ಕಾಂಗ್ರೆಸ್ನ ಮಾಜಿ ಸಂಸದೆ ಸುಶ್ಮಿತಾ ದೇವ್ ಸೋಮವಾರ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಸೋಮವಾರ ಕಾಂಗ್ರೆಸ್ಗೆ ರಾಜೀನಾಮೆ ನೀಡಿದ ಸುಶ್ಮಿತಾ ದೇವ್, ತೃಣಮೂಲ ಪಕ್ಷದ ನಾಯಕರಾದ ಅಭಿಷೇಕ್ ಬ್ಯಾನರ್ಜಿ ಮತ್ತು ಡೆರೆಕ್ ಒಬ್ರಿಯೆನ್ ಅವರ ಸಮ್ಮುಖದಲ್ಲಿ ಕೊಲ್ಕಾತ್ತಾ ಟಿಎಂಸಿಗೆ ಸೇರ್ಪಡೆಯಾಗಿದ್ದಾರೆ.
ಮಾಜಿ ಸಂಸದೆ ಸುಶ್ಮಿತಾ ದೇವ್ ಅವರ ಟ್ವಿಟರ್ ಖಾತೆಯಲ್ಲಿ “ಮಾಜಿ ಕಾಂಗ್ರೆಸ್ ಸದಸ್ಯೆ ಮತ್ತು ಮಹಿಳಾ ಘಟಕದ ಮಾಜಿ ಅಧ್ಯಕ್ಷೆ” ಎಂದು ಬದಲಾಯಿಸಿಕೊಂಡಿದ್ದು ಸೋಮವಾರ ಬೆಳಿಗ್ಗೆ ಅವರು ಪಕ್ಷ ತೊರೆಯಲಿರುವ ಸೂಚನೆಯಾಗಿತ್ತು.
ಬಳಿಕ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಅವರ ರಾಜೀನಾಮೆ ಪತ್ರವನ್ನು ಕಳುಹಿಸಿದ್ದಾರೆ. ಪತ್ರದಲ್ಲಿ “ಸಾರ್ವಜನಿಕ ಸೇವೆಯ ಹೊಸ ಅಧ್ಯಾಯ” ಆರಂಭಿಸುವ ಮಾತನಾಡಿದ್ದಾರೆ ಎನ್ನಲಾಗಿದೆ. ಆದರೆ, ಪಕ್ಷವು ಸುಶ್ಮಿತಾ ದೇವ್ ಪಕ್ಷ ತೊರೆಯುವುದು ಮತ್ತು ರಾಜೀನಾಮೆ ಪತ್ರ ಕಳುಹಿಸಿರುವುದನ್ನು ಅಧಿಕೃತವಾಗಿ ನಿರಾಕರಿಸಿತ್ತು.
Kolkata, West Bengal: Sushmita Dev, who resigned from Congress today, joins TMC in the presence of party leaders Abhishek Banerjee and Derek O'Brien. pic.twitter.com/4KFNVKm3V8
— ANI (@ANI) August 16, 2021
“ನಾನು ಸುಶ್ಮಿತಾ ದೇವ್ ಜೊತೆ ಮಾತನಾಡಲು ಪ್ರಯತ್ನಿಸಿದೆ, ಅವರ ಫೋನ್ ಆಫ್ ಆಗಿತ್ತು. ಇಂದಿಗೂ ಕೂಡ ಅವರು ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಯಾವುದೇ ರಾಜೀನಾಮೆ ಪತ್ರ ಬಂದಿಲ್ಲ. ಸುಶ್ಮಿತಾ ದೇವ್ ಜೊತೆ ಮಾತನಾಡುವವರೆಗೂ ನಾನು ಏನನ್ನೂ ಪ್ರತಿಕ್ರಿಯಿಸಲು ಸಾಧ್ಯವಿಲ್ಲ” ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಸುದ್ದಿಗಾರರಿಗೆ ತಿಳಿಸಿದ್ದರು.
ಇದನ್ನೂ ಓದಿ: 3 ವರ್ಷದಿಂದ ಒಂದೇ ಭರವಸೆ ನೀಡುತ್ತಿರುವ ಪ್ರಧಾನಿ : ಸಂಖ್ಯೆಯನ್ನಾದರೂ ಬದಲಿಸಿ ಎಂದ ಕಾಂಗ್ರೆಸ್
ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮತ್ತು ಆಕೆಯ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರನ್ನು ಭೇಟಿಯಾಗಲು ಕಾಂಗ್ರೆಸ್ನ ಮಾಜಿ ಸಂಸದೆ ಕೋಲ್ಕತ್ತಾಕ್ಕೆ ಬಂದಿದ್ದಾರೆ. “ಅವರು ಪಕ್ಷಕ್ಕೆ ಸೇರಿದರೆ ಅಸ್ಸಾಂನಲ್ಲಿ ತೃಣಮೂಲದ ಪ್ರಮುಖ ನಾಯಕಿಯಾಗುತ್ತಾರೆ” ಎಂದು ತೃಣಮೂಲ ಕಾಂಗ್ರೆಸ್ ಮೂಲಗಳು ಹೇಳಿದ್ದವು.
ಮೂಲಗಳು ಹೇಳುವಂತೆ ಸುಶ್ಮಿತಾ ದೇವ್ ಕೆಲವು ತಿಂಗಳುಗಳಿಂದ ಕಾಂಗ್ರೆಸ್ ನಾಯಕತ್ವದ ಬಗ್ಗೆ ಅತೃಪ್ತಿ ಹೊಂದಿದ್ದರು ಎನ್ನಲಾಗಿದೆ. ವಿಶೇಷವಾಗಿ ಏಪ್ರಿಲ್-ಮೇ ತಿಂಗಳ ಅಸ್ಸಾಂ ಚುನಾವಣೆಯಲ್ಲಿ ಎಐಯುಡಿಎಫ್ ಜೊತೆ ಕಾಂಗ್ರೆಸ್ ಕೈಜೋಡಿಸುವ ನಿರ್ಧಾರದ ಬಗ್ಗೆ ಅಸಮಧಾನ ಹೊಂದಿದ್ದರು.
ಚುನಾವಣಾ ಅಭ್ಯರ್ಥಿಗಳ ಆಯ್ಕೆಯ ಬಗ್ಗೆ ರಾಜ್ಯ ಕಾಂಗ್ರೆಸ್ ನಾಯಕತ್ವದೊಂದಿಗೆ ಅವರು ಭಿನ್ನಾಭಿಪ್ರಾಯ ಹೊಂದಿದ್ದರು. ಬಹುತೇಕ ಮಾರ್ಚ್ನಲ್ಲಿಯೇ ಅವರು ಪಕ್ಷವನ್ನು ತ್ಯಜಿಸಿದ್ದರು. ಆದರೆ ಸೋನಿಯಾ ಗಾಂಧಿ ಅವರ ಮನವೊಲಿಸಿದರು ಎಂದು ಮೂಲಗಳು ಹೇಳುತ್ತವೆ.
ಅಸ್ಸಾಂನ ಪ್ರಭಾವಿ ಬಂಗಾಳಿ ನಾಯಕ ಸಂತೋಷ್ ಮೋಹನ್ ದೇವ್ ಅವರ ಮಗಳಾಗಿದ್ದು, ಕಾಂಗ್ರೆಸ್ ನ ಮಹಿಳಾ ಘಟಕದ ಮುಖ್ಯಸ್ಥರಾಗಿದ್ದರು. ಇವರ ಕುಟುಂಬ ನಾಲ್ಕು ತಲೆಮಾರುಗಳಿಂದ ಕಾಂಗ್ರೆಸ್ನಲ್ಲಿತ್ತು.
ಇದನ್ನೂ ಓದಿ: ಒಕ್ಕೂಟ ಸರ್ಕಾರದ ಹೊಸ ಮಂತ್ರಿಗಳನ್ನು ಪರಿಚಯಿಸಲು ಬಿಜೆಪಿಯಿಂದ ‘ಜನಾಶೀರ್ವಾದ ಯಾತ್ರೆ’