ಕಾರ್ಮಿಕರ ನಡುವೆ ಐಡೆಂಟಿಟಿ ಪೊಲಿಟಿಕ್ಸ್ ಬಿತ್ತಿ ಕಾರ್ಮಿಕರನ್ನು ಒಡೆಯಲು ಯತ್ನಿಸಲಾಗುತ್ತಿದೆ. ಇದರ ವಿರುದ್ಧ ಎಚ್ಚರ ವಹಿಸಬೇಕು ಎಂದು ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಆರ್.ಮಾನಸಯ್ಯ ತಿಳಿಸಿದರು.
ಕಾರ್ಮಿಕ ಹಕ್ಕುಗಳ ಹೋರಾಟ ಸಮಿತಿ (ಎಂಎಎಸ್ಎ) ಅಡಿಯಲ್ಲಿ ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ (ಟಿಯುಸಿಐ), ಕರ್ನಾಟಕ ಶ್ರಮಿಕ ಶಕ್ತಿ (ಕೆಎಸ್ಎಸ್), ಬಿಡಬ್ಲ್ಯೂಎಸ್ಎಸ್ಬಿ ಗುತ್ತಿಗೆ ಕಾರ್ಮಿಕರ ಸಂಘ, ಬೆಂಗಳೂರು ರೇಸ್ ಕೋರ್ಸ್ ಕಾರ್ಮಿಕರ ಸಂಘ, ಬಿಬಿಎಂಪಿ ಗುತ್ತಿಗೆ ಪೌರ ಕಾರ್ಮಿಕರ ಸಂಘ, ಕರ್ನಾಟಕ ರಾಜ್ಯ ಲೋಡಿಂಗ್ ಅಂಡ್ ಅನ್ ಲೋಡಿಂಗ್ ಕಾರ್ಮಿಕರ ಒಕ್ಕೂಟ, ವಲಸೆ ಕಾರ್ಮಿಕರ ಸೌಹಾರ್ದ ಕೇಂದ್ರ (ಎಂಡಬ್ಲೂಎಸ್ಎನ್), ಮಂಡ್ಯ ರೈಲ್ವೆ ಗೂಡ್ಸ್ ಶೆಡ್ ಕಾರ್ಮಿಕರ ಸಂಘ, ಕೆಎಸ್ಬಿಸಿಎಲ್ ಲೋಡಿಂಗ್ ಕಾರ್ಮಿಕರ ಸಂಘ, ಕೂಲಿ ನೇಕಾರ ಕಾರ್ಮಿಕರ ಬಳಗ ಒಂದುಗೂಡಿ ಬೆಂಗಳೂರಿನಲ್ಲಿ ಭಾನುವಾರ ನಡೆಸಿದ ಬೃಹತ್ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
“ಕಾರ್ಮಿಕರ ನಡುವೆ ಐಡೆಂಟಿಟಿ ಪೊಲಿಟಿಕ್ಸ್ ಬಿತ್ತುತ್ತಿದ್ದಾರೆ. ನೀವು ಪೌರ ಕಾರ್ಮಿಕರು, ಹಾಗಾಗಿ ಸಕ್ಕರೆ ಕಾರ್ಖಾನೆ ಕಾರ್ಮಿಕರ ಜೊತೆ ಹೋಗಬಾರದು ಎಂದು ಹೇಳುತ್ತಾರೆ. ನೀವು ಸಕ್ಕರೆ ಕಾರ್ಮಿಕರು ಉಕ್ಕಿನ ಕಾರ್ಮಿಕರ ಜೊತೆ ಹೋಗಬಾರದು ಎಂದು ಹೇಳುತ್ತಾರೆ. ನೀವು ಸರ್ಕಾರಿ ನೌಕರರು ಸ್ಟೀಲ್ ಕಾರ್ಮಿಕರ ಜೊತೆ ಹೋಗಬಾರದು ಎಂದು ಹೇಳುತ್ತಾರೆ. ನೀವು ಸಾರಿಗೆ ಕಾರ್ಮಿಕರು, ಅಂಗನವಾಡಿ ಕಾರ್ಮಿಕರ ಜೊತೆ ಹೋಗಬಾರದು ಅಂತಾರೆ. ಈ ರೀತಿಯಲ್ಲಿ ನಮ್ಮ ನಡುವೆ ಅಸ್ಮಿತೆಯ ರಾಜಕಾರಣವನ್ನು ಹರಡುವ ಮೂಲಕ ಕಾರ್ಮಿಕರನ್ನು ತುಂಡರಿಸಿದ್ದಾರೆ. ಕಾರ್ಮಿಕರಲ್ಲಿ ಮೂಢನಂಬಿಕೆಗಳನ್ನು ಬಿತ್ತುತ್ತಿದ್ದಾರೆ” ಎಂದು ಎಚ್ಚರಿಸಿದರು.
ದೇಶ ಕಟ್ಟೋರು ಕಾರ್ಮಿಕರೇ ಹೊರತು ಎಸ್ಎಸ್ಎಸ್, ಬಜರಂಗದಳ, ವಿಎಚ್ಪಿಗಳಲ್ಲ, ಇನ್ಯಾವುದೇ ಸ್ವಾಮೀಜಿಗಳಲ್ಲ. ಘಂಟೆ ಭಾರಿಸಿದರೆ ದೇಶ ನಡೆಯುವುದಿಲ್ಲ, ಮಂತ್ರ ಹೇಳಿದರೆ ದೇಶ ನಡೆಯುವುದಿಲ್ಲ. ಹೀಗಾಗಿ ಮಂತ್ರ ಹೇಳುವ ತುಟಿಗಳಿಗಿಂತ ಮಣ್ಣು ಅಗೆಯುವ ಕೈಗಳನ್ನು ಪ್ರೀತಿಸಿ ಎಂದು ಮಾರ್ಮಿಕವಾಗಿ ನುಡಿದರು.
ಇದನ್ನೂ ಓದಿರಿ: ಮಂಡ್ಯದ ಬೂಕನಕೆರೆಯಲ್ಲಿ ಅಪ್ರಾಪ್ತ ಬಾಲಕಿಯ ಅತ್ಯಾಚಾರ, ಕೊಲೆ ಆರೋಪ: ನಾಳೆ ಪ್ರತಿಭಟನೆ
ಬಂಡವಾಳಶಾಹಿಗಳ ಪರವಾಗಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ನಿಂತಿದೆ. 44 ಕಾರ್ಮಿಕ ಕಾಯ್ದೆಗಳನ್ನು ತೆರವುಗೊಳಿಸಿ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ತಂದಿದ್ದಾರೆ. ಈ ಸಂಹಿತೆಗಳಲ್ಲಿ ವೇತನ ಭದ್ರತೆ, ಆರೋಗ್ಯ ಸುರಕ್ಷತೆ, ಜೀವನ ಭದ್ರತೆ ಇಲ್ಲ. ಮಾಲಿಕರ, ಅಧಿಕಾರಿಗಳ, ಮೇಲ್ಜಾತಿಗಳ, ಶ್ರೀಮಂತರ ಸುರಕ್ಷತೆ ಮಾತ್ರ ಇದೆ. ಹೀಗಾಗಿ ಇದರ ವಿರುದ್ಧ ಒಂದು ದೊಡ್ಡ ಹೋರಾಟವನ್ನು ಕಟ್ಟಬೇಕಾಗಿದೆ ಎಂದು ಹೇಳಿದರು.
ಕಾರ್ಮಿಕರಿಗೆ ಕನಿಷ್ಠ 25,000 ರೂ. ಮಾಸಿಕ ವೇತನ ಕಡ್ಡಾಯ ಮಾಡಲೇಬೇಕು. ಗುತ್ತಿಗೆ ಪದ್ಧತಿ ರದ್ದುಗೊಳಿಸಬೇಕು. ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಲೇಬೇಕು. ಇಲ್ಲವಾದರೆ ನಮ್ಮ ಕೈಯಲ್ಲಿರುವ ಪೊರಕೆ, ಗುದ್ದಲಿ, ಸುತ್ತಿಗೆಗಳು ಮಾತನಾಡುತ್ತವೆ. ಕಾರ್ಮಿಕರೆಂದರೆ ಕನಿಷ್ಠರಲ್ಲ. ಈ ದೇಶದ ಕಟ್ಟಾಳುಗಳು ಎಂದು ಬಣ್ಣಿಸಿದರು.
ಸಮಾವೇಶದ ಉದ್ಘಾಟನಾ ಭಾಷಣ ಮಾಡಿದ ಹೈಕೋರ್ಟ್ ಹಿರಿಯ ವಕೀಲರಾದ ಬಾಲನ್, “ನಮ್ಮ ಕೆಲಸದ ಹಕ್ಕುಗಳು ಇರುವ ಕಾನೂನನ್ನು, ನಮ್ಮ ಸಂಬಳದ ಹಕ್ಕಿನ ಕಾನೂನುಗಳನ್ನು, ನಮ್ಮ ಸಾಮಾಜಿಕ ಹಕ್ಕುಗಳಾದ ಪಿಎಫ್, ಗ್ರಾಚ್ಯುಟಿ, ರಜೆ ಇತ್ಯಾದಿಗಳನ್ನು ನೀಡಿದ ಕಾನೂನುಗಳನ್ನು ಕಿತ್ತುಕೊಂಡಿದ್ದಾರೆ. ನೌಕರರಾಗಬೇಕಿದ್ದವರನ್ನು ಕೂಲಿಗಳನ್ನಾಗಿ ಮಾಡಿದ್ದಾರೆ. ಒಂದೇ ಕೆಲಸ, ಒಂದೇ ಪೊರಕೆ. ಆದರೆ ಗುತ್ತಿಗೆಯವರಿಗೆ ಹಾಗೂ ಕಾಯಂ ನೌಕರರಿಗೆ ಬೇರೆ ಬೇರೆ ಸಂಬಳ ನೀಡುತ್ತಿದ್ದಾರೆ ಎಂದು ವಿವರಿಸಿದರು.
“ನೀವು ಕಾನೂನು ಮಾಡ್ರಯ್ಯ, ಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ಕಾನೂನು ಮಾಡಿ. ಕೆಲಸದಿಂದ ತೆಗೆಯಬಾರದೆಂದು ಕಾನೂನು ಮಾಡಿ. ಅದನ್ನು ಬಿಟ್ಟು ಮೊಟ್ಟೆ ತಿನ್ನಬಾರದೆಂದು, ಮಟನ್ ತಿನ್ನಬಾರದೆಂದು, ದನದ ಮಾಂಸ ತಿನ್ನಬಾರದೆಂದು, ನೀರು ಕುಡಿಯಬಾರದೆಂದು ಕಾನೂನು ಮಾಡುತ್ತಿದ್ದಾರೆ. ಎಂಥ ಕಾನೂನು ಮಾಡ್ತಾ ಇದ್ದಿರಯ್ಯ ಬೊಮ್ಮಾಯಿ? ನೀವು ಈ ರೀತಿ ಕೆಲಸ ಮಾಡಿದರೆ- ಮುಂದಿನ ಚುನಾವಣೆಯಲ್ಲಿ ಬೊಮ್ಮಾಯಿ ಆಪ್ ನಹೀ ನಹೀ ಎಂದು ಚಾಟಿ ಬೀಸಿದರು.
ಇದನ್ನೂ ಓದಿರಿ: RSS ಮುಖ್ಯಸ್ಥರಿಗೆ ಕಲಬುರಗಿ ಕೇಂದ್ರೀಯ ವಿವಿ ರಿಜಿಸ್ಟ್ರಾರ್ ಡೋಣೂರರ ಪತ್ರ: ಅಕ್ರಮ ನೇಮಕಾತಿ ಕಾರಣವೇ?
ಕ್ಯಾಂಟೀನ್ ನಮ್ಮ ಹಕ್ಕು. ಮಧ್ಯಾಹ್ನ ಊಟ ಕೊಡಬೇಕು. ಒಂದು ಕಾಲದಲ್ಲಿ ಇದೆಲ್ಲ ಇತ್ತು. 1996ರಲ್ಲಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿ, ರೈಲ್ವೆ, ಬಿಬಿಎಂಪಿ, ಆಸ್ಪತ್ರೆ ಸೇರಿದಂತೆ ಹಲವು ಕಡೆಗಳಲ್ಲಿ ಗುತ್ತಿಗೆ ಪದ್ಧತಿ ಇರಬಾರದೆಂದು ಹೇಳಿತ್ತು. ಆದರೆ 2001ನೇ ಇಸವಿಯಲ್ಲಿ ವಾಜಪೇಯಿ ಆ ಕಾನೂನನ್ನು ಕಿತ್ತು ಹಾಕಿ, ನಿಮ್ಮ ಬಾಯಿಗೆ ಮಣ್ಣು ಹಾಕಿದರು. 2002ರಲ್ಲಿ ಸುಪ್ರೀಂ ಕೋರ್ಟ್, ಸ್ಟೀಲ್ ಅಥಾರಿಟಿ ಆಫ್ ಇಂಡಿಯಾದಲ್ಲಿ ಗುತ್ತಿಗೆ ಪದ್ಧತಿಯ ಪರವಾಗಿ ತೀರ್ಪು ನೀಡಿತು. ನಾನು ಸುಪ್ರಿಂ ಕೋರ್ಟ್ಗೆ ದಿಕ್ಕಾರ ಹೇಳುತ್ತೇನೆ. ನಿಮ್ಮ ಬಾಯಿಗೆ ಸುಪ್ರಿಂಕೋರ್ಟ್ ಮಣ್ಣು ಹಾಕಿದೆ. ನೀವು ಗುತ್ತಿಗೆ ಪದ್ಧತಿಯಲ್ಲಿ ಕೆಲಸ ಮಾಡುತ್ತಿದ್ದರೆ ಅದಕ್ಕೆ ಬಿಜೆಪಿ ಮತ್ತು ಸುಪ್ರೀಂ ಕೋರ್ಟ್ ಕಾರಣ ಎಂದು ಆರೋಪಿಸಿದರು.
ಸಮಾವೇಶದಲ್ಲಿ ಕರ್ನಾಟಕ ಶ್ರಮಿಕ ಶಕ್ತಿ ಸಂಘಟನೆಯ ವರದರಾಜೇಂದ್ರ ಅವರು ಪ್ರಸ್ತಾವಿಕವಾಗಿ ಮಾತನಾಡಿದರು. ಹರಿಯಾಣದ ಜನಸಂಘರ್ಷ ಮಂಚ್ನ ಸುದೇಶ್ಕುಮಾರಿ, ಆಂಧ್ರಪ್ರದೇಶದ ಐಎಫ್ಟಿಯು ಸಂಘಟನೆಯ ಎಸ್.ವೆಂಕಟೇಶ್ವರ ರಾವ್, ಉತ್ತರಾಖಾಂಡ್ನ ಇಂಕಿಲಾಬಿ ಮಜ್ದೂರ್ ಕೇಂದ್ರದ ಕೈಲಾಶ್, ಬಿಹಾರದ ಐಎಫ್ಟಿಯು ಸಂಘಟನೆಯ ಸಿದ್ಧಾಂತ್ ವೇದಿಕೆಯಲ್ಲಿ ಹಾಜರಿದ್ದರು. ಕಾರ್ಮಿಕ ಇಲಾಖೆಯ ಡಿಎಲ್ಸಿ ರವಿಕುಮಾರ್ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಮಿಕರ ಹಕ್ಕೋತ್ತಾಯಗಳನ್ನು ಸ್ವೀಕರಿಸಿದರು.