ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಕೊಳವೆ ಬಾವಿಯಲ್ಲಿ ಸಿಲುಕಿದ್ದ ಎರಡು ವರ್ಷದ ಪುಟ್ಟ ಮಗುವನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಯಶಸ್ವಿಯಾಗಿ ರಕ್ಷಿಸಿದ್ದಾರೆ. ನಿನ್ನೆ ಅಪಾಯದಲ್ಲಿ ಸಿಲುಕಿದ್ದ ಬಾಲಕನನ್ನು 20 ಗಂಟೆಗಳ ಯಶಸ್ವಿ ಕಾರ್ಯಾಚರಣೆ ನಂತರ ಬಾಲಕನನ್ನು ಸುರಕ್ಷಿತವಾಗಿ ಕರೆತರಲಾಗಿದೆ.
ರಕ್ಷಣಾ ಕಾರ್ಯಾಚರಣೆ ವೇಳೆ ಬಾಲಕ ಸಾತ್ವಿಕ್ ಸತೀಶ್ ಮುಜಗೊಂಡ್ ಅಳುವ ಶಬ್ದ ಕೇಳಿಸಿದ್ದು, ಆತನನ್ನು ತಕ್ಷಿಸಿದ ನಂತರ ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ರವಾನಿಸಲಾಗಿದೆ.
ಬೋರ್ವೆಲ್ನ 16 ಅಡಿ ಆಳದಲ್ಲಿ ಸಿಲುಕಿದ್ದ ಮಗುವನ್ನು ಸುರಕ್ಷಿತವಾಗಿ ಹೊರತರುತ್ತಿದ್ದಂತೆ ಸ್ಥಳದಲ್ಲಿ ಸಂಭ್ರಮಾಚರಣೆ ನಡೆಯಿತು. ಆತನನ್ನು ತಕ್ಷಣವೇ ಆಂಬ್ಯುಲೆನ್ಸ್ಗೆ ಸ್ಥಳಾಂತರಿಸಲಾಯಿತು, ಅಲ್ಲಿ ವೈದ್ಯಕೀಯ ತಂಡವನ್ನು ಮೊದಲೇ ಇರಿಸಲಾಗಿತ್ತು.
ಮಗುವಿನ ರಕ್ಷಣಾ ಪ್ರಯತ್ನದಲ್ಲಿ ಎಸ್ಡಿಆರ್ಎಫ್ ಮತ್ತು ಎನ್ಡಿಆರ್ಎಫ್ ತಂಡಗಳು ಮಗುವಿಗೆ ಉಸಿರಾಡಲು ಸಾಧ್ಯವಾಗುವಂತೆ ಪೈಪ್ಲೈನ್ ಮೂಲಕ ಆಮ್ಲಜನಕವನ್ನು ಪೂರೈಸಿದವು. ಇದರ ನಂತರ, ರಕ್ಷಣಾ ತಂಡವು ಬಾಲಕನನ್ನು ತಲುಪಲು ಮತ್ತು ರಕ್ಷಿಸಲು ಬೋರ್ವೆಲ್ಗೆ ಸಮಾನಾಂತರವಾಗಿ ಸರಿಸುಮಾರು 21 ಅಡಿ ಆಳದ ಗುಂಡಿ ಅಗೆಯಲು ಭಾರೀ ಗಾತ್ರದ ಯಂತ್ರಗಳನ್ನು ಬಳಸಿದರು.
ಮುಂಜಾಗ್ರತಾ ಕ್ರಮವಾಗಿ, ಚುಚ್ಚುಮದ್ದು, ಆಮ್ಲಜನಕ ಸೇರಿದಂತೆ ತುರ್ತು ಪ್ರಥಮ ಚಿಕಿತ್ಸಾ ಔಷಧಗಳನ್ನು ಹೊಂದಿದ ವೈದ್ಯಕೀಯ ತಂಡವನ್ನು ಸ್ಥಳದಲ್ಲಿ ಇರಿಸಲಾಗಿತ್ತು. ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡ ತಕ್ಷಣ ಇಂಡಿಯಲ್ಲಿರುವ ಆಸ್ಪತ್ರೆಗೆ ಮಗುವನ್ನು ಸಾಗಿಸಲು ಆಂಬ್ಯುಲೆನ್ಸ್ ಅನ್ನು ಸಜ್ಜುಗೊಳಿಸಲಾಗಿತ್ತು. ಅಗತ್ಯವಿದ್ದರೆ, ಹೆಚ್ಚಿನ ಆರೈಕೆಗಾಗಿ ಮಗುವನ್ನು ಉನ್ನತ ಮಟ್ಟದ ವೈದ್ಯಕೀಯ ಸೌಲಭ್ಯಕ್ಕೆ ವರ್ಗಾಯಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಮಗು ತನ್ನ ಮನೆಯ ಬಳಿ ಆಟವಾಡಲು ಹೋದಾಗ ಬೋರ್ವೆಲ್ಗೆ ಬಿದ್ದಿದೆ. ಮಗುವಿನ ಅಳು ಕೇಳಿದ ಯಾರೋ ಕೂಡಲೇ ಮನೆಯವರಿಗೆ ಮಾಹಿತಿ ನೀಡಿದಾಗ ವಿಷಯ ಬೆಳಕಿಗೆ ಬಂದಿದೆ. ಸುತ್ತಮುತ್ತಲಿನ ಗ್ರಾಮಸ್ಥರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳದಲ್ಲಿ ಜಮಾಯಿಸಿದ್ದರು.
ಸಂತಸ ವ್ಯಕ್ತಪಡಿಸಿದ ಸಿಎಂ
ಬಾಲಕನನ್ನು ರಕ್ಷಿಸಿದ ಸುದ್ದಿ ಹೊರಬರುತ್ತಿದ್ದಾಂತೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಸ ವ್ಯಕ್ತಪಡಿಸಿದ್ದಾರೆ. ‘ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದಲ್ಲಿ ಆಕಸ್ಮಿಕವಾಗಿ ಕೊಳವೆ ಬಾವಿಗೆ ಬಿದ್ದಿದ್ದ 2 ವರ್ಷದ ಬಾಲಕ ಸಾತ್ವಿಕ್ನ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿದೆ. ಮಗುವಿನ ರಕ್ಷಣೆಗಾಗಿ ಹಗಲಿರುಳೆನ್ನದೆ ಶ್ರಮಿಸಿದ ಸಿಬ್ಬಂದಿಗಳು ಮತ್ತು ಸಾರ್ವಜನಿಕರ ಕಾರ್ಯದಕ್ಷತೆ ಪ್ರಶಂಸನೀಯ.
ಮಗುವಿನ ಕುಟುಂಬದವರ, ನಾಡಿನ ಕೋಟ್ಯಂತರ ಜನರ ಹರಕೆ-ಹಾರೈಕೆಗಳು ಫಲಿಸಿದೆ, ಸಾವನ್ನೇ ಗೆದ್ದು ಬಂದ ಪುಟ್ಟ ಕಂದಮ್ಮ ಮತ್ತೆ ಪೋಷಕರ ಮಡಿಲು ಸೇರಿದ್ದು ಕಂಡು ಖುಷಿಯಾಯಿತು. ನೀರು ಬಾರದ ಅಥವಾ ಬತ್ತಿದ ಕೊಳವೆ ಬಾವಿಗಳನ್ನು ಮುಚ್ಚದಿದ್ದರೆ ಯಾರದೋ ಅಮಾಯಕ ಜೀವ ಬಲಿಯಾಗುತ್ತದೆ, ಇಂತಹ ಘಟನೆಗಳು ಕಾಲಕಾಲಕ್ಕೆ ಪುನರಾವರ್ತನೆಯಾಗುತ್ತಿದ್ದರೂ ಜನ ಜಾಗೃತರಾಗದೆ ನಿರ್ಲಕ್ಷ್ಯ ತೋರುವುದು ಬೇಸರದ ಸಂಗತಿ. ಸಮಾಜ ಈ ಬಗ್ಗೆ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು’ ಎಂದು ತಮ್ಮ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.