ಕೃಷಿ ಮಸೂದೆಗಳ ಅಂಗೀಕಾರದ ವಿರುದ್ಧ ಪಂಜಾಬ್ನಲ್ಲಿ ಪ್ರತಿಭಟನೆಯ ಕಾವು ಹೆಚ್ಚಾಗಿದ್ದು, ಇಂದು 70 ವರ್ಷದ ರೈತರೊಬ್ಬರು ವಿಷ ಸೇವಿಸಿ ಮೃತಪಟ್ಟಿದ್ದಾರೆ. ಮಾನ್ಸಾ ಜಿಲ್ಲೆಯ ಅಕ್ಕನ್ವಾಲಿ ಗ್ರಾಮದ ನಿವಾಸಿ ಪ್ರೀತಮ್ ಸಿಂಗ್ ಪ್ರತಿಭಟನೆಯಲ್ಲಿ ನಿನ್ನೆ ವಿಷ ಸೇವಿಸಿದ್ದರು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೆಪ್ಟೆಂಬರ್ 15 ರಿಂದ ಪಂಜಾಬ್ನ ಮುಕ್ತರ್ ಜಿಲ್ಲೆಯ ಬಾದಲ್ ಗ್ರಾಮದಲ್ಲಿ ಭಾರತೀಯ ಕಿಸಾನ್ ಯೂನಿಯನ್ (ಏಕ್ತಾ ಉಗ್ರಾಹಣ್) ಆಯೋಜಿಸಿರುವ ಪ್ರತಿಭಟನೆಯಲ್ಲಿ ಪ್ರೀತಮ್ ಸಿಂಗ್ ಭಾಗವಹಿಸುತ್ತಿದ್ದರು. ಬಾದಲ್ ಗ್ರಾಮ ಮಾಜಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರ ಸ್ವಗ್ರಾಮ.
ಆಡಳಿತವು ಮೃತರ ಕುಟುಂಬಕ್ಕೆ ಪರಿಹಾರವನ್ನು ನೀಡುವಂತೆ ಏಕ್ತಾ ಉಗ್ರಾಹಣ್ ಪ್ರಧಾನ ಕಾರ್ಯದರ್ಶಿ ಸುಖದೇವ್ ಸಿಂಗ್ ಒತ್ತಾಯಿಸಿದ್ದಾರೆ. ಪಂಜಾಬ್ನಲ್ಲಿ ಕಿಸಾನ್ ಮಜ್ದೂರ್ ಸಂಘರ್ಷ್ ಸಂಘಟನೆ ಸೆಪ್ಟೆಂಬರ್ 24 ರಿಂದ ಸೆಪ್ಟೆಂಬರ್ 26 ರವರೆಗೆ ರಾಜ್ಯಾದ್ಯಂತ ‘ರೈಲ್ ರೋಕೊ’ ಆಂದೋಲನಕ್ಕೆ ಕರೆ ನೀಡಿದೆ. ಇತರ ರೈತ ಸಂಘಟನೆಗಳು ಸೆಪ್ಟೆಂಬರ್ 25ಕ್ಕೆ ಪಂಜಾಬ್ ಬಂದ್ಗೆ ಕರೆ ನೀಡಿವೆ.
ದೇಶದಲ್ಲಿ ಕಳೆದ ಒಂದು ವಾರದಿಂದ ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಹೊಸ ಕೃಷಿ ಮಸೂದೆಗಳು ರೈತರನ್ನು, ಕೃಷಿ ಕ್ಷೇತ್ರವನ್ನು ಕಾಪೋರೇಟ್ ಶಕ್ತಿಗಳ ಸೆರೆಯಾಗುವಂತೆ ಮಾಡುತ್ತವೆ ಎಂದು ಆರೋಪಿಸಿವೆ.
ಇದನ್ನೂ ಓದಿ: ಮಸೂದೆ ವಿರೋಧಿಗಳು ರೈತರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ: ಪ್ರಧಾನಿ ಮೋದಿ
ಈ ನಡುವೆ ಕೃಷಿ ಮಸೂದೆಗಳನ್ನು ವಿರೋಧಿಸಿ ರಾಜೀನಾಮೆ ನೀಡಿದ್ದ ಶಿರೋಮಣಿ ಅಕಾಲಿ ದಳ (ಎಸ್ಎಡಿ) ಸಂಸದೆ ಮತ್ತು ಮಾಜಿ ಕೇಂದ್ರ ಸಚಿವೆ ಹರ್ಸಿಮ್ರತ್ ಕೌರ್ ಬಾದಲ್ ತಮ್ಮ ಹೇಳಿಕೆಯಲ್ಲಿ ಯೂಟರ್ನ್ ಹೊಡೆದಿದ್ದಾರೆ.
ಇಂಡಿಯಾ ಟುಡೇ ಸಂದರ್ಶನದಲ್ಲಿ ಮಾತನಾಡಿದ ಹರ್ಸಿಮ್ರತ್ ಕೌರ್ ಬಾದಲ್ ಈ ಮೂರು ಮಸೂದೆಗಳನ್ನು “ರೈತ ವಿರೋಧಿ” ಎಂದು ಕರೆಯುತ್ತಿಲ್ಲ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ ಎಂದು ಹೇಳಿದ್ದಾರೆ.
“ನಾನು ಅವುಗಳನ್ನು ರೈತ ವಿರೋಧಿ ಮಸೂದೆಗಳು ಎಂದು ಕರೆಯುತ್ತಿಲ್ಲ. ರೈತರು ಅವರನ್ನು ರೈತ ವಿರೋಧಿ ಎಂದು ಕರೆಯುತ್ತಿದ್ದಾರೆ. ರೈತರ ಅನುಕೂಲಕ್ಕಾಗಿ ಮಸೂದೆಗಳು ಬಂದಿವೆ. ಅದು ಅವರ ಲಾಭದಲ್ಲಿದೆ ಎಂದು ರೈತರು ನಂಬಬೇಕು” ಎಂದಿದ್ದಾರೆ.
ಆದರೆ, ಗುರುವಾರ ರಾಜೀನಾಮೆ ಘೋಷಿಸಿದ ನಂತರ, ಹರ್ಸಿಮ್ರತ್ ಕೌರ್ ಬಾದಲ್ “ರೈತ ವಿರೋಧಿ ಸುಗ್ರೀವಾಜ್ಞೆಗಳು ಮತ್ತು ಶಾಸನಗಳನ್ನು ವಿರೋಧಿಸಿ ನಾನು ಕೇಂದ್ರ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ದೇನೆ” ಎಂದು ಟ್ವೀಟ್ ಮಾಡಿದ್ದರು.
I have resigned from Union Cabinet in protest against anti-farmer ordinances and legislation. Proud to stand with farmers as their daughter & sister.
— Harsimrat Kaur Badal (@HarsimratBadal_) September 17, 2020