ಕುಸ್ತಿಪಟುಗಳ ಮೇಲಿನ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದ್ದ ಅರ್ಜಿಯನ್ನು ತೆರವುಗೊಳಿಸಿರುವುದಾಗಿ ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರ ನೇತೃತ್ವದ ಸುಪ್ರೀಂ ಕೋರ್ಟ್ ಪೀಠವು ಹೇಳಿದೆ.
ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್ಐ) ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಎಫ್ಐಆರ್ ನೋಂದಣಿ ಮಾಡಬೇಕೆಂಬುದು ಕುಸ್ತಿಪಟುಗಳ ಮನವಿಯ ಮುಖ್ಯ ಉದ್ದೇಶವಾಗಿತ್ತು.
“ಈ ಪ್ರಕ್ರಿಯೆಗಳ ವ್ಯಾಪ್ತಿಯನ್ನು ಗಮನದಲ್ಲಿಟ್ಟುಕೊಂಡು, ನಾವು ಈ ಹಂತದಲ್ಲಿ ಪ್ರಕ್ರಿಯೆಗಳನ್ನು ಮುಕ್ತಾಯಗೊಳಿಸುತ್ತೇವೆ. ಅರ್ಜಿದಾರರು ಬೇರೇನಾದರೂ ಬಯಸಿದರೆ, ಅವರು ಮ್ಯಾಜಿಸ್ಟ್ರೇಟ್ ಅಥವಾ ಅದರ ಅಧಿಕಾರ ವ್ಯಾಪ್ತಿಯಲ್ಲಿರುವ ಹೈಕೋರ್ಟ್ ಅನ್ನು ಸಂಪರ್ಕಿಸಬಹುದು” ಎಂದು ಸಿಜೆಐ ಡಿವೈ ಚಂದ್ರಚೂಡ್ ಸೂಚಿಸಿದ್ದಾರೆ.
ಅಪ್ರಾಪ್ತ ಸಂತ್ರಸ್ತೆ ಸೇರಿದಂತೆ ಏಳು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿರುವ ಡಬ್ಲ್ಯುಎಫ್ಐ ಮುಖ್ಯಸ್ಥ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪ್ರಮುಖ ಕುಸ್ತಿಪಟುಗಳು ಹಲವು ದಿನಗಳಿಂದ ನವದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಕೋರ್ಟ್ ನಿರ್ದೇಶನದಂತೆ ದೂರುದಾರರಿಗೆ ಭದ್ರತೆ ಒದಗಿಸಲಾಗಿದೆ ಪೊಲೀಸರು ತಿಳಿಸಿದ್ದಾರೆ.
“ಅಪ್ರಾಪ್ತ ದೂರುದಾರರಿಗೆ ಸೂಕ್ತ ಭದ್ರತೆ ಒದಗಿಸಲಾಗಿದೆ. ಇತರ ದೂರುದಾರರಿಗೆ ಬಂದಿರುವ ಬೆದರಿಕೆಯ ಮೌಲ್ಯಮಾಪನ ನಡೆಸಲಾಗಿದೆ. ಮೌಲ್ಯಮಾಪನದ ಪ್ರಕಾರ ಯಾವುದೇ ಬೆದರಿಕೆ ಇಲ್ಲ. ಆದರೆ ಅವರಿಗೆ ಭದ್ರತೆ ಒದಗಿಸುವುದು ಸಮಂಜಸವೆಂದು ಕಂಡುಬಂದಿದೆ. ಎಲ್ಲಾ ದೂರುದಾರರಿಗೆ ಭದ್ರತೆ ಒದಗಿಸಲಾಗಿದೆ’’ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ತನಿಖೆ ನಡೆಯುತ್ತಿದೆ ಮತ್ತು ದೂರುದಾರರನ್ನು ಪೊಲೀಸರು ಪರಿಶೀಲಿಸಿದ್ದಾರೆ ಎಂದು ಅವರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.
ದೂರುದಾರರ ಪರ ವಕೀಲರಾದ ಹಿರಿಯ ವಕೀಲ ನರೇಂದ್ರ ಹೂಡಾ ಅವರು ಪ್ರತಿಕ್ರಿಯಿಸಿ, “ಎಫ್ಐಆರ್ ದಾಖಲಿಸುವಲ್ಲಿ ಮತ್ತು ಪ್ರಕರಣದ ತನಿಖೆಯಲ್ಲಿ ದೆಹಲಿ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ’’ ಎಂದು ಆರೋಪಿಸಿದ್ದಾರೆ.
‘’ಟಿ.ವಿ. ಚಾನೆಲ್ಗಳಲ್ಲಿ ಆರೋಪಿಯು ದೂರುದಾರರ ಹೆಸರು ಬಹಿರಂಗಪಡಿಸಿದ್ದಾನೆ. ಇದು ಕಾನೂನಿಗೆ ವಿರುದ್ಧವಾಗಿದೆ’’ ಎಂದು ಅವರು ವಾದಿಸಿದ್ದಾರೆ.
ದೆಹಲಿ ಪೊಲೀಸರ ನಡವಳಿಕೆಯಿಂದ ಬೇಸತ್ತಿರುವ ದೂರುದಾರರು, ಸುಪ್ರೀಂ ಪೀಠವೇ ತನಿಖೆಯನ್ನು ಮೇಲ್ವಿಚಾರಣೆ ಮಾಡುವಂತೆ ಕೋರಿದರು. ಆದರೆ ಪೀಠವು ಅವರ ಮನವಿಯನ್ನು ತಿರಸ್ಕರಿಸಿತು, ಮುಂದಿನ ಕ್ರಮಕ್ಕಾಗಿ ಸಂಬಂಧಿಸಿದಂತೆ ಹೈಕೋರ್ಟ್ಗೆ ಹೋಗಬಹುದು ಎಂದು ಸ್ಪಷ್ಟಪಡಿಸಿದೆ.
ಡಬ್ಲ್ಯುಎಫ್ಐ ಮುಖ್ಯಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕುಸ್ತಿಪಟುಗಳು ಸುಪ್ರೀಂ ಕೋರ್ಟ್ಗೆ ತೆರಳಿದ ನಂತರ, ದೆಹಲಿ ಪೊಲೀಸರು ಏಪ್ರಿಲ್ 28 ರಂದು ಕುಸ್ತಿಪಟುಗಳ ದೂರಿನ ಆಧಾರದ ಮೇಲೆ ಬ್ರಿಜ್ ಭೂಷಣ್ ವಿರುದ್ಧ ಎಫ್ಐಆರ್ ದಾಖಲಿಸುವುದಾಗಿ ನ್ಯಾಯಾಲಯಕ್ಕೆ ತಿಳಿಸಿದರು. ನಂತರ ಪೊಲೀಸರು ಆತನ ವಿರುದ್ಧ ಎರಡು ಎಫ್ಐಆರ್ಗಳನ್ನು ದಾಖಲಿಸಿದರು ಮತ್ತು ಎಫ್ಐಆರ್ಗಳ ಒಂದು ಪ್ರತಿಯನ್ನು ಕುಸ್ತಿಪಟುಗಳಿಗೆ ಹಸ್ತಾಂತರಿಸಲಾಯಿತು.
ಎರಡು ಎಫ್ಐಆರ್ಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಪೊಲೀಸ್ ಉಪ ಆಯುಕ್ತ (ನವದೆಹಲಿ) ಪ್ರಣವ್ ತಯಾಲ್, “ಮೊದಲನೆಯದು ಅಪ್ರಾಪ್ತ ಸಂತ್ರಸ್ತೆಯ ಆರೋಪಗಳಿಗೆ ಸಂಬಂಧಿಸಿದೆ, ಇದನ್ನು ಪೋಕ್ಸೊ ಕಾಯ್ದೆಯಡಿಯಲ್ಲಿ ಮತ್ತು ಸಂಬಂಧಿತ ಐಪಿಸಿ ಸೆಕ್ಷನ್ಗಳ ಜೊತೆಯಲ್ಲಿ ದಾಖಲಿಸಲಾಗಿದೆ’’ ಎಂದಿದ್ದಾರೆ.
ಮುಂದುವರಿದು, “ಎರಡನೇ ಎಫ್ಐಆರ್ ಅನ್ನು ಇತರ, ವಯಸ್ಕ ದೂರುದಾರರು ಮಾಡಿದ ಆರೋಪಗಳಿಗೆ ಸಂಬಂಧಿಸಿದಂತೆ ದಾಖಲಿಸಲಾಗಿದೆ. ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಕ್ರಮ ಜರುಗಿಸಲಾಗಿದೆ’’ ಎಂದು ತಿಳಿಸಿದ್ದಾರೆ.