ಫೇಸ್ಬುಕ್ – ಬಿಜೆಪಿ ನಂಟು ಕುರಿತು ಅಮೆರಿಕ ಪತ್ರಿಕೆ ವಾಲ್ಸ್ಟ್ರೀಟ್ ಜರ್ನಲ್ ವರದಿಯಿಂದಾಗಿ ಭುಗಿಲೆದ್ದಿರುವ ವಿವಾದ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ಕುರಿತು ಫೇಸ್ಬುಕ್ ಅನ್ನು ಪ್ರಶ್ನಿಸುತ್ತೇವೆ ಎಂದು ಮಾಹಿತಿ ತಂತ್ರಜ್ಞಾನ ಸಂಸದೀಯ ಸ್ಥಾಯಿ ಸಮಿತಿಯ ಅಧ್ಯಕ್ಷ ಶಶಿ ತರೂರ್ ಹೇಳಿಕೆ ಹಿನ್ನೆಲೆಯಲ್ಲಿ ತರೂರ್ ವಿರುದ್ಧ ಸ್ಪೀಕರ್ ದೂರು ನೀಡಲು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಮುಂದಾಗಿದ್ದಾರೆ.
ಫೇಸ್ಬುಕ್ನ ಕಟೆಂಟ್ ಪಾಲಿಸಿ ನಿಯಮಗಳು ಆಡಳಿತರೂಢ ಬಿಜೆಪಿ ಪರವಾಗಿವೆ. ಬಿಜೆಪಿ ಮತ್ತು ಹಿಂದೂತ್ವ ನಾಯಕರು ದ್ವೇಷ ಭಾಷಣಗಳು ತನ್ನ ಸಂಸ್ಥೆಯ ನಿಯಮಗಳನ್ನು ಉಲ್ಲಂಘಿಸಿದರೂ ಕೂಡ ಫೇಸ್ ಬುಕ್ ಕ್ರಮ ತೆಗೆದುಕೊಳ್ಳುತ್ತಿಲ್ಲ. ಬಿಜೆಪಿ ಕಾರ್ಯಕರ್ತರ ನಿಯಮ ಉಲ್ಲಂಘನೆಗಳಿಗೆ ಶಿಕ್ಷೆ ನೀಡುವುದು ಅಥವಾ ಪ್ರಶ್ನಿಸುವುದು “ದೇಶದ ಕಂಪನಿಯ ವ್ಯವಹಾರ ಭವಿಷ್ಯವನ್ನು ಹಾನಿಗೊಳಿಸುತ್ತದೆ” ಎಂದು ಫೇಸ್ಬುಕ್ನ ಹಿರಿಯ ಅಧಿಕಾರಿಗಳ ಹೇಳಿಕೆ ಉಲ್ಲೇಖಿಸಿ ವಾಲ್ಸ್ಟ್ರೀಟ್ ಜರ್ನಲ್ ವಿಶೇಷ ವರದಿ ಮಾಡಿತ್ತು.
ಶಶಿ ತರೂರ್ರವರ ಫೇಸ್ಬುಕ್ ಅನ್ನು ಪ್ರಶ್ನಿಸುವ ನಿರ್ಣಯವನ್ನು ಸಂಸದೀಯ ಸ್ಥಾಯಿ ಸಮಿತಿಯ ಭಾಗವಾಗಿರುವ ತೃಣಮೂಲ ಕಾಂಗ್ರೆಸ್ ಸಂಸದೆ ಮೊಹುವ ಮೊಯಿತ್ರ ಬೆಂಬಲಿಸಿದರೆ, ಬಿಜೆಪಿ ಸಂಸದ ನಿಶಿಕಾಂತ್ ದುಬೆ ತೀವ್ರವಾಗಿ ವಿರೋಧಿಸಿದ್ದಾರೆ. ಹಾಗೆ ಮಾಡಲು ಅವರಿಗೆ ಅಧಿಕಾರವಿಲ್ಲ ಎಂದು ದುಬೆ ವಾದಿಸಿದ್ದಾರೆ.
ಮಾಹಿತಿ ತಂತ್ರಜ್ಞಾನ ಸಂಸದೀಯ ಸ್ಥಾಯಿ ಸಮಿತಿಯ ಸದಸ್ಯರ ಅಭಿಪ್ರಾಯ ಪಡೆಯದೇ ಏಕಪಕ್ಷಿಯವಾಗಿ ಫೇಸ್ಬುಕ್ ಅನ್ನು ಪ್ರಶ್ನಿಸುವ ನಿರ್ಣಯ ಘೋಷಿಸಿದ ಶಶಿ ತರೂರ್ ವಿರುದ್ಧ ಲೋಕಸಭಾ ಸ್ವೀಕರ್ ಓಂ ಬಿರ್ಲಾರವರಿಗೆ ಪತ್ರ ಬರೆಯುವುದಾಗಿ ದುಬೆ ತಿಳಿಸಿದ್ದಾರೆ.
ಕರ್ನಾಟಕದ ಸಂಸದ ಅನಂತ್ ಕುಮಾರ್ ಹೆಗಡೆ ಪ್ರಚೋದನಾಕಾರಿ ಭಾಷಣಗಳಿಗೆ ಹಲವು ಬಾರಿ ವಿವಾದಕ್ಕೆ ಈಡಾಗಿದ್ದಾರೆ. ಅವರ ಮುಸ್ಲಿಂ ವಿರೋಧಿ ಪೋಸ್ಟ್ಗಳನ್ನು ತೆಗೆದುಹಾಕಲು ಫೇಸ್ಬುಕ್ ಮುಂದಾಗಿರಲಿಲ್ಲ. ಹಾಗೆಯೇ ತೆಲಂಗಾಣದ ಬಿಜೆಪಿ ಶಾಸಕ ಟಿ.ರಾಜಾಸಿಂಗ್ ಹಲವು ದ್ವೇಷ ಭಾಷಣಗಳನ್ನು ಫೇಸ್ಬುಕ್ನಲ್ಲಿ ಪ್ರಕಟಿಸಿದ್ದಾರೆ. ಆದರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಫೇಸ್ಬುಕ್ ಭಾರತದ ಉನ್ನತ ಸಾರ್ವಜನಿಕ ನೀತಿ ಕಾರ್ಯನಿರ್ವಾಹಕ ಅಧಿಕಾರಿಣಿ ಅಂಖಿ ದಾಸ್ ನಿರಾಕರಿಸಿದ್ದಾರೆ. ಆಡಳಿತಾರೂಢ ಪಕ್ಷದೊಂದಿಗಿರುವ ಸಂಬಂಧಕ್ಕೆ ಧಕ್ಕೆಯಾದೀತು ಎಂಬ ಹೆದರಿಕೆಯೇ ಇದಕ್ಕೆ ಕಾರಣ ಎಂದು ವಾಲ್ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.
ಇದನ್ನೂ ಓದಿ: ಫೇಸ್ಬುಕ್ ಇಂಡಿಯಾದ ಮುಖ್ಯಸ್ಥೆ ಅಂಖಿದಾಸ್ಗೆ ಜೀವಬೆದರಿಕೆ: ದೂರು ದಾಖಲು
ಬಿಜೆಪಿ ಮತ್ತು ಆರ್ಎಸ್ಎಸ್ ಫೇಸ್ಬುಕ್ ಅನ್ನು ನಿಯಂತ್ರಿಸುತ್ತಿದ್ದಾರೆ. ಅವರು ಪ್ರತಿನಿತ್ಯ ಸುಳ್ಳು ಸುದ್ದಿಗಳು ಮತ್ತು ದ್ವೇಷಭಾಷಣವನ್ನು ಹರಡುವ ಮೂಲಕ ಚುನಾವಣೆಯ ಮೇಲೆ ಪ್ರಭಾವ ಬೀರುತ್ತಿದ್ದಾರೆ. ಕೊನೆಗೂ ಅಮೆರಿಕ ಮೂಲದ ಪತ್ರಿಕೆಯೊಂದು ಫೇಸ್ಬುಕ್ ಬಗೆಗಿನ ಸತ್ಯವನ್ನು ಹೊರತೆಗೆದಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದರು.
ನಾಗರಿಕರ ಹಕ್ಕುಗಳನ್ನು ಕಾಪಾಡುವುದು ಮತ್ತು ಸಾಮಾಜಿಕ / ಆನ್ಲೈನ್ ಸುದ್ದಿ ಮಾಧ್ಯಮ ವೇದಿಕೆಗಳ ದುರುಪಯೋಗವನ್ನು ತಡೆಗಟ್ಟುವುದರ ಸಾಕ್ಷಿಯಾಗಿ ಸಮಿತಿಯು ಪರಿಗಣಿಸಲ್ಪಡುತ್ತದೆ ಎಂದು ಶಶಿ ತರೂರ್ ತಿಳಿಸಿದ್ದರು.
ಇದಕ್ಕೆ ಪ್ರತಿಯಾಗಿ “ಸಂಸದೀಯ ಸಮಿತಿಯನ್ನು ತಮ್ಮ ಪಕ್ಷದ ನಾಯಕರ ಅಹಂಕಾರವನ್ನು ಪೂರೈಸಲು ರಾಜಕೀಯ ವೇದಿಕೆಯನ್ನಾಗಿ ಮಾಡಬಾರದು. ಸಮಿತಿ ಸದಸ್ಯರು ಮತ್ತು ಸ್ಪೀಕರ್ ರವರ ಅನುಮತಿ ಇಲ್ಲದೇ ಏನನ್ನು ಮಾಡಲು ಸಾಧ್ಯವಿಲ್ಲ. ರಾಹುಲ್ ಗಾಂಧಿಯವರ ಕಾರ್ಯಸೂಚಿಯನ್ನು ಜಾರಿಗೊಳಿಸುವುದನ್ನು ನಿಲ್ಲಿಸಿ” ಎಂದು ಸಮಿತಿ ಸದಸ್ಯ ದುಬೆ ಟ್ವೀಟ್ ಮಾಡಿದ್ದಾರೆ.
You are absolutely right, @mahuaMoitra,& by imputing motives to my decision, @nishikant_dubey has brought the Committee's work into disrepute, a matter I will take up. Extraordinary that an MP would suggest that a matter of such great public interest should NOT be taken up by us! https://t.co/8pRxZ5r6mU
— Shashi Tharoor (@ShashiTharoor) August 17, 2020
ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಮೊಹುವ ಮೊಯಿತ್ರಾ “ನಾನು ಕೂಡ ಸಮಿತಿಯ ಸದಸ್ಯೆ. ಅಜೆಂಡಾವನ್ನು ವರ್ಷದ ಆರಂಭದಲ್ಲಿಯೇ ಚರ್ಚಿಸಿ ಸ್ಪೀಕರ್ರವರ ಒಪ್ಪಿಗೆ ಪಡೆಯಲಾಗಿದೆ. ಅದನ್ನು ಯಾವಾಗ ಜಾರಿಗೊಳಿಸಬೇಕು ಎಂಬ ಅಧಿಕಾರ ಸಮಿತಿ ಅಧ್ಯಕ್ಷರಿಗಿರುತ್ತದೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಬಿಜೆಪಿ ನಾಯಕರ ದ್ವೇಷ ಭಾಷಣದ ನಿರ್ಲಕ್ಷ್ಯ ಆರೋಪ; ಫೇಸ್ಬುಕ್ ಸ್ಪಷ್ಟನೆ
ಫೇಸ್ಬುಕ್ ಹಿತಾಸಕ್ತಿ ಕಾಪಾಡಲು ಹೇಗೆ ಬಿಜೆಪಿ ಮೇಲಕ್ಕೆ, ಕೆಳಕ್ಕೆ ಜಿಗಿಯುತ್ತದೆ ಅಲ್ಲವೇ ಎಂದು ಮೊಯಿತ್ರಾ ಟೀಕಿಸಿದ್ದಾರೆ.
ಮೊಹುವ ಮೊಯಿತ್ರಾರವರು ಹೇಳಿರುವುದು ಸರಿ ಇದೆ. ಅಧ್ಯಕ್ಷರ ನಿರ್ಧಾರವನ್ನು ವಿರೋಧಿಸುವ ಮೂಲಕ ಸಮಿತಿಯ ಕಾರ್ಯನಿರ್ವಹಣೆಗೆ ದುಬೆ ಅಪಖ್ಯಾತಿ ತಂದಿದ್ದಾರೆ. ಅವರು ಸಾರ್ವಜನಿಕರ ಒಳಿತಿಗಾಗಿ ಸಮಿತಿ ಕೆಲಸ ಮಾಡಬಾರದು ಎಂದು ಹೇಳುತ್ತಿದ್ದಾರೆಯೆ? ಎಂದು ತರೂರ್ ವ್ಯಂಗ್ಯವಾಡಿದ್ದಾರೆ.
ಪ್ರಧಾನ ಕಾರ್ಯದರ್ಶಿ ಸಹಿ ಮಾಡಿದ ಆದೇಶದ ಮೂಲಕ ಸಾಕ್ಷಿಯನ್ನು ಕರೆಸಿಕೊಳ್ಳಬಹುದು ಮತ್ತು ಸಮಿತಿಯ ಬಳಕೆಗೆ ಅಗತ್ಯವಾದ ದಾಖಲೆಗಳನ್ನು ತಯಾರಿಸಬೇಕು ಎಂದು ದುಬೆ ಪ್ರತಿ ಉತ್ತರ ನೀಡಿದ್ದಾರೆ.
ಇದಕ್ಕೆ ಶಶಿ ತರೂರ್ ನಿಮ್ಮ ಮಾಹಿತಿಗಾಗಿ ಧನ್ಯವಾದಗಳು. ಸಮಿತಿಯ ಅಧ್ಯಕ್ಷರ ಕಾರ್ಯನಿರ್ವಹಣೆಗೆ ಯಾರು ಚ್ಯುತಿ ತಂದರು ಎಂಬುದನ್ನು ಕಾಲ ನಿರ್ಧರಿಸುತ್ತದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಬಿಜೆಪಿ ಮತ್ತು ಆರ್ಎಸ್ಎಸ್ ಫೇಸ್ಬುಕ್ ಅನ್ನು ನಿಯಂತ್ರಿಸುತ್ತಿದ್ದಾರೆ: ರಾಹುಲ್ ಗಾಂಧಿ