ಕೊರೊನಾ ಭಯದಿಂದ ಮುಂಬೈಯ ಐದು ಆಸ್ಪತ್ರೆಗಳು ಚಿಕಿತ್ಸೆ ನಿರಾಕರಿಸಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ. ಮೃತಪಟ್ಟವರನ್ನು 55 ವರ್ಷದ ಕೇರಳದ ಮೂಲದ ಮುಂಬೈಯ ಡೋಂಗ್ರಿ ನಿವಾಸಿ ಕೆ. ಎಸ್. ಖಾಲಿದ್ ಎಂದು ಗುರುತಿಸಲಾಗಿದೆ.
ಜ್ವರ ಮತ್ತು ಉಸಿರಾಟದ ತೊಂದರೆಯಾದ್ದರಿಂದ ಖಾಲಿದ್ ಅವರನ್ನು ಶುಕ್ರವಾರ ಸಂಜೆ ಮಜಾಗನ್ನ ಪ್ರಿನ್ಸ್ ಅಲಿ ಖಾನ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು, ಆದರೆ ಅಲ್ಲಿ ಖಾಲಿ ಹಾಸಿಗೆಗಳಿಲ್ಲ ಎಂದು ಆಸ್ಪತ್ರೆ ತಿಳಿಸಿದೆ. ನಂತರ ಖಲೀದ್ನನ್ನು ಗಿರ್ಗಾಂವ್ನ ಹರ್ಕಿಷನ್ ದಾಸ್ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಕೂಡಾ ಅವರಿಗೆ ಅದೇ ಮಾತನ್ನು ಹೇಳಲಾಯಿತು. ಅವರ ಸಂಬಂಧಿಕರು ಹತ್ತಿರದ ಸೈಫಿ ಆಸ್ಪತ್ರೆಗೆ ದೂರವಾಣಿ ಕರೆ ಮಾಡಿದರೂ, ಆವರನ್ನು ದಾಖಲಿಸಲು ಸ್ಥಳವಿಲ್ಲ ಎಂದು ಸಿಬ್ಬಂದಿ ಹೇಳಿದ್ದಾರೆ. ಅದಲ್ಲದೆ ಬಾಂಬೆ ಆಸ್ಪತ್ರೆಯೂ ಈ ಬಗ್ಗೆ ಯಾವುದೇ ಗಮನ ಹರಿಸಲಿಲ್ಲ ಎಂದು ತಿಳದು ಬಂದಿದೆ.
ಬಾಂಬೆ ಕೇರಳ ಮುಸ್ಲಿಂ ಜಮಾತ್ ಅಧ್ಯಕ್ಷರಾಗಿರುವ ಸಿ ಎಚ್ ಅಬ್ದುಲ್ ರಹಮಾನ್ “ಖಾಲಿದ್ಗೆ ಜ್ವರ ಮತ್ತು ಉಸಿರಾಟದ ತೊಂದರೆ ಇದೆ ಎಂದು ಲೀಲಾವತಿ ಆಸ್ಪತ್ರೆಯ ಸಿಬ್ಬಂದಿಗೆ ತಿಳಿಸಿದಾಗ ಅವರೂ ಖಾಲಿ ಹಾಸಿಗೆಗಳಿಲ್ಲ ಎಂದು ಹೇಳಿದ್ದಾರೆ” ಎಂದು ಹೇಳಿದ್ದಾರೆ.
ಅವರನ್ನು ಸೇಂಟ್ ಜಾರ್ಜ್ ಆಸ್ಪತ್ರೆಗೆ ಕರೆದೊಯ್ಯುವ ಹೊತ್ತಿಗೆ ಖಾಲಿದ್ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದೆ.
ಶವವನ್ನು ಸೇಂಟ್ ಜಾರ್ಜ್ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದ್ದು. ಕೊರೊನಾ ಪರೀಕ್ಷಾ ಫಲಿತಾಂಶಗಳು ಲಭ್ಯವಾದ ನಂತರವೇ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿದು ಬಂದಿದೆ. ಕೇರಳ ಮೂಲದ ಖಾಲಿದ್ ಮುಂಬೈಯಲ್ಲಿ ಉದ್ಯಮಿಯಾಗಿದ್ದರು. ಅವರು ಬಾಂಬೆ ಕೇರಳ ಮುಸ್ಲಿಂ ಜಮಾಥ್ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿದ್ದರು.
ಕಳೆದ ವಾರ, ನವೀ ಮುಂಬಯಿಯಲ್ಲಿ ಚಿಕಿತ್ಸೆ ನಿರಾಕರಿಸಿದ್ದರಿಂದ ಮಹಿಳೆಯೊಬ್ಬರು ಸಾವನ್ನಪ್ಪಿದ್ದರು ಎಂದು ವರದಿಯಾಗಿತ್ತು.