿಸಿದೆ. ಸಂತ್ರಸ್ತರಿಗೆ ಪರಿಹಾರ ನೀಡಲು ಮುಂದಾದ ಪೊಲೀಸರ ಮನವಿಯನ್ನು ಕೋರ್ಟ್ ತಿರಸ್ಕರಿಸಿದೆ.
ನ್ಯಾಯಮೂರ್ತಿ ಎಎಸ್ ಸುಪೇಹಿಯಾ ನೇತೃತ್ವದ ಪೀಠವು ತನ್ನ ಆದೇಶವನ್ನು ಮೂರು ತಿಂಗಳ ಅವಧಿಗೆ ತಡೆಹಿಡಿಯಿತು.
ಪೊಲೀಸ್ ಅಧಿಕಾರಿಗಳು ಸಲ್ಲಿಸಿದ ಕ್ಷಮಾಪಣೆಯನ್ನು ಸ್ವೀಕರಿಸಲು ಪೀಠವು ನಿರಾಕರಿಸಿತು. ”ಅವರು ಪ್ರಾಮಾಣಿಕವಾಗಿದ್ದರೂ, ಅವರ ಕೃತ್ಯವು ಕಾನೂನು ಸುವ್ಯವಸ್ಥೆಯ ಮೇಲೆ ದುರ್ಬಲ ಪರಿಣಾಮ ಬೀರಿದೆ” ಎಂದು ಹೇಳಿದರು.
”ಕ್ಷಮಾಪಣೆಯನ್ನು ಸ್ವೀಕರಿಸುವುದು ನ್ಯಾಯದ ಅಪಹಾಸ್ಯಕ್ಕೆ ಕಾರಣವಾಗುತ್ತದೆ” ಎಂದು ನ್ಯಾಯಾಲಯ ಹೇಳಿದೆ.
”ಪೊಲೀಸರ ಅಮಾನವೀಯ ಕೃತ್ಯಗಳು ಕ್ಷಮೆಯ ಗಡಿಯನ್ನು ಮೀರಿವೆ. ಮನುಷ್ಯ ಎಂಬ ಭಾವನೆಯನ್ನು ಅಳಿಸಿಹಾಕುವ ಮಟ್ಟಿಗೆ ಕೃತ್ಯ ನಡೆಸಲಾಗಿದೆ. ಇದು ಕಾನೂನುಬದ್ಧವಾಗಿ ಸರಿದೂಗಿಸಲು ಸಾಧ್ಯವಿಲ್ಲ” ಎಂದು ಪೀಠವು ಒತ್ತಿಹೇಳಿತು.
”ಅಲ್ಲದೆ, ಕ್ಷಮಾಪಣೆಯನ್ನು ಅಂಗೀಕರಿಸಿದರೆ, ಅದು ಸಮಾಜಕ್ಕೆ ತಪ್ಪು ಸಂದೇಶವನ್ನು ರವಾನಿಸುತ್ತದೆ ಮತ್ತು ಅಂತಹ ಕೃತ್ಯಗಳನ್ನು ಪ್ರೋತ್ಸಾಹಿಸುತ್ತದೆ ಮತ್ತು ನ್ಯಾಯಾಂಗದ ಮೇಲಿನ ಜನರ ವಿಶ್ವಾಸವನ್ನು ಕದಡುತ್ತದೆ” ಎಂದು ಪೀಠ ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ: ಖೇಡಾ ಥಳಿತ ಪ್ರಕರಣ: ಆರೋಪಿತ ಪೊಲೀಸರಿಂದ ಪರಿಹಾರ ನಿರಾಕರಿಸಿದ ಸಂತ್ರಸ್ತರು