Homeಕರ್ನಾಟಕಸಮಾನ ವೇತನ ಕಾನೂನು ಮಾಡಿ ಅಂದರೆ ಮೊಟ್ಟೆ, ಮಾಂಸ ತಿನ್ನಬೇಡಿ ಅಂತ ಕಾನೂನು ಮಾಡ್ತಾರೆ: ಬಾಲನ್‌

ಸಮಾನ ವೇತನ ಕಾನೂನು ಮಾಡಿ ಅಂದರೆ ಮೊಟ್ಟೆ, ಮಾಂಸ ತಿನ್ನಬೇಡಿ ಅಂತ ಕಾನೂನು ಮಾಡ್ತಾರೆ: ಬಾಲನ್‌

- Advertisement -
- Advertisement -

ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ. ಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ಕಾನೂನು ಮಾಡಿ ಅಂದರೆ ಮೊಟ್ಟೆ ತಿನ್ನಬೇಡಿ, ಮಾಂಸ ತಿನ್ನಬೇಡಿ, ದನ ತಿನ್ನಬೇಡಿ ಅಂತ ಕಾನೂನು ಮಾಡ್ತಾರೆ ಎಂದು ಹೈಕೋರ್ಟ್ ವಕೀಲರಾದ ಬಾಲನ್‌ ಹೇಳಿದರು.

ಕಾರ್ಮಿಕ ಹಕ್ಕುಗಳ ಹೋರಾಟ ಸಮಿತಿ (ಎಂಎಎಸ್‌ಎ) ಅಡಿಯಲ್ಲಿ ಟ್ರೇಡ್‌ ಯೂನಿಯನ್‌ ಸೆಂಟರ್‌ ಆಫ್‌ ಇಂಡಿಯಾ (ಟಿಯುಸಿಐ), ಕರ್ನಾಟಕ ಶ್ರಮಿಕ ಶಕ್ತಿ (ಕೆಎಸ್‌ಎಸ್‌), ಬಿಡಬ್ಲ್ಯೂಎಸ್‌ಎಸ್‌ಬಿ ಗುತ್ತಿಗೆ ಕಾರ್ಮಿಕರ ಸಂಘ, ಬೆಂಗಳೂರು ರೇಸ್‌ ಕೋರ್ಸ್ ಕಾರ್ಮಿಕರ ಸಂಘ, ಬಿಬಿಎಂಪಿ ಗುತ್ತಿಗೆ ಪೌರ ಕಾರ್ಮಿಕರ ಸಂಘ, ಕರ್ನಾಟಕ ರಾಜ್ಯ ಲೋಡಿಂಗ್‌ ಅಂಡ್‌ ಅನ್ ಲೋಡಿಂಗ್‌ ಕಾರ್ಮಿಕರ ಒಕ್ಕೂಟ, ವಲಸೆ ಕಾರ್ಮಿಕರ ಸೌಹಾರ್ದ ಕೇಂದ್ರ (ಎಂಡಬ್ಲೂಎಸ್‌ಎನ್‌), ಮಂಡ್ಯ ರೈಲ್ವೆ ಗೂಡ್ಸ್‌ ಶೆಡ್ ಕಾರ್ಮಿಕರ ಸಂಘ, ಕೆಎಸ್‌‌ಬಿಸಿಎಲ್‌ ಲೋಡಿಂಗ್ ಕಾರ್ಮಿಕರ ಸಂಘ, ಕೂಲಿ ನೇಕಾರ ಕಾರ್ಮಿಕರ ಬಳಗ ಒಂದುಗೂಡಿ ಬೆಂಗಳೂರಿನಲ್ಲಿ ಭಾನುವಾರ ನಡೆಸಿದ ಬೃಹತ್‌ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

“ನೀವು ಕಾನೂನು ಮಾಡ್ರಯ್ಯ, ಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ಕಾನೂನು ಮಾಡಿ. ಕೆಲಸದಿಂದ ತೆಗೆಯಬಾರದೆಂದು ಕಾನೂನು ಮಾಡಿ. ಅದನ್ನು ಬಿಟ್ಟು ಮೊಟ್ಟೆ ತಿನ್ನಬಾರದೆಂದು, ಮಟನ್‌ ತಿನ್ನಬಾರದೆಂದು, ದನದ ಮಾಂಸ ತಿನ್ನಬಾರದೆಂದು, ನೀರು ಕುಡಿಯಬಾರದೆಂದು ಕಾನೂನು ಮಾಡುತ್ತಿದ್ದಾರೆ. ಎಂಥ ಕಾನೂನು ಮಾಡ್ತಾ ಇದ್ದಿರಯ್ಯ ಬೊಮ್ಮಾಯಿ? ನೀವು ಈ ರೀತಿ ಕೆಲಸ ಮಾಡಿದರೆ- ಮುಂದಿನ ಚುನಾವಣೆಯಲ್ಲಿ ಬೊಮ್ಮಾಯಿ ಆಪ್‌ ನಹೀ ನಹೀ” ಎಂದು ಎಚ್ಚರಿಸಿದರು.

“ನಮ್ಮ ಕೆಲಸದ ಹಕ್ಕುಗಳು ಇರುವ ಕಾನೂನನ್ನು, ನಮ್ಮ ಸಂಬಳದ ಹಕ್ಕಿನ ಕಾನೂನುಗಳನ್ನು, ನಮ್ಮ ಸಾಮಾಜಿಕ ಹಕ್ಕುಗಳಾದ ಪಿಎಫ್‌, ಗ್ರಾಚ್ಯುಟಿ, ರಜೆ ಇತ್ಯಾದಿಗಳನ್ನು ನೀಡಿದ ಕಾನೂನುಗಳನ್ನು ಕಿತ್ತುಕೊಂಡಿದ್ದಾರೆ. ನೌಕರರಾಗಬೇಕಿದ್ದವರನ್ನು ಕೂಲಿಗಳನ್ನಾಗಿ ಮಾಡಿದ್ದಾರೆ. ಒಂದೇ ಕೆಲಸ, ಒಂದೇ ಪೊರಕೆ. ಆದರೆ ಗುತ್ತಿಗೆಯವರಿಗೆ ಹಾಗೂ ಕಾಯಂ ನೌಕರರಿಗೆ ಬೇರೆ ಬೇರೆ ಸಂಬಳ ನೀಡುತ್ತಿದ್ದಾರೆ” ಎಂದು ವಿವರಿಸಿದರು.

ಕ್ಯಾಂಟೀನ್‌ ನಮ್ಮ ಹಕ್ಕು. ಮಧ್ಯಾಹ್ನ ಊಟ ಕೊಡಬೇಕು. ಒಂದು ಕಾಲದಲ್ಲಿ ಇದೆಲ್ಲ ಇತ್ತು. 1996ರಲ್ಲಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿ, ರೈಲ್ವೆ, ಬಿಬಿಎಂಪಿ, ಆಸ್ಪತ್ರೆ ಸೇರಿದಂತೆ ಹಲವು ಕಡೆಗಳಲ್ಲಿ ಗುತ್ತಿಗೆ ಪದ್ಧತಿ ಇರಬಾರದೆಂದು ಹೇಳಿತ್ತು. ಆದರೆ 2001ನೇ ಇಸವಿಯಲ್ಲಿ ವಾಜಪೇಯಿ ಆ ಕಾನೂನನ್ನು ಕಿತ್ತು ಹಾಕಿ, ನಿಮ್ಮ ಬಾಯಿಗೆ ಮಣ್ಣು ಹಾಕಿದರು. 2002ರಲ್ಲಿ ಸುಪ್ರೀಂ ಕೋರ್ಟ್, ಸ್ಟೀಲ್‌ ಅಥಾರಿಟಿ ಆಫ್‌ ಇಂಡಿಯಾದಲ್ಲಿ ಗುತ್ತಿಗೆ ಪದ್ಧತಿಯ ಪರವಾಗಿ ತೀರ್ಪು ನೀಡಿತು. ನಾನು ಸುಪ್ರಿಂ ಕೋರ್ಟ್‌‌ಗೆ ದಿಕ್ಕಾರ ಹೇಳುತ್ತೇನೆ. ನಿಮ್ಮ ಬಾಯಿಗೆ ಸುಪ್ರಿಂಕೋರ್ಟ್ ಮಣ್ಣು ಹಾಕಿದೆ. ನೀವು ಗುತ್ತಿಗೆ ಪದ್ಧತಿಯಲ್ಲಿ ಕೆಲಸ ಮಾಡುತ್ತಿದ್ದರೆ ಅದಕ್ಕೆ ಬಿಜೆಪಿ ಮತ್ತು ಸುಪ್ರೀಂ ಕೋರ್ಟ್ ಕಾರಣ ಎಂದು ಆರೋಪಿಸಿದರು.

ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದ ಟಿಯುಸಿಐ ರಾಜ್ಯಾಧ್ಯಕ್ಷರಾದ ಆರ್‌‌.ಮಾನಸಯ್ಯ, “ದೆಹಲಿ ಗಡಿಯಲ್ಲಿ ರೈತರು ಪಟ್ಟು ಹಿಡಿದು ಕುಳಿತು ಮೋದಿ ಸರ್ಕಾರವನ್ನು ಸೋಲಿಸಿದಂತೆ ಎಲ್ಲಾ ಕಾರ್ಮಿಕರ ಸಂಟನೆಗಳನ್ನು ಒಂದು ವೇದಿಕೆಯಲ್ಲಿ ತಂದು ಅದೇ ಮಾದರಿ ಹೋರಾಟಕ್ಕೆ ಕಾರ್ಮಿಕರು ಹೋಗಬೇಕಾಗಿದೆ. ಕಾರ್ಮಿಕರ ನಡುವೆ ಐಡೆಂಟಿಟಿ ಪೊಲಿಟಿಕ್ಸ್‌ ಬಿತ್ತುತ್ತಿದ್ದಾರೆ. ನೀವು ಪೌರ ಕಾರ್ಮಿಕರು, ಹಾಗಾಗಿ ಸಕ್ಕರೆ ಕಾರ್ಖಾನೆ ಕಾರ್ಮಿಕರ ಜೊತೆ ಹೋಗಬಾರದು ಎಂದು ಹೇಳುತ್ತಾರೆ. ನೀವು ಸಕ್ಕರೆ ಕಾರ್ಮಿಕರು ಉಕ್ಕಿನ ಕಾರ್ಮಿಕರ ಜೊತೆ ಹೋಗಬಾರದು ಎಂದು ಹೇಳುತ್ತಾರೆ. ನೀವು ಸರ್ಕಾರಿ ನೌಕರರು ಸ್ಟೀಲ್ ಕಾರ್ಮಿಕರ ಜೊತೆ ಹೋಗಬಾರದು ಎಂದು ಹೇಳುತ್ತಾರೆ. ನೀವು ಸಾರಿಗೆ ಕಾರ್ಮಿಕರು, ಅಂಗನವಾಡಿ ಕಾರ್ಮಿಕರ ಜೊತೆ ಹೋಗಬಾರದು ಅಂತಾರೆ. ಈ ರೀತಿಯಲ್ಲಿ ನಮ್ಮ ನಡುವೆ ಅಸ್ಮಿತೆಯ ರಾಜಕಾರಣವನ್ನು ಹರಡುವ ಮೂಲಕ ಕಾರ್ಮಿಕರನ್ನು ತುಂಡರಿಸಿದ್ದಾರೆ. ಕಾರ್ಮಿಕರಲ್ಲಿ ಮೂಢನಂಬಿಕೆಗಳನ್ನು ಬಿತ್ತುತ್ತಿದ್ದಾರೆ” ಎಂದು ತಿಳಿಸಿದರು.

ಕಾರ್ಮಿಕರಿಗೆ ಕನಿಷ್ಠ 25,000 ರೂ. ಮಾಸಿಕ ವೇತನ ಕಡ್ಡಾಯ ಮಾಡಲೇಬೇಕು. ಗುತ್ತಿಗೆ ಪದ್ಧತಿ ರದ್ದುಗೊಳಿಸಬೇಕು. ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಲೇಬೇಕು. ಇಲ್ಲವಾದರೆ ನಮ್ಮ ಕೈಯಲ್ಲಿರುವ ಪೊರಕೆ, ಗುದ್ದಲಿ, ಸುತ್ತಿಗೆಗಳು ಮಾತನಾಡುತ್ತವೆ. ಕಾರ್ಮಿಕರೆಂದರೆ ಕನಿಷ್ಠರಲ್ಲ. ಈ ದೇಶದ ಕಟ್ಟಾಳುಗಳು ಎಂದು ಬಣ್ಣಿಸಿದರು.

ದೇಶ ಕಟ್ಟೋರು ಕಾರ್ಮಿಕರೇ ಹೊರತು ಎಸ್‌ಎಸ್‌ಎಸ್‌, ಬಜರಂಗದಳ, ವಿಎಚ್‌ಪಿಗಳಲ್ಲ, ಇನ್ಯಾವುದೇ ಸ್ವಾಮೀಜಿಗಳಲ್ಲ. ಘಂಟೆ ಭಾರಿಸಿದರೆ ದೇಶ ನಡೆಯುವುದಿಲ್ಲ, ಮಂತ್ರ ಹೇಳಿದರೆ ದೇಶ ನಡೆಯುವುದಿಲ್ಲ. ಹೀಗಾಗಿ ಮಂತ್ರ ಹೇಳುವ ತುಟಿಗಳಿಗಿಂತ ಮಣ್ಣು ಅಗೆಯುವ ಕೈಗಳನ್ನು ಪ್ರೀತಿಸಿ ಎಂದು ಮಾರ್ಮಿಕವಾಗಿ ನುಡಿದರು.

ಕೇಂದ್ರೀಯ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್‌ವರೆಗೆ ಕಾರ್ಮಿಕರು ಬೃಹತ್‌ ಮೆರವಣಿಗೆ ನಡೆಸಿದರು. ರ್‍ಯಾಲಿಗೆ ಚಾಲನೆ ನೀಡಿ ಮಾತನಾಡಿದ ಕರ್ನಾಟಕ ಜನಶಕ್ತಿ ಸಂಘಟನೆಯ ರಾಜ್ಯಾಧ್ಯಕ್ಷರಾದ ನೂರ್‌ ಶ್ರೀಧರ್‌, “ರೈತ ಮತ್ತು ಕಾರ್ಮಿಕ ಎಂಬ ಎರಡು ಹೆಜ್ಜೇನು ಗೂಡಿಗೆ ಇವರು ಕಲ್ಲು ಹೊಡೆದಿದ್ದಾರೆ. ವಿನಾಶಕಾಲೇ ವಿಪರೀತ ಬುದ್ಧಿ ಎಂಬಂತೆ ಇವರ ವಿನಾಶಕ್ಕೆ ಇದು ನಾಂದಿಯಾಗಲಿದೆ. ಎದ್ದೇಳುವ ಹೆಜ್ಜೇನುಗಳು ಸುಮ್ಮನೆ ಬಿಡುವುದಿಲ್ಲ. ಹೀಗಾಗಲೇ ರೈತ ಜೇನುಗೂಡಿಗೆ ಕಲ್ಲು ಹೊಡೆದು ಕಚ್ಚಿಸಿಕೊಂಡು, ಮೈಯೆಲ್ಲ ಕೆರೆದುಕೊಂಡು ಒಂದು ವರ್ಷದ ಬಳಿಕ ಮೂರು ಕಾಯ್ದೆಗಳನ್ನು ವಾಪಸ್ ತೆಗೆದುಕೊಂಡಿದ್ದಾರೆ. ರೈತರು ಹೇಳಿದಂತೆ ನಡೆದುಕೊಳ್ಳುತ್ತೇವೆ ಎಂದು ನಾಟಕವನ್ನಾದರೂ ಆಡುವ ಪರಿಸ್ಥಿತಿಗೆ ಬಂದಿದ್ದಾರೆ” ಎಂದರು.


ಇದನ್ನೂ ಓದಿರಿ: ಹನುಮ ಜಯಂತಿ: ಕೆ.ಆರ್‌.ಪೇಟೆಯಲ್ಲಿ ದಲಿತರ ಮೇಲೆ ಮಾರಣಾಂತಿಕ ಹಲ್ಲೆ; 27 ಮಂದಿ ಸವರ್ಣೀಯರ ಮೇಲೆ ಎಫ್‌ಐಆರ್‌‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯ ಅಧಿಕೃತ ‘ಎಕ್ಸ್’ ಖಾತೆ ವಿರುದ್ಧ ಎಫ್‌ಐಆರ್‌ ದಾಖಲಿಸಿದ ಚುನಾವಣಾ ಆಯೋಗ

0
ವಿವಿಧ ಗುಂಪುಗಳು ಮತ್ತು ವರ್ಗಗಳ ನಡುವೆ ದ್ವೇಷ ಹರಡಲು ಮತ್ತು ಉತ್ತೇಜಿಸಲು ಯತ್ನಿಸುತ್ತಿರುವ ಆರೋಪದ ಮೇಲೆ ಬಿಜೆಪಿಯ ಅಧಿಕೃತ ಎಕ್ಸ್ ಖಾತೆ ವಿರುದ್ಧ ಚುನಾವಣಾ ಆಯೋಗ ಎಫ್‌ಐಆರ್‌ನ್ನು ದಾಖಲಿಸಿದೆ. ಈ ಕುರಿತು ಚುನಾವಣಾ ಆಯೋಗ...