ಬೆಂಗಳೂರಿನಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಮನೆ ಮುಂದೆ ಬಸ್ ನಿಲ್ಲಿಸುವಂತೆ ಹೇಳಿದ್ದರು. ಆದರೆ, ಚಾಲಕ ಬಸ್ ನಿಲ್ದಾಣದ ಬಳಿ ನಿಲ್ಲಿಸಿದ್ದಾನೆ. ಈ ಕಾರಣಕ್ಕೆ ಮುಸ್ಲಿಂ ಪುರುಷರು ಬಸ್ಗೆ ಕಲ್ಲು ತೂರಿ ಹಾನಿಗೊಳಿಸಿದ್ದಾರೆ ಎಂದು ಹೇಳಲಾದ ಸಂದೇಶವೊಂದು ವಾಟ್ಸಾಪ್ನಲ್ಲಿ ಹರಿದಾಡುತ್ತಿದೆ. ಸಂದೇಶದ ಜೊತೆಗೆ ಮುಸ್ಲಿಂ ಪುರುಷರ ಗುಂಪೊಂದು ಕಲ್ಲು ತೂರುವ ಮೂಲಕ ಬಸ್ಸಿನ ಗಾಜುಗಳನ್ನು ಹಾನಿಗೊಳಿಸುತ್ತಿರುವ ವಿಡಿಯೋ ಹರಿದಾಡುತ್ತಿದೆ.
“ಬೆಂಗಳೂರು ಉಚಿತ ಬಸ್… ಮುಸ್ಲಿಂ ಮಹಿಳೆ ತನ್ನ ಮನೆಯ ಎದುರು ಬಸ್ ನಿಲ್ಲಿಸಲು ಹೇಳಿದಳು ಪಾಪ ಡ್ರೈವರ್ ನೇರ ಬಸ್ ಸ್ಟಾಂಡ್ ನಲ್ಲಿ ನಿಲ್ಲಿಸಿದ… ನಂತರ ಕತೆ ನೋಡಿ. ಸರ್ಕಾರದ ಆಸ್ತಿಗಳನ್ನ ಉಗ್ರಾಗಾಮಿಗಳಂತೆ ಹಾಳು ಮಾಡುವ ಇವರಿಗೆ ಯಾವ ಶಿಕ್ಷೆಯು ಇಲ್ಲಾ..ಇದು ನಮ್ಮ ಕರುನಾಡಿನ ದುರಂತ, ಯೋಗಿ ಆದಿತ್ಯನಾಥ ಅಂತ CM ನಾಯಕ ಯಾಕೆ ಬೇಕು ಅಂತ ಈಗ ಯೋಚಿಸಿ! ಕಾಂಗ್ರೆಸ್ ನ ಶಾಂತಿ ಧೂತ ಬ್ರದರ್ಸ್.” ಎಂದು ವೈರಲ್ ಸಂದೇಶದಲ್ಲಿ ಬರೆಯಲಾಗಿದೆ.
ಫ್ಯಾಕ್ಟ್ಚೆಕ್ : ವೈರಲ್ ವಿಡಿಯೋದ ಸತ್ಯಾಸತ್ಯತೆಯನ್ನು ನಾನುಗೌರಿ.ಕಾಂ ಪರಿಶೀಲನೆ ನಡೆಸಿದೆ. ವೈರಲ್ ವಿಡಿಯೋದಲ್ಲಿರುವ ಬಸ್ನ ಬಣ್ಣ ನೀಲಿ ಆಗಿರುವುದರಿಂದ, ಅದು ಬೆಂಗಳೂರಿನ ಬಿಎಂಟಿಸಿ ವೋಲ್ವೋ ಬಸ್ ಎಂದು ನಾವು ಗೂಗಲ್ ಸರ್ಚ್ ಮಾಡಿದ್ದೇವೆ. ಈ ವೇಳೆ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ಗೆ ಕಲ್ಲು ತೂರಿರುವ ಯಾವುದೇ ಮಾಧ್ಯಮ ವರದಿಗಳು ನಮಗೆ ಲಭ್ಯವಾಗಿಲ್ಲ.
ನಾವು ಮತಷ್ಟು ಕೀ ವರ್ಡ್ಸ್, ಟೂಲ್ಗಳನ್ನು ಬಳಸಿಕೊಂಡು ಸರ್ಚ್ ಮಾಡಿದಾಗ, ಇದು ಗುಜರಾತ್ನ ಸೂರತ್ನಲ್ಲಿ ನಡೆದ ಘಟನೆಯ ವಿಡಿಯೋ ಎಂದು ತಿಳಿದು ಬಂದಿದೆ.
ಜುಲೈ 5, 2019ರಲ್ಲಿ ಟಿವಿ9 ಗುಜರಾತಿ ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಿರುವ ವಿಡಿಯೋದಲ್ಲಿ ಬಸ್ಗೆ ಕಲ್ಲು ತೂರಾಟ ನಡೆಸಿರುವ ಸುದ್ದಿಯಿದೆ. ಸುದ್ದಿ ಗುಜರಾತಿ ಭಾಷೆಯಲ್ಲಿರುವುದರಿಂದ ಆಂಗ್ಲ ಭಾಷೆಯಲ್ಲಿ ನೀಡಿರುವ “Rally against mob lynching incidents turns violent in Surat, stones pelted on buses” ಎಂಬ ಶೀರ್ಷಿಕೆಯನ್ನು ನಾವು ಗಮನಿಸಬಹುದು.
ಘಟನೆಯ ಕುರಿತು ಜುಲೈ 6, 2019ರಂದು ಟೈಮ್ಸ್ ಆಫ್ ಇಂಡಿಯಾ “Surat:Rally against mob lynching turns violent” ಎಂಬ ಶೀರ್ಷಿಕೆಯಲ್ಲಿ ಸುದ್ದಿ ಪ್ರಕಟಿಸಿತ್ತು.
ಕಳೆದ ವರ್ಷ (2023)ರಲ್ಲಿ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಸರ್ಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣ ಕಲ್ಪಿಸುವ ‘ಶಕ್ತಿ’ ಯೋಜನೆ ಜಾರಿಗೊಳಿಸಿದಾಗಲೂ ಇದೇ ವಿಡಿಯೋವನ್ನು ಸುಳ್ಳು ಸಂದೇಶದೊಂದಿಗೆ ಹಂಚಿಕೊಳ್ಳಲಾಗಿತ್ತು.
ಆಗ ಏನ್ ಸುದ್ದಿ.ಕಾಂ ಎಂಬ ಕನ್ನಡದ ಫ್ಯಾಕ್ಟ್ ಚೆಕ್ಕಿಂಗ್ ವೆಬ್ಸೈಟ್ ಈ ಕುರಿತು ಸತ್ಯಾಸತ್ಯತೆ ಪರಿಶೀಲನೆ ನಡೆಸಿತ್ತು. ಅದರಲ್ಲೂ ಈ ವಿಡಿಯೋ ಗುಜರಾತ್ನಲ್ಲಿ ನಡೆದ ಘಟನೆಯದ್ದು ಎಂದು ಹೇಳಲಾಗಿದೆ.
ನಾವು ನಡೆಸಿದ ಪರಿಶೀಲನೆಯಲ್ಲಿ ವಾಟ್ಸಾಪ್ನಲ್ಲಿ ಹರಿದಾಡುತ್ತಿರುವ ವೈರಲ್ ವಿಡಿಯೋ ಬೆಂಗಳೂರಿನದ್ದಲ್ಲ, ಬದಲಾಗಿ ಗುಜರಾತ್ನ ಸೂರತ್ನಲ್ಲಿ ದೇಶದಾದ್ಯಂತ ನಡೆಯುತ್ತಿದ್ದ ಗುಂಪು ಹತ್ಯೆಯ ವಿರುದ್ದ ಪ್ರತಿಭಟಿಸಲು ಪೊಲೀಸರು ಅವಕಾಶ ನಿರಾಕರಿಸಿದಾಗ ಜನರು ಆಕ್ರೋಶ ವ್ಯಕ್ತಪಡಿಸಿದ್ದ ಘಟನೆಯದ್ದು ಎಂದು ತಿಳಿದು ಬಂದಿದೆ.
ಇದನ್ನೂ ಓದಿ: Fact Check: ಅರವಿಂದ್ ಕೇಜ್ರಿವಾಲ್ ಅತ್ಯಾಚಾರ ಪ್ರಕರಣದ ಆರೋಪಿಯಾಗಿದ್ದರು ಎಂಬುವುದು ಸುಳ್ಳು