ಕೇಂದ್ರದ ರೈತ ವಿರೋಧಿ ಕಾನೂನು ವಿರೋಧಿಸಿ ದೇಶದ ರಾಜಧಾನಿಯಲ್ಲಿ ರೈತರು ಹೋರಾಟ ನಡೆಸುತ್ತಿರುವುದರ ಜೊತೆಜೊತೆಗೆ, ಭಾರತೀಯ ಕಿಸಾನ್ ಯೂನಿಯನ್ ವಿವಾದಿತ ಕಾನೂನಿನ ವಿರುದ್ದ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಪರಿಚಯಿಸಿರುವ ಮೂರು ಹೊಸ ಕಾನೂನುಗಳು ನಮ್ಮನ್ನು ಕಾರ್ಪೊರೇಟ್ ದುರಾಸೆಗೆ ಗುರಿಯಾಗಿಸುತ್ತವೆ ಎಂದು ರೈತ ಸಂಘ ಆರೋಪಿಸಿದೆ.
ಇದನ್ನೂ ಓದಿ: ಮೋದಿಯವರ ಅಹಂ ದೊಡ್ಡದೋ, ರೈತಶಕ್ತಿ ದೊಡ್ಡದೋ ತೀರ್ಮಾನವಾಗಲಿದೆ
ಕೇಂದ್ರ ಸರ್ಕಾರದ ಹೊಸ ಪ್ರಸ್ತಾಪವನ್ನು “ಹೊಸದೇನೂ ಇಲ್ಲ” ಎಂದು ಎರಡು ದಿನಗಳ ಹಿಂದೆ ತಿರಸ್ಕರಿಸಿದ್ದ ರೈತ ಸಂಘಟನೆಗಳು, ಕೃಷಿಯನ್ನು ಕಾರ್ಪೊರೇಟ್ ಉದ್ದಿಮೆಗಳನ್ನಾಗಿಸುವ ಈ ಕಾನೂನುಗಳ ವಿರುದ್ದ ತಮ್ಮ ಪ್ರತಿಭಟನೆ ಮುಂದುವರೆಸಲಿದ್ದೇವೆ ಎಂದು ಹೇಳಿದ್ದವು.
ಕಳೆದ 16 ದಿನಗಳಿಂದ ರಾಷ್ಟ್ರ ರಾಜಧಾನಿಯ ಗಡಿಗಳಲ್ಲಿ ಆಂದೋಲನ ನಡೆಸುತ್ತಿರುವ ರೈತರು ಡಿಸೆಂಬರ್ 14 ರಂದು ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕರೆ ನೀಡಿದ್ದು, ಡಿಸೆಂಬರ್ 12 ರೊಳಗೆ ದೆಹಲಿ-ಜೈಪುರ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಬಂಧಿಸುವುದಾಗಿ ಎಚ್ಚರಿಸಿದ್ದಾರೆ.
ಇದನ್ನೂ ಓದಿ: ರೈತ ವಿರೋಧಿ ಮಸೂದೆಗಳಿಗೆ ಸಹಿ ಹಾಕಬಾರದು: ಹೋರಾಟನಿರತ ರೈತ ಮುಖಂಡರನ್ನು ಮಾತುಕತೆಗೆ ಕರೆದ ರಾಜ್ಯಪಾಲರು